ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ: ರಮಾನಾಥ ರೈ

ಮಂಗಳೂರು, ಜೂ.19: ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಕೇಂದ್ರದಲ್ಲಿ ಬಡವರಿಗೆ ಅಕ್ಕಿ ನೀಡುವ ಯೋಜನೆಗೆ ಅಡ್ಡಿಪಡಿಸಿರುವ ಬಿಜೆಪಿ ನೇತೃತ್ವದ ಕೇಂದ್ರದ ಎನ್ ಡಿಎ ಸರಕಾರದ ವಿರುದ್ಧ ಅನ್ನದ ಬಟ್ಟಲು ಬಡಿದು ಎಚ್ಚರಿಕೆ ನೀಡುವ ಮೂಲಕ ಮಂಗಳವಾರ ನಡೆಯುವ ಪ್ರತಿಭಟನೆಯಲ್ಲಿ ತಾನು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವುದಾಗಿ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೇಶದಲ್ಲೇ ಬಡವರಿಗೆ ಪ್ರಥಮವಾಗಿ ಉಚಿತವಾಗಿ ಅಕ್ಕಿ ನೀಡಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಆಹಾರ ಭದ್ರತಾ ಕಾಯ್ದೆ ಅನುಷ್ಠಾನಕ್ಕೆ ತಂದು ಬಡವರಿಗೆ ಅಕ್ಕಿ ನೀಡುವ ಯೋಜನೆ ಯನ್ನು ಜಾರಿಗೆ ತಂದಿತ್ತು. ಕಾಂಗ್ರೆಸ್ ಆಡಳಿತ ಇಲ್ಲದ ರಾಜ್ಯ ಸರಕಾರಗಳಿಗೆ ತಾರತಮ್ಯ ಮಾಡದೆ ಅಕ್ಕಿಯನ್ನು ನೀಡಿದೆ. ಛತ್ತೀಸ್ ಗಡದಲ್ಲಿ ಬಿಜೆಪಿ ನೇತೃತ್ವದ ರಮಣ್ ಸಿಂಗ್ ಸರಕಾರ ಬಡವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಯೋಜನೆ ಘೋಷಿಸಿದ್ದರು. ಆಗ ಕೇಂದ್ರದಲ್ಲಿದ್ದ ಯುಪಿಎ ಸರಕಾರ ತಾರತಮ್ಯ ಮಾಡದೆ ಛತ್ತೀಸ್ ಗಡಕ್ಕೆ ಅಕ್ಕಿ ನೀಡಿ ಸಹಕಾರ ನೀಡಿದೆ. ಅದೇರೀತಿ ಈಗ ಕೇಂದ್ರ ಸರಕಾರ ಕರ್ನಾಟಕ ಸರಕಾರಕ್ಕೆ ಅಕ್ಕಿ ನೀಡಿ ಬಡವರಿಗೆ ನೆರವಾಗುವ ಬದಲು ಬಡವರ ಅನ್ನಕ್ಕೆ ಕಲ್ಲು ಹಾಕಿ ತಡೆ ಒಡ್ಡುವ ಕೆಲಸಕ್ಕೆ ಇಳಿದಿದೆ. ಇವರಿಗೆ ಮುಂದೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪಡಿತರ ವ್ಯವಸ್ಥೆ ಮೊದಲು ಜಾರಿಗೆ ತಂದಿರುವುದು ಕಾಂಗ್ರೆಸ್ ಸರಕಾರ. ಯುಪಿಎ ಸರಕಾರ ಜಾರಿ ಮಾಡಿದ ಬಡವರಿಗೆ ಅಕ್ಕಿ ನೀಡುವ ಯೋಜನೆಯನ್ನು ಪ್ರಚಾರಕ್ಕಾಗಿ ಬಳಸಲಿಲ್ಲ. ಬಿಜೆಪಿ ನೇತೃತ್ವದ ಎನ್ ಡಿಎ ಅದನ್ನೂ ಪ್ರಚಾರಕ್ಕಾಗಿ ಬಳಸುತ್ತಿದೆ. ಕರ್ನಾಟಕ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಂದ್ರ ಆಹಾರ ನಿಗಮದಿಂದ ಮೊದಲು ಭರವಸೆ ನೀಡಿ ಬಳಿಕ ಅಕ್ಕಿ ನೀಡದಂತೆ ತಡೆ ಒಡ್ಡಿದೆ. ಇನ್ನಾದರೂ ಬಡವರ ಅನ್ನ ನೀಡುವ ಯೋಜನೆಗೆ ತಡೆ ಒಡ್ಡದೆ ಕೀಳು ಮಟ್ಟದ ರಾಜಕೀಯದಿಂದ ಹಿಂದೆ ಸರಿದು ಬಡವರಿಗೆ ಸಹಾಯ ನೀಡಲು ಕೇಂದ್ರ ಸರ್ಕಾರ ಮುಂದಾಗಲಿ ಎಂದು ರಮಾನಾಥ ರೈ ಒತ್ತಾಯಿಸಿದ್ದಾರೆ.
ಬಿಜೆಪಿಯ ಟೀಕೆಗಳನ್ನು ಮಾಡಿದರೂ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ ಸಂಚಾರದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಳಿದ ಗ್ಯಾರಂಟಿ ಯೋಜನೆ ಗಳನ್ನು ಸರಕಾರ ಜನರಿಗೆ ನೀಡಲಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ನವೀನ್ ಡಿಸೋಜ, ಹರಿನಾಥ್, ಪ್ರಕಾಶ್ ಸಾಲ್ಯಾನ್, ಬೇಬಿ ಕುಂದರ್, ಅಪ್ಪಿ, ತನ್ವಿರ್ ಶಾ, ಜಯಶೀಲ ಅಡ್ಯಂತಾಯ, ತೇಜಸ್ವಿರಾಜ್, ಪಿಯೂಸ್ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.