ಹರ್ಷ ಮಂದರ್ ಸಂಸ್ಥೆಗೆ ವಿದೇಶಿ ದೇಣಿಗೆ ಪರವಾನಿಗೆ ಅಮಾನತು
ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರ ಚಿಂತಕರ ಚಾವಡಿ ‘ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ (CES)’ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಪರವಾನಿಗೆಯನ್ನು ಕೇಂದ್ರ ಗೃಹ ಸಚಿವಾಲಯವು 180 ದಿನಗಳ ಅವಧಿಗೆ ಅಮಾನತುಗೊಳಿಸಿದೆ.
ಮಂದರ್ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ‘ಲಾಕಿಂಗ್ ಡೌನ್ ದಿ ಪೂರ್ ಆ್ಯಂಡ್ ಪಾರ್ಟಿಷನ್ಸ್ ಆಫ್ ದಿ ಹಾರ್ಟ್:ಅನ್ಮೇಕಿಂಗ್ ದಿ ಐಡಿಯಾ ಆಫ್ ಇಂಡಿಯಾ’ ಸೇರಿದಂತೆ ಅರ್ಧ ಡಝನ್ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಪ್ರತಿಪಾದಿಸುವ ಸ್ವಾಯತ್ತ ಚಿಂತಕರ ಚಾವಡಿ ಸಿಇಎಸ್ನ ಸ್ಥಾಪಕರಲ್ಲೋರ್ವರಾಗಿದ್ದಾರೆ.
ಮಂದರ್ ದಿ ಇಂಡಿಯನ್ ಎಕ್ಸ್ಪ್ರೆಸ್,ದಿ ಹಿಂದು,ದಿ ವೈರ್,ದಿ ಹಿಂದುಸ್ಥಾನ ಟೈಮ್ಸ್,ದಿ ಕ್ವಿಂಟ್ ಮತ್ತು ಸ್ಕ್ರೋಲ್ಗಳಂತಹ ಮಾಧ್ಯಮಗಳಿಗಾಗಿ ನಿಯಮಿತವಾಗಿ ಅಂಕಣಗಳನ್ನು ಬರೆಯುತ್ತಿದ್ದಾರೆ ಎಂದು ಗೃಹ ಸಚಿವಾಲಯವು ತನ್ನ ಜೂ.14ರ ಆದೇಶದಲ್ಲಿ ಹೇಳಿದೆ.
ಟ್ರಸ್ಟಿ ಮಂದರ್ ಅವರು 2011-12 ಮತ್ತು 2017-18ರ ನಡುವೆ ಸಿಎಸ್ನ ಎಫ್ಸಿಆರ್ಎ ಖಾತೆಯಿಂದ ವೃತ್ತಿಪರ ಸ್ವೀಕೃತಿಗಳು/ಪಾವತಿಗಳನ್ನಾಗಿ 12,64,671 ರೂ.ಗಳ ವಿದೇಶಿ ದೇಣಿಗೆಯನ್ನು ಪಡೆದುಕೊಂಡಿದ್ದಾರೆ. ಇದು ಕಾಯ್ದೆಯ ಕಲಂ 3 ಮತ್ತು 8 ಹಾಗೂ ಕಾಯ್ದೆಯ 12(4)(ಎ)(6) ಕಲಮ್ನಡಿ ನೋಂದಣಿಯ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿದೇಶಿ ನಿಧಿಗಳನ್ನು ಸ್ವೀಕರಿಸಲು ಎಫ್ಸಿಆರ್ಎ ಅಡಿ ನೋಂದಣಿ ಕಡ್ಡಾಯವಾಗಿದೆ. ಈಗ ಪರವಾನಿಗೆಯನ್ನು ಅಮಾನತುಗೊಂಡಿರುವುದರಿಂದ ಗೃಹ ಸಚಿವಾಲಯದ ಅನುಮತಿಯಿಲ್ಲದೆ ವಿದೇಶಗಳಿಂದ ಹೊಸದಾಗಿ ಹಣವನ್ನು ಸ್ವೀಕರಿಸಲು ಅಥವಾ ಈಗಾಗಲೇ ಇರುವ ವಿದೇಶಿ ದೇಣಿಗೆಗಳನ್ನು ಬಳಸಲು ಸಿಇಎಸ್ಗೆ ಸಾಧ್ಯವಾಗುವುದಿಲ್ಲ.
ಕಾಯ್ದೆಯ ಕಲಂ 3 ನೋಂದಾಯಿತ ವೃತ್ತಪತ್ರಿಕೆಯ ವರದಿಗಾರರು,ಅಂಕಣಕಾರರು,ವ್ಯಂಗ್ಯ ಚಿತ್ರಕಾರರು,ಸಂಪಾದಕರು,ಮಾಲಿಕರು ಮತ್ತು ಪ್ರಕಾಶಕರು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿದೆ. ಕಲಂ 8 ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ಸಂಸ್ಥೆಗಳು ಅವುಗಳನ್ನು ನಿಗದಿತ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಹೇಳುತ್ತದೆ. ಕಾಯ್ದೆಯ ಕಲಂ 12(4)(ಎ)(6) ವಿದೇಶಿ ದೇಣಿಗೆಗಳನ್ನು ವೈಯಕ್ತಿಕ ಲಾಭ ಅಥವಾ ಅನಪೇಕ್ಷಿತ ಉದ್ದೇಶಗಳಿಗಾಗಿ ಬಳಸುವುದನ್ನು ನಿಷೇಧಿಸಿದೆ.
ಮಂದರ್ ಸಿಇಎಸ್ನ ಎಫ್ಸಿಆರ್ಎ ಖಾತೆಯಿಂದ ಹಣವನ್ನು ಸ್ವೀಕರಿಸಿದ್ದ ಇತರ ವ್ಯಕ್ತಿಗಳೊಂದಿಗೆ ಅಂಕಣಗಳನ್ನು ಪ್ರಕಟಿಸಿದ್ದಾರೆ. ಮಂದರ್,ಅಂಜಲಿ ಭಾರದ್ವಾಜ ಮತ್ತು ಅಮೃತಾ ಜೊಹ್ರಿ ಅವರು 2018,ಆ.6ರಂದು ಸ್ಕ್ರೋಲ್ನಲ್ಲಿ ಬರೆದಿದ್ದ ಲೇಖನವು ಇಂತಹ ಒಂದು ಉದಾಹರಣೆಯಾಗಿದೆ. ಎಫ್ಸಿಆರ್ಎ ಖಾತೆಯಿಂದ ಜೊಹ್ರಿಯವರಿಗೆ 1,13,251 ರೂ. ಮತ್ತು ಭಾರದ್ವಾಜ ಅವರಿಗೆ 25,64,550 ರೂ.ಗಳನ್ನು ಪಾವತಿಸಲಾಗಿದೆ ಎಂದು ವರದಿಯಾಗಿದೆ ಎಂದು ಸಚಿವಾಲಯವು ಹೇಳಿದೆ.
ಎಫ್ಸಿಆರ್ಎ ವ್ಯಾಪ್ತಿಯಲ್ಲಿಲ್ಲದ ಸಂಸ್ಥೆಗಳು ಬರೆದಿರುವ ವರದಿಗಳನ್ನು ರಚಿಸಲು ಮತ್ತು ಬಿಡುಗಡೆಗೊಳಿಸಲು ಸಿಇಎಸ್ ವಿದೇಶಿ ದೇಣಿಗೆಗಳನ್ನು ಬಳಸುತ್ತಿದೆ ಎಂದೂ ಸಚಿವಾಲಯವು ಆರೋಪಿಸಿದೆ.
ಸಿಇಎಸ್ನ ವಾರ್ಷಿಕ ವರದಿಯ ಪರಿಶೀಲನೆಯಲ್ಲಿ ಹಣಕಾಸು ವಿವರಗಳು ತಾಳೆಯಾಗಿಲ್ಲ ಮತ್ತು ಮಾ.3ರಂದು ಕಳುಹಿಸಿದ್ದ ಪ್ರಶ್ನಾವಳಿಗೆ ಉತ್ತರಿಸಲು ಅದು ವಿಫಲಗೊಂಡಿದೆ ಎಂದೂ ಸಚಿವಾಲಯವು ತಿಳಿಸಿದೆ.