ಸ್ವಯಂ ಘೋಷಿತ ದೇವಮಾನವನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಪ್ರಕರಣ ದಾಖಲು
![ಸ್ವಯಂ ಘೋಷಿತ ದೇವಮಾನವನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಪ್ರಕರಣ ದಾಖಲು ಸ್ವಯಂ ಘೋಷಿತ ದೇವಮಾನವನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಪ್ರಕರಣ ದಾಖಲು](https://www.varthabharati.in/sites/default/files/images/articles/2023/06/20/381630-1687283959.jpg)
ವಿಶಾಖಪಟ್ಟಣಂ: ನಗರದ ಆಶ್ರಮವೊಂದರಲ್ಲಿ ವಾಸವಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆಶ್ರಮದ ಮುಖ್ಯಸ್ಥ ಸ್ವಾಮಿ ಪೂರ್ಣಾನಂದ (63)ರನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿ ಪೂರ್ಣಾನಂದ ತನ್ನನ್ನು ವೆಂಕೋಜಿಪಾಲಮ್ನಲ್ಲಿಯ ಸ್ವಾಮಿ ಜ್ಞಾನಾನಂದ ಆಶ್ರಮದಲ್ಲಿ ದಿಗ್ಬಂಧನದಲ್ಲಿರಿಸಿದ್ದರು ಮತ್ತು ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದರು ಎಂದು 15ರ ಹರೆಯದ ಬಾಲಕಿ ತನ್ನ ದೂರಿನಲ್ಲಿ ಆರೋಪಿಸಿದ್ದಳು.
ಆಶ್ರಮದಿಂದ ಪರಾರಿಯಾಗುವಲ್ಲಿ ಸಫಲಳಾಗಿದ್ದ ಬಾಲಕಿ ಸುದ್ದಿಗಾರರೊಂದಿಗೆ ಮಾತನಾಡಿ ತನ್ನ ಭಯಾನಕ ಅನುಭವಗಳನ್ನು ಬಣ್ಣಿಸಿದಳು. ಪೂರ್ಣಾನಂದ ತನ್ನನ್ನು ಕೋಣೆಯೊಂದರಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು ಎಂದೂ ಆಕೆ ಆರೋಪಿಸಿದಳು.
ಕೆಲವು ವರ್ಷಗಳ ಹಿಂದೆ ಹೆತ್ತವರನ್ನು ಕಳೆದುಕೊಂಡಿದ್ದ ತನ್ನನ್ನು ಐದನೇ ತರಗತಿ ಪೂರ್ಣಗೊಳಿಸಿದ ಬಳಿಕ 2016ರಲ್ಲಿ ಚಿಕ್ಕಮ್ಮ ಆಶ್ರಮಕ್ಕೆ ಸೇರಿಸಿದ್ದಳು. ಆಶ್ರಮದಲ್ಲಿಯ ಮಕ್ಕಳನ್ನು ಗೋಶಾಲೆಯಲ್ಲಿ ದುಡಿಸಲಾಗುತ್ತಿತ್ತು ಮತ್ತು ಆಶ್ರಮದ ಕೆಲವು ನಿವಾಸಿಗಳು ಕಿರಕುಳಗಳನ್ನು ಸಹಿಸಲಾಗದೆ ಅಲ್ಲಿಂದ ಹೊರಟು ಹೋಗಿದ್ದರು ಎಂದೂ ಬಾಲಕಿ ತಿಳಿಸಿದಳು.
ಆಶ್ರಮದಿಂದ ಪರಾರಿಯಾದ ಬಳಿಕ ವಿಜಯವಾಡಾಕ್ಕೆ ಪ್ರಯಾಣಿಸುತ್ತಿದ್ದಾಗ ಸಹಪ್ರಯಾಣಿಕ ಮಹಿಳೆಯೊಂದಿಗೆ ಬಾಲಕಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು ಮತ್ತು ಪೊಲೀಸ್ ದೂರನ್ನು ದಾಖಲಿಸಲು ಆಕೆ ನೆರವಾಗಿದ್ದರು.
ಬಾಲಕಿ ಆಶ್ರಮದಿಂದ ಪರಾರಿಯಾದ ಬಳಿಕ ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಸ್ವಾಮಿ ಪೂರ್ಣಾನಂದ ವಿರುದ್ಧ ಐಪಿಸಿ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿ ಪ್ರಸ್ತುತ ವಿಜಯವಾಡಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ನಾಲ್ವರು ಬಾಲಕಿಯರು ಸೇರಿದಂತೆ 12 ಅನಾಥ ಮಕ್ಕಳು ಆಶ್ರಮದಲ್ಲಿದ್ದರು ಎಂದು ವರದಿಗಳು ತಿಳಿಸಿವೆ. ಆದರೆ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ನಿರಾಕರಿಸಿರುವ ಆಶ್ರಮದ ಸದಸ್ಯರು,ಇದು ಆಶ್ರಮದ ಬೆಲೆಬಾಳುವ ಭೂಮಿಯನ್ನು ಕಬಳಿಸುವ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.
2012ರಲ್ಲಿ ಇಂತಹುದೇ ಆರೋಪದಲ್ಲಿ ಸ್ವಾಮಿ ಪೂರ್ಣಾನಂದರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. 13ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾರೆ ಎಂದು ಆಗ ಆರೋಪಿಸಲಾಗಿತ್ತು. ಆ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ ಎಂದು ಎಸಿಪಿ ಸಿ.ವಿವೇಕಾನಂದ ತಿಳಿಸಿದರು.
ಅವಿವಾಹಿತರಾಗಿರುವ ಸ್ವಾಮಿ ಪೂರ್ಣಾನಂದ ಎರಡು ಮಾಸ್ಟರ್ಸ್ ಡಿಗ್ರಿಗಳ ಜೊತೆಗೆ ಬಿ.ಎಡ್ ಮತ್ತು ಕಾನೂನು ಪದವಿಗಳನ್ನೂ ಪಡೆದಿದ್ದಾರೆ. ಆಶ್ರಮಕ್ಕೆ ಸೇರಿದ 9.5 ಎಕರೆ ಭೂಮಿ ವಿವಾದದಲ್ಲಿದೆ ಎನ್ನಲಾಗಿದೆ.