ಅನ್ನಭಾಗ್ಯ: ತಾನೂ ಕೊಡ, ಇತರರನ್ನೂ ಬಿಡ
![ಅನ್ನಭಾಗ್ಯ: ತಾನೂ ಕೊಡ, ಇತರರನ್ನೂ ಬಿಡ ಅನ್ನಭಾಗ್ಯ: ತಾನೂ ಕೊಡ, ಇತರರನ್ನೂ ಬಿಡ](https://www.varthabharati.in/sites/default/files/images/articles/2023/06/15/381014-1686806501.jpg)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೂತನ ಸರಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಹತ್ತು ಕೆ.ಜಿ. ಅಕ್ಕಿಗೆ ಕೇಂದ್ರ ಸರಕಾರ ಕಲ್ಲು ಹಾಕುವ ಪ್ರಯತ್ನದಲ್ಲಿದೆ. ‘ತಾನೂ ಕೊಡ, ಕೊಡುವವರನ್ನೂ ಬಿಡ’ ಎನ್ನುವಂತೆ ಕೇಂದ್ರ ತಾನೂ ಕೊಡದೆ, ಕೊಡಲು ಮುಂದಾದ ರಾಜ್ಯ ಸರಕಾರವನ್ನೂ ಕೊಡದಂತೆ ತಡೆಯಲು ನೋಡುತ್ತಿದೆ. ರಾಜ್ಯ ಸರಕಾರ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ತಿಂಗಳು ತಲಾ ಹತ್ತು ಕೆ.ಜಿ. ಅಕ್ಕಿ ಉಚಿತ ನೀಡಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ‘ಪ್ರತೀ ತಿಂಗಳು 2.28 ಲಕ್ಷ ಮೆ. ಟನ್ ಅಕ್ಕಿಯ ಅಗತ್ಯವಿದೆ’ ಎಂದು ಕೋರಿ ಜೂ. 9ರಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಭಾರತೀಯ ಆಹಾರ ನಿಗಮವು ಒಪ್ಪಿಗೆಯನ್ನೂ ಸೂಚಿಸಿತ್ತು. ಹಾಗೆ ಒಪ್ಪಿಗೆ ಸೂಚಿಸಿದ ಬೆನ್ನಿಗೇ ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 15 ಲಕ್ಷ ಮೆ. ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರುವುದಕ್ಕೆ ಸೂಚನೆ ನೀಡಿದೆ ಮಾತ್ರವಲ್ಲ, ಈಶಾನ್ಯ ರಾಜ್ಯಗಳಿಗೆ ಹೊರತು ಪಡಿಸಿ ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಇಷ್ಟಕ್ಕೂ ಕರ್ನಾಟಕ ಸರಕಾರ ಈ ಅಕ್ಕಿಯನ್ನು ಉಚಿತವಾಗಿಯೇನೂ ಕೇಳುತ್ತಿಲ್ಲ. ಕ್ವಿಂಟಾಲ್ಗೆ 3,400 ರೂ. ಯನ್ನು ರಾಜ್ಯ ನೀಡುತ್ತದೆ. ಇಷ್ಟಾದರೂ ರಾಜ್ಯದ ಬಡವರಿಗೆ ಪೂರೈಸಲು ಅಕ್ಕಿಯನ್ನು ಕೊಡದೆ, ತೆರೆದ ಮಾರುಕಟ್ಟೆಯಲ್ಲಿ ಆ ಅಕ್ಕಿಯನ್ನು ಮಾರಾಟಕ್ಕಿಟ್ಟ ಕೇಂದ್ರದ ನಡೆ ಪ್ರಶ್ನಾರ್ಹ.
ಕೊರೋನ ಮತ್ತು ಲಾಕ್ಡೌನ್ ಕಾಲದಲ್ಲಿ ಹಸಿವು ತಾರಕಕ್ಕೆ ತಲುಪಿತ್ತು. ಜನಸಾಮಾನ್ಯರು ಅನ್ನಾಹಾರಗಳಿಲ್ಲದೆ ನಾಲ್ಕು ಗೋಡೆಗಳ ನಡುವೆ ಬಂದಿಯಾಗಿದ್ದರು. ವಲಸೆ ಕಾರ್ಮಿಕರ ಸ್ಥಿತಿಯಂತೂ ಚಿಂತಾಜನಕವಾಗಿತ್ತು. ಹಸಿವಿನಿಂದಲೇ ನೂರಾರು ಜನರು ಮೃತಪಟ್ಟಿದ್ದರು. ಹಲವರು ಅಪೌಷ್ಟಿಕತೆಯ ಸಮಸ್ಯೆಯಿಂದ ನರಳಿದ್ದರು. ವಿಪರ್ಯಾಸವೆಂದರೆ, ಇಂತಹ ಹೊತ್ತಿನಲ್ಲೇ ಭಾರತದ ಗೋದಾಮುಗಳಲ್ಲಿ ಸಾವಿರಾರು ಟನ್ ಆಹಾರ ಧಾನ್ಯಗಳು ಕೊಳೆತು ಹೋಗುತ್ತಿದ್ದವು. ಗ್ರಾಹಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕೊರೋನಾ ಕಾಲದಲ್ಲಿ ಎಫ್ಸಿಐ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಗೋದಾಮುಗಳಲ್ಲಿ 1,550 ಟನ್ಗಳಿಗೂ ಅಧಿಕ ಆಹಾರ ಧಾನ್ಯಗಳು ಹಾನಿಗೊಳಗಾಗಿವೆ. 2020ರ ಮೇ ತಿಂಗಳಲ್ಲಿ 26 ಟನ್ ಆಹಾರ ಧಾನ್ಯ ಹಾನಿಗೀಡಾಗಿದ್ದರೆ, ಜೂನ್ ತಿಂಗಳಲ್ಲಿ 1,453 ಟನ್ ಆಹಾರ ಧಾನ್ಯಗಳು ಹಾನಿಗೀಡಾಗಿದ್ದವು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 41 ಮತ್ತು 51 ಟನ್ ಆಹಾರಧಾನ್ಯಗಳು ನಷ್ಟವಾಗಿವೆ ಎನ್ನುವುದನ್ನು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಗೋದಾಮಿನಲ್ಲಿ ಕೊಳೆದು ಹೋಗಲು ಬಿಡದೆ ಇವುಗಳನ್ನು ದೇಶದ ಜನರಿಗೆ ಪುಕ್ಕಟೆ ಹಂಚಿದ್ದರೂ ಬಡವರು ಸರಕಾರದ ಹೆಸರು ಹೇಳಿಕೊಂಡು ಹೊಟ್ಟೆ ತುಂಬಾ ಉಣ್ಣುತ್ತಿದ್ದರು. ಎಲ್ಲಕ್ಕಿಂತ ದುರಂತವೆಂದರೆ, ಜನರಿಗೆ ನೀಡಬೇಕಾದ ಆಹಾರ ಧಾನ್ಯಗಳನ್ನು ಸ್ಯಾನಿಟೈಸರ್ ತಯಾರಿಸುವ ಉದ್ದೇಶಕ್ಕೆ ಹಂಚಲು ಆದೇಶ ನೀಡಿದ್ದು. ಇದು ಮಾಧ್ಯಮಗಳಲ್ಲೂ ಭಾರೀ ಟೀಕೆ, ವಿಮರ್ಶೆಗಳಿಗೆ ಕಾರಣವಾಯಿತು. ಕೊರೋನಾ, ಲಾಕ್ಡೌನ್ ಗಾಯಗಳಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಅಪೌಷ್ಟಿಕತೆ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿವೆ. ಬಡತನದ ಕಾರಣದಿಂದ ಈ ದೇಶದ ಸಹಸ್ರಾರು ಮಕ್ಕಳು ಶಾಲೆ ತೊರೆದಿದ್ದಾರೆ. ಹಣದುಬ್ಬರ, ಬಡತನ ಹೆಚ್ಚುತ್ತಿರುವ ಈ ದಿನಗಳಲ್ಲಿ ತಳಸ್ತರದ ಜನರಿಗಾಗಿ ರಾಜ್ಯ ಸರಕಾರ ಹಮ್ಮಿಕೊಂಡಿರುವ ಅನ್ನಭಾಗ್ಯಕ್ಕೆ ಕೇಂದ್ರ ಸರಕಾರ ಕಲ್ಲು ಹಾಕಲು ಹೊರಟಿರುವುದು ಅನ್ಯಾಯದ ಪರಮಾವಧಿಯಾಗಿದೆ. ರಾಜ್ಯಗಳು ಕೇಂದ್ರದಿಂದ ಭಿಕ್ಷೆಯ ರೂಪದಲ್ಲಿ ಆಹಾರ ಧಾನ್ಯವನ್ನು ಕೇಳುತ್ತಿಲ್ಲ, ತನ್ನ ಹಕ್ಕನ್ನು ಕೇಳುತ್ತಿದೆ ಎನ್ನುವುದನ್ನು ಕೇಂದ್ರಕ್ಕೆ ಮನವರಿಕೆ ಮಾಡಬೇಕಾದ ಸಮಯ ಇದು.
ಅಕ್ಕಿ ಪೂರೈಸಲು ಕೇಂದ್ರ ಸರಕಾರ ಯಾಕೆ ಹಿಂಜರಿಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ನೂತನ ಸರಕಾರ ತಾನು ಜನರಿಗೆ ನೀಡಿರುವ ಗ್ಯಾರಂಟಿಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ‘ಗ್ಯಾರಂಟಿಗಳು ಭರವಸೆಗಳಾಗಿಯೇ ಉಳಿಯುತ್ತದೆ’ ಎಂದು ನಂಬಿದ್ದ ರಾಜ್ಯ ಬಿಜೆಪಿಗೂ ಇದು ತೀವ್ರ ಮುಜುಗರವನ್ನು ಸೃಷ್ಟಿಸಿದೆ. ಶಕ್ತಿ ಯೋಜನೆ ಈಗಾಗಲೇ ಯಶಸ್ವಿಯಾಗಿದೆ ಮಾತ್ರವಲ್ಲ, ಮನೆ ಮನೆಗಳಲ್ಲಿ ಮಹಿಳೆಯರು ರಾಜ್ಯ ಸರಕಾರವನ್ನು ಕೊಂಡಾಡಲು ಶುರು ಹಚ್ಚಿದ್ದಾರೆ. ದ್ವೇಷ ರಾಜಕಾರಣ ಹಿಂದಕ್ಕೆ ಸರಿದು, ಅಭಿವೃದ್ಧಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಪ್ರಧಾನಿ ಮೋದಿಯ ಭರವಸೆಯಾಗಿರುವ ಅಚ್ಚೇದಿನ್ ಎಂಟು ವರ್ಷ ಕಳೆದರೂ ಜನರಿಗೆ ತಲುಪಿಲ್ಲ. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜನಸಾಮಾನ್ಯರು ಗ್ಯಾರಂಟಿಗಳ ಲಾಭವನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅಸಲಿ-ನಕಲಿಗಳ ನಡುವಿನ ವ್ಯತ್ಯಾಸಗೊತ್ತಾಗುತ್ತಿದೆ. ಈ ಕಾರಣದಿಂದಲೇ, ಗ್ಯಾರಂಟಿಗಳು ಜಾರಿಗೊಳ್ಳದಂತೆ ತಡೆಯಲು ಕೇಂದ್ರ ಸರಕಾರ ತಂತ್ರ ರೂಪಿಸುತ್ತಿದೆ. ಅದರ ಮೊದಲ ಭಾಗವಾಗಿ, ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡಲು ನಿರಾಕರಿಸುತ್ತಿದೆ. ರಾಜ್ಯಗಳ ಜೊತೆಗೆ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಜೊತೆಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬರುತ್ತಿದೆ. ಇದೀಗ ರಾಜ್ಯಗಳು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹೊರಟರೆ, ಕೇಂದ್ರ ಸರಕಾರ ಅದಕ್ಕೆ ನೆರವು ನೀಡುವ ಬದಲು, ವಿಫಲಗೊಳಿಸಲು ಯೋಚಿಸುತ್ತಿದೆ.
ಈ ಮೂಲಕ ಒಕ್ಕೂಟ ವ್ಯವಸ್ಥೆ ಇನ್ನಷ್ಟು ದುರ್ಬಲಗೊಳ್ಳಲು ಕಾರಣವಾಗುತ್ತಿದೆ. ಕೇಂದ್ರ ಅಕ್ಕಿ ಪೂರೈಕೆ ಮಾಡದೇ ಇದ್ದರೂ ಇತರ ರಾಜ್ಯಗಳಿಂದ ಅಕ್ಕಿಯನ್ನು ಕೊಂಡು, ಭರವಸೆಯನ್ನು ಈಡೇರಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ಸಂಸದರ ಹೊಣೆಗಾರಿಕೆ ದೊಡ್ಡದಿದೆ. ಈ ಹಿಂದೆ, ತನ್ನದೇ ಸರಕಾರವಿದ್ದಾಗಲೂ, ರಾಜ್ಯಕ್ಕೆ ಬರಬೇಕಾಗಿದ್ದ ಪರಿಹಾರಧನವನ್ನು ತರುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ‘ರಾಜ್ಯಕ್ಕೆ ಯಾವ ಪರಿಹಾರ ಧನದ ಅಗತ್ಯವೂ ಇಲ್ಲ’ ಎಂದು ಕೇಂದ್ರ ಸರಕಾರದ ಪರವಾಗಿ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಸಂಸದರು ವಕಾಲತ್ತು ವಹಿಸಿದ್ದರು. ಇಂತಹ ರಾಜ್ಯದ್ರೋಹಿ ಜನಪ್ರತಿನಿಧಿಗಳಿಂದಾಗಿಯೇ ರಾಜ್ಯದಲ್ಲಿ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ರಾಜ್ಯದ ಬಡವರಿಗೆ ಜನಪರ ಕಾರ್ಯಕ್ರಮಗಳನ್ನು ರೂಪಿಸಲು ಕೇಂದ್ರ ಸರಕಾರ ತೊಡಕುಂಟು ಮಾಡಿದರೆ, ಬಿಜೆಪಿ ಸಂಸದರು ಅದನ್ನು ಸಮರ್ಥಿಸಿಕೊಳ್ಳುವುದಲ್ಲ, ಬದಲಿಗೆ ಪ್ರಶ್ನಿಸಬೇಕು. ರಾಜ್ಯದ ಜನರ ಹಕ್ಕುಗಳಿಗಾಗಿ ದಿಲ್ಲಿಯಲ್ಲಿ ಹೋರಾಟ ನಡೆಸಬೇಕು. ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ, ಎಲ್ಲರೂ ಪಕ್ಷ ಭೇದ ಮರೆತು ಒಂದಾಗಬೇಕು. ಕೇಂದ್ರ ಅಕ್ಕಿಯನ್ನು ಪೂರೈಸಲು ಹಿಂದೇಟು ಹಾಕುತ್ತಿರುವಾಗ, ಕೇಂದ್ರದ ನಡೆಯನ್ನು ಪ್ರಶ್ನಿಸುವಷ್ಟು ಆತ್ಮಾಭಿಮಾನವನ್ನು ರಾಜ್ಯದ ಬಿಜೆಪಿ ಸಂಸದರು ತಮ್ಮದಾಗಿಸಿಕೊಳ್ಳಬೇಕು. ನಾಡಿನ ಜನರ ವಿರುದ್ಧವಾಗಿ ನಿಂತು, ದಿಲ್ಲಿಯ ದೊರೆಗಳಿಗೆ ಕೊಡೆ ಹಿಡಿಯಲು ಮುಂದಾದರೆ, ಅದೇ ಜನರು ಲೋಕಸಭಾ ಚುನಾವಣೆಯಲ್ಲಿ ಆ ಕೊಡೆಯನ್ನು ಹರಿದು ಚಿಂದಿ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ಸಂಸದರಿಗಿರಬೇಕು.