ಭಾರತಕ್ಕೆ ಪ್ರಣಯ್ ಸಾರಥ್ಯ
ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ತೈಪೆ: ತೈಪೆಯಲ್ಲಿ ಮಂಗಳವಾರ ಆರಂಭವಾಗಲಿರುವ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಎಚ್.ಎಸ್.ಪ್ರಣಯ್ ಭಾರತದ ಸವಾಲನ್ನು ಮುನ್ನಡೆಸಲಿದ್ದು, ತನ್ನ ಉತ್ತಮ ಫಾರ್ಮ್ನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.ವಿಶ್ವದ ನಂ.9ನೇ ಆಟಗಾರ ಪ್ರಣಯ್ ತೈಪೆ ಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದು, ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್-300 ಸ್ಪರ್ಧೆಯ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ಆಟಗಾರನನ್ನು ಎದುರಿಸ ಲಿದ್ದಾರೆ.
ಕಳೆದ ತಿಂಗಳು ಮಲೇಶ್ಯ ಮಾಸ್ಟರ್ಸ್ ಸೂಪರ್-300 ಪ್ರಶಸ್ತಿಯನ್ನು ಜಯಿಸಿದ್ದ ಪ್ರಣಯ್, ಇಂಡೋನೇಶ್ಯ ಓಪನ್ ಸೂಪರ್-1000 ಟೂರ್ನಿಯಲ್ಲಿ ಸೆಮಿಫೈನಲ್ಗೆ ತಲುಪಿ ಉತ್ತಮ ಪ್ರದರ್ಶನ ನೀಡಿದ್ದರು. ಸೆಮಿ ಫೈನಲ್ನಲ್ಲಿ ವಿಶ್ವದ ನಂ.1 ಹಾಗೂ ಡೆನ್ಮಾರ್ಕ್ ಆಟಗಾರ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 15-21, 15-21 ಅಂತರ ದಿಂದ ಸೋತಿದ್ದರು. ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ನಲ್ಲಿ ಸಹ ಆಟಗಾರ್ತಿಯರಾದ ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್ ಹಾಗೂ ಋತ್ವಿಕಾ ಶಿವಾನಿ ಜೊತೆ ಆಡಲಿದ್ದು, ತನ್ನ ಮೊದಲಿನ ಫಾರ್ಮ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ನ ಪೋರ್ನ್ಪಿಚಾ ಚೋಯಿಕೀ ವಾಂಗ್ರನ್ನು ಎದುರಿಸಲಿದ್ದಾರೆ. ಮಾಳವಿಕಾ ಮೂರನೇ ಶ್ರೇಯಾಂಕದ ಬೆವೆನ್ ಝಾಂಗ್ರನ್ನು ಎದುರಿಸಲಿದ್ದಾರೆ. ಪುರುಷರ ಡಬಲ್ಸ್ ವಿಭಾಗದ ಸ್ಟಾರ್ ಜೋಡಿ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ಶೆಟ್ಟಿ ತೈಪೆ ಟೂರ್ನಿಯಲ್ಲಿ ಆಡುತ್ತಿಲ್ಲ.





