ಶಿವಮೊಗ್ಗ | ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಇಳಿಕೆ; ಲಾಂಚ್ ಸೇವೆ ಸ್ಥಗಿತ ಸಾಧ್ಯತೆ
ಪರ್ಯಾಯ ವ್ಯವಸ್ಥೆಗೆ ಚಿಂತನೆ

ಶಿವಮೊಗ್ಗ, ಜೂ.13: ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಸಿಗಂದೂರು ಲಾಂಚ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. 18 ವರ್ಷದ ಹಿಂದಿನ ಪರಿಸ್ಥಿತಿ ಮರುಕಳಿಸುವ ಆತಂಕ ಸೃಷ್ಟಿಯಾಗಿದೆ.
ಈ ಬಾರಿ ವಾಡಿಕೆಯಂತೆ ಮಳೆಯಾಗದೆ ಬಿಸಿಲಿನ ಝಳ ಹೆಚ್ಚಿದ್ದರಿಂದ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ. ಹೊಳೆಯ ಆಳದಲ್ಲಿದ್ದ ಮರಗಳು ಮೇಲೆ ಕಾಣಿಸುತ್ತಿವೆ. ಸ್ಥಗಿತದ ಭೀತಿ: ಸಾಗರ ತಾಲೂಕಿನ ಅಂಬಾರಗೋಡ್ಲು- ಕಳಸವಳ್ಳಿ ಮಧ್ಯೆ ಲಾಂಚ್ ಸಂಚರಿಸುತ್ತಿವೆ. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಭಕ್ತರು ಇದೇ ಲಾಂಚ್ ಬಳಸುತ್ತಾರೆ. ಪ್ರಸಕ್ತ ಶರಾವತಿ ನೀರಿನ ಮಟ್ಟ ಇಳಿಕೆ ಆಗಿರುವುದರಿಂದ ಲಾಂಚ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ನೀರಿನ ಮಟ್ಟ ಇದೇ ಪ್ರಮಾಣದಲ್ಲಿ ಇಳಿಕೆಯಾದರೆ ಇನ್ನೊಂದು ವಾರದಲ್ಲಿ ಲಾಂಚ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮೊದಲು ಲಾಂಚ್ ಮೇಲೆ ವಾಹನಗಳು ಹಾಕುವುದಕ್ಕೆ ನಿರ್ಬಂಧ ವಿಧಿಸಿ, ಜನರನ್ನು ಮಾತ್ರ ಕರೆದೊಯ್ಯಲಾಗುತ್ತದೆ. ಪರಿಸ್ಥಿತಿ ಬಿಗಡಾಯಿಸಿದರೆ ಲಾಂಚ್ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.
ಪರ್ಯಾಯ ವ್ಯವಸ್ಥೆಗೆ ಚಿಂತನೆ: ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದರೆ ಆಳದಲ್ಲಿದ್ದ ಮರದ ದಿಮ್ಮಿಗಳು ಲಾಂಚ್ಗೆ ತಾಗುತ್ತಿವೆ. ಇದರಿಂದ ಲಾಂಚ್ಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ನಡು ನೀರಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದ್ದು, ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆ ಲಾಂಚ್ ಸೇವೆ ಸ್ಥಗಿತಗೊಳಿಸಲಾಗುತ್ತದೆ. ಇನ್ನೊಂದೆಡೆ ಸ್ಥಳೀಯರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಮೋಟರ್ ಬೋಟ್ ಮತ್ತು ಮಿನಿ ಲಾಂಚ್ ಬಳಕೆಗೆ ಯೋಜಿಸಲಾಗಿದೆ.
ರ್ಯಾಂಪ್ ವ್ಯವಸ್ಥೆ: ಲಾಂಚ್ಗೆ ಪ್ರಯಾಣಿಕರು, ವಾಹನಗಳು ಸುಲಭವಾಗಿ ಹತ್ತಲು ಅಂಬಾರಗೋಡ್ಲು ಮತ್ತು ಕಳಸವಳ್ಳಿಯಲ್ಲಿ ತಾತ್ಕಾಲಿಕವಾಗಿ ಸಿಮೆಂಟ್ ರ್ಯಾಂಪ್ಗಳನ್ನು ನಿರ್ಮಿಸಲಾಗಿದೆ. ನೀರಿನ ಮಟ್ಟ ಇಳಿಕೆಯಾದ್ದರಿಂದ ರ್ಯಾಂಪ್ಗಳು ಲಾಂಚ್ಗೆ ಸಿಗದಂತಾಗಿವೆ. ಹಾಗಾಗಿ ಅಧಿಕಾರಿಗಳು ತಾತ್ಕಾಲಿಕ ರ್ಯಾಂಪ್ ಗಳನ್ನು ನಿರ್ಮಿಸಿದ್ದಾರೆ. ಈ ಬಾರಿ ಮುಂಗಾರು ವಿಳಂಬವಾಗಿದೆ. ಇನ್ನೂ ಮಳೆಯಾಗದೆ ಇದ್ದರೆ ತುಮರಿಗೆ ತಲುಪಲು ಜನರು ಹರಸಾಹಸ ಪಡಬೇಕಾಗುತ್ತದೆ. ಸಿಗಂದೂರು ದೇಗುಲಕ್ಕೆ ಬರುವ ಪ್ರವಾಸಿಗರ ಸಂಖ್ಯೆಯು ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. 18 ವರ್ಷದ ಹಿಂದೆ ಇದೆ ರೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಹೆಚ್ಚಿದೆ.
''ಇನ್ನೂ 5-6 ದಿನ ಲಾಂಚ್ ಓಡಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನೀರು ಕಡಿಮೆಯಾಗಿರುವುದರಿಂದ ಹೊಸ ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ ಸಮಸ್ಯೆಯಾದರೆ ಲಾಂಚ್ ಮೇಲೆ ವಾಹನಗಳನ್ನು ಹಾಕುವುದನ್ನು ನಿಲ್ಲಿಸಿ, ಜನಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಆದಷ್ಟು ಬೇಗ ಮಳೆಯಾದರೆ ನೀರಿನ ಮಟ್ಟ ಒಂದೆರಡು ಅಡಿ ಹೆಚ್ಚಳವಾಗಿ ಪರಿಸ್ಥಿತಿ ಸುಧಾರಿಸಲಿದೆ''
- ಬೇಳೂರು ಗೋಪಾಲಕೃಷ್ಣ, ಶಾಸಕರು







