ಜಯಲಲಿತಾ ಬಗ್ಗೆ ಅಣ್ಣಾಮಲೈ ಟೀಕೆ: ಬಿಜೆಪಿ- ಎಐಎಡಿಎಂಕೆ ಮೈತ್ರಿಗೆ ಕುತ್ತು
ಚೆನ್ನೈ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆಗಿನ ಮೈತ್ರಿ ಮುರಿದಿರುವುದು ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು, ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದರಿಂದ ಮುನಿಸಿಕೊಂಡಿರುವ ಎಐಎಡಿಎಂಕೆ, "ಅವರನ್ನು ತಕ್ಷಣ ವಜಾಗೊಳಿಸಿ.. ಇಲ್ಲದಿದ್ದರೆ.." ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.
ಇಂಗ್ಲಿಷ್ ದೈನಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು, ಎಐಎಡಿಎಂಕೆಯ ಮಾಜಿ ಐಕಾನ್ ಜಯಲಲಿತಾ, ಅಕ್ರಮ ಸಂಪತ್ತು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು ಎಂಬ ಅಂಶವನ್ನು ಉಲ್ಲೇಖಿಸಿದ್ದರು. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳನ್ನು ಸಮಾನವಾಗಿ ಟೀಕಿಸುತ್ತಿರುವ ಅಣ್ಣಾಮಲೈ ಹೇಳಿಕೆಯನ್ನು ಎಐಎಡಿಎಂಕೆ ಗಂಭೀರವಾಗಿ ಪರಿಗಣಿಸಿದೆ. ಅಣ್ಣಾಮಲೈ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮರುಚಿಂತನೆ ನಡೆಸಲಾಗುವುದು ಎಂದು ಎಐಎಡಿಎಂಕೆ ಎಚ್ಚರಿಕೆ ನೀಡಿದೆ.
"ಅಣ್ಣಾಮಲೈ ಒಂದು ಪಕ್ಷದ ರಾಜ್ಯ ಅಧ್ಯಕ್ಷರಾಗಲು ಅರ್ಹರಲ್ಲ. ತಮ್ಮ ಮಾತುಗಳ ಬಗ್ಗೆ ಅವರು ಎಚ್ಚರ ವಹಿಸಬೇಕು. ನಮ್ಮ ಜತೆಗಿನ ಮೈತ್ರಿ ಮುಂದುವರಿಯುವುದು ಅಥವಾ ಮೋದಿ ಮತ್ತೆ ಗೆಲ್ಲುವುದು ಅವರಿಗೆ ಬೇಕಿಲ್ಲ ಎಂಬ ಅನುಮಾನ ನಮ್ಮದು" ಎಂದು ಪಕ್ಷದ ಹಿರಿಯ ಮುಖಂಡ ಡಿ.ಜಯಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಪಕ್ಷದ ರಾಷ್ಟ್ರೀಯ ಮುಖಂಡರ ಮುಖವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಎಐಎಡಿಎಂಕೆ ಅನುಮಾನ ವ್ಯಕ್ತಪಡಿಸಿದೆ.