ಉಪ್ಪಿನಂಗಡಿ:ಹೆರಿಗೆ ವೇಳೆ ತಾಯಿ ಮೃತಪಟ್ಟ ಬೆನ್ನಲ್ಲೇ ಹಸುಗೂಸು ಮೃತ್ಯು

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ. 20ರಂದು ರಾತ್ರಿ ಹೆರಿಗೆ ಸಂದರ್ಭ ರಕ್ತಸ್ರಾವದಿಂದ ಸಾವನ್ನಪ್ಪಿದ ಬೆನ್ನಿಗೆ ಅವರ ಹಸುಕೂಸು ಗುರುವಾರ ಮುಂಜಾನೆ ಮೃತಪಟ್ಟಿದೆ.
ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾಗುತ್ತಲೇ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದರು. ಜನಿಸಿದ ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮಗುವೂ ಮೃತಪಟ್ಟಿದೆ ಎನ್ನಲಾಗಿದೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಆರೋಪ: ಜಿಲ್ಲಾಧಿಕಾರಿಗೆ ದೂರು
ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿರುವ ಮೃತರ ಗಂಡ ಬಾಲಕೃಷ್ಣ ಗೌಡ ರವರು, ಜೂ.20ರಂದು ಮಂಗಳವಾರ ಸಂಜೆ 6:30ರ ಸುಮಾರಿಗೆ ತನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ನೋವಿನಿಂದ ಒದ್ದಾಡುತ್ತಿದ್ದರೂ ಆಕೆಯ ದೈಹಿಕ ಆರೋಗ್ಯ ಸ್ಥಿತಿಯ ಬಗ್ಗೆಯಾಗಲಿ, ಸಹಜ ಹೆರಿಗೆಯ ಸಾಧ್ಯತೆ ಬಗ್ಗೆಯಾಗಲಿ ಯಾವುದೇ ಪರೀಕ್ಷೆಗಳನ್ನು ನಡೆಸದೆ ನೋವಿನಲ್ಲೇ ನರಳುವಂತೆ ಮಾಡಿದ್ದರು. ಆಕೆ ಅತೀವ ನೋವಿನೊಂದಿಗೆ ಒದ್ದಾಡುತ್ತಿದ್ದರೂ ವೈದ್ಯರನ್ನು ಕರೆಸುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರಯತ್ನ ನಡೆಸಲಿಲ್ಲ ಹಾಗೂ ತಜ್ಞ ವೈದ್ಯರನ್ನು ಕರೆಸುವ ಅಥವಾ ಅವರ ಸಲಹೆ ಕೇಳುವ ಯಾವುದೇ ಪ್ರಯತ್ನವನ್ನು ಮಾಡದೆ ಗರ್ಭಿಣಿಯ ದೈಹಿಕ ಧಾರಣಾ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಒತ್ತಡ ತಂತ್ರವನ್ನು ಅನುಸರಿಸಿ ಅವಳ ಹೆರಿಗೆ ಮಾಡಲಾಗಿದೆ. ಪರಿಣತ ವೈದ್ಯರ ಅನುಪಸ್ಥಿತಿಯಲ್ಲಿ ಗರ್ಭಿಣಿಯ ಹೊಟ್ಟೆಗೆ ಅವೈಜ್ಞಾನಿಕ ಒತ್ತಡವನ್ನು ಹಾಕಿ ರಾತ್ರಿ ಸುಮಾರು 8:30 ರ ಸುಮಾರಿಗೆ ಬಲವಂತಿಕೆಯ ಹೆರಿಗೆಯಾಗುವಂತೆ ಮಾಡಿರುವುದರಿಂದ ತನ್ನ ಪತ್ನಿ ಹಾಗೂ ಹಸುಕೂಸು ಸಾವನ್ನಪ್ಪಲು ಆಸ್ಪತ್ರೆಯ ಸಿಬ್ಬಂದಿ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ದೂರು ಸ್ವೀಕರಿಸಿರುವ ಜಿಲ್ಲಾಧಿಕಾರಿಯವರು ಭರವಸೆ ನೀಡಿದ್ದಾರೆ.