ಜಿತನ್ ರಾಮ್ ಮಾಂಝಿ ಬಿಜೆಪಿ ಬೇಹುಗಾರ: ನಿತೀಶ್ ಕುಮಾರ್ ಆರೋಪ
ಪಾಟ್ನಾ: ಎಚ್ಎಎಂ(ಎಸ್) ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಬಿಜೆಪಿಗಾಗಿ ಗೂಢಚರ್ಯ ಕೆಲಸ ಮಾಡುತ್ತಿದ್ದರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪಾದಿಸಿದ್ದಾರೆ.
ಮಹಾಮೈತ್ರಿಕೂಟದಿಂದ ಎಚ್ಎಎಂ(ಎಸ್) ನಿರ್ಗಮಿಸಿದ ಬಗ್ಗೆ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಅವರು ನಮ್ಮೊಂದಿಗೆ ಇದ್ದುಕೊಂಡೇ ಬಿಜೆಪಿಗೆ ಬಹಳಷ್ಟು ಮಾಹಿತಿಗಳನ್ನು ರವಾನಿಸುತ್ತಿದ್ದರು" ಎಂದು ಹೇಳಿದರು.
"ಜೂನ್ 23ರಂದು ಪಾಟ್ನಾದಲ್ಲಿ ದೇಶದ ಎಲ್ಲೆಡೆಯ ವಿರೋಧ ಪಕ್ಷಗಳ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಮಾಂಝಿ ಕೂಡಾ ಈ ಸಭೆಯಲ್ಲಿ ಭಾಗವಹಿಸಲು ಬಯಸಿದ್ದರು.. ಒಂದು ವೇಳೆ ಅವರು ಭಾಗವಹಿಸಲು ಅವಕಾಶ ನೀಡಿದ್ದರೆ, ಎಲ್ಲ ಮಾಹಿತಿಗಳು ಬಿಜೆಪಿಗೆ ಸೋರಿಕೆಯಾಗುತ್ತಿದ್ದವು" ಎಂದು ನಿತೀಶ್ ಹೇಳಿದರು. ಈ ವರ್ಷದ ಏಪ್ರಿಲ್ನಲ್ಲಿ ಮಾಂಝಿಯವರು ಹೊಸದಿಲ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದನ್ನು ನಿತೀಶ್ ಉಲ್ಲೇಖಿಸಿದರು.
ಮಾಂಝಿ ಪಕ್ಷವನ್ನು ಜೆಡಿಯು ಜತೆಗೆ ವಿಲೀನಗೊಳಿಸಲು ಕೋರಿದ್ದನ್ನು ಒಪ್ಪಿಕೊಂಡ ನಿತೀಶ್, "ಪಕ್ಷವನ್ನು ಜೆಡಿಯು ಜತೆಗೆ ವಿಲೀನಗೊಳಿಸುವಂತೆ ಅಥವಾ ಮಹಾಮೈತ್ರಿಕೂಟ ತೊರೆಯುವಂತೆ ಕೇಳಿದಾಗ ಅವರು ಕೂಟ ತೊರೆಯುವ ನಿರ್ಧಾರಕ್ಕೆ ಬಂದರು" ಎಂದು ವಿವರಿಸಿದರು.