ಕಲಬುರಗಿ: ತಪ್ಪಿಸಿಕೊಳ್ಳಲೆತ್ನಿಸಿದ ಹೆಡ್ ಕಾನ್ಸ್ಟೇಬಲ್ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಕಲಬುರಗಿ,ಜೂ.17: ಮರಳು ಸಾಗಣೆ ಟ್ರ್ಯಾಕ್ಟರ್ ಹರಿಸಿ ಹೆಡ್ ಕಾನ್ಸ್ ಟೇಬಲ್ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿರುವುದು ವರದಿಯಾಗಿದೆ.
ಪೊಲೀಸರ ಗುಂಡೇಟು ತಗುಲು ಕಾಲಿಗೆ ಗಾಯಗೊಂಡಿರುವ ಆರೋಪಿ ಸಾಯಿಬಣ್ಣ ಕರಜಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆನ್ನಲಾಗಿದೆ.
ಕಳೆದ ಜೂನ್ 15ರಂದು ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾನ್ (51) ಜೇವರ್ಗಿ ಅವರನ್ನು ತಾಲೂಕಿನ ಹುಲ್ಲೂರ್ ಚೆಕ್ಪೋಸ್ಟ್ ಬಳಿ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಹಾಗೂ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ಸಿದ್ದಪ್ಪನನ್ನು ಈಗಾಗಲೇ ಬಂಧಿಸಲಾಗಿತ್ತು. ಮತ್ತೋರ್ವ ಆರೋಪಿ ಸಾಯಿಬಣ್ಣ ಕರಜಗಿ ತಲೆಮರೆಸಿಕೊಂಡಿದ್ದು ಇಂದು ವಿಜಯಪುರ ಜಿಲ್ಲೆಯ ಅಲಮೇಲ ಬಳಿ ಆತ ಅಡಗಿರುವುದನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಆರೋಪಿಯನ್ನು ಕರೆತರುವ ವೇಳೆ ಪಿಎಸ್ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.
ಈ ವೇಳೆ ಆರೋಪಿಯ ಕಾಲಿಗೆ ಪಿಎಸ್ಐ ಗುಂಡು ಹಾರಿಸಿದ್ದು, ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.





