ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ ರೈಲು ದುರಂತ: ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂಘಮಿತ್ರಾ ಎಕ್ಸ್ಪ್ರೆಸ್
![ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ ರೈಲು ದುರಂತ: ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂಘಮಿತ್ರಾ ಎಕ್ಸ್ಪ್ರೆಸ್ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ ರೈಲು ದುರಂತ: ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂಘಮಿತ್ರಾ ಎಕ್ಸ್ಪ್ರೆಸ್](https://www.varthabharati.in/sites/default/files/images/articles/2023/06/22/381915-1687453832.jpeg)
ಹೊಸದಿಲ್ಲಿ: ಒಡಿಶಾ ರೈಲು ದುರಂತದಲ್ಲಿ 280ಕ್ಕೂ ಅಧಿಕ ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡ ಧಾರುಣ ಘಟನೆಯ ನೆನಪು ಮಾಸುವ ಮುನ್ನವೇ ಆಂಧ್ರಪ್ರದೇಶದ ಬಾಪಾಟ್ಲಾದಲ್ಲಿ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದಾಗಿ ಸಂಭಾವ್ಯ ರೈಲು ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಚಿರಾಲಾ ಪಟ್ಟಣ ಸಮೀಪದ ಇಪುರುಪಾಲೇಮ್ ಗ್ರಾಮದಲ್ಲಿ ರೈಲು ಹಳಿಗಳು ತುಂಡಾಗಿರುವುದನ್ನು ಸ್ಥಳೀಯರು ಗುರುವಾರ ಬೆಳಗ್ಗೆ ಗಮನಿಸಿದ್ದು, ತಕ್ಷಣವೇ ಅವರು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಯಾವುದೇ ವಿಳಂಬ ಮಾಡದೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು, ಹಳಿಗಳ ತಪಾಸಣೆ ನಡೆಸಿದರು. ಆನಂತರ ಆ ಮಾರ್ಗವಾಗಿ ಬಿಹಾರದ ದಾನಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಸಂಘಮಿತ್ರಾ ಎಕ್ಸ್ಪ್ರೆಸ್ ಬರುತ್ತಿತ್ತು. ಕೂಡಲೇ ರೈಲ್ವೆ ಅಧಿಕಾರಿಗಳು ಸುಮಾರು 40 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಿದರು ಹಾಗೂ ಹಳಿಯನ್ನು ಸರಿಪಡಿಸಿದ ಬಳಿಕವಷ್ಟೇ ರೈಲು ಮಾರ್ಗವನ್ನು ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
Next Story