ಸರಕಾರಿ ಬಸ್ ಕೇಳುವುದು ನಮ್ಮ ಮೂಲಭೂತ ಹಕ್ಕು: ಮುನೀರ್ ಕಾಟಿಪಳ್ಳ
► ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಲು ಆಗ್ರಹಿಸಿ ನಾಡ ಗ್ರಾ.ಪಂ ಎದುರು ಧರಣಿ ► ಪರ್ಮಿಟ್ ಇದ್ದು ಓಡಿಸದ ಖಾಸಗಿ ಬಸ್ಸುಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕುಂದಾಪುರ, ಜೂ.21: ಸರಕಾರಿ ಬಸ್ ಕೇಳುವುದು ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ನಾಡದಲ್ಲಿ ಆರಂಭದ ಈ ಹೋರಾಟ, ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ, ಆ ಬಳಿಕವೂ ಈಡೇರದಿದ್ದರೆ ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುವವರೆಗೆ ಮುಂದುವರೆಸಲಾ ಗುವುದು. ನಾಡ-ಪಡುಕೋಣೆಯಲ್ಲಿ ಎದ್ದ ಸರಕಾರಿ ಬಸ್ ವಿಚಾರದ ಧ್ವನಿ ಇಡೀ ಕರಾವಳಿ ಹೆಣ್ಣುಮಕ್ಕಳ ಪರವಾದ ಧ್ವನಿಯಾಗಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಬೈಂದೂರು ತಾಲೂಕಿನ ನಾಡ ಗ್ರಾಮದ ವಿವಿಧೆಡೆಗೆ ಸರಕಾರಿ ಬಸ್ ಓಡಿಸಲು ಹಾಗೂ ಮರವಂತೆ ಮಹಾರಾಜ ಸ್ವಾಮಿ ಬಳಿ ಬಸ್ ನಿಲುಗಡೆಗೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾಪಂ ಎದುರು ಬುಧವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕರಾವಳಿ ಜಿಲ್ಲೆಗಳಲ್ಲಿಯೇ ಖಾಸಗಿ ಏಕಸ್ವಾಮ್ಯದಿಂದಾಗಿ ಸರಕಾರಿ ಬಸ್ಗಳ ಸಂಖ್ಯೆ ಕಡಿಮೆಯಿದೆ. ಅವಿಭಜಿತ ದ.ಕ. ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವವರು ಖಾಸಗಿ ಬಸ್ ಮಾಲಕರು. ಖಾಸಗಿ ಬಸ್ಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅದು ಕೂಡ ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಸಂಚರಿಸುವ ಕೂಲಿ ಕಾರ್ಮಿಕರು, ಮಹಿಳೆಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆ ಯಾಗುತ್ತಿದೆ ಎಂದು ಅವರು ಆರೋಪಿಸಿದರು.
ಟ್ರಿಪ್ ಕಟ್ ಮಾಡುವುದು ಅಪರಾಧ. ಪರ್ಮಿಟ್ ಇದ್ದು ಓಡಿಸದ ಇಂತಹ ಖಾಸಗಿ ಬಸ್ಸುಗಳ ವಿರುದ್ಧ ಸಂಬಂಧಿತ ಇಲಾಖೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಗ್ರಾಮಪಂಚಾಯತ್ ಕೂಡ ಮುತುವರ್ಜಿ ವಹಿಸಬೇಕು. ಇಂದಿನ ಸಮಾಜ ದಲ್ಲಿ ಅನುಕೂಲಸ್ಥರು ಹಾಗೂ ಬಡವರು ಎಂಬ ಧ್ರುವೀಕರಣ ಎದ್ದು ಕಾಣು ತ್ತಿದೆ. ಗ್ರಾಮೀಣ ಭಾಗಗಳಿಗೆ ಭಾಗಶಃ ಸರಕಾರಿ ಬಸ್ಸು ಸೌಕರ್ಯ ನೀಡಿದಲ್ಲಿ ಜನರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೈಂದೂರು ತಾಲೂಕಿನ ನಾಡ ಗ್ರಾಪಂ ವ್ಯಾಪ್ತಿಯ ಹಲವು ಊರುಗಳು ಬಸ್ ಸೌಲಭ್ಯದಿಂದ ವಂಚಿತವಾಗಿದೆ. ನಾಡ ಗ್ರಾಮದ ಕೋಣ್ಕಿ ಪ್ರದೇಶ, ಬಡಾಕೆರೆ ಗ್ರಾಮ ಮತ್ತು ಹಡವು ಗ್ರಾಮದ ಜನರು ಖಾಸಗಿ ಹಾಗೂ ಸರಕಾರಿ ಬಸ್ ಸೌಕರ್ಯ ಇಲ್ಲದೇ ಪರದಾಡಬೇಕಾಗಿದೆ. ಈ ಭಾಗದ ಜನರು ಬಸ್ಸಿಗಾಗಿ 5-6 ಕಿಲೋ ಮೀಟರ್ ದೂರ ರಿಕ್ಷಾ ಅಥವಾ ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಈ ಹಿಂದೆ ಈ ಭಾಗಕ್ಕೆ ಬರುತ್ತಿದ್ದ ಸರಕಾರಿ ಬಸ್ಸಿನ ಸೇವೆಯು ನಿಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಾಡ ಗ್ರಾಪಂ ಪಿಡಿಒ ಮೂಲಕ ಮನವಿ ಸಲ್ಲಿಸಲಾಯಿತು. ಡಿವೈಎಫ್ಐ ಬೈಂದೂರು ತಾಲೂಕು ಅಧ್ಯಕ್ಷ ವಿಜಯ್ ಕೊಯನಗರ, ಪಡುಕೋಣೆ ಘಟಕದ ಉಪಾಧ್ಯಕ್ಷ ನಾಗರಾಜ ಕುರು, ಮುಖಂಡರಾದ ಸುರೇಶ್ ಕಲ್ಲಾಗರ, ರಾಜು ಪಡುಕೋಣೆ, ವೆಂಕಟೇಶ ಕೋಣಿ, ಎಚ್. ನರಸಿಂಹ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ ನಾಡ, ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ಮುಖಂಡರಾದ ಸುಶೀಲಾ ನಾಡ, ನಾಗರತ್ನಾ ಪಡುವರಿ, ಗ್ರಾ.ಪಂ ಸದಸ್ಯೆ ಶೋಭಾ, ಸಿಐಟಿಯು ಮುಖಂಡ ರಾಜೇಶ್ ರೊನಾಲ್ಡ್, ಸ್ಥಳೀಯರಾದ ಪಿಲಿಫ್ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.
‘ನನ್ನ ಮೊಮ್ಮಗಳು 13 ವರ್ಷ ಪ್ರಾಯದ ಬಾಲಕಿ ವಿಕಲಚೇತನೆಯಾಗಿದ್ದು ನಾವುಂದ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ದಿನಕ್ಕೆ 300 ರೂ. ವ್ಯಯಿಸಿ ರಿಕ್ಷಾದಲ್ಲಿ ಬೆಳಿಗ್ಗೆ ಕರೆದೊಯ್ದು ಸಂಜೆ ವಾಪಾಸ್ ಕರೆತರಬೇಕು. ಬಸ್ ಸಂಚಾರ ಇಲ್ಲದೆ ನಮಗೆ ಸಾಕಷ್ಟು ತೊಂದರೆ ಆಗುತ್ತಿದೆ’
-ರತ್ನಮ್ಮ, ಬಾಲಕಿ ಅಜ್ಜಿ
ಕುಂದಾಪುರ, ಬೈಂದೂರಿನ ವಿವಿಧೆಡೆ ಕುಗ್ರಾಮಗಳಿಗೆ ಸರಕಾರಿ ಬಸ್ಸು ಸಂಚಾರ ಆರಂಭಿಸಿದಲ್ಲಿ ಬಡವರಿಗೆ, ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈ ಹಿನ್ನೆಲೆ ಡಿವೈಎಫ್ಐ ವತಿಯಿಂದ ಪ್ರತಿಭಟನೆಗೆ ಮುಂದಾಗಿದ್ದು ನಾಡದಿಂದ ಆರಂಭಗೊಂಡ ಈ ಹೋರಾಟವು ಹಕ್ಲಾಡಿ, ಗುಲ್ವಾಡಿ ಸಹಿತ ಕುಂದಾಪುರದ ಇನ್ನೂ ಹಲವು ಊರುಗಳಿಗೂ ವಿಸ್ತರಿಸಲಿದ್ದು, ಬಸ್ ಸೇವೆ ಒದಗಿಸುವವರೆಗೆ ಈ ಪ್ರತಿಭಟನೆ ನಿರಂತರವಾಗಿರಲಿದೆ.
- ಸುರೇಶ್ ಕಲ್ಲಾಗರ, ಡಿವೈಎಫ್ಐ ಮುಖಂಡರು







