'ಹಿಂದೂ ರಾಷ್ಟ್ರ ಸ್ಥಾಪನೆ 2024ರಲ್ಲಿ ಇಲ್ಲಿಂದಲೇ ಆರಂಭಗೊಳ್ಳಲಿದೆ': ಉತ್ತರಾಖಂಡದ ʼಸಂತರಿಂದʼ ದ್ವೇಷ ಸಂದೇಶಗಳು
![ಹಿಂದೂ ರಾಷ್ಟ್ರ ಸ್ಥಾಪನೆ 2024ರಲ್ಲಿ ಇಲ್ಲಿಂದಲೇ ಆರಂಭಗೊಳ್ಳಲಿದೆ: ಉತ್ತರಾಖಂಡದ ʼಸಂತರಿಂದʼ ದ್ವೇಷ ಸಂದೇಶಗಳು ಹಿಂದೂ ರಾಷ್ಟ್ರ ಸ್ಥಾಪನೆ 2024ರಲ್ಲಿ ಇಲ್ಲಿಂದಲೇ ಆರಂಭಗೊಳ್ಳಲಿದೆ: ಉತ್ತರಾಖಂಡದ ʼಸಂತರಿಂದʼ ದ್ವೇಷ ಸಂದೇಶಗಳು](https://www.varthabharati.in/sites/default/files/images/articles/2023/06/16/381169-1686916935.jpg)
ಹೊಸದಿಲ್ಲಿ: “ಹಿಂದೂ ರಾಷ್ಟ್ರದ ಸ್ಥಾಪನೆಯು 2024 ರಲ್ಲಿ ಉತ್ತರಾಖಂಡದಿಂದಲೇ ಆರಂಭಗೊಳ್ಳಲಿದೆ,” ಎಂದು ಕೋಮು ಪ್ರಚೋದಕ ಭಾಷಣಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ದರ್ಶನ್ ಭಾರತಿಯ ಸಮೀಪವರ್ತಿ ಎಂದು ತಿಳಿಯಲಾದ ಉತ್ತರಾಖಂಡದ ಹಿಂದು ಸಂತ ಸ್ವಾಮಿ ಆದಿ ಯೋಗಿ ಹೇಳಿಕೊಂಡಿದ್ದಾರೆ ಎಂದು thewire.in ವರದಿ ಮಾಡಿದೆ.
ಉತ್ತರಾಖಂಡದಲ್ಲಿ ಅವರು ಮುಸ್ಲಿಮರನ್ನು ಬಹಿಷ್ಕರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. “ನಾವು ಮುಸ್ಲಿಮರನ್ನು ಬಹಿಷ್ಕರಿಸುತ್ತಿಲ್ಲ. ಆದರೆ ಈ ಸ್ಥಳ ನಮಗೆ ಮಕ್ಕಾ ಇದ್ದಂತೆ. ನಮಗೆ ಮಕ್ಕಾಗೆ ಪ್ರವೇಶವಿದೆಯೇ? ಅಂತೆಯೇ ಇದು ನಮ್ಮ ಧಾರ್ಮಿಕ ಧಾಮ ಮತ್ತು 2024ರೊಳಗಾಗಿ ನಾವು ಯಾವುದೇ ಜಿಹಾದಿ ಪ್ರಭಾವದಿಂದು ಉತ್ತರಾಖಂಡವನ್ನು ಮುಕ್ತಗೊಳಿಸಲಿದ್ದೇವೆ ಮತ್ತು ರಾಜ್ಯದಲ್ಲಿ ಮಾಂಸದ ಅಂಗಡಿಗಳನ್ನು ಬಹಿಷ್ಕರಿಸಿ ಮುಚ್ಚಲಿದ್ದೇವೆ,” ಎಂದೂ ಅವರು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.
“ಈ ಭೂಮಿ ದೇವರು, ಸಂತರಿಗೆ ಸೇರಿದ್ದು. ಜನರು ಇಲ್ಲಿಗೆ ಸೇವೆಗಾಗಿ ಬಂದಿದ್ದಾರೆ, ಆಧರೆ ಬದಲಿಗೆ ಅವರು ಮಾಂಸ ಸೇವಿಸಿ ನಮ್ಮ ಪುತ್ರಿಯರ ಮೇಳೆ ಕೆಟ್ಟ ದೃಷ್ಟಿ ಬೀರುತ್ತಾರೆ,” ಎಂದೂ ಅವರು ಹೇಳಿಕೊಂಡರು.