ಉಪ್ಪಿನಂಗಡಿ: ಪಿಡಿಒ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಆರೋಪ; ಪ್ರಕರಣ ದಾಖಲು
ದೂರು - ಪ್ರತಿದೂರು

ಉಪ್ಪಿನಂಗಡಿ: ಸರಕಾರಿ ಕೆಲಸ ಮಾಡುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಕೊಲೆಗೆ ಯತ್ನಿಸಿದ್ದಾರೆಂದು ಕುಕ್ಕುಜೆಯ ಹಕೀಂ ಎಂಬಾತನ ವಿರುದ್ಧ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ದೂರು ನೀಡಿದ್ದು, ಅಲ್ಲಿನ ಸುಹೈಬಾ ಎನ್ನುವವರು ಪಿಡಿಒ ಹಾಗೂ ಗ್ರಾ.ಪಂ.ನ ಇಬ್ಬರು ಸಿಬ್ಬಂದಿಯ ವಿರುದ್ಧ ಪ್ರತಿದೂರು ನೀಡಿದ್ದಾರೆ.
ಉಪ್ಪಿನಂಗಡಿ ಬಳಿಯ ಕುಕ್ಕುಜೆ ಎಂಬಲ್ಲಿ ಎಚ್.ಕೆ. ಹಕೀಂ ಎಂಬಾತನ ಮನೆಯ ಬದಿಗೆ ತಡೆಗೋಡೆ ಕಟ್ಟಿದ್ದು, ಗುಂಡಿಯ ಮಣ್ಣನ್ನು ರಸ್ತೆಯ ಬದಿ ರಾಶಿ ಹಾಕಿದ್ದರು. ಈ ಬಗ್ಗೆ ನೊಟೀಸ್ ನೀಡಿದ್ದರೂ, ಅವರು ಅದನ್ನು ತೆರವುಗೊಳಿಸಿರಲಿಲ್ಲ. ಆದ್ದರಿಂದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರೀಗಸ್ ಅವರು ಇದರ ತೆರವು ಕಾರ್ಯಾಚರಣೆಯನ್ನು ಮುಂದಾದಾಗ ಹಕೀಂ ಹಾಗೂ ಇತರರು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೊಲೆಗೆ ಯತ್ನಿಸಿದ್ದಾರೆ ಎಂದು ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರೀಗಸ್ ಅವರು ನೀಡಿದ ದೂರಿನಂತೆ ಹಕೀಂ ಹಾಗೂ ಇತರರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿ ಕುಕ್ಕುಜೆಯ ಎಸ್.ಕೆ. ಯೂಸುಫ್ ಅವರ ಪತ್ರಿ ಸುಹೈಬಾ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯ ಬದಿಯಲ್ಲಿ ನಮ್ಮ ಮನೆಯಿದ್ದು, ಮಳೆಗಾಲದಲ್ಲಿ ಮನೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮನೆ ಬದಿ ತಡೆಗೋಡೆಯನ್ನು ಕಟ್ಟಿ ಅದರ ಪಕ್ಕವೇ ರಸ್ತೆ ಬದಿಯ ಚರಂಡಿಯನ್ನು ವ್ಯವಸ್ಥಿತವಾಗಿ ಮಾಡಿದ್ದೇವೆ. ಆಗ ತೆಗೆದ ಮಣ್ಣನ್ನು ರಸ್ತೆ ಬದಿಗೆ ಹಾಕಲಾಗಿತ್ತು. ನಾವು ಆ ಮಣ್ಣನ್ನು ತೆಗೆಸುತ್ತೇವೆ ಎಂದರೂ ಗ್ರಾ.ಪಂ.ನ ಪಿಡಿಒ ತನ್ನಿಬ್ಬರು ಸಿಬ್ಬಂದಿಯೊಂದಿಗೆ ಬಂದು ಹೆದ್ದಾರಿ ಬದಿಯಲ್ಲಿದ್ದ ಮಣ್ಣನ್ನು ವಾಪಸ್ ಚರಂಡಿಗೆ ಹಾಕಿ ಚರಂಡಿಯನ್ನು ಮುಚ್ಚಿದ್ದಾರೆ. ಅದನ್ನು ಆಕ್ಷೇಪಿಸಿದಾಗ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಹಾಗೂ ಇಬ್ಬರು ಸಿಬ್ಬಂದಿ ತನಗೆ ಅವ್ಯಾಚ್ಯವಾಗಿ ನಿಂದಿಸಿ, ತನ್ನ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.