ಜಪ್ಪುಸಂತ ಅಂತೋನಿ ಆಶ್ರಮದ ವಾರ್ಷಿಕ ಹಬ್ಬ; ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ

ಮಂಗಳೂರು: ನಗರದ ಜಪ್ಪುಸಂತ ಅಂತೋನಿ ಆಶ್ರಮದ ವಾರ್ಷಿಕ ಹಬ್ಬ ಮತ್ತು ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣೆಯ ಸಮಾರೋಪ ಮಂಗಳವಾರ ನಡೆಯಿತು.
ಆಶ್ರಮದ 125ನೇ ವರ್ಷಾಚರಣೆ ಅಂಗವಾಗಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಇವೆಲ್ಲವುಗಳ ಸಮಾರೋಪದ ಪ್ರಯುಕ್ತ ಶತಮಾನೋತ್ತರ ಬೆಳ್ಳಿ ಹಬ್ಬದ ಲಾಂಚನಕ್ಕೆ ಬೆಳಗಿಸಿದ್ದ ದೀಪಗಳನ್ನು ಆರಿಸಲಾಯಿತು.
ಮಂಗಳೂರಿನ ಬಿಷಪ್ ರೈ ರೆ. ಪೀಟರ್ ಪಾವ್ಲ್ ಸಲ್ದಾನ್ಹಾ ಮಿಲಾಗ್ರಿಸ್ ಚರ್ಚ್ನಲ್ಲಿ ಸಂಭ್ರಮದ ಬಲಿ ಪೂಜೆ ನಡೆಸಿಕೊಟ್ಟರು. ವಿಕಾರ್ ಜನರಲ್ ಮೊ. ಮ್ಯಾಕ್ಸಿಮ್ ಎಲ್. ನೊರೋನ್ಹಾ, ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ. ಜೆ. ಬಿ. ಕ್ರಾಸ್ತಾ, ಮಿಲಾಗ್ರಿಸ್ ಚರ್ಚ್ನ ಪ್ರಧಾನ ಗುರು ಫಾ.ಬೊನವೆಂಚರ್ ನಜರೆತ್ ಮತ್ತು ನಗರದ ಸುತ್ತಮುತ್ತಲ ವಿವಿಧ ಚರ್ಚ್ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಬಲಿಪೂಜೆ ಸಂದರ್ಭ ಪ್ರವಚನ ನೀಡಿದ ಬಿಷಪ್ ರೈ.ರೆ. ಪೀಟರ್ ಪಾವ್ಲ್ ಸಲ್ದಾನ್ಹಾ, ಸಂತ ಅಂತೋನಿ ಅವರದು ಆಕರ್ಷಕ ವ್ಯಕ್ತಿತ್ವ. ಅವರ ಪವಿತ್ರ ಸ್ಮರಣಿಕೆಯು ಸಮಗ್ರ ಬದುಕಿನ ಪ್ರತಿಬಿಂಬವಾಗಿದೆ. ಅವರ ಬದುಕು ನಮಗೆಲ್ಲರಿಗೂ ಆದರ್ಶ ಹಾಗೂ ಪ್ರೇರಣೆಯಾಗಿದೆ ಎಂದರು.
ಹಬ್ಬದ ಪ್ರಯುಕ್ತ ವಿಕಾರ್ ಜನರಲ್ ಮೊ. ಮ್ಯಾಕ್ಸಿಮ್ ಎಲ್. ನೋರೋನ್ಹಾ ಜಪ್ಪುಆಶ್ರಮದಲ್ಲಿ ಬಲಿಪೂಜೆ ಮತ್ತು ಆರಾಧನೆ, ಎಪಿಸ್ಕೋಪಲ್ ವಲಯ ಮುಖ್ಯಸ್ಥ ಫಾ. ವಿನ್ಸೆಂಟ್ ಮೊಂತೇರೊ ಅವರಿಂದ ಮಿಲಾಗ್ರಿಸ್ ಚರ್ಚ್ನಲ್ಲಿ ಬಲಿ ಪೂಜೆ, ಬರೇಲಿ ಧರ್ಮ ಪ್ರಾಂತದ ಬಿಷಪ್ ರೈ.ರೆ. ಇಗ್ನೇಷಿಯಸ್ ಡಿಸೋಜ ಜಪ್ಪುಆಶ್ರಮದಲ್ಲಿ ಬಲಿ ಪೂಜೆ ನೆರವೇರಿಸಿದರು.