ಗುಜರಾತ್ ಗಲಭೆ: ನಾಲ್ಕು ಪ್ರಕರಣಗಳಲ್ಲಿ ಎಲ್ಲಾ 35 ಆರೋಪಿಗಳ ದೋಷಮುಕ್ತಿ
ಗುಜರಾತ್ ಗಲಭೆ ಪೂರ್ವಯೋಜಿತವಾಗಿರಲಿಲ್ಲ ಎಂದ ಕೋರ್ಟ್
ಹಲೋಲ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ನಾಲ್ಕು ವಿಭಿನ್ನ ಪ್ರಕರಣಗಳ ಎಲ್ಲಾ 35 ಮಂದಿ ಆರೋಪಿಗಳನ್ನು ಗುಜರಾತ್ ನ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿದೆ.
ಪಂಚಮಾಲ್ ಜಿಲ್ಲೆಯ ಹಲೋಲ್ ಪಟ್ಟಣದ ಹೆಚ್ಚುವರಿ ನ್ಯಾಯಾಲಯವು ಜೂನ್ 12ರಂದು ತೀರ್ಪು ನೀಡಿ, ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಗುಜರಾತ್ ಗಲಭೆಗಳು ಪೂರ್ವಯೋಜಿತವೆಂದು ನಕಲಿ ಜಾತ್ಯತೀತ ಮಾಧ್ಯಮಗಳು ಹಾಗೂ ರಾಜಕಾರಣಿಗಳು ಪ್ರಚಾರ ಮಾಡುತ್ತಿದ್ದಾರೆಂದು ನ್ಯಾಯಾಧೀಶ ಹರ್ಷತ್ರಿವೇದಿ ತೀರ್ಪಿನಲ್ಲಿ ಖಂಡಿಸಿದ್ದಾರೆ.
ಗೋಧ್ರಾದಲ್ಲಿ ಸಬರಮತಿ ರೈಲು ಅಗ್ನಿದುರಂತದ ಮರುದಿನ, 2002ರ ಫೆಬ್ರವರಿ 28ರಂದು ಕಲೋಲ್ ಬಸ್ ನಿಲ್ದಾಣ, ದೆಲೋಲ್ ಗ್ರಾಮ ಹಾಗೂ ದೆರೊಲ್ ರೈಲು ನಿಲ್ದಾಣದ ಆಸುಪಾಸಿನಲ್ಲಿ ಭುಗಿಲೆದ್ದ ಹಿಂಸಾಚಾರದ ಪ್ರಕರಣಗಳಿಗೆ ಸಂಬಂಧಿಸಿ 35 ಮಂದಿಯ ವಿರುದ್ಧ ಕೊಲೆ ಹಾಗೂ ದೊಂಬಿಯ ಆರೋಪ ಹೊರಿಸಲಾಗಿತ್ತು.
ಈ ಗಲಭೆಗಳಲ್ಲಿ ಆರೋಪಿಗಳು ಮೂವರನ್ನು ಮಾರಕಾಯುಧಗಳಿಂದ ಹತ್ಯೆಗೈದಿದ್ದರು ಹಾಗೂ ಆನಂತರ ಸಾಕ್ಷನಾಶದ ಉದ್ದೇಶದಿಂದ ಮೃತದೇಹಗಳನ್ನು ಸುಟ್ಟು ಹಾಕಿದ್ದರು ಎಂದು ಪ್ರಾಸಿಕ್ಯೂಶನ್ ವಾದಿಸಿತ್ತು. ಆದರೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಹರ್ಷ ತ್ರಿವೇದಿ ನೀಡಿದ ತೀರ್ಪಿನಲ್ಲಿ, ಆರೋಪಿಗಳ ವಿರುದ್ಧ ಯಾವುದೇ ಪುರಾವೆಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆಂದು ಎಂದು ತಿಳಿಸಿದ್ದಾರೆ.
ಈ ಪ್ರಕರಣಗಳಲ್ಲಿ ಒಟ್ಟು 52 ಮಂದಿಯನ್ನ ಆರೋಪಿಗಳೆಂದು ಗುರುತಿಸಲಾಗಿತ್ತು. ಸುಮಾರು 20 ವರ್ಷಗಳ ಕಾಲ ನಡೆದ ವಿಚಾರಣೆಯ ಅವಧಿಯಲ್ಲಿ, 12 ಮಂದಿ ಆರೋಪಿಗಳು ನಿಧನರಾಗಿದ್ದರು.
ಕೋಲ್ ಹಾಗೂ ಇತರ ಎರಡು ಸ್ಥಳಗಳಲ್ಲಿ ಗಲಭೆ ಭುಗಿಲೆದ್ದ ಕೆಲವು ದಿನಗಳ ಬಳಿಕ ಅಲ್ಪಸಂಖ್ಯಾತ ಸಮುದಾಯದ ಮೂವರು ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿದ್ದವು.
ಎಲ್ಲಾ 52 ಆರೋಪಿಗಳ ವಿರುದ್ಧ ಗಲಭೆ ನಡೆಸಿದ, ಕಾನೂನುಬಾಹಿರವಾಗಿ ಗುಂಪುಗೂಡಿದ ಆರೋಪವನ್ನು ಹೊರಿಸಿ ಕಲೋಲ್, ಹಲೋಲ್ ಹಾಗೂ ಗೋಧ್ರಾದ ಜೈಲುಗಳಿಗೆ ಕಳುಹಿಸಲಾಗಿತ್ತಾದರೂ, ಆನಂತರ ಅವೆರಲ್ಲರೂ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಸುಮಾರು 130 ಮಂದಿ ಈ ಪ್ರಕರಣಗಳಲ್ಲಿ ಸಾಕ್ಷ ನುಡಿದಿದ್ದರು. ಗಲಭೆಗೆ ಸಂಬಂಧಿಸಿದಂತೆ ಆಯುಧಗಳನ್ನು ವಶಪಡಿಸಿಕೊಂಡಿರುವುದನ್ನು ಸಾಬೀತುಪಡಿಸಲೂ ಪ್ರಾಸಿಕ್ಯೂಶನ್ ಸಾಧ್ಯವಾಗಿಲ್ಲವೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2002ರ ಗೋದ್ರಾ ರೈಲು ಅಗ್ನಿ ದುರಂತದ ಘಟನೆಯ ಬಳಿಕ ರೋಷತಪ್ತರಾದ ಜನತೆಯ ಗಾಯಗಳಿಗೆ ನಕಲಿ ಜಾತ್ಯತೀತ ಮಾಧ್ಯಮಗಳು ಹಾಗೂ ರಾಜಕಾರಣಿಗಳು ಉಪ್ಪು ಸುರಿಯುತ್ತಿದ್ದಾರೆಂದು ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು.
ಗೋಧ್ರಾ ಘಟನೆಯ ಆನಂತರ ಗುಜರಾತ್ನಾದ್ಯಂತ ದಿಢೀರನೇ ಗಲಭೆಗಳು ಭುಗಿಲೆದ್ದಿದ್ದವು. ನಕಲಿ ಜಾತ್ಯತೀತವಾದಿಗಳು ಹೇಳಿಕೊಂಡಿರುವಂತೆ ಅದು ಪೂರ್ವಯೋಜಿತವಾದುದಾಗಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿತು.