21 ಬಿಎಸ್ಎನ್ಎಲ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣ: 25 ಸ್ಥಳಗಳಲ್ಲಿ ಸಿಬಿಐ ದಾಳಿ
ಹೊಸದಿಲ್ಲಿ: ಮಾಜಿ ಜನರಲ್ ಮ್ಯಾನೇಜರ್ ಸೇರಿದಂತೆ 21 ಬಿಎಸ್ಎನ್ಎಲ್ ಅಧಿಕಾರಿಗಳ ವಿರುದ್ಧ ದಾಖಲಿಸಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ಸಿಬಿಐ 25 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ಗೆ (ಬಿಎಸ್ಎನ್ಎಲ್) ವಂಚಿಸಲು ಆರೋಪಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಪ್ರಧಾನ ತನಿಖಾ ಸಂಸ್ಥೆ ಆರೋಪಿಸಿದೆ.
ಮಾಜಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ಜೋರ್ಹತ್, ಸಿಬ್ಸಾಗರ್, ಗುವಾಹಟಿ ಮತ್ತು ಇತರ ಸ್ಥಳಗಳಲ್ಲಿನ ಮುಖ್ಯ ಖಾತೆ ಅಧಿಕಾರಿ ಸೇರಿದಂತೆ ಬಿಎಸ್ಎನ್ಎಲ್ ಅಸ್ಸಾಂ ಸರ್ಕಲ್ನ ಅಧಿಕಾರಿಗಳ ವಿರುದ್ಧ ಸಿಬಿಐ, ಎಫ್ಐಆರ್ ದಾಖಲಿಸಿದೆ.
ಎಫ್ಐಆರ್ನಲ್ಲಿ ಖಾಸಗಿ ವ್ಯಕ್ತಿಯ ಹೆಸರನ್ನೂ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಕೇಬಲ್ ಹಾಕಲು ಗುತ್ತಿಗೆದಾರರಿಗೆ ಓಪನ್ ಟ್ರೆಂಚಿಂಗ್ ವಿಧಾನದ ಮೂಲಕ ಪ್ರತಿ ಕಿ.ಮೀಗೆ 90,000 ರೂ. ರಂತೆ ವರ್ಕ್ ಆರ್ಡರ್ ನೀಡಲಾಗಿದೆ’ ಎಂದು ಸಿಬಿಐ ವಕ್ತಾರರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಎಫ್ಐಆರ್ ದಾಖಲಾದ ನಂತರ ಸಿಬಿಐ ಶುಕ್ರವಾರ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಹರ್ಯಾಣದಲ್ಲಿ ಆರೋಪಿಗಳ ಕಚೇರಿಗಳು ಮತ್ತು ನಿವಾಸಗಳು ಸೇರಿದಂತೆ 25 ಸ್ಥಳಗಳಲ್ಲಿ ಶೋಧ ನಡೆಸಿತು ಎಂದು ಸಿಬಿಐ ವಕ್ತಾರರು ಹೇಳಿದರು.