ರಾಜ್ಯದ 8 ಕಡೆಗಳಲ್ಲಿ ಸಣ್ಣ ಕೈಗಾರಿಕಾ ಹಬ್ ಸ್ಥಾಪನೆ: ಸಚಿವ ಶರಣ ಬಸಪ್ಪ ದರ್ಶನಾಪುರ

ಬೆಂಗಳೂರು, ಜೂ. 15: ‘ರಾಜ್ಯದ ಎಂಟು ಕಡೆಗಳಲ್ಲಿ ಸಣ್ಣ ಕೈಗಾರಿಕಾ ಹಬ್ ಮಾಡಲು ಉದ್ದೇಶಿಸಲಾಗಿದೆ’ ಎಂದು ಸಣ್ಣ ಕೈಗಾರಿಗೆ ಹಾಗೂ ಸಾರ್ವಜಿಕ ಉದ್ದಿಮೆ ಖಾತೆ ಸಚಿವ ಶರಣ ಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.17ರಂದು ಸಣ್ಣ ಕೈಗಾರಿಕೆ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ 700 ಕೋಟಿ ರೂ.ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದರು.
‘ಕೋವಿಡ್ ಸೋಂಕಿಮ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿವೆ. ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ಹುಬ್ಬಳ್ಳಿ, ಬೀದರ್, ವಿಜಯಪುರ ಸೇರಿದಂತೆ ಏಳೆಂಟು ಕಡೆಗಳಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ ಉದ್ದೇಶವಿದೆ. ಪ್ರತಿ ಕೈಗಾರಿಕಾ ವಸಾಹತುವಿಗೆ ಕನಿಷ್ಠ 50 ಎಕರೆ ಜಮೀನು ಬೇಕು.
ಹುಬ್ಬಳ್ಳಿ ಹೊರತುಪಡಿಸಿ ಉಳಿದೆಡೆ ಇಲಾಖೆಯ 15ರಿಂದ 20 ಎಕರೆ ಜಮೀನು ಇದೆ. ಅದನ್ನು 50 ರಿಂದ 100 ಎಕರೆ ಜಮೀನು ನೀಡುವಂತೆ ಕೋರಿದ್ದೇವೆ. ಬಳ್ಳಾರಿಯಲ್ಲಿ 100 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ವಸಾಹತುವನ್ನು ಸುಸಜ್ಜಿತವಾಗಿ ಸ್ಥಾಪಿಸಿದ್ದೇವೆ. ಅಲ್ಲಿ ನೀರು ಸಂಸ್ಕರಣಾ ಘಟಕ ಇರುವ ಕಾರಣದಿಂದ ಕೈಗಾರಿಕೆ ಸ್ಥಾಪನೆಗೆ ನಿರೀಕ್ಷಿಸಿದಷ್ಟು ಉದ್ಯಮಿಗಳು ಬರುತ್ತಿಲ್ಲ’ ಎಂದು ಅವರು ತಿಳಿಸಿದರು.
‘ಬಳ್ಳಾರಿಯಲ್ಲಿ ಸೋಲಾರ್ ಬ್ರಾಂಡ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಸಾರ್ವಜನಿಕ ಉದ್ದಿಮೆ ಹಣಕಾಸು ಇಲಾಖೆಯಲ್ಲಿರುವುದರಿಂದ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದೇವೆ. ಸಣ್ಣ ಕೈಗಾರಿಕೆಗಳ ಸಮಸ್ಯೆ ಸಂಬಂಧ ಸದ್ಯದಲ್ಲೇ ಸಣ್ಣ ಕೈಗಾರಿಕೋದ್ಯಮಿಗಳ ಸಭೆ ನಡೆಸುತ್ತೇನೆ. ವಿದ್ಯುತ್ ದರ ಏರಿಕೆಯಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಗುಲ್ಬರ್ಗಾ ಜಿಲ್ಲೆಯ ಸಣ್ಣ ಕೈಗಾರಿಕೆ ಉದ್ಯಮಿಗಳು ಮನವಿ ಸಲ್ಲಿಸಿದ್ದಾರೆ ಎಂದರು.







