ಉತ್ತರಾಖಂಡ: ಹೆಚ್ಚುತ್ತಿರುವ ಕೋಮುವಾದಿ ಅಭಿಯಾನದ ವಿರುದ್ಧ ಕಳವಳ ವ್ಯಕ್ತಪಡಿಸಿದ ನಿವೃತ್ತ ಸರಕಾರಿ ಅಧಿಕಾರಿಗಳು
ಹೊಸದಿಲ್ಲಿ: ಉತ್ತರಾಖಂಡದ ಹಲವು ನಗರಗಳಿಂದ ತೊಲಗುವಂತೆ ಮುಸ್ಲಿಮ್ ವ್ಯಾಪಾರಿಗಳಿಗೆ ಹಿಂದುತ್ವವಾದಿ ಗುಂಪುಗಳು ಬೆದರಿಕೆಗಳನ್ನು ಒಡ್ಡಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕ (DGP)ರಿಗೆ ಪತ್ರವೊಂದನ್ನು ಬರೆದಿರುವ 52 ನಿವೃತ್ತ ಸರಕಾರಿ ಅಧಿಕಾರಿಗಳು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಕೋಮುವಾದಿ, ಮುಸ್ಲಿಂ ವಿರೋಧಿ ಅಭಿಯಾನದ ಕುರಿತು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ನಿವೃತ್ತ ಅಧಿಕಾರಿಗಳು ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ (CCG)ನ ಸದಸ್ಯರಾಗಿದ್ದಾರೆ.
‘ರಾಜ್ಯದಲ್ಲಿ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಸಂಘಟಿತ ಪ್ರಚಾರ ನಡೆಯುತ್ತಿದೆ,ಆದಾಗ್ಯೂ ಇದರ ಹಿಂದಿರುವವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಸಾರ್ವಜನಿಕವಾಗಿ ಮಾಹಿತಿಗಳು ಲಭ್ಯವಿದ್ದರೂ ಇತ್ತೀಚಿಗೆ ಮುಸ್ಲಿಮರ ವಿರುದ್ಧ ಪೋಸ್ಟರ್ಗಳ ಪ್ರದರ್ಶನದ ಬಳಿಕ ‘ಅಪರಿಚಿತ ವ್ಯಕ್ತಿಗಳ ’ವಿರುದ್ಧ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದನ್ನು ಹೊರತುಪಡಿಸಿದರೆ 2016, ಮೇ 26ರಿಂದ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಅಭಿಯಾನದ ಕುರಿತು ಆಡಳಿತವು ಯಾವುದೇ ಕ್ರಮವನ್ನು ಕೈಗೊಂಡಿಲ್ಲವೇಕೆ ಎನ್ನುವುದು ನಮ್ಮ ಪಾಲಿಗೆ ನಿಗೂಢವಾಗಿದೆ ’ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇನ್ನು ಮುಂದೆ ಬಹಿಷ್ಕಾರ ಅಭಿಯಾನಗಳು ಮತ್ತು ಹಿಂಸಾಚಾರಕ್ಕೆ ಕರೆಗಳು ಇರದಂತೆ ನೋಡಿಕೊಳ್ಳಬೇಕು ಹಾಗೂ ಬಲವಂತದಿಂದಾಗಿ ತಮ್ಮ ಮನೆಗಳನ್ನು ತೊರೆದವರಿಗೆ ಪುನರ್ವಸತಿಯನ್ನು ಕಲ್ಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
‘ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿಲ್ಲ,ಆದರೆ ನಾವು ನಿಷ್ಪಕ್ಷತೆ ಮತ್ತು ತಟಸ್ಥತೆಯಲ್ಲಿ ನಂಬಿಕೆಯನ್ನು ಹೊಂದಿದ್ದೇವೆ ಹಾಗೂ ಭಾರತದ ಸಂವಿಧಾನಕ್ಕೆ ಬದ್ಧತೆಯನ್ನು ಹಂಚಿಕೊಂಡಿದ್ದೇವೆ ’ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವ ಈ ನಿವೃತ್ತ ಸರಕಾರಿ ಅಧಿಕಾರಿಗಳು ಉತ್ತರಾಖಂಡದಲ್ಲಿ,‘ವಿಶೇಷವಾಗಿ ಉತ್ತರಕಾಶಿ ಮತ್ತು ತೆಹ್ರಿ ಗಡ್ವಾಲ್ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅಹಿತಕರ ವಾತಾವರಣದ ಬಗ್ಗೆ ನಮ್ಮ ತೀವ್ರ ಕಳವಳಗಳನ್ನು ವ್ಯಕ್ತಪಡಿಸಲು ಈ ಪತ್ರವನ್ನು ಬರೆಯುತ್ತಿದ್ದೇವೆ. ವಿಶೇಷವಾಗಿ 2023,ಜೂ.15ರಂದು ಪುರೋಲಾ ಪಟ್ಟಣದಲ್ಲಿ ನಡೆಯಲಿರುವ ಮಹಾಪಂಚಾಯತ್ ಮತ್ತು ರ್ಯಾಲಿ ಹಾಗೂ 2023,ಜೂ.20ರಂದು ತೆಹ್ರಿಯಲ್ಲಿ ನಡೆಲಿರುವ ‘ಚಕ್ಕಾ ಜಾಮ್ (ರಸ್ತೆ ತಡೆ)’ ಕಾರ್ಯಕ್ರಮದ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ಬಯಸಿದ್ದೇವೆ.
ಇವೆರಡೂ ಸ್ಪಷ್ಟವಾಗಿ ಈ ಪ್ರದೇಶಗಳಿಂದ ಮುಸ್ಲಿಮರನ್ನು ಹೊರಹಾಕುವ ಬೆದರಿಕೆ ಕರೆಗಳಿಗೆ ಸಂಬಂಧಿಸಿವೆ. ಈ ದಿನಾಂಕಗಳಂದು ಅಥವಾ ಇತರ ದಿನಗಳಲ್ಲಿ ಇಂತಹ ಯಾವುದೇ ಕ್ರಿಮಿನಲ್,ಕೋಮುವಾದಿ ಅಥವಾ ಪ್ರಚೋದನಾಕಾರಿ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ ಹಾಗೂ ರಾಜ್ಯ ಪೊಲೀಸ್ ಮತ್ತು ಆಡಳಿತವು ಸಂವಿಧಾನ,ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ ಹಲವಾರು ನಿರ್ದೇಶನಗಳಿಗೆ ಅನುಗುಣವಾಗಿ ದ್ವೇಷ ಭಾಷಣ ಮತ್ತು ಗುಂಪು ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದನ್ನು ಖಚಿತ ಪಡಿಸಿಕೊಳ್ಳುವಂತೆ ತಮಗೆ ಕರೆ ನೀಡುತ್ತಿದ್ದೇವೆ ’ಎಂದು ತಿಳಿಸಿದ್ದಾರೆ.
ಉತ್ತರಾಖಂಡವು ಸಾಮಾಜಿಕ ಶಾಂತಿ ಮತ್ತು ಸೌಹಾರ್ದಕ್ಕೆ ಹೆಸರಾದ ರಾಜ್ಯವಾಗಿದೆ ಎಂದು ತಿಳಿಸಿರುವ ನಿವೃತ್ತ ಅಧಿಕಾರಿಗಳು,ಇದನ್ನು ಕಾಯ್ದುಕೊಳ್ಳಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಯವರನ್ನು ಆಗ್ರಹಿಸಿದ್ದಾರೆ.