ಮಣಿಪುರ ಭಾರತದ ಭಾಗವೇ?, ಹೌದಾಗಿದ್ದರೆ, ಪ್ರಧಾನಿ ಯಾಕೆ ಮೌನ?: ದಿಲ್ಲಿಯಲ್ಲಿ ಮಾಜಿ ಸಿಎಂ ಇಕ್ರಂ ಒಬೋಬಿ ವಾಗ್ದಾಳಿ
ಮಣಿಪುರದ ನಿಯೋಗಕ್ಕೆ ಪ್ರಧಾನಿ ಭೇಟಿಗೆ ಇನ್ನೂ ದೊರೆಯದ ಅವಕಾಶ
ಹೊಸದಿಲ್ಲಿ, ಜೂ.17: ಪ್ರಧಾನಿ ನರೇಂದ್ರ ಮೋದಿ, ಒಂದು ವೇಳೆ ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿರುತ್ತಿದ್ದರೆ ಅವರು ಮೇ 3ರಿಂದ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಕಳವ ವ್ಯಕ್ತಪಡಿಸುತ್ತಿದ್ದರು ಎಂದು ಮಣಿಪುರದ ಮಾಜಿ ಮುಖ್ಯಮಂತ್ರಿ, ಓಕ್ರಾಂ ಇಬೊಬಿ ಸಿಂಗ್ ಪ್ರಶ್ನಿಸಿದ್ದಾರೆ.
ಪ್ರಧಾನಿ ಭೇಟಿಗಾಗಿ ಹೊಸದಿಲ್ಲಿಗೆ ಆಗಮಿಸಿದ ಮಣಿಪುರದ 10 ಪಕ್ಷಗಳ ನಿಯೋಗದ ಸದಸ್ಯರಲ್ಲೊಬ್ಬರಾದ ಇಕ್ರಂ ಒಬೋಬಿ ಸಿಂಗ್ ಎಐಸಿಸಿ ಮುಖ್ಯಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಜೂನ್ 12ರಂದು ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ನಿಯೋಗವು ಕೋರಿತ್ತಾದರೂ, ಶನಿವಾರದವರೆಗೂ ಅದು ಸಾಧ್ಯವಾಗಿಲ್ಲ ಎಂದವರು ತಿಳಿಸಿದರು.
ಕಾಂಗ್ರೆಸ್, ಜೆಡಿಯು,ಸಿಪಿಐ,ಸಿಪಿಎಂ, ಆರ್ಎಸ್ಪಿ,ಅಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ತೃಣಮೂಲ ಕಾಂಗ್ರೆಸ್,ಶಿವಸೇನಾ (ಯುಬಿಟಿ), ಆಮ್ ಆದ್ಮಿ ಪಾರ್ಟಿ ಹಾಗೂ ಎನ್ಸಿಪಿಯ ಮಣಿಪುರ ಘಟಕಗಳ ಅಧ್ಯಕ್ಷರು ನಿಯೋಗದಲ್ಲಿದ್ದಾರೆ.
‘‘ಮೇ 3ರಿಂದೀಚೆಗೆ ಮಣಿಪುರ ಹೊತ್ತಿ ಉರಿಯುತ್ತದ್ದು, ಈಗಲೂ ಅದು ಮುಂದುವರಿದಿದೆ. ಪ್ರತಿ ದಿನವೂ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಕೇಂದ್ರ ಸಚಿವ ಆರ್.ಕೆ.ರಂಜನ್ ನಿವಾಸದ ಮೇಲೂ ದಾಳಿ ನಡೆದಿದೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 20 ಸಾವಿರ ಮಂದಿ ಆಶ್ರಯ ಪಡೆದಿರುವ ಪರಿಹಾರ ಶಿಬಿರಗಳಲ್ಲಿ ಶೋಚನೀಯ ಪರಿಸ್ಥಿತಿಯಿದೆ. ಆದರೆ ಈವರೆಗೂ ಪ್ರಧಾನಿಯವರು ಮಣಿಪುರ ಬಗ್ಗೆ ಏನೂ ಮಾತನಾಡುತ್ತಿಲ್ಲ. ‘‘ಮಣಿಪುರವು ಭಾರತದ ಭಾಗವೇ ಅಥವಾ ಅಲ್ಲವೇ? ಎಂಬ ಪ್ರಶ್ನೆ ನಮ್ಮಲ್ಲಿ (ಮಣಿಪುರದ ಜನರಲ್ಲಿ) ಮೂಡುತ್ತದೆ. ಒಂದು ವೇಳೆ ಅದು ಭಾರತದ ಭಾಗವಾಗಿದ್ದಲ್ಲಿ, ಪ್ರಧಾನಿಯವರು ಕನಿಷ್ಠ ಪಕ್ಷ ಟ್ವೀಟ್ ಮೂಲಕವಾದರೂ ಏನನ್ನಾದರೂ ಅಭಿವ್ಯಕ್ತಗೊಳಿಸಬೇಕಿತ್ತು.’’ ಎಂದು ಒಬೋಬಿ ಹೇಳಿದ್ದಾರೆ.
ನಿಯೋಗವು ಮನವಿಪತ್ರವೊಂದನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅದನ್ನು ಪ್ರಧಾನಿಗೆ ಸಲ್ಲಿಸುವ ಭರವಸೆ ಹೊಂದಿದೆ ಎಂದು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘‘ಪರಿಸ್ಥಿತಿಯನ್ನು ರಾಜಕೀಯಗೊಳಿಸುವ ಉದ್ದೇಶದಿಂದ ನಾವಿಲ್ಲಿಗೆ ಬಂದಿಲ್ಲ. ಸಾಧ್ಯವಾದಷ್ಟು ಬೇಗನೇ ಶಾಂತಿಯನ್ನು ಪುನರ್ಸ್ಥಾಪಿಸುವಂತೆ ಕೋರಲು ಮಾತ್ರವೇ ಬಂದಿದ್ದೇವೆ. ದಯವಿಟ್ಟು ನಮಗೆ ನೆರವಾಗಿ. ಶಾಂತಿಯನ್ನು ಮರುಸ್ಥಾಪನೆಯಾದ ಆನಂತರವಷ್ಟೇ ಮುಂದಿನ ಹೆಜ್ಜೆಯಿಡಬಹುದಾಗಿದೆ ಹಾಗೂ ಉಭಯ ಸಮುದಾಯಗಳ ನಡುವೆ ಮಾತುಕತೆಗೆ ಉಪಕ್ರಮಿಸಬೇಕಾಗಿದೆ’’ ಎಂದರು.
ಮಣಿಪುರದಲ್ಲಿ ಶಾಂತಿ,ಸುವ್ಯವಸ್ಥೆಯನ್ನು ಪುನರ್ಸ್ಥಾಪನೆಗಾಗಿ ಯಾವಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ಕೇಂದ್ರ ಸರಕಾರವೇ ನಿರ್ಧರಿಸಲಿ ಎಂದು ಓಬೋಬಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಣಿಪುರದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಜೈರಾಮ್ ರಮೇಶ್ ಮಾತನಾಡಿ, ನಿಖರವಾಗಿ 22 ಹಿಂದೆ, ಅಂದರೆ 2001ರ ಜೂನ್ 18ರಂದು ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ವಿಧಾನಸಭಾ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲಾಗಿತ್ತು. ಆಗ ಮಣಿಪುರದ ಸರ್ವ ಪಕ್ಷ ನಿಯೋಗವು , ಪ್ರಧಾನಿ ವಾಜಪೇಯಿ ಅವರ ಭೇಟಿಗೆ ಅವಕಾಶ ಕೋರಿತ್ತು. ಆರು ದಿನಗಳೊಳಗೆ ಅವರಿಗೆ ಅವಕಾಶ ದೊರೆತಿತ್ತು.ನಿಯೋಗವು ಆ ಸಮಯದಲ್ಲಿ ಪ್ರಧಾನಿ ಮನವಿಪತ್ರ ಸಲ್ಲಿಸಿತ್ತು ಹಾಗೂ ರಾಜ್ಯದ ಸನ್ನಿವೇಶದ ಬಗ್ಗೆ ವಿವರಿಸಿತ್ತು. ಆಗ ಮಣಿಪುರದ ಜನತೆ ಶಾಂತಿ ಮರುಸ್ಥಾಪನೆಗಾಗಿ ಆಡಳಿತದೊಂದಿಗೆ ಶ್ರಮಿಸಬೇಕೆಂದು ವಾಜಪೇಯಿ ಮನವಿ ಮಾಡಿದ್ದರು ಎಂದು ನೆನಪಿಸಿಕೊಂಡರು.