ಕರಾಚಿ, ಗುಜರಾತ್ ನ ಕಚ್ಛ್ ಗೆ ಬಿಪೋರ್ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ: ಐಎಂಡಿ
ಹೊಸದಿಲ್ಲಿ: ಚಂಡಮಾರುತ ಬಿಪೋರ್ಜಾಯ್ ರವಿವಾರ ಬೆಳಗ್ಗೆ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಜೂನ್ 15ರಂದು ಗುಜರಾತ್ ನ ಕಚ್ಛ್ ಜಿಲ್ಲೆ ಹಾಗೂ ಪಾಕಿಸ್ತಾನದ ಕರಾಚಿಯ ನಡುವಿನ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.
ಸೌರಾಷ್ಟ್ರ ಹಾಗೂ ಕಚ್ಛ್ ಕರಾವಳಿಗಳಲ್ಲಿರುವ ಜನರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪೂರ್ವ ಮಧ್ಯೆ ಅರೆಬಿ ಸಮುದ್ರದಲ್ಲಿ ಬಿಪೋರ್ಜೋಯ್ ಚಂಡಮಾರುತ ತೀವ್ರಗೊಂಡಿದ್ದು, ಕಳೆದ ಆರು ಗಂಟೆಗಳಿಂದ 8 ಕಿ.ಮೀ. ವೇಗದಲ್ಲಿ ಉತ್ತರ ಈಶಾನ್ಯಕ್ಕೆ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತ ಜೂನ್ 14ರಂದು ಬೆಳಗ್ಗಿನ ವರೆಗೆ ಉತ್ತರಕ್ಕೆ ಚಲಿಸುವ ಸಾಧ್ಯತೆ ಇದೆ. ಅನಂತರ ಉತ್ತರ ಈಶಾನ್ಯಕ್ಕೆ ಚಲಿಸಲಿದೆ. ಜೂನ್ 15ರ ಮಧ್ಯಾಹ್ನ ಗುಜರಾತ್ ನ ಮಾಂಡ್ವಿ ಹಾಗೂ ಪಾಕಿಸ್ತಾನದ ಕರಾಚಿ ಮೂಲಕ ಸೌರಾಷ್ಟ್ರ, ಕಚ್ಛ್ ಹಾಗೂ ಸಮೀಪದ ಪಾಕಿಸ್ತಾನದ ಕರಾವಳಿಯನ್ನು ದಾಟಲಿದೆ. ಈ ಚಂಡಮಾರುತದಿಂದಾಗಿ ಗಂಟೆಗೆ 125ರಿಂದ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಪೋರ್ಜಾಯ್ ಚಂಡಮಾರುತ ಅಪ್ಪಳಿಸುವ ನಿಖರ ಸ್ಥಳ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ.ಎಸ್. ಪೈ ಅವರು ತಿಳಿಸಿದ್ದಾರೆ.
ಕಚ್ಛ್, ದೇವಭೂಮಿ ದ್ವಾರಕ, ಪೋರ್ಬಂದರ್, ಜಾಮ್ನಗರ್, ರಾಜ್ಕೋಟ್, ಜುನಾಗಢ ಹಾಗೂ ಮೊರ್ಬಿ ಸೇರಿದಂತೆ ಗುಜರಾತ್ನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪೂರ್ವ ಮಧ್ಯ, ಪಶ್ಚಿಮ ಮಧ್ಯ ಹಾಗೂ ಉತ್ತರ ಅರೆಬ್ಬಿ ಸಮುದ್ರದಲ್ಲಿ ಜೂನ್ 15ರ ವರೆಗೆ ಮೀನುಗಾರಿಕೆ ನಡೆಸದಂತೆ ಕೂಡ ಅದು ಎಚ್ಚರಿಕೆ ನೀಡಿದೆ.
ಜೂನ್ 15ರ ವರೆಗೆ ಗುಜರಾತ್ನ ಕಚ್ಛ್, ದೇವಭೂಮಿ, ದ್ವಾರಕಾ, ಜಾಮ್ನಗರ, ಪೋರ್ಬಂದರ್, ರಾಜ್ಕೋಟ್, ಮೊರ್ಬಿ ಹಾಗೂ ಜುನಾಗಢ್ ಜಿಲ್ಲೆಯ ಭಾಗಗಳಲ್ಲಿ ತೀವ್ರತೆಯಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.