ಲಷ್ಕರೆ ಭಯೋತ್ಪಾದಕನ ವಿರುದ್ಧ ಪ್ರಸ್ತಾವ ತಡೆದಿದ್ದಕ್ಕಾಗಿ ಚೀನಾಕ್ಕೆ ಭಾರತದ ಟೀಕೆ

ಹೊಸದಿಲ್ಲಿ: ಲಷ್ಕರೆ ತಯ್ಯಿಬಾದ ಸಾಜಿದ್ ಮಿರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವಕ್ಕೆ ಚೀನಾ ತಡೆಯನ್ನೊಡ್ಡಿರುವ ಹಿನ್ನೆಲೆಯಲ್ಲಿ ಭಾರತವು, ಜಾಗತಿಕ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯಲ್ಲಿ ನಿಜಕ್ಕೂ ಏನೋ ತಪ್ಪಿದೆ ಎಂದು ತಾನು ಭಾವಿಸಿರುವುದಾಗಿ ಬುಧವಾರ ಹೇಳಿದೆ.
‘ಕ್ಷುಲ್ಲಕ ಭೂರಾಜಕೀಯ ಹಿತಾಸಕ್ತಿಗಳಿಗಾಗಿ ವಿಶ್ವಾದ್ಯಂತ ದೇಶಗಳು ಮತ್ತು ವಿಶ್ವಸಂಸ್ಥೆ ನಿಷೇಧಿಸಿರುವ ಸ್ಥಾಪಿತ ಭಯೋತ್ಪಾದಕರನ್ನು ತಲುಪಲು ನಮಗೆ ಸಾಧ್ಯವಾಗದಿದ್ದರೆ ಭಯೋತ್ಪಾದನೆಯ ಸವಾಲಿನ ವಿರುದ್ಧ ಪ್ರಾಮಾಣಿಕವಾಗಿ ಹೋರಾಡಲು ರಾಜಕೀಯ ಇಚ್ಛೆಯನ್ನು ನಾವು ನಿಜಕ್ಕೂ ಹೊಂದಿಲ್ಲ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ ಗುಪ್ತಾ ಹೇಳಿದರು. ಅವರು ಬುಧವಾರ ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ನಿಗ್ರಹ ಕುರಿತು ಉನ್ನತ ಮಟ್ಟದ ಸಮ್ಮೇಳನದ ಅಧಿವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಿರ್ 2008ರ ಮುಂಬೈ ಭಯೋತ್ಪಾದಕ ದಾಳಿಗಳ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿದ್ದಾನೆ.
ಅಮೆರಿಕವು ಮಿರ್ ತಲೆಗೆ ಐದು ಮಿ.ಡಾ.(ಸುಮಾರು41 ಕೋ.ರೂ.)ಗಳ ಬಹುಮಾನವನ್ನು ಘೋಷಿಸಿದೆ. 2022,ಜೂನ್ ನಲ್ಲಿ ಪಾಕಿಸ್ತಾನದ ನ್ಯಾಯಾಲಯವೊಂದು ಆತನಿಗೆ 15 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಖಾಯಿದಾ ನಿರ್ಬಂಧಗಳ ಸಮಿತಿಯಡಿ ಮಿರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಕಪ್ಪುಪಟ್ಟಿಗೆ ಸೇರಿಸುವಂತೆ ಮತ್ತು ಆತನ ಆಸ್ತಿಗಳ ಸ್ಥಗಿತ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿಷೇಧಕ್ಕೆ ಒಳಪಡಿಸುವಂತೆ ಭಾರತ ಮತ್ತು ಅಮೆರಿಕ ಪ್ರಸ್ತಾವವನ್ನು ಮಂಡಿಸಿದ್ದವು. ಚೀನಾ ಮಂಗಳವಾರ ಈ ಪ್ರಸ್ತಾವಕ್ಕೆ ತಡೆಯೊಡ್ಡಿದೆ.
ಮುಂಬೈ ಭಯೋತ್ಪಾದಕ ದಾಳಿಗಳ 15 ವರ್ಷಗಳ ನಂತರವೂ ರೂವಾರಿಗಳನ್ನು ನ್ಯಾಯದ ಕಟಕಟೆಗೆ ತರಲಾಗಿಲ್ಲ ಮತ್ತು ಅವರಲ್ಲಿ ಕೆಲವರು ಸಂಪೂರ್ಣ ಸರಕಾರಿ ಆತಿಥ್ಯದೊಂದಿಗೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಗುಪ್ತಾ ಬುಧವಾರ ಹೇಳಿದರು.
ಕಳೆದ ವರ್ಷ ಲಷ್ಕರೆ ತಯ್ಯಿಬಾದ ಮುಖ್ಯಸ್ಥ ಹಫೀಝ್ ಸಯೀದ್ ಪುತ್ರ ತಲ್ಹಾ ಸಯೀದ್ ನನ್ನು ಭಯೋತ್ಪಾದಕ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೂ ಚೀನಾ ಕಲ್ಲುಹಾಕಿತ್ತು.







