ವೈವಾಹಿಕ ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ನಡೆಯಿಂದ ಅಸಮಾಧಾನ: ನ್ಯಾಯಾಧೀಶರ ಕಾರಿಗೆ ಹಾನಿಯೆಸಗಿದ ವ್ಯಕ್ತಿ
ಪಟ್ಟಣಂತಿಟ್ಟ: ತನ್ನ ಹಾಗೂ ತನ್ನ ಪತ್ನಿಯ ನಡುವಿನ ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ನ್ಯಾಯಾಲಯದ ನಡೆಯಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಇಲ್ಲಿನ ತಿರುವಲ್ಲ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಲಾಗಿದ್ದ ಕುಟುಂಬ ನ್ಯಾಯಾಲಯದ ನ್ಯಾಯಾಧೀಶರ ವಾಹನಕ್ಕೆ ಹಾನಿಯೆಸಗಿದ ಘಟನೆ ಜೂನ್ 21, ಬುಧವಾರ ವರದಿಯಾಗಿದೆ.
ಸುಮಾರು 55 ವರ್ಷದ ವ್ಯಕ್ತಿ ನ್ಯಾಯಾಲಯದಿಂದ ಹೊರಗೆ ಬರುತ್ತಲೇ ಸಿಟ್ಟಿನಿಂದ ನ್ಯಾಯಾಧೀಶರ ಕಾರಿಗೆ ಹಾನಿಯೆಸಗಿ ಅದ ಗಾಜುಗಳನ್ನು ಒಡೆದುಹಾಕಿದ್ದಾನಲ್ಲದೆ ಕಾರಿಗೆ ಗುದ್ದಿ ಹಾನಿಯೆಸಗಿದ್ದಾನೆ.
ಆರೋಪಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ನ್ಯಾಯಾಲಯದ ಕಲಾಪಕ್ಕೆ ಆಡ್ಡಿ, ಬೆದರಿಕೆ ಹಾಗೂ ಸಾರ್ವಜನಿಕ ಆಸ್ತಿ ಹಾನಿಗೈದಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ.
ತನ್ನ ಪರವಾಗಿ ತಾನೇ ವಾದ ಮಂಡನೆ ಮಾಡುತ್ತಿರುವ ಆರೋಪಿಯು ತನಗೆ ನ್ಯಾಯಾಲಯದಿಂದ ನ್ಯಾಯ ದೊರಕುತ್ತಿಲ್ಲ ಹಾಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ತನ್ನ ಪತ್ನಿ ಎಂದು ಹೇಳಿಕೊಂಡಿದ್ದಾನೆ.
ಪತ್ನಿ ಮತ್ತು ನ್ಯಾಯಾಧೀಶರು ಜೊತೆಗೂಡಿ ತನ್ನ ವಾದವನ್ನು ಆಲಿಸುತ್ತಿಲ್ಲ ಎಂದೂ ಆತ ಆರೋಪಿಸುತ್ತಿದ್ದಾನೆ.
ದಂಪತಿಯ ನಡುವಿನ ವಿವಾದವನ್ನು 2017ರಲ್ಲಿ ಪಟ್ಟಣಂತಿಟ್ಟ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆದರೆ ಈ ನ್ಯಾಯಾಲಯದ ಮೇಲೆ ತನಗೆ ನಂಬಿಕೆ ಇಲ್ಲ ಎಂದು ಹೇಳಿಕೊಂಡು ಆ ವ್ಯಕ್ತಿ ಹೈಕೋರ್ಟ್ ಕದ ತಟ್ಟಿದ್ದ.
ಈ ವರ್ಷ ಪ್ರಕರಣವನ್ನು ಕುಟುಂಬ ನ್ಯಾಯಾಲಯಕ್ಕೆ ವಹಿಸಲಾಗಿತ್ತು.