ʼಶಕ್ತಿ ಯೋಜನೆʼ ಉಚಿತ ಪ್ರಯಾಣದ ಎಫೆಕ್ಟ್: ಸರಕಾರಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಉಡುಪಿ, ಜೂ.12: ರಾಜ್ಯ ಸರಕಾರ ರವಿವಾರದಿಂದ ಜಾರಿಗೆ ತಂದಿರುವ ಶಕ್ತಿಯ ಯೋಜನೆಯ ಉಚಿತ ಪ್ರಯಾಣದ ಪರಿಣಾಮವಾಗಿ ಉಡುಪಿ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯಲ್ಲಿ ಶೇ.25ರಷ್ಟು ಹೆಚ್ಚಳ ಕಂಡುಬಂದಿದೆ. ಈವರೆಗೆ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯರು ಇದೀಗ ಸರಕಾರಿ ಬಸ್ಗಳತ್ತ ಮುಖ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಉಡುಪಿ ಮತ್ತು ಕುಂದಾಪುರದಲ್ಲಿ ಎರಡು ಘಟಕಗಳಿದ್ದು, ಪ್ರತಿನಿತ್ಯ ಉಡುಪಿ ಘಟಕದಲ್ಲಿ 87 ಅನುಸೂಚಿಗಳು ಹಾಗೂ ಕುಂದಾಪುರ ಘಟಕದಲ್ಲಿ 96 ಅನುಸೂಚಿಗಳು ಕಾರ್ಯಾಚರಿಸುತ್ತಿವೆ. ಪ್ರಸ್ತುತ ಉಡುಪಿ ಘಟಕದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ 72 ಬಸ್ಗಳು ಹಾಗೂ ಕುಂದಾಪುರ ಘಟಕದಲ್ಲಿ 65 ಬಸ್ಗಳು ಸಂಚರಿಸುತ್ತಿವೆ.
ಶಕ್ತಿ ಯೋಜನೆ ಜಾರಿಯಾದ ರವಿವಾರ ರಾತ್ರಿ ಹುಬ್ಬಳ್ಳಿ ಕಡೆ ಹೋಗುವ ಬಸ್ಗಳು ಮಹಿಳೆಯರಿಂದ ತುಂಬಿ ಹೋಗಿರುವುದು ಕಂಡುಬಂದಿವೆ. ಬಹುತೇಕ ವಲಸೆ ಕಾರ್ಮಿಕ ಮಹಿಳೆಯರು ತಮ್ಮ ಊರಿಗೆ ಹೊರಟಿದ್ದರು. ಮಂಗಳೂರಿನಿಂದ ಹೊರಟ ಸರಕಾರಿ ಬಸ್ಸಿನಲ್ಲಿ 30 ಸೀಟು ಮಂಗಳೂರಿ ನಿಂದಲೇ ಭರ್ತಿಯಾಗಿ ಬಂದರೆ ಉಳಿದ 30 ಸೀಟು ಉಡುಪಿಯಲ್ಲಿ ಭರ್ತಿ ಯಾಗಿದೆ. ಇದರಲ್ಲಿದ್ದವರು ಬಹುತೇಕ ಮಹಿಳೆಯರೇ. ಹೀಗೆ ರಾತ್ರಿ ಸುಮಾರು ಹಲವು ಬಸ್ಗಳು ಹುಬ್ಬಳ್ಳಿಗೆ ಓಡಾಟ ನಡೆಸಿವೆ.
ಇಂದು ಬೆಳಗ್ಗೆ ಉಡುಪಿಯಿಂದ ಕುಂದಾಪುರದಿಂದ ಹಾಗೂ ಉಡುಪಿ ಯಿಂದ ಮಂಗಳೂರು ಕಡೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳು ಕೂಡ ಮಹಿಳೆಯರಿಂದ ತುಂಬಿ ಹೋಗಿದ್ದವು. ಶಕ್ತಿ ಯೋಜನೆ ಜಾರಿಯಾದ ಬಳಿಕ ಶೇ.20ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳ ಕಂಡಿದೆ ಎನ್ನುತ್ತಾರೆ ಕೆಎಸ್ಆರ್ಟಿಸಿ ಸಂಚಾರ ನಿಯಂತ್ರಣಾಧಿಕಾರಿ ಮುತ್ತಪ್ಪ.
ಕಲೆಕ್ಷನ್ನಲ್ಲಿ ಹೆಚ್ಚಳ
ಚಿಕ್ಕಮಗಳೂರು- ಉಡುಪಿಗೆ ಒಂದು ಟ್ರಿಪ್ನಲ್ಲಿ ಒಟ್ಟು 18000ರೂ. ಕಲೆಕ್ಷನ್ ಆಗಿದೆ. ಇದರಲ್ಲಿ 11200ರೂ. ಉಚಿತ ಪ್ರಯಾಣ. ಉಳಿದಂತೆ 6800 ರೂ. ಹಣ ಸಂಗ್ರಹವಾಗಿದೆ. ಇಲ್ಲದಿದ್ದರೆ ಈ ಟ್ರಿಪ್ನಲ್ಲಿ ಸರಾಸರಿ 13000ರೂ. ಹಣ ಸಂಗ್ರಹವಾಗುತ್ತದೆ. ಈ ಯೋಜನೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸರಕಾರಿ ಬಸ್ಸಿನ ಮಹಿಳಾ ನಿರ್ವಾಹಕಿ ಯೊಬ್ಬರು ಮಾಹಿತಿ ನೀಡಿದರು.
ಅದೇ ರೀತಿ ಕಾರವಾರ-ಧರ್ಮಸ್ಥಳ ಬಸ್ಸಿನಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈವರೆಗೆ ಸರಾಸರಿ 10ಸಾವಿರ ರೂ. ಸಂಗ್ರಹ ವಾಗುತ್ತಿದ್ದರೆ ಇಂದು ಒಂದು ಟ್ರಿಪ್ನಲ್ಲಿ 12687ರೂ. ಕಲೆಕ್ಷನ್ ಆಗಿದ್ದು, ಇದರಲ್ಲಿ ಶೇ.50ರಷ್ಟು ಉಚಿತ ಪ್ರಯಾಣವಾಗಿದೆ. ಇದು ಖಾಸಗಿ ಬಸ್ಗಳ ಪ್ರಯಾಣಿಕರಿರಬಹುದು ಮತ್ತು ಉಚಿತ ಎಂಬ ಕಾರಣಕ್ಕೆ ಬೇರೆ ಬೇರೆ ತಾಣಕ್ಕೆ ಹೊರಟ ಪ್ರಯಾಣಿಕರು ಕೂಡ ಆಗಿರಬಹುದು ಎಂದು ನಿವಾರ್ಹಕರೊಬ್ಬರು ತಿಳಿಸಿದರು.
‘ಬೈಂದೂರಿನಿಂದ ಮೂಡಬಿದಿರೆ ಹೋಗಬೇಕಾಗಿದೆ. ಬೈಂದೂರಿನಿಂದ ಉಡುಪಿವರೆಗೆ ಖಾಸಗಿ ಬಸ್ಸಿನಲ್ಲಿ ಬಂದಿದ್ದೇವೆ. ಮೂಡಬಿದಿರೆಗೆ ಈವರೆಗೆ ನಾವು ಖಾಸಗಿ ಬಸ್ಸಿನಲ್ಲಿ ಹೋಗುತ್ತಿದ್ದೇವು. ಇವತ್ತು ಸರಕಾರಿ ಬಸ್ಸಿನಲ್ಲಿ ಹೊರಟಿದ್ದೇವೆ. ಈ ಶಕ್ತಿ ಯೋಜನೆಯು ಮಹಿಳೆಯರಿಗೆ ತುಂಬಾ ಅನುಕೂಲವಾಗಲಿದೆ’ ಎನ್ನುತ್ತಾರೆ ಪ್ರಯಾಣಿಕರಾದ ಜೆನಿಟಾ ಬೈಂದೂರು.
ಮೈಸೂರು -ಉಡುಪಿ ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್ಸಿನಲ್ಲೂ ಮಹಿಳೆಯರ ಸಂಖ್ಯೆ ದುಪ್ಪಟ್ಟು ಆಗಿದೆ. ಟಿಕೆಟ್ ರಿಸರ್ವ್ ಮಾಡುವ ಬಸ್ ಗಳಲ್ಲಿ ಶೇ.50 ಪುರುಷರಿಗೆ ಮೀಸಲು ಬೋರ್ಡು ಹಾಕುವುದಿಲ್ಲ. ಟಿಕೆಟ್ ಮಾಡುವಾಗಲೇ ಶೇ.50ರಷ್ಟು ಮಾತ್ರ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎನ್ನುತ್ತಾರೆ ಬಸ್ ನಿರ್ವಾಹಕ ಅಶೋಕ್.
"ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ತುಂಬಾ ಒಳ್ಳೆಯದಾಗಿದೆ. ಕೆಲವು ಮನೆಗಳಲ್ಲಿ ಪುರುಷರು ಕುಡಿಯಲು ಹಣ ಬೇಕಾದರೆ ಖರ್ಚು ಮಾಡುತ್ತಾರೆ. ಆದರೆ ಪತ್ನಿಗೆ ಕೊಡುವುದಿಲ್ಲ. ಕೆಲವು ಮಹಿಳೆಯರು ದುಡಿಯಲು ಕೂಡ ಹೋಗದೆ ಗೃಹಿಣಿಯಾಗಿರುತ್ತಾರೆ. ಅವರಿಗೆ ಈಗ ಎಲ್ಲಿಗೆ ಹೋಗಬೇಕಾದರೂ ಗಂಡನ ಮುಂದೆ ಕೈಚಾಚ ಬೇಕಾದ ಅಗತ್ಯ ಬರುವುದಿಲ್ಲ. ನಾನು ಉಡುಪಿ ಯಿಂದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಹೋಗುತ್ತಿದ್ದೇನೆ. ಬರುವಾಗ ಖಾಸಗಿ ಬಸ್ಸಿನಲ್ಲಿ ಬಂದಿದ್ದೇನೆ. ಈಗ ನನಗೆ ಸುಮಾರು 118ರೂ.ವರೆಗೆ ಉಳಿತಾಯ ಆಗಿದೆ".
-ಸ್ಮಿತಾ, ಗುರುವಾಯನಕೆರೆ, ಪ್ರಯಾಣಿಕರು
"ನಾನು ಚಿಕ್ಕಮಗಳೂರಿನಿಂದ ಕುಂದಾಪುರಕ್ಕೆ ಮಗಳ ಮನೆಗೆ ಬಂದು ವಾಪಾಸ್ಸು ಹೋಗುತ್ತಿದ್ದೇನೆ. ಬರುವಾಗ ಖಾಸಗಿ ಬಸ್ಸಿನಲ್ಲಿ ಬಂದಿದ್ದೆ. ಹೋಗುವಾಗ ಸರಕಾರಿ ಬಸ್ಸಿನಲ್ಲಿ ಹೋಗುತ್ತಿದ್ದೇನೆ. ಉಡುಪಿಯಿಂದ ಚಿಕ್ಕಮಗಳೂರಿಗೆ 200 ರೂ. ಟಿಕೆಟ್ ನೀಡಬೇಕು. ಈಗ ಉಚಿತ ಆಗಿರುವುದು ತುಂಬಾ ಖುಷಿ ಕೊಟ್ಟಿದೆ. ನಾನು ಉಚಿತ ಆದ ಬಳಿಕ ಮೊದಲ ಬಾರಿ ಸರಕಾರಿ ಬಸ್ನಲ್ಲಿ ಹೋಗುತ್ತಿದ್ದೇನೆ. ಈ ರೀತಿ ಬಸ್ಗಳಲ್ಲಿ ಉಚಿತ ಮಾಡಿದರೆ ಬಡವರಿಗೆ ಒಳ್ಳೆಯದಾಗುತ್ತದೆ".
-ಗಂಗಮ್ಮ ಆಲ್ದೂರು, ಚಿಕ್ಕಮಗಳೂರು, ಪ್ರಯಾಣಿಕರು
"ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ಗಳಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಈ ಹಿಂದಿ ಗಿಂತ ಶೇ.25ರಷ್ಟು ಹೆಚ್ಚಳ ಕಂಡಿದೆ. ಈ ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಉಡುಪಿ ಡಿಪ್ಪೊ ವ್ಯಾಪ್ತಿಯ 72 ಬಸ್ಗಳಲ್ಲಿ ರವಿವಾರ 940 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ".
-ಶಿವರಾಮ್, ಮೆನೇಜರ್, ಉಡುಪಿ ಡಿಪ್ಪೊ, ಕೆಎಸ್ಆರ್ಟಿಸಿ
