ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಅಳವಡಿಸಿದ್ದ ಗೇಟ್ ತೆರವು
ದ.ಕ. ಜಿಲ್ಲಾಧಿಕಾರಿ ಸೂಚನೆ

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿಯವರು ಒಂದು ವರ್ಷದ ಹಿಂದೆ ಹಾಕಿದ್ದ ಗೇಟನ್ನು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ಮಂಗಳವಾರ ತೆರವುಗೊಳಿಸಲಾಯಿತು.
ದೇವಸ್ಥಾನದ ಹಿಂಭಾಗದಲ್ಲಿ ಕೊಕ್ಕಡ ಗ್ರಾಮದ ಸ.ನಂ 167/1 ರಲ್ಲಿ ಅನ್ನಛತ್ರದ ಬಳಿ ರಸ್ತೆಗೆ ಕಳೆದ ವರ್ಷ ಗೇಟ್ ಅಖವಡಿಸಲಾಗಿತ್ತು. ಗೇಟ್ ಅಳವಡಿಕೆಯ ಸಂದರ್ಭದಲ್ಲಿ ಬಯಲು ಆಲಯಕ್ಕೆ ಗೇಟು ಅಳವಡಿಸುವ ಬಗ್ಗೆ ವಿರೋಧ ಕೇಳಿ ಬಂದಿತ್ತು. ಅಲ್ಲದೆ ಈ ರಸ್ತೆಯನ್ನು ಉಪಯೋಗಿಸುತ್ತಿದ್ದ ಇಲ್ಲಿನ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿದ್ದರು.
ಆದರೆ ರಸ್ತೆಗೆ ದೇವಸ್ಥಾನದ ವತಿಯಿಂದ ಗೇಟು ಅಳವಡಿಸಿರುವುದನ್ನು ರಸ್ತೆ ಉಪಯೋಗಿಸುತ್ತಿದ್ದ ಕೃಷ್ಣ ಭಟ್ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿ, ದ.ಕ ಜಿಲ್ಲಾಧಿಕಾರಿ ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು. ದ.ಕ ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ಮೂಲಕ ಸುಮಾರು 50 ವರ್ಷಗಳಿಂದ ಇದ್ದ ರಸ್ತೆಗೆ ಹಾಕಿದ ಗೇಟನ್ನು ಪರಿಶೀಲಿಸಿ, ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಸುರೇಶ್ ಕುಮಾರ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಹಾಗೂ ಗ್ರಾಮ ಕರಣಿಕರು ಉಪಸ್ಥಿತಿಯಲ್ಲಿ ರಸ್ತೆಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.