ಗಲ್ವಾನ್ ಹುತಾತ್ಮರಿಗೆ ರಾಜ್ನಾಥ್ ವೀರನಮನ
ಹೊಸದಿಲ್ಲಿ: ಗಲ್ವಾನ್ ಕಣಿವೆ ಸಂಘರ್ಷದ ಮೂರನೆ ವರ್ಷಾಚರಣೆಯ ದಿನವಾದ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಗಲ್ವಾನ್ ಸಂಘರ್ಷದಲ್ಲಿ ವೀರಮರಣವನ್ನಪ್ಪಿದ ಯೋಧರ ಧೈರ್ಯ,ಶೌರ್ಯ ಹಾಗೂ ಬಲಿದಾನವು ಮುಂದಿನ ತಲೆಮಾರುಗಳ ಜನರನ್ನೂ ಪ್ರೇರೇಪಿಸಲಿದೆ ಎಂದವರು ಹೇಳಿದ್ದಾರೆ.
‘‘ ನಮ್ಮ ದೇಶವನ್ನು ರಕ್ಷಿಸಲು ಪರಮೋಚ್ಛವಾದ ತ್ಯಾಗವನ್ನು ಮಾಡಿದ ವೀರ ಯೋಧರಿಗಾಗಿ ನಾವು ಇಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ. ಅವರ ಶೌರ್ಯ, ಪರಾಕ್ರಮ ಹಾಗೂ ಬಲಿದಾನಗಳು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿಯಾಗಲಿವೆ’’ ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
ಪೂರ್ವಲಡಾಕ್ನ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಿ ಸೈನಿಕರ ನಡುವೆ ನಡೆ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ವೀರಮರಣವನ್ನಪ್ಪಿದ್ದರು.
ಗಲ್ವಾನ್ ಸಂಘರ್ಷದಲ್ಲಿ ಸೇನಾಧಿಕಾರಿಗಳು ಸೇರಿದಂತೆ ತನ್ನ ಐವರು ಯೋಧರು ಸಾವನ್ನಪ್ಪಿರುವುದಾಗಿ ಚೀನಾ ಹೇಳಿಕೊಂಡಿತ್ತು. ಆದರೆ ಈ ಸಂಘರ್ಷದಲ್ಲಿ ಸಾವನ್ನಪ್ಪಿದ ಚೀನಿ ಯೋಧರ ಸಂಖ್ಯೆ ತುಂಬಾ ಅಧಿಕವಾಗಿತ್ತೆಂದು ನಂಬಲಾಗಿದೆ.
ಪೂರ್ವ ಲಡಾಕ್ ಗಡಿಮುಂಚೂಣಿಯಲ್ಲಿ ಉಂಟಾಗಿರುವ ಉದ್ವಿಗ್ನಾವಸ್ಥೆಯನ್ನು ಶಮನಗೊಳಿಸಲು ಭಾರತ ಹಾಗೂ ಚೀನಾ ಸೇನೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ.