ಗಲ್ವಾನ್ ಸಂಘರ್ಷ ಕುರಿತು ಚೀನಾಗೆ ಮೋದಿ ಸರ್ಕಾರದ ಕ್ಲೀನ್ ಚಿಟ್ ರಾಷ್ಟ್ರೀಯ ಭದ್ರತೆಗೆ ದೊಡ್ಡ ಹೊಡೆತ : ಖರ್ಗೆ

ಹೊಸದಿಲ್ಲಿ: ಅರುಣಾಚಲ ಪ್ರದೇಶದ ಗಲ್ವಾನ್ ಕಣಿವೆಯಲ್ಲಿ 2020 ರಲ್ಲಿ ಚೀನಾ ಸೈನಿಕರೊಂದಿಗಿನ ಸಂಘರ್ಷದಲ್ಲಿ ಬಲಿಯಾದ 20 ಭಾರತೀಯ ಸೈನಿಕರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸಿರುವ ಕಾಂಗ್ರೆಸ್ ಪಕ್ಷ ಅದೇ ಸಮಯ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಈ ಸಂಘರ್ಷಕ್ಕಿಂತ ಮೊದಲು ಇದ್ದ ಯಥಾಸ್ಥಿತಿಯನ್ನು ಕಾಪಾಡಲು ವಿಫಲವಾಗಿದ್ದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ. ಚೀನಾಗೆ ಪ್ರಧಾನಿ ನರೇಂದ್ರ ಮೋದಿಯ ʼಕ್ಲೀನ್ ಚಿಟ್ʼ ದೇಶದ ರಾಷ್ಟ್ರೀಯ ಭದ್ರತೆಗೆ ದೊಡ್ಡ ಪೆಟ್ಟು ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. “ಕೃತಜ್ಞ ರಾಷ್ಟ್ರವು ಗಲ್ವಾನ್ ಕಣಿವೆಯಲ್ಲಿ ಮೂರು ವರ್ಷಗಳ ಪ್ರಾಣ ತೆತ್ತು ಅತ್ಯುನ್ನತ ಬಲಿದಾನಗೈದ 20 ಶೌರ್ಯವಂತರಿಗೆ ತನ್ನ ಶ್ರದ್ಧಾಂಜಲಿ ಸಲ್ಲಿಸುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಸಂಘರ್ಷ ಪೂರ್ವ ಯಥಾಸ್ಥಿತಿ ಕಾಪಾಡದೇ ಇರುವುದಕ್ಕೆ ಮೋದಿ ಸರ್ಕಾರ ಜವಾಬ್ದಾರಿ. ನಾವು ಇಲ್ಲಿ 65 ಪೆಟ್ರೋಲಿಂಗ್ ಪಾಯಿಂಟ್ಗಳಲ್ಲಿ 26 ಪಾಯಿಂಟ್ಗಳನ್ನು ಕಳೆದುಕೊಂಡಿದ್ದೇವೆ,” ಎಂದು ಅವರು ಬರೆದಿದ್ದಾರೆ.
“ಈ ವಿಚಾರವನ್ನು ಸಂಸತ್ತಿನಲ್ಲಿ ಎತ್ತಲು ಹಲವು ಬಾರಿ ಯತ್ನಿಸಿದೆವು. ಆದರೆ ಮೋದಿ ಸರ್ಕಾರ ಭಾರತೀಯರನ್ನು ಕತ್ತಲೆಯಲ್ಲಿ ಇರಿಸಲು ಬಯಸಿದೆ. ಮೋದೀಜಿ ಅವರು ಗಲ್ವಾನ್ ವಿಚಾರದಲ್ಲಿ ಚೀನಾಗೆ ನೀಡಿದ ʼಕ್ಲೀನ್ ಚಿಟ್ʼ ನಿಂದಾಗಿ ಚೀನಾ ತನ್ನ ದುರುದ್ದೇಶಿತ ಕಾರ್ಯಗಳನ್ನು ಸಾಧಿಸುತ್ತಿದೆ. ಇದು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ದೊಡ್ಡ ಹೊಡೆತ,” ಎಂದು ಖರ್ಗೆ ಹೇಳಿದ್ದಾರೆ.
“ಮೋದಿ ಸರ್ಕಾರದ “ಲಾಲ್ ಆಂಖ್” (ಕೆಂಪು ಕಣ್ಣು) ಮಂಜಾಗಿದೆ, ಅದರ ಮೇಲೆ ಅದು ಟಿಂಟೆಡ್ ಚೀನೀ ಗ್ಲಾಸ್ ಧರಿಸುತ್ತಿದೆ! ಜವಾಬ್ದಾರಿಯುತ ವಿಪಕ್ಷವಾಗಿ ಚೀನಾದ ವಿಸ್ತರಣಾ ನೀತಿಯ ವಿರುದ್ಧವಾಗಿ ದೇಶವನ್ನು ಒಗ್ಗಟ್ಟಾಗಿ ಇರಿಸುವುದು ಹಾಗೂ ಮೋದಿ ಸರ್ಕಾರಕ್ಕೆ ಸತ್ಯದ ಕನ್ನಡಿ ತೋರಿಸುವುದು ನಮ್ಮ ಕರ್ತವ್ಯವಾಗಿದೆ,” ಎಂದು ಖರ್ಗೆ ಹೇಳಿದ್ದಾರೆ.







