ಬಿಜೆಪಿಯ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ‘ಕೊಟ್ಟು ತೆಗೆದುಕೊಳ್ಳುವ’ ನೀತಿಗೆ ಸಿದ್ಧವಿರಬೇಕು: ಕಪಿಲ್ ಸಿಬಲ್
2024ರ ಲೋಕಸಭಾ ಚುನಾವಣೆಗಳ ಹಿನ್ನೆಲೆ
ಹೊಸದಿಲ್ಲಿ: ಪ್ರತಿಪಕ್ಷಗಳು ಒಂದು ಸಾಮಾನ್ಯ ಉದ್ದೇಶವನ್ನು ಮತ್ತು ಅದನ್ನು ಪ್ರತಿಬಿಂಬಿಸುವ ಕಾರ್ಯಸೂಚಿಯನ್ನು ಹೊಂದಿದ್ದರೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜಿಪಿಯೆದುರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಕೊಟ್ಟು ತೆಗೆದುಕೊಳ್ಳುವ ನೀತಿಯನ್ನು ಅನುಸರಿಸಲು ಸಿದ್ಧವಿದ್ದರೆ 2024ರಲ್ಲಿ ಯುಪಿಎ-3 ಸರಕಾರವು ಅಧಿಕಾರಕ್ಕೆ ಬರುವುದು ಬಹುತೇಕ ಸಾಧ್ಯವಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ರವಿವಾರ ಹೇಳಿದರು.
ಪ್ರತಿಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬದಲು ಒಗ್ಗಟ್ಟಿನಿಂದ ‘ಭಾರತಕ್ಕಾಗಿ ಹೊಸ ದೂರದೃಷ್ಟಿ’ಯ ಬಗ್ಗೆ ಮಾತನಾಡಬೇಕು ಎಂದೂ ಮಾಜಿ ಕಾಂಗ್ರೆಸ್ ನಾಯಕ ಸಿಬಲ್ ನ್ಯೂಯಾರ್ಕ್ನಿಂದ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಒಂದೇ ಸ್ಥಾನಕ್ಕಾಗಿ ಎರಡು ಅಥವಾ ಹೆಚ್ಚಿನ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾತೊರೆಯುತ್ತಿರುವ ರಾಜ್ಯಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಟಿಕೆಟ್ಗಳ ಹಂಚಿಕೆ ಸಂದರ್ಭ ಕೊಡುವ ಮತ್ತು ತೆಗೆದುಕೊಳ್ಳುವ ನೀತಿಯನ್ನು ಅನುಸರಿಸುವ ಅಗತ್ಯವಿದೆ. ಈ ಮೂರು ವಿಷಯಗಳ ಬಗ್ಗೆ ಸಹಮತ ಮೂಡಿದರೆ ಯುಪಿಎ-3 ಸರಕಾರ ರಚನೆ ಬಹುತೇಕ ಸಾಧ್ಯ ಎಂದು ತಾನು ಭಾವಿಸಿದ್ದೇನೆ ಎಂದರು.
ತನ್ನ ನಿಲುವನ್ನು ವಿವರಿಸಿದ ಅವರು,ಉದಾಹರಣೆಗೆ ರಾಜಸ್ಥಾನ, ಉತ್ತರಾಖಂಡ, ಹರ್ಯಾಣ,ಮಧ್ಯಪ್ರದೇಶ ಮತ್ತು ಛತ್ತೀಸ್ಗಡದಂತಹ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಬಿಜೆಪಿಗೆ ನಿಜವಾದ ವಿರೋಧ ಪಕ್ಷವಾಗಿದೆ. ಈ ರಾಜ್ಯಗಳಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ.
ಕಾಂಗ್ರೆಸೇತರ ವಿರೋಧ ಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲಿ, ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರಬಲ ಪಾಲುದಾರ ಎನ್ನುವುದು ಎಲ್ಲರಿಗೂ ಗೊತ್ತು. ಪಶ್ಚಿಮ ಬಂಗಾಳದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಎದುರಾಗುವ ಕೆಲವೇ ಲೋಕಸಭಾ ಕ್ಷೇತ್ರಗಳಿವೆ ಎಂದು ಹೇಳಿದ ಸಿಬಲ್,ಬಿಜೆಪಿಯನ್ನು ಸೋಲಿಸಬಹುದು ಎನ್ನುವುದಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ನ ಗೆಲುವು ನಿದರ್ಶನವಾಗಿದೆ ಎಂದರು. ಅದಾಗ್ಯೂ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾರಾಸಗಟು ಹೇಳಿಕೆಗಳ ವಿರುದ್ಧ ಎಚ್ಚರಿಕೆ ನೀಡಿದ,ಲೋಕಸಭಾ ಚುನಾವಣೆಯನ್ನು ಸಂಪೂರ್ಣ ವಿಭಿನ್ನವಾದ ನೆಲೆಯಲ್ಲಿ ಹೋರಾಡಲಾಗುತ್ತದೆ ಎಂದು ಹೇಳಿದರು.
2024ರ ಚುನಾವಣೆಯಲ್ಲಿ ಹೋರಾಟವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವಲ್ಲ,ಅವರು ಕಾಯಂಗೊಳಿಸಲು ಬಯಸಿರುವ ಸಿದ್ಧಾಂತದ ವಿರುದ್ಧವಾಗಿರಲಿದೆ ಎಂದೂ ಸಿಬಲ್ ಬೆಟ್ಟು ಮಾಡಿದರು.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳಿಗಾಗಿ ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಯ ಕುರಿತು ಹಿರಿಯ ಪ್ರತಿಪಕ್ಷ ನಾಯಕರು ಜೂ.23ರಂದು ಪಾಟ್ನಾದಲ್ಲಿ ನಿರ್ಣಾಯಕ ಸಭೆಯೊಂದನ್ನು ನಡೆಸಲಿರುವ ಹಿನ್ನೆಲೆಯಲ್ಲಿ ಸಿಬಲ್ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.