4.69 ಕೋ. ಮೌಲ್ಯದ ಜಾಗ ಕೇವಲ 88 ಲಕ್ಷ ರೂ.ಗೆ ಮಾರಾಟ !
ಉಡುಪಿ ಎಂಪಿಎಂಸಿ ಅವ್ಯವಹಾರ ವಿರುದ್ಧ ವ್ಯಾಪಾರಸ್ಥರಿಂದ ಪ್ರತಿಭಟನೆ

ಉಡುಪಿ, ಜೂ.14: ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಯು ಆದಿಉಡುಪಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ 4.69ಕೋಟಿ ಮೌಲ್ಯದ ಜಾಗವನ್ನು ಕೇವಲ 88ಲಕ್ಷ ರೂ.ಗೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಹೊರಟಿದೆ ಎಂದು ಆರೋಪಿಸಿರುವ ವರ್ತಕರು, ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಈ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸ್ದಿದ್ದಾರೆ.
ಉಡುಪಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಇಂದು ಪ್ರತಿಭಟನೆ ನಡೆಸಿದ ವ್ಯಾಪಾರಸ್ಥರು, ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ 10-15ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಅಧಿಕಾರಿಗಳ ಅನುಮತಿ ಪಡೆದು ವರ್ಷದ ಹಿಂದೆ 2-3ಲಕ್ಷ ರೂ. ಖರ್ಚು ಮಾಡಿ ಗೋದಾಮು ನಿರ್ಮಿಸಿಕೊಂಡಿದ್ದೇವೆ. ಆದರೆ ಈಗ ನಮ್ಮ ಗೋದಾಮು ತೆರವುಗೊಳಿಸುವಂತೆ ಹೇಳುತ್ತಿದ್ದಾರೆ. ನಾವು ವ್ಯಾಪಾರ ಮಾಡುವ ಜಾಗವನ್ನು ಅಧಿಕಾರಿಗಳು ಬೇರೆಯವರಿಗೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
11 ಸೈಟ್ನ್ನು ಕೇವಲ 88ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ನಾವು ಗೋದಾಮು ನಿರ್ಮಿಸುವಾಗ ಅಧಿಕಾರಿಗಳು ನಮ್ಮಿಂದ ಸಾವಿರಾರು ರೂ. ಹಣ ಲಂಚದ ಹಣ ಪಡೆದುಕೊಂಡಿದ್ದಾರೆ. ಈ ನಮ್ಮಿಂದ ಈ ಜಾಗವನ್ನು ಕಿತ್ತುಕೊಳ್ಳುವುದರಿಂದ 25-30 ವ್ಯಾಪಾರಸ್ಥರು ಬೀದಿಗೆ ಬರಲಿದ್ದಾರೆ. ಆದುದರಿಂದ ಇದನ್ನು ಕೂಡಲೇ ರದ್ದು ಪಡಿಸಬೇಕು ಎಂದು ವ್ಯಾಪಾರಸ್ಥ ಲಕ್ಷ್ಮಣ್ ಒತ್ತಾಯಿಸಿದರು.
ಬಳಿಕ ಈ ಕುರಿತು ಎಂಪಿಎಂಸಿ ಆಡಳಿತಾಧಿಕಾರಿ ಗೋಪಾಲ ಕಾಕನೂರು ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ವ್ಯಾಪಾರಸ್ಥರಾದ ಫಯಾಝ್, ಬಸಯ್ಯ, ಪ್ರಭು ಗೌಡ, ಚಂದ್ರ, ರಾಘಣ್ಣ, ಸೈಯ್ಯದತ್, ರಮೇಶ್ ಪೈ, ವಿವಿಧ ಸಂಘಟನೆಗಳ ಮುಖಂಡರಾದ ಸುಭಾಷಿತ್ ಕುಮಾರ್, ವೇದಾವತಿ ಹೆಗ್ಡೆ, ಚಿನ್ಮಯ ಮೂರ್ತಿ, ಧೀರಜ್, ಸುರೇಶ್ ಆರ್.ಪಿ., ರೈತ ಮುಖಂಡ ರಾಘವೇಂದ್ರ ಉಪ್ಪೂರು, ರಾಧಾಕೃಷ್ಣ ಶೆಟ್ಟಿ, ರಾಧಾಕೃಷ್ಣ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.
"ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಅರೆ ಸರಕಾರಿ ಸಂಸ್ಥೆ ಯಾಗಿದ್ದು, ಇದರ ಖಾಸಗಿ ಜಾಗವನ್ನು ಇಲಾಖೆಯಿಂದ ಅಧಿಕೃತ ಲೈಸೆನ್ಸ್ ಪಡೆದ ಅರ್ಹ ಪೇಟೆ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗುತ್ತಿದೆ. ಇಲ್ಲಿನ 14 ಸಾಮಾನ್ಯ ನಿವೇಶನಗಳಿಗೆ ಇಲಾಖೆ ನಿಗದಿಪಡಿಸಿದ ದರ ಪ್ರತಿ ಚದರಡಿಗೆ 376ರೂ.ನಂತೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈವರೆಗೆ 11ಮಂದಿ ಅರ್ಜಿ ಹಾಕಿದ್ದಾರೆ. ಈಗ ಕೆಲವು ವ್ಯಾಪಾರಸ್ಥರು ಮಾಡುತ್ತಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು".
-ಗೋಪಾಲ ಕಾಕನೂರು, ಪ್ರಭಾರ ಆಡಳಿತಾಧಿಕಾರಿ, ಎಪಿಎಂಸಿ ಉಡುಪಿ







