ಭೂಹಗರಣದಲ್ಲಿ ತಮಿಳುನಾಡು ಬಿಜೆಪಿ ನಾಯಕ ಕೆ. ವೆಂಕಟೇಶನ್ ಬಂಧನ
ಚೆನ್ನೈ: ಎರಡು ಕೋಟಿ ರೂಪಾಯಿ ಮೌಲ್ಯದ ಭೂಹಗರಣ ಪ್ರಕರಣದಲ್ಲಿ ತಮಿಳುನಾಡು ಬಿಜೆಪಿಯ ನಾಯಕ ಕೆ. ವೆಂಕಟೇಶನ್ ಅವರನ್ನು ಅವದಿ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್, 2022ರಲ್ಲಿ ಕೆ.ವೆಂಕಟೇಶನ್ ಅವರನ್ನು ಕಿರು ಅವಧಿಗೆ ಬಿಜೆಪಿಯ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಇದಕ್ಕೂ ಮುನ್ನ 2015ರಲ್ಲಿ ಕೆ.ವೆಂಕಟೇಶನ್ ರಕ್ತ ಚಂದನ ಕಳ್ಳ ಸಾಗಾಣಿಕೆ ಪ್ರಕರಣದಲ್ಲೂ ಆರೋಪಿಯಾಗಿದ್ದ ಎಂದು thenewsminute.com ವರದಿ ಮಾಡಿದೆ.
ಪದಿಯನಲ್ಲೂರ್ನಲ್ಲಿನ ಒಂದು ಎಕರೆ (23.5 ಸೆಂಟ್ಸ್) ಜಮೀನಿಗೆ ಸಂಬಂಧಿಸಿದ ಭೂಹಗರಣ ಇದಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿರುವ ಸುಲ್ತಾನ್ ಎಂಬ ವ್ಯಕ್ತಿ, ಈ ಜಮೀನು ನನಗೆ ಸೇರಿದ್ದರೂ, ವೆಂಕಟೇಶನ್ ಹಾಗೂ ಪ್ರದೀಪ್ಕುಮಾರ್ ಮತ್ತು ಆತನ ಪುತ್ರ ನರೇಶ್ಕುಮಾರ್ ಎಂಬ ಮತ್ತಿಬ್ಬರು ವ್ಯಕ್ತಿಗಳು ಅದನ್ನು ತಮ್ಮ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪೈಕಿ ನರೇಶ್ಕುಮಾರ್ ಕೂಡಾ ಬಿಜೆಪಿ ಸದಸ್ಯನಾಗಿದ್ದು, ತಿರುವಳ್ಳೂರ್ ಜಿಲ್ಲಾ ಕಾರ್ಯದರ್ಶಿಯಾಗಿದ್ದಾನೆ. ವೆಂಕಟೇಸನ್ ಕೂಡಾ ಪದಿಯನಲ್ಲೂರ್ನಲ್ಲಿ ವಾಸಿಸುತ್ತಿದ್ದಾನೆ. ಈ ಎಲ್ಲ ಮೂವರು ಆರೋಪಿಗಳನ್ನು ಅವದಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದೊಂದಿಗೆ ವೆಂಕಟೇಶನ್ ಮೇಲೆ ಒಟ್ಟು ಪ್ರಕರಣಗಳು ದಾಖಲಾದಂತಾಗಿದೆ. 54 ವರ್ಷದ ಈತನ ವಿರುದ್ಧ ಕೊಲೆ ಪ್ರಯತ್ನ ಪ್ರಕರಣವೂ ಸೇರಿದಂತೆ ಒಟ್ಟು ಏಳು ಪ್ರಕರಣಗಳು ಎಂ4 ರೆಡ್ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಇನ್ನೂ ಬಾಕಿ ಉಳಿದಿವೆ. ಅಲ್ಲದೆ 2011ರಲ್ಲಿ ಈತನನ್ನು ಕಠಿಣ ಗೂಂಡಾ ಕಾಯ್ದೆಯಡಿಯೂ ಬಂಧಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ, ತನ್ನ ವಿರುದ್ಧದ ರೌಡಿ ಶೀಟ್ ಅನ್ನು ರದ್ದುಪಡಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿ, ಅದರಲ್ಲಿ ತನ್ನ ಪರ ತೀರ್ಪು ಪಡೆಯುವವರೆಗೂ ಈತನ ವಿರುದ್ಧ 2013ರವರೆಗೆ ರೌಡಿ ಶೀಟ್ ತೆರೆಯಲಾಗಿತ್ತು.
ಆಗಸ್ಟ್, 2015ರಲ್ಲಿ ಆಂಧ್ರಪ್ರದೇಶ ಪೊಲೀಸರು ವೆಂಕಟೇಶನ್ ಸೇರಿದಂತೆ ನಾಲ್ವರು ಕುಖ್ಯಾತ ಕಳ್ಳ ಸಾಗಣೆದಾರರನ್ನು ಬಂಧಿಸಿದ್ದರು. ಈ ಪೈಕಿ ದುಬೈ ಮೂಲದ ಭೂಗತ ಲೋಕದ ದೊರೆಯ ಪುತ್ರ ಹಾಗೂ ಭೂತಾನ್ ಮೂಲದ ಮಧ್ಯವರ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಓರ್ವ ಕಳ್ಳ ಸಾಗಣೆದಾರ ಕೂಡಾ ಸೇರಿದ್ದರು. ನಂತರ 2016ರಲ್ಲಿ ವೆಂಕಟೇಶನ್ ಬಿಡುಗಡೆಗೊಂಡಿದ್ದ. ಇದಕ್ಕೂ ಮುನ್ನ ಎಐಎಡಿಎಂಕೆ ಯುವ ಘಟಕದ ಸದಸ್ಯನೂ ಆಗಿದ್ದ ವೆಂಕಟೇಸನ್, ನಂತರ ಉಪ ಕಾರ್ಯದರ್ಶಿ ಮಟ್ಟಕ್ಕೆ ಏರಿದ್ದ ಎಂದು ಹೇಳಲಾಗಿದೆ.