ಜನವರಿಯಲ್ಲಿ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆೆ; ಮೋದಿ ನೇತೃತ್ವ

ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆಂದು ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ ಗುರುವಾರ ತಿಳಿಸಿದ್ದಾರೆ.
ಶ್ರೀರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮುನ್ನ, ಈ ವರ್ಷಾಂತ್ಯದಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ದೀಪೋತ್ಸವವನ್ನು ಆಚರಿಸಲಾಗುವುದು. ಆಗ ಈ ದೇಗುಲ ನಗರದಾದ್ಯಂತ 21 ಲಕ್ಷಕ್ಕೂ ಅಧಿಕ ಹಣತೆ ದೀಪಗಳನ್ನು ಬೆಳಗಿಸಲಾಗುವುದು ಎಂದು ಅವರು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ 9 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯ ಮಹಾಸಂಪರ್ಕ ಅಭಿಯಾನ ಭಾಗವಾಗಿ ಅಯೋಧ್ಯೆಯಲ್ಲಿ ಬೃಹತ್ ಸಭೆಯೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
‘‘ಸುಮಾರು 500 ವರ್ಷಗಳ ಬಳಿಕ ರಾಮಲಲ್ಲಾ ತನ್ನ ಮಂದಿರದಲ್ಲಿ ವಿರಾಜಮಾನನಾದಾಗ ಇಡೀ ಜಗತ್ತು ಭಾರತದೆಡೆಗೆ ಆಕರ್ಷಿತವಾಗಲಿದೆ’’ ಎಂದು ಆದಿತ್ಯನಾಥ ಹೇಳಿದರು. ಜನವರಿ 22ರಂದು ಅಯೋಧ್ಯೆಯ ರಾಮಮಂದಿರದ ಉದ್ಘಾಟಿಸಲು ದೇವಾಲಯದ ಟ್ರಸ್ಟ್ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಿದೆಯೆಂಬ ವರದಿಗಳ ನಡುವೆ ಆದಿತ್ಯನಾಥ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಅಂತಿಮ ಅನುಮೋದನೆಗಾಗಿ ಕಾಯಲಾಗುತ್ತಿದೆಯೆಂದು ವರದಿಗಳು ತಿಳಿಸಿವೆ.
ಮುಂಬರುವ ದಿನಗಳಲ್ಲಿ ಅಯೋಧ್ಯೆಯಲ್ಲಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳು ಹಾಗೂ ಅಭಿಯಾನಗಳಲ್ಲಿ ಪಾಲ್ಗೊಳ್ಳುವಂತೆಯೂ ಆದಿತ್ಯನಾಥ್ ಅವರು ಬಿಜೆಪಿ ಸಂಸದರಿಗೆ ಮವಿ ಮಾಡಿದರು.
‘‘ತ್ರೇತಾಯುಗದಲ್ಲಿ ಇದ್ದಂತಹ ರಾಮರಾಜ್ಯದೆಡೆಗೆ ಆಯೋಧ್ಯೆ ಮುನ್ನಡೆಯುತ್ತಿದೆ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಇಡೀ ದೇಶಕ್ಕೆ ಸ್ಫೂರ್ತಿ ನೀಡಲಿದೆ’’ ಎಂದು ಆದಿತ್ಯನಾಥ್ ಭರವಸೆ ವ್ಯಕ್ತಪಡಿಸಿದರು.







