ಅಕ್ರಮ ಪಟಾಕಿ ಗೋದಾಮಿನಲ್ಲಿ ಬೆಂಕಿ: ನಾಲ್ವರು ಸಜೀವ ದಹನ
ಸಂಭಾಲ್: ಅಕ್ರಮ ಪಟಾಕಿ ಗೋದಾಮಿನಲ್ಲಿ ಮಂಗಳವಾರ ನಡೆದ ಭೀಕರ ಅಗ್ನಿದುರಂತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟು, ಇತರ ಎಂಟು ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.
ಗುನ್ನಾರ್ ಟೌನ್ಶಿಪ್ನಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಗುಡ್ಡೊ (40), ಅನಮ್ (25), ಸುಮಯ್ಯಾ (12) ಮತ್ತು ಗುರುತು ಪತ್ತೆಯಾಗದ ಮತ್ತೊಂದು ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಸರಾಯ್ ಪ್ರದೇಶದ ಸಬೀರ್ ಅಲಿ ಎಮಬುವವರ ಪಟಾಕಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದಿಂದ ಮೂವರು ಮೃತಪಟ್ಟಿದ್ದರೆ, ಗುರುತು ಪತ್ತೆಯಾಗದ ಮಗು ತೀವ್ರ ಗಾಯಗೊಂಡು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದೆ ಎಂದು ಗುನ್ನಾರ್ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಪವನ್ ಕುಮಾರ್ ಹೇಳಿದ್ದಾರೆ.
ಸ್ಥಳದಲ್ಲೇ ಮೃತಪಟ್ಟ ಮೂವರ ಶವಗಳನ್ನು ಸಿಎಚ್ಸಿಗೆ ತರಲಾಗಿದ್ದು, ಗಾಯಗೊಂಡ ಎಂಟು ಮಂದಿ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಎಂದು ಅವರು ವಿವರಿಸಿದ್ದಾರೆ. ಗೋದಾಮಿನ ಮಾಲೀಕ, ಅನುಮತಿ ಪಡೆದ ಜಾಗದಲ್ಲಿ ಮಾತ್ರವಲ್ಲದೇ ವಸತಿ ಪ್ರದೇಶದಲ್ಲೂ ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ್ದರು ಎಂದು ಎಸ್ಪಿ ಚಕ್ರೇಶ್ ಮಿಶ್ರಾ ವಿವರಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಅಲಿಯನ್ನು ಬಂಧಿಸಲಾಗಿದ್ದು, ಬೆಂಕಿ ನಂದಿಸಲಾಗಿದೆ. ಆದರೆ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.