ರೋಗ ಮತ್ತು ರೋಗಿ
-

''ಮೌಢ್ಯಾಚರಣೆಯಲ್ಲಿ ತೊಡಗಿರುವ ಆ ಜನರಿಗೆ ಎಷ್ಟು ಬೈದರೂ ಬುದ್ಧಿ ಹೇಳಿದರೂ ಅವರು ತಿದ್ದುಕೊಳ್ಳುವುದೇ ಇಲ್ಲ'' ಎಂದು ವೈಚಾರಿಕ ಮಿತ್ರನೊಬ್ಬ ಅಲವತ್ತುಕೊಳ್ಳುತ್ತಿದ್ದ. ಅರೆ! ಅವರೇಕೆ ನೀನು ಬೈದ ತಕ್ಷಣ 'ಆಯ್ತು' ಎಂದು ಒಪ್ಪಿಕೊಂಡು ನೀನು ಹೇಳಿದಂತೆ ಕೇಳಬೇಕು? ನೀನು ಅವರನ್ನು ಖಂಡಿಸುತ್ತೀಯೆ. ಜರಿಯುತ್ತೀಯೇ. ನಿನ್ನ ಅರಿವು ಮತ್ತು ಅನುಭವ ಅವರದ್ದಕ್ಕಿಂತ ದೊಡ್ಡದು ಎನ್ನುತ್ತೀಯ. ಅದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತೀಯೆ. ಅವರು ಅವರ ಅರಿವು ಮತ್ತು ಅನುಭವವನ್ನು ನಿನ್ನದಕ್ಕೆ ಶರಣಾಗಿಸಬೇಕೆಂದು ಬಯಸುತ್ತೀಯೆ. ಅವರೇಕೆ ನಿನ್ನ ಮಾತನ್ನು ಕೇಳಬೇಕು? ಇಲ್ಲೇ ಸಮಸ್ಯೆ ಇರುವುದು. ಅವರು ಅಂಧಶ್ರದ್ಧೆಯಲ್ಲಿದ್ದರೆ, ಮೌಢ್ಯಾಚರಣೆಯಲ್ಲಿ ತೊಡಗಿದ್ದರೆ ಅದು ಅವರ ಸಮಸ್ಯೆ ಅಲ್ಲ. ಅವರ ಸುಪ್ತಮನಸ್ಸಿನಾಳದಲ್ಲಿ ಸ್ಥಾಪಿಸಲ್ಪಟ್ಟಿದೆ. ಅವರ ಮನಸ್ಥಿತಿ ಹಾಗೆ ನಿರ್ಮಾಣವಾಗಿದೆ. ಎಷ್ಟೋ ಕಾಲದಿಂದ ನೀರೆರೆದು ಬೇರುಬಿಟ್ಟು ಅಂತರಾಳದ ಆಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ಅಳಿಯುವ ಭಯ ಮತ್ತು ಉಳಿಯುವ ಆಸೆ ಸಹಜ. ಈ ಆಸೆ ಮತ್ತು ಭಯಗಳೇ ಎಲ್ಲಾ ಶ್ರದ್ಧಾನಂಬಿಕೆಗಳ ತಾಯಿ ತಂದೆ. ಹಾಗಿರುವಾಗ ಮೌಢ್ಯದಿಂದ ಹೊರಗೆ ತರಬೇಕೆಂದರೆ, ಮೊದಲು ಅವರನ್ನು ಪ್ರೀತಿಸಬೇಕು. ಅವರಿಗೆ ಮನವರಿಕೆಯಾಗುವ ಹಾಗೆ ನಮ್ಮ ವರ್ತನೆಗಳು ಅವರ ಮುಂದೆ ಪ್ರದರ್ಶಿತವಾಗಬೇಕು.
ಕೊರೋನ ಕಾಲದಲ್ಲಿ ಕೇಳಿದ ಅತ್ಯುತ್ತಮ ಘೋಷವಾಕ್ಯವಿದು. ''ನಾವು ರೋಗದ ವಿರುದ್ಧ ಹೋರಾಡಬೇಕೇ ಹೊರತು ರೋಗಿಯ ವಿರುದ್ಧ ಅಲ್ಲ.'' ಹೌದು, ಮೌಢ್ಯಾಚರಣೆಯಾಗಲಿ, ಧರ್ಮಾಂಧತೆಯಾಗಲಿ, ಮತ್ತೊಂದು ಮಗದೊಂದು ಯಾವುದೇ ಆಗಲಿ ಅದು ಪಕ್ಕಾ ಮಾನಸಿಕ ಸಮಸ್ಯೆ. ಆರ್ಭಟಿಸುತ್ತಾ, ಟೀಕಿಸುತ್ತಾ, ಹೀಯಾಳಿಸುತ್ತಾ, ಅಪಹಾಸ್ಯ ಮಾಡುತ್ತಾ ಹೋದಷ್ಟೂ ಅವರ ಅಹಮಿಗೆ ಪೆಟ್ಟಾಗುತ್ತದೆ. ಹಟ ಹೆಚ್ಚಾಗುತ್ತದೆ. ಅಪಮಾನಕ್ಕೆ ಒಳಗಾದಷ್ಟೂ, ಹೀಯಾಳಿಕೆಗೆ ಬಲಿಯಾದಷ್ಟೂ ತಮ್ಮನ್ನು, ವಿರೋಧಕ್ಕೊಳಗಾಗುವ ತಮ್ಮ ಕೆಲಸಗಳನ್ನು ಹಟದಿಂದ ಮತ್ತು ಬಲವಂತದಿಂದ ಮುಂದಿಡುತ್ತಾ ಹೋಗುತ್ತಾರೆ. ''ಅದೆಷ್ಟು ಒಳ್ಳೆಯ ಮಾತು ಹೇಳಿದರೂ ಕಿವಿಗೇ ಹೋಗಲ್ಲ'' ಎಂದು ಅಮ್ಮ ಮಗನ ಬಗ್ಗೆ, ಹೆಂಡತಿ ಗಂಡನ ಬಗ್ಗೆ, ಸ್ನೇಹಿತರು ಪರಸ್ಪರರಿಗೆ ಹೇಳಿಕೊಳ್ಳುವುದರಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಹೇಳುವಾಗ, ಅದರಲ್ಲೂ ಒಳ್ಳೆಯ ಮಾತು ಅಂತ ಹೇಳುವಾಗ ಅರ್ಥಾತ್ ಬೋಧನೆಯನ್ನು ಮಾಡುವಾಗ ಮಾನಸಿಕವಾಗಿಯೂ, ಭಾವನಾತ್ಮಕವಾಗಿಯೂ ಮೇಲರಿಮೆಯನ್ನು ಹೊಂದಿರುತ್ತಾರೆ. ಹಾಗೆಯೇ ಕೇಳುವವನ ಸ್ಥಾನದಲ್ಲಿ ನಿಲ್ಲದೆ ಒಂದು ಕಾಲ್ಪನಿಕ ಉನ್ನತ ಪೀಠಾರೋಹಣ ಮಾಡಿರುತ್ತಾರೆ. ವಿಷಯ ಇಷ್ಟೇ. ವ್ಯಕ್ತಿಗಳು ಖಂಡನೆಗೆ ಒಳಗಾಗಲು ಇಷ್ಟಪಡುವುದಿಲ್ಲ. ಯಾರೋ ಒಬ್ಬರು ಅಧಿಕಾರಯುತವಾಗಿ ತಮಗಿಂತ ಮೇಲೆ ಇದ್ದು ತಮ್ಮನ್ನು ಹತೋಟಿಗೆ ತೆಗೆದುಕೊಳ್ಳುವುದನ್ನು ಸಹಿಸುವುದಿಲ್ಲ. ತಮಗೂ ಮತ್ತು ಅವರಿಗೂ ಒಂದು ದೊಡ್ಡ ಅಂತರವು ನಿರ್ಮಾಣವಾಗಿ, ಅದರಲ್ಲಿ ಅವರು ಮೇಲೆ ತಾವು ಕೆಳಗೆ ಇರುವುದನ್ನು ಇಷ್ಟಪಡುವುದಿಲ್ಲ. ಇದು ಒಂದು ಸಾಧಾರಣ ಮನಸ್ಸಿನ ಸ್ಥಿತಿ. ಜಗತ್ತಿನಲ್ಲಿ ಯಾವ ಮಗುವೂ ಬೋಧನೆಗಳನ್ನು ಸ್ವೀಕರಿಸುವುದಿಲ್ಲ. ಅದು ತನ್ನ ಜೊತೆಗೆ ಇರುವ ಜೀವಂತ ಮಾದರಿಗಳನ್ನು ಅನುಕರಿಸುತ್ತದೆ, ಉದಾಹರಣೆಗಳನ್ನು ಸ್ವೀಕರಿಸುತ್ತದೆ, ನಿರಂತರವಾಗಿ ಆಗುವ ಪ್ರಭಾವಗಳಿಗೆ ಒಳಗಾಗುತ್ತದೆ. ಅಂತಹುದರಲ್ಲಿ ಈಗಾಗಲೇ ರೂಪುಗೊಂಡಿರುವ ವ್ಯಕ್ತಿತ್ವದ ವ್ಯಕ್ತಿಗಳು ಯಾಕಾಗಿ ಯಾರಾದರೂ ಮಾತುಗಳನ್ನು ಕೇಳುವರು? ನಮ್ಮ ದೇಶದಲ್ಲಿ ಗುರುಗಳನ್ನು ದೈವತ್ವಕ್ಕೇರಿಸಿ ಪರಬ್ರಹ್ಮನ ಪಟ್ಟ ಬೇರೆ ಕೊಟ್ಟುಬಿಟ್ಟಿದ್ದಾರೆ. ಅದೇ ಗುಂಗಿನಲ್ಲಿ ಬಹಳಷ್ಟು ಜನ ಶಿಕ್ಷಕರೂ ತೇಲಾಡುವರು. ಆಕಾಶದಲ್ಲಿ ತೇಲಾಡುವ ಮೋಡದ ಮೇಲೆ ಕುಳಿತಿರುವ ಗುರುಗಳು ಭೂಮಿಯ ಮೇಲೆ ತೆವಳುತ್ತಿರುವ ಶಿಷ್ಯನ ಕಡೆ ನೋಡುವರು. ಅದೇ ಸಮಸ್ಯೆ. ಈ ಭೂಮ್ಯಾಕಾಶದಷ್ಟು ಅಂತರ ಸೃಷ್ಟಿಯಾದಾಗ ವ್ಯಕ್ತಿ ಮತ್ತು ವ್ಯಕ್ತಿಯ ನಡುವೆ ಸಾವಯವ ಸಂಬಂಧವೇ ಇಲ್ಲವಾಗಿ ಮಾನುಷ ಸ್ಪರ್ಶದ ಕೊರತೆ ಅಲ್ಲಿ ಕಾಣುತ್ತದೆ. ಮನಸ್ಸಿಗೆ ಬೇಕಾಗಿರುವುದೇ ಭಾವುಕವಾದಂತಹ ಮಾನುಷ ಸ್ಪರ್ಶ. ಇದರೊಂದರಿಂದಲೇ ನೀವು ಬೊಟ್ಟು ಮಾಡುವ ವ್ಯಕ್ತಿಯಲ್ಲಿ ಬದಲಾವಣೆ ಸಾಧ್ಯ. ನೀವು ಬೊಟ್ಟು ಮಾಡಿದರೆ ಆತನ ಅಥವಾ ಆಕೆಯ ಸ್ವಾಭಿಮಾನಕ್ಕೆ ಪೆಟ್ಟಾಗುತ್ತದೆ. ಅದು ಸ್ವಾಭಿಮಾನವೋ, ಸ್ವಾಭಿಮಾನದ ಭಾವದಲ್ಲಿರುವ ಅಹಂಕಾರವೋ; ಅದು ಎರಡನೇ ವಿಷಯ. ಆದರೆ ವ್ಯಕ್ತಿಯ ತನ್ನತನಕ್ಕೆ ಧಕ್ಕೆ ಬರುತ್ತದೆ. ಆದರೆ, ಅದೇ ವ್ಯಕ್ತಿಗೆ ತನ್ನಲ್ಲಿ ಇಂತಹ ದೋಷವಿದೆ ಎಂದು ಮನವರಿಕೆಯಾದರೆ ಒಂದು ಹಂತಕ್ಕೆ ತಿದ್ದಿಕೊಳ್ಳಲು ಪ್ರಯತ್ನ ಮಾಡುವರು. ಅದರಲ್ಲಿ ಯಶಸ್ಸಾಗುವುದೋ, ಪರಾಜಯವಾಗುವುದೋ, ಅದು ಎರಡನೆಯ ಮಾತು. ಆದರೆ ಪ್ರಯತ್ನವಂತೂ ಆಗುವುದು. ವ್ಯಕ್ತಿಯೊಬ್ಬನ ಮಾತುಗಳಿಂದ, ಅವನ ಒಂದೆರಡು ಕೃತ್ಯಗಳಿಂದ ಆತನ ಇಡೀ ಜೀವನವನ್ನೇ ತೀರ್ಪುಗೀಡು ಮಾಡುವಂತಹ ಅತಿರೇಕಕ್ಕೆ ಎಂದಿಗೂ ಹೋಗಬಾರದು. ವ್ಯಕ್ತಿಯನ್ನು ಖಂಡಿಸಲೇಬಾರದು. ವ್ಯಕ್ತಿಯ ತಪ್ಪನ್ನು ವಿರೋಧಿಸಬೇಕು. ವಿರೋಧಿಸುವುದಕ್ಕೂ ದ್ವೇಷಿಸುವುದಕ್ಕೂ ವ್ಯತ್ಯಾಸವನ್ನು ಸ್ಪಷ್ಟವಾಗಿ ನಮ್ಮ ಮಾತಿನಲ್ಲಿ, ನಡವಳಿಕೆಯಲ್ಲಿ ತೋರಬೇಕು. ಮಗುವಾಗಲಿ, ದೊಡ್ಡವರಾಗಲಿ ಅವರ ತಪ್ಪನ್ನು ವಿರೋಧಿಸುವಾಗ, ಕೃತ್ಯವನ್ನು ಖಂಡಿಸುವಾಗ ಅವರ ಆತ್ಮಾಭಿಮಾನಕ್ಕೆ ಪೆಟ್ಟು ಬೀಳದಂತೆ ಗೌರವಯುತವಾಗಿಯೇ ವರ್ತಿಸಬೇಕು. ಅವರು ತಪ್ಪುಮಾಡಿದ್ದಾರೆ ಎಂದಾಕ್ಷಣ, ಅವರು ಯಾವುದೋ ವ್ಯಸನಕ್ಕೀಡಾಗಿದ್ದಾರೆ ಎಂದಾಕ್ಷಣ ಹಗುರವಾಗಿ ಮಾತಾಡುವುದು, ಮರ್ಯಾದೆ ಇಲ್ಲದ ಪದಗಳನ್ನು ಬಳಸುವುದು, ಇವರು ಹೀಗೇ ಎಂಬ ಹಣೆಪಟ್ಟಿ ಹಚ್ಚಿ, ಅದನ್ನು ಪದೇ ಪದೇ ಹೇಳುತ್ತಾ, ಅದನ್ನು ಇತರರಲ್ಲೂ ಹಂಚಿಕೊಳ್ಳುತ್ತಾ ತಾವು ಬೊಟ್ಟು ಮಾಡುತ್ತಿರುವ ವ್ಯಕ್ತಿಯನ್ನು ತಾವು ದೂರುವಂತಹ ಗಟ್ಟಿ ಪ್ರತಿಮೆಯನ್ನಾಗಿಸುವುದು ಖಂಡಿತ ಸಲ್ಲದು. ಇಷ್ಟೇ ವಿಷಯ. ಬೊಟ್ಟು ಮಾಡಬಾರದು. ಅವರಿಗೇ ಅನಿಸಬೇಕು. ಮಾನಸಿಕವಾಗಿ ಅವರಿಗೆ ಕೀಳರಿಮೆ ಉಂಟಾಗುವಂತೆ ನಡೆದುಕೊಳ್ಳುತ್ತಿದ್ದಷ್ಟು ಅವರು ನಿಮಗೆ ವಿಮುಖರಾಗುತ್ತಾ ಹೋಗುತ್ತಾರೆ, ಅಷ್ಟೇ. ರೋಗಿಯನ್ನು ಉಪಚರಿಸುವ ವೈದ್ಯ ರೋಗ ನಿವಾರಣೆಗೆ ಯತ್ನಿಸಬೇಕು. ರೋಗಿಯೊಂದಿಗೆ ಜಗಳವಾಡಬಾರದು ಅಲ್ಲವೇ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.