ಎಸ್ಸಿಡಿಸಿಸಿ ಬ್ಯಾಂಕ್ ಬೆಳುವಾಯಿ ಶಾಖೆಯಲ್ಲಿ ಹೊಸ ಎಟಿಎಂ ಉದ್ಘಾಟನೆ

ಮೂಡುಬಿದಿರೆ: ನವೋದಯ ಸ್ವಸಹಾಯ ಗುಂಪುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲೂ ಸ್ವಸಹಾಯ ಗುಂಪುಗಳನ್ನು ಆರಂಭಿಸಲಾಗಿದೆ ಎಂದು ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಎಸ್ಸಿಡಿಸಿಸಿ ಬ್ಯಾಂಕ್ನ ಬೆಳುವಾಯಿ ಶಾಖೆಯ ನೂತನ ಎಟಿಎಂ ಲೋಕಾರ್ಪಣೆ ಮಂಗಳವಾರ ಶಾಖೆಯ ಬೆಳ್ಳಿಹಬ್ಬ ಸಂಭ್ರಮಾಚರಣೆಯ ಸಮಾರಂಭದ ಅಧ್ಯಕ್ಷತೆವಹಿಸಿದರು. ರೈತರ ಸಾಲ ಶೇ.100ರಷ್ಟು ಮರು ಪಾವತಿಯಾಗುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 111 ಶಾಖೆಗಳನ್ನು ಹೊಂದಿದ್ದು, ರಾಜ್ಯದಲ್ಲೇ ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ನೂತನ ಎಟಿಎಂ ಅನ್ನು ಆಧ್ಯಲಕ್ಷ್ಮಿ ಕಟ್ಟಡದಲ್ಲಿ ಉದ್ಘಾಟಿಸಿದರು. ಎಸ್ಸಿಡಿಸಿಸಿ ಬ್ಯಾಂಕ್ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿದ್ದು, ಹಲವಾರು ಜನರಿಗೆ ಅನ್ನದಾತವಾಗಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬೆಳುವಾಯಿಯ ಆರ್ಥಿಕ ಪ್ರಗತಿಗೆ ಬ್ಯಾಂಕ್ನ ಬೆಳುವಾಯಿ ಶಾಖೆಯು ವಿಶೇಷ ಕೊಡುಗೆ ನೀಡುತ್ತಿದೆ ಎಂದರು.
ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಖೆಯು ಪ್ರಸ್ತುತ ರೂ.23 ಕೋಟಿ ಸಾಲವನ್ನು ನೀಡಿದ್ದು, ರೂ.50.40 ಲಕ್ಷ ಲಾಭ ಗಳಿಸಿದೆ. 245 ಸ್ವಸಹಾಯ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಟಿಎಂ ಅಳವಡಿಕೆಯಿಂದ ಪರಿಸರದ 7 ಗ್ರಾಮಗಳ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಶಾಖೆಯಲ್ಲಿ 20 ವರ್ಷಗಳಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಸತೀಶ್ ಶೆಟ್ಟಿ, ಮೇಲ್ವಿಚಾರಕ ಜಯಂತ್, ಶಾಖಾ ವ್ಯವಸ್ಥಾಪಕಿ ಲಕ್ಷ್ಮಿ ಅವರನ್ನು ಗೌರವಿಸಲಾಯಿತು.
ಶಾಖೆಯಲ್ಲಿ ಕಳೆದ 25 ವರ್ಷಗಳಿಂದ ಗ್ರಾಹಕರಾಗಿರುವ ಉದ್ಯಮಿ ಮಹಮ್ಮದ್ ಅನ್ಸಾರ್ ಅವರಿಗೆ ಉತ್ತಮ ಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಉತ್ತಮ ಠೇವಣಿದಾರರಾಗಿರುವ ಸುಧಾಕರ ಎಂ.ಶೆಟ್ಟಿ, ಕೃಷ್ಣ ಭಟ್, ಆನಂದ ಶೆಟ್ಟಿ, ವಸಂತಿ ಪದ್ಮನಾಭ, ಉತ್ತಮ ಸಾಲಗಾರರಾಗಿರುವ ಜಗತ್ಪಾಲ ಎಸ್.ಹೆಗ್ಡೆ, ಜಯಂತಿ ಎಸ್.ಪೂಜಾರಿ, ಶಬಾನಬಾನು, ಉತ್ತಮ ನವೋದಯ ಸ್ವಸಹಾಯ ಸಂಘಗಳಾದ ಶಿವಗಿರಿ, ಮಧುಶ್ರೀ, ಶ್ರೀನಿಧಿ ಸ್ವಸಹಾಯ ಗುಂಪುಗಳನ್ನು ಗೌರವಿಸಲಾಯಿತು.
ನೂತನ ಸ್ವಸಹಾಯ ಸಂಘಗಳಾದ ನಂದಗೋಕುಲ, ನವಜ್ಯೋತಿ, ಪದ್ಮ, ಸರಸ್ವತಿ ಸ್ವಸಹಾಯ ಸಂಘಗಳಿಗೆ ದಾಖಲೆಗಳನ್ನು ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹಸ್ತಾಂತರಿಸಿದರು. ನವೋದಯ ಚಾರಿಟೇಬಲ್ ಟ್ರಸ್ಟ್ ನ ಚೈತನ್ಯ ವಿಮಾ ಯೋಜನೆಯ ಸದಸ್ಯರಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಉಮೇಶ್ ಅವರ ಪತ್ನಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಹಸ್ತಾಂತರಿಸಲಾಯಿತು. ಅನಾರೋಗ್ಯ ಪರಿಹಾರ ವಿಮಾ ಯೋಜನೆಯಡಿ ಸದಸ್ಯರಾದ ಆಸ್ಮಾ ಫರ್ವಿನ್, ನಾಸೀರಬಾನು, ಅಬ್ದುಲ್ ಅಝೀಜ್ ಅವರಿಗೆ ಪರಿಹಾರದ ಮೊತ್ತವನ್ನು ವಿತರಿಸಲಾಯಿತು.
ಬ್ಯಾಂಕ್ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ.ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ, ಎಸ್.ಬಿ ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು. ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ವಂದಿಸಿದರು. ಸುಹಾನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.