ಟ್ವಿಟರ್ ಮುಚ್ಚುವಂತೆ ಕೇಂದ್ರ ಸರಕಾರ ಬೆದರಿಕೆಯೊಡ್ಡಿದ್ದ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು ಹೇಳಿದ್ದೇನು?
ಹೊಸದಿಲ್ಲಿ: ತನ್ನ ಸೂಚನೆಗಳನ್ನು ಪಾಲಿಸಲು ವಿಫಲಗೊಂಡರೆ ದೇಶದಲ್ಲಿ ಟ್ವಿಟರ್ ನನ್ನು ಮುಚ್ಚಿಸುವುದಾಗಿ ಸರಕಾರವು ಬೆದರಿಕೆಗಳನ್ನೊಡ್ಡಿತ್ತು ಎಂಬ ಕಂಪನಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜಾಕ್ ಡಾರ್ಸಿಯವರ ಹೇಳಿಕೆಗಳು ಭಾರತದಲ್ಲಿ ಹೇಗೆ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲಾಗುತ್ತಿದೆ ಎನ್ನುವುದನ್ನು ತೋರಿಸಿವೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
ಸೋಮವಾರ ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್ ಗೆ ನೀಡಿದ್ದ ಸಂದರ್ಶನದಲ್ಲಿ, ವಿದೇಶಿ ಸರಕಾರಗಳು ತಮ್ಮ ಆದೇಶಗಳನ್ನು ಪಾಲಿಸುವಂತೆ ಟ್ವಿಟರ್ ಮೇಲೆ ಒತ್ತಡ ಹೇರಿದ್ದ ನಿದರ್ಶನಗಳನ್ನು ನೀಡುವಂತೆ ಸಂದರ್ಶಕರು ಕೋರಿದಾಗಿ ಕಂಪನಿಯ ಸಹಸ್ಥಾಪಕರೂ ಆದ ಡಾರ್ಸಿ ಈ ಹೇಳಿಕೆಯನ್ನು ನೀಡಿದ್ದರು.
ಕೃಷಿ ಕಾಯ್ದೆಗಳ ವಿರುದ್ಧ ರೈತರ ಸುದೀರ್ಘ ಪ್ರತಿಭಟನೆ ಸಂದರ್ಭದಲ್ಲಿ ತನ್ನನ್ನು ಟೀಕಿಸುತ್ತಿದ್ದ ಪತ್ರಕರ್ತರ ಖಾತೆಗಳನ್ನು ನಿರ್ಬಂಧಿಸುವಂತೆ ಸರಕಾರವು ಹಲವು ಮನವಿಗಳನ್ನು ಮಾಡಿಕೊಂಡಿತ್ತು. ತನ್ನ ಸೂಚನೆಗಳನ್ನು ಪಾಲಿಸದಿದ್ದರೆ ಟ್ವಿಟರ್ ನನ್ನು ಮುಚ್ಚಿಸುವುದಾಗಿ ಮತ್ತು ಅದರ ಸಿಬ್ಬಂದಿಗಳ ಮನೆಗಳ ಮೇಲೆ ದಾಳಿ ನಡೆಸುವುದಾಗಿ ಸರಕಾರವು ಬೆದರಿಕೆಯೊಡ್ಡಿತ್ತು ಎಂದು ಡಾರ್ಸಿ ಹೇಳಿದ್ದರು.
ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ರಾಜ್ಯಸಚಿವ ರಾಜೀವ್ ಚಂದ್ರಶೇಖರ್ ಅವರು ಡಾರ್ಸಿಯವರ ಆರೋಪಗಳನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ.
ಆದರೆ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನಾಠೆ ಅವರು,ದೇಶದ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರು. ಸತ್ಯವು ತನ್ನದೇ ಆದ ವಿಶೇಷವನ್ನು ಹೊಂದಿದೆ. ಅದನ್ನು ನಿಗ್ರಹಿಸಲು ನೀವೂ ಪ್ರಯತ್ನಿಸಿದಷ್ಟೂ ಹೆಚ್ಚು ಪ್ರಖರವಾಗಿ ಅದು ತೆರೆದುಕೊಳ್ಳುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಾರ್ಸಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇತರ ಪ್ರತಿಪಕ್ಷ ನಾಯಕರೂ ಸರಕಾರವನ್ನು ಟೀಕಿಸಿದ್ದಾರೆ. ಡಾರ್ಸಿಯವರ ಹೇಳಿಕೆಗಳು ಭಾರತದಲ್ಲಿ ಹೇಗೆ ಪ್ರಜಾಪ್ರಭುತವನ್ನು ದಮನಿಸಲಾಗುತ್ತಿದೆ ಎನ್ನುವುದನ್ನು ತೋರಿಸುತ್ತಿವೆ ಎಂದು ಶಿವಸೇನೆ (ಠಾಕ್ರೆ ಬಣ) ಸಂಸದ ಸಂಜಯ ರಾವುತ್ ಹೇಳಿದ್ದರೆ,ಭಾರತ ಸರಕಾರವು ಟ್ವಿಟರ್ ಮೇಲೆ ಒತ್ತಡವನ್ನು ಹೇರುತ್ತಿರುವ ಕುರಿತು ಡಾರ್ಸಿ ಸುಳ್ಳು ಹೇಳಲು ಯಾವುದೇ ಕಾರಣವಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ.
‘ವಾಕ್ ಸ್ವಾತಂತ್ರವಿದೆ,ಆದರೆ ಮಾತನಾಡಿದ ಬಳಿಕ ಸ್ವಾತಂತ್ರವನ್ನು ನಾನು ಖಚಿತ ಪಡಿಸುವುದಿಲ್ಲ’ಎಂಬ ಉಗಾಂಡಾದ ಮಾಜಿ ಅಧ್ಯಕ್ಷ ಇದಿ ಅಮೀನ್ರ ಹೇಳಿಕೆಯನ್ನು ಪ್ರಸ್ತಾಪಿಸಿದ ಟಿಎಂಸಿ,ಇದನ್ನು ಮೋದಿಯವರು ತನ್ನ ಮಾರ್ಗದರ್ಶಿ ನೀತಿಗಳಲ್ಲಿ ಒಂದಾಗಿಸಿಕೊಂಡಿದ್ದಾರೆ ಎಂದು ಕುಟುಕಿದ್ದರೆ,ಡಾರ್ಸಿಯವರ ಆರೋಪಗಳು ಬಿಜೆಪಿ ದೇಶದಲ್ಲಿ ಪ್ರತಿಯೊಂದೂ ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲು ಹೇಗೆ ಪ್ರಯತ್ನಿಸಿದೆ ಎನ್ನುವುದನ್ನು ತೋರಿಸಿವೆ ಎಂದು ಆಪ್ ಸಂಸದ ರಾಘವ ಛಡ್ಡಾ ಹೇಳಿದ್ದಾರೆ.