ಕೇಶವಾನಂದ ಭಾರತಿ ಪ್ರಕರಣ, ಸಂವಿಧಾನದ ಮೂಲ ಸ್ವರೂಪ ಮತ್ತು ಬಿಜೆಪಿಯ ಬೂಟಾಟಿಕೆ
-

ಸಂಸತ್ತು ಸಾರ್ವಭೌಮವೋ? ಅಥವಾ ಸುಪ್ರೀಂ ಕೋರ್ಟಿಗೆ ಪರಮಾಧಿಕಾರವೋ? ಎಂಬ ಪ್ರಶ್ನೆಗೆ ಸರಳ ಉತ್ತರವಿಲ್ಲ. ಇದು ಸ್ವಾತಂತ್ರ್ಯೋತ್ತರದಲ್ಲಿ ಸಂಸತ್ತು ಮತ್ತು ಸುಪ್ರೀಂ ಕೋರ್ಟಿನ ನಡುವೆ ನಡೆದುಕೊಂಡು ಬಂದ ಸಂಘರ್ಷವನ್ನು ನೋಡಿದರೆ ಅರ್ಥವಾಗುತ್ತದೆ ಹಾಗೂ ಈ ಸಂಘರ್ಷಕ್ಕೆ 1973ರ ಕೇಶವಾನಂದ ಭಾರತಿ ಪ್ರಕರಣ ಮತ್ತು ಅದು ಮುಂದಿಟ್ಟ ''ಸಂವಿಧಾನದ ಮೂಲ ಸ್ವರೂಪವನ್ನು ತಿದ್ದುಪಡಿ ಮಾಡುವಂತಿಲ್ಲ'' ಎಂಬ ಸಿದ್ಧಾಂತ ಸಂಸತ್ತು ಮತ್ತು ಸುಪ್ರೀಂ ಕೋರ್ಟ್ಗಳ ಪರಮಾಧಿಕಾರದ ನಡುವೆ ಒಂದು ಸಮತೋಲನವನ್ನು ಸಾಧಿಸಿತ್ತು. ಈಗ ಅದರ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ.
ಭಾಗ-1
ನ್ಯಾಯಾಂಗದ ಮೇಲೆ ನಿರಂತರ ದಾಳಿ ನಡೆಸಲು ಬಿಜೆಪಿ ಮತ್ತು ಆರೆಸ್ಸೆಸ್ಗಳಿಂದ ಸುಪಾರಿ ತೆಗೆದುಕೊಂಡು ಉಪರಾಷ್ಟ್ರಪತಿಯಾಗಿರುವಂತೆ ತೋರುವ ಜಗದೀಪ್ ಧನ್ಕರ್ ಅವರು ಸುಪ್ರೀಂ ಕೋರ್ಟಿನ ಮೇಲೆ ಹೊಸ ಸುತ್ತಿನ ದಾಳಿ ಪ್ರಾರಂಭಿಸಿದ್ದಾರೆ. ಈ ಬಾರಿ ಅವರು ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ದೀರ್ಘ ಸಂಘರ್ಷ ನಡೆದು ಸಂಸತ್ತು ಹಾಗೂ ಸುಪ್ರೀಂ ಕೋರ್ಟ್ಗಳ ಪರಮಾಧಿಕಾರ ಹಾಗೂ ವ್ಯಾಪ್ತಿಗಳ ಬಗ್ಗೆ ಬಗೆಹರಿದಿದ್ದ ವಿವಾದವನ್ನು ಮತ್ತೆ ಕೆದಕಿದ್ದಾರೆ. ಹಳೆಯ ವಿಷಯವನ್ನು ಬದಲಾದ ಸಂದರ್ಭಕ್ಕೆ ಅನುಗುಣವಾಗಿ ಪರಿಶೀಲಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅದರ ಉದ್ದೇಶ ಪ್ರಜಾತಂತ್ರವನ್ನು ಇನ್ನಷ್ಟು ಬಲಗೊಳಿಸುವುದಾಗಿರಬೇಕು. ಆದರೆ ಉಪರಾಷ್ಟ್ರಪತಿಗಳ ಅಥವಾ ಬಿಜೆಪಿ ಸರಕಾರದ ಉದ್ದೇಶವು ಪ್ರಜಾತಂತ್ರವನ್ನು ಬಲಗೊಳಿಸುವುದಕ್ಕಿಂತ ಸರಕಾರದ ಸರ್ವಾಧಿಕಾರಕ್ಕೆ ಅಡೆತಡೆಯೊಡ್ಡುವ ಸುಪ್ರೀಂ ಕೋರ್ಟಿನ ಅಧಿಕಾರಕ್ಕೆ ಅಂಕುಶ ಹಾಕುವುದೇ ಆಗಿದೆ ಎಂದು ಪದೇಪದೇ ರುಜುವಾತಾಗಿದೆ. ನಿನ್ನೆ ಕಾನೂನು ಮಂತ್ರಿ ರಿಜಿಜು ಅವರು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂನಲ್ಲಿ ಸರಕಾರದ ಪ್ರತಿನಿಧಿ ಇರಬೇಕು ಎಂದು ಪತ್ರ ಬರೆದಿರುವುದು ಅದಕ್ಕೆ ಮತ್ತೊಂದು ನಿದರ್ಶನ. ಹೀಗಾಗಿ ಉಪರಾಷ್ಟ್ರಪತಿಯವರು ಸುಪ್ರೀಂ ಕೋರ್ಟಿನ ಮೇಲೆ ನಡೆಸಿರುವ ದಾಳಿ ಸಾಂವಿಧಾನಿಕ ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಆರೆಸ್ಸೆಸ್-ಬಿಜೆಪಿಯ ಕುತಂತ್ರದ ಭಾಗ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಈ ಬಾರಿ ಉಪರಾಷ್ಟ್ರಪತಿ ಧನ್ಕರ್ ಅವರು ಸಂಸತ್ತಿನ ಸಂವಿಧಾನ ತಿದ್ದುಪಡಿಯ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ 1973ರಲ್ಲಿ ಪ್ರಸಿದ್ಧ ಕೇಶವಾನಂದ ಭಾರತಿ ಪ್ರಕರಣದಲ್ಲಿ ಹೇರಿರುವ ಮಿತಿಗಳನ್ನು ದಾಳಿಗೆ ಗುರಿಯಾಗಿಸಿಕೊಂಡಿದ್ದಾರೆ. 1973ರ ಎಪ್ರಿಲ್ 24ರಂದು ಸುಪ್ರೀಂಕೋರ್ಟಿನ 13 ನ್ಯಾಯಾಧೀಶರ ಪೀಠವು ನೀಡಿದ ಈ ಐತಿಹಾಸಿಕ ತೀರ್ಪಿನಲ್ಲಿ ಏಳು ಜನ ನ್ಯಾಯಾಧೀಶರು ಸಂಸತ್ತು ಸಂವಿಧಾನದ ಯಾವ ವಿಧಿಯನ್ನು ಬೇಕಾದರೂ ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿದ್ದರೂ ಸಂವಿಧಾನದ ಮೂಲ ಸ್ವರೂಪವನ್ನೇ ಬದಲಿಸುವಂತಹ ಬದಲಾವಣೆಯನ್ನು ಮಾಡುವಂತಿಲ್ಲ ಎಂದು ಬಹುಮತದ ತೀರ್ಪನ್ನು ನೀಡಿದ್ದರು. ಈವರೆಗೆ ಪಕ್ಷವೊಂದು ಪ್ರಚಂಡ ಬಹುಮತ ಪಡೆದು ಸಾಂವಿಧಾನಿಕವಾಗಿಯೇ ಫ್ಯಾಶಿಸ್ಟ್ ಸರಕಾರವೊಂದನ್ನು ಜಾರಿಗೆ ತರದಂತೆ ತಡೆಯುವಲ್ಲಿ ಈ ತೀರ್ಪು ವಹಿಸಿದ ಪಾತ್ರವನ್ನು ಅರ್ಥ ಮಾಡಿಕೊಳ್ಳದೆ ಬಿಜೆಪಿ-ಆರೆಸ್ಸೆಸ್ ಈಗ ಸಂಸತ್ತಿನ ಪರಮಾಧಿಕಾರದ ಹೆಸರಿನಲ್ಲಿ ಸಂವಿಧಾನದ ಸಾರ್ವಭೌಮತೆಯ ಬಗ್ಗೆಯೇ ನಡೆಸುತ್ತಿರುವ ದಾಳಿ ಅರ್ಥವಾಗುವುದಿಲ್ಲ.
ಸಂಸತ್ತಿನ ಸಾರ್ವಭೌಮತೆ v/s ಸುಪ್ರೀಂ ಕೋರ್ಟಿನ ಪರಮಾಧಿಕಾರ
ಸ್ವಾತಂತ್ರ್ಯ ಹೋರಾಟದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕನಸನ್ನು ಜಾರಿ ಮಾಡುವ ಹೊಣೆಯನ್ನು ಹೊತ್ತು ಡಾ. ಅಂಬೇಡ್ಕರ್ ನೇತೃತ್ವದಲ್ಲಿ ''ನಾವು, ಭಾರತದ ಜನತೆ'' ಒಂದು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವಷ್ಟೆ. ಇದು ಈ ದೇಶದ ಎಲ್ಲಾ ನಾಗರಿಕರಿಗೂ ಘನತೆಯಿಂದ ಬದುಕುವ, ಸ್ವತಂತ್ರ ಅಭಿವ್ಯಕ್ತಿಯ ಹಾಗೂ ತಾರತಮ್ಯ ಮುಕ್ತ ಸಾಮಾಜಿಕ ಜೀವನದ, ಅನ್ಯಾಯದ ವಿರುದ್ಧ ಹೋರಾಡುವ ಮೂಲಭೂತ ಹಕ್ಕುಗಳನ್ನು ಒದಗಿಸುತ್ತದೆ ಹಾಗೂ ಸರಕಾರಕ್ಕೆ ಸಂಪತ್ತನ್ನು ಸಮಾನವಾಗಿ ಹಂಚುವ ಜವಾಬ್ದಾರಿಯ ಜೊತೆಗೆ ಜೀವನದ ಗುಣಮಟ್ಟವನ್ನು ಖಾತರಿಗೊಳಿಸುವ, ಜಾತಿ ವ್ಯವಸ್ಥೆ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ಕಾರಣದಿಂದಾಗಿ ಹಿಂದುಳಿಸಲ್ಪಟ್ಟ ವರ್ಗಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಅಭಿವೃದ್ಧಿಯ ಅವಕಾಶಗಳನ್ನು ಕಲ್ಪಿಸಿಕೊಡುವ ನಿರ್ದೇಶನವನ್ನು ನೀಡುತ್ತದೆ. ಇದನ್ನು ಆಗುಗೊಳಿಸಲು ಕಾಲಕಾಲಕ್ಕೆ ಶಾಸನವನ್ನು ಮಾಡುವ ಸಂಪೂರ್ಣ ಪರಮಾಧಿಕಾರವನ್ನು ಸಂಸತ್ತಿಗೆ ಹಾಗೂ ಶಾಸನ ಸಭೆಗಳಿಗೆ ನೀಡುತ್ತದೆ. ಆದರೆ ಅವುಗಳು ಸಂವಿಧಾನದ ಮಾರ್ಗದರ್ಶನಕ್ಕೆ ಅನುಸಾರವಾಗಿದೆಯೋ ಇಲ್ಲವೋ ಎಂಬ ಪರಿಶೀಲನೆ ಮಾಡುವ ಹಾಗೂ ಹಾಗಿಲ್ಲದಿದ್ದರೆ ಅಂತಹ ಶಾಸನಗಳನ್ನು ರದ್ದು ಮಾಡುವ ಅಧಿಕಾರವನ್ನು ಸಾಂವಿಧಾನಿಕ ಕೋರ್ಟ್ ಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿಗೆ ನೀಡುತ್ತದೆ. ಇದಲ್ಲದೆ ಕಾಲದ ಅಗತ್ಯಕ್ಕೆ ಅನುಗುಣವಾಗಿ ಸಂವಿಧಾನದ ಮೂಲೋದ್ದೇಶಗಳಾದ ಸಮಾನತೆ ಮತ್ತು ಭ್ರಾತೃತ್ವವನ್ನು ಸಾಧಿಸುವ ಸಲುವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನೂ ಸಂವಿಧಾನವು ಆರ್ಟಿಕಲ್ 368ರ ಮೂಲಕ ಸಂಸತ್ತಿಗೆ ನೀಡಿದೆ.
ಆದರೆ ಸಂಸತ್ತಿನ ಈ ಸಂವಿಧಾನ ತಿದ್ದುಪಡಿ ಅಧಿಕಾರಕ್ಕೆ ಮಿತಿಯಿಲ್ಲವೇ? ಒಂದು ವೇಳೆ ಜನರಿಂದ ಬಹುಮತ ಪಡೆದು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸರಕಾರವು ತನ್ನ ಸಂಖ್ಯಾಬಲವನ್ನು ಬಳಸಿಕೊಂಡು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಆಗುವಂತಹ ತಿದ್ದುಪಡಿಗಳನ್ನು ತರಬಹುದೇ? ಆಗ ಸುಪ್ರೀಂ ಕೋರ್ಟ್ ಸಂವಿಧಾನ ತನಗೆ ಕೊಟ್ಟಿರುವ ಅಧಿಕಾರವನ್ನು ಬಳಸಿಕೊಂಡು ಅಂತಹ ತಿದ್ದುಪಡಿಗಳನ್ನು ಅಮಾನ್ಯ ಗೊಳಿಸಬೇಕಲ್ಲವೇ? ಅಥವಾ ಒಂದು ವೇಳೆ ಸಂಸತ್ತು ಮತ್ತು ಸರಕಾರಗಳೇ ಜನಪರವಾದ ಶಾಸನಗಳನ್ನು ಜಾರಿ ಮಾಡಿದರೂ ಜನರಿಂದ ಆಯ್ಕೆಯಾಗದ ಸುಪ್ರೀಂ ಕೋರ್ಟೇ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನವನ್ನು ಕೇವಲ ತಾಂತ್ರಿಕವಾಗಿ ಮಾತ್ರ ವ್ಯಾಖ್ಯಾನ ಮಾಡಿ ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ಸಂಸತ್ತಿಗೆ ತೊಡರುಗಾಲು ಹಾಕಿದರೆ ಆಗ ಸಂಸತ್ತೇನು ಮಾಡಬೇಕು? ಹೀಗಾಗಿ ಸಂಸತ್ತು ಸಾರ್ವಭೌಮವೋ? ಅಥವಾ ಸುಪ್ರೀಂ ಕೋರ್ಟಿಗೆ ಪರಮಾಧಿಕಾರವೋ? ಎಂಬ ಪ್ರಶ್ನೆಗೆ ಸರಳ ಉತ್ತರವಿಲ್ಲ. ಇದು ಸ್ವಾತಂತ್ರ್ಯೋತ್ತರದಲ್ಲಿ ಸಂಸತ್ತು ಮತ್ತು ಸುಪ್ರೀಂ ಕೋರ್ಟಿನ ನಡುವೆ ನಡೆದುಕೊಂಡು ಬಂದ ಸಂಘರ್ಷವನ್ನು ನೋಡಿದರೆ ಅರ್ಥವಾಗುತ್ತದೆ ಹಾಗೂ ಈ ಸಂಘರ್ಷಕ್ಕೆ 1973ರ ಕೇಶವಾನಂದ ಭಾರತಿ ಪ್ರಕರಣ ಮತ್ತು ಅದು ಮುಂದಿಟ್ಟ ''ಸಂವಿಧಾನದ ಮೂಲ ಸ್ವರೂಪವನ್ನು ತಿದ್ದುಪಡಿ ಮಾಡುವಂತಿಲ್ಲ'' ಎಂಬ ಸಿದ್ಧಾಂತ ಸಂಸತ್ತು ಮತ್ತು ಸುಪ್ರೀಂ ಕೋರ್ಟ್ಗಳ ಪರಮಾಧಿಕಾರದ ನಡುವೆ ಒಂದು ಸಮತೋಲನವನ್ನು ಸಾಧಿಸಿತ್ತು. ಈಗ ಅದರ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಈ ಸಮತೋಲನ ಸಿದ್ಧಾಂತ : ಅ) 1950ರ ಶಂಕರಿ ಪ್ರಸಾದ್ ಪ್ರಕರಣ ಆ) 1967ರ ಗೋಲಕ್ ನಾಥ್ ಪ್ರಕರಣ ಇ) 1973 ಕೇಶವಾನಂದ ಭಾರತಿ ಪ್ರಕರಣ ಈ) 1980ರ ಮಿನರ್ವ ಮಿಲ್ಸ್ ಪ್ರಕರಣಗಳಲ್ಲಿ.. ನಡೆದ ವಾದ-ವಿವಾದಗಳ ಮೂಲಕ ವಿಕಸನಗೊಂಡಿದೆ.
1950-1973- ಪ್ರಗತಿಪರ ಶಾಸನಗಳಿಗೆ ಅಡ್ಡಿಯಾದ ಸುಪ್ರೀಂ ಕೋರ್ಟ್
ಸ್ವಾತಂತ್ರ್ಯ ಹೋರಾಟವು ಜನರಿಗೆ ಕೊಟ್ಟ ಮೊದಲ ಭರವಸೆಯೇ ಭೂ ಸುಧಾರಣೆ ಮತ್ತು ಜಮೀನ್ದಾರಿ ಪದ್ಧತಿಯ ರದ್ದತಿ. ಇದರ ಭಾಗವಾಗಿ ಎಲ್ಲೆಲ್ಲಿ ರೈತಾಪಿಯ ಹೋರಾಟ ತೀವ್ರವಾಗಿತ್ತೋ ಅಲ್ಲೆಲ್ಲಾ ಅರೆಮನಸ್ಸಿನ ಜಮೀನ್ದಾರಿ ಪದ್ಧತಿಯ ಕಾನೂನನ್ನು ಅಲ್ಲಿನ ಕಾಂಗ್ರೆಸ್ ಸರಕಾರಗಳು ಜಾರಿಗೆ ತಂದವು. ಈ ಅರೆಮನಸ್ಸಿನ ಸುಧಾರಣೆಯ ವಿರುದ್ಧವೂ ಹಳೆಯ ಭೂಮಾಲಕರನ್ನು, ಜಮೀನ್ದಾರರನ್ನು, ರಾಜರನ್ನು ಕಾಂಗ್ರೆಸಿನ ಒಳಗೇ ಇದ್ದ ಊಳಿಗಮಾನ್ಯ ಶಕ್ತಿಗಳು ಹಾಗೂ ಇಂದಿನ ಬಿಜೆಪಿಯ ಮೊದಲ ಅವತಾರವಾಗಿದ್ದ ಭಾರತೀಯ ಜನಸಂಘ ಸಂಘಟಿಸಿ ಭೂ ಸುಧಾರಣೆ ಕಾನೂನಿನ ವಿರುದ್ಧ ಕಾನೂನಾತ್ಮಕ ಮತ್ತು ಬೀದಿ ಹೋರಾಟಗಳನ್ನು ನಡೆಸಿದ್ದವು. ಆದರೆ ಭಾರತದ ಸಂವಿಧಾನದಲ್ಲಿ 1978ರ ವರೆಗೆ ಆಸ್ತಿಯ ಹಕ್ಕು ಕೂಡ ಮೂಲಭೂತ ಹಕ್ಕಾಗಿತ್ತು ಹಾಗೂ ಸಂವಿಧಾನದ ಆರ್ಟಿಕಲ್ 13ರ ಪ್ರಕಾರ ಯಾವ ಸರಕಾರ ಅಧಿಕಾರಕ್ಕೆ ಬಂದು ಯಾವುದೇ ಕಾನೂನುಗಳನ್ನು ಮಾಡಿದರೂ ಮೂಲಭೂತ ಹಕ್ಕುಗಳನ್ನು ಕಸಿಯುವಂತಿಲ್ಲ. ಆದರೆ ಆರ್ಟಿಕಲ್ 368 ಸಂಸತ್ತಿಗೆ ಸಂವಿಧಾನ ತಿದ್ದುಪಡಿಯ ಅಧಿಕಾರವನ್ನೂ ಕೊಡುತ್ತದೆ!
1950-51ರ ಅವಧಿಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಇನ್ನಿತರ ರಾಜ್ಯಗಳ ಕಾಂಗ್ರೆಸ್ ಸರಕಾರಗಳು ಜಮೀನ್ದಾರಿ ರದ್ದತಿ ಮತ್ತು ಭೂ ಸುಧಾರಣೆ ಕಾನೂನುಗಳನ್ನು ಅರೆಮನಸ್ಸಿನಿಂದಲೇ ಜಾರಿ ಮಾಡಿದವು. ಆದರೆ ಇದು ಸಂವಿಧಾನ ಕೊಡಮಾಡಿರುವ ತಮ್ಮ ಮೂಲಭೂತ ಹಕ್ಕಾದ ಆಸ್ತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಭೂಮಾಲಕರು ಮತ್ತು ಜಮೀನ್ದಾರರು ಕೋರ್ಟಿನ ಮೊರೆ ಹೋದರು. ಹೈಕೋರ್ಟ್ಗಳು ಭೂ ಮಾಲಕರ ಪರವಾಗಿ ಆದೇಶ ನೀಡಿ ಭೂ ಸುಧಾರಣಾ ಕಾಯ್ದೆಯನ್ನು ರದ್ದುಗೊಳಿಸಿದವು. ಸುಪ್ರೀಂಕೋರ್ಟ್ ಸಹ ಸಂವಿಧಾನದ ತಾಂತ್ರಿಕ ವ್ಯಾಖ್ಯಾನ ನೀಡಿ ಈ ರದ್ದತಿಗೆ ಮಾನ್ಯತೆ ನೀಡಿ ಸಂವಿಧಾನದ ಆಶಯಗಳ ವಿರುದ್ಧವಾಗಿ ತೀರ್ಮಾನ ನೀಡಿತು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನೆಹರೂ ಸರಕಾರ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿಯನ್ನು ತಂದು ಸಂವಿಧಾನದ ಆರ್ಟಿಕಲ್ 31ಕ್ಕೆ 31-ಎ ಮತ್ತು 31-ಬಿ ಕಲಮುಗಳನ್ನು ಸೇರಿಸಿತು. ಅದರ ಪ್ರಕಾರ ಸಂವಿಧಾನದಲ್ಲಿ ಒಂಭತ್ತನೇ ಶೆಡ್ಯೂಲ್ ಒಂದನ್ನು ಸೇರಿಸಲಾಯಿತು ಮತ್ತು ಈ ತಿದ್ದುಪಡಿಯ ಪ್ರಕಾರ ಒಂಭತ್ತನೇ ಶೆಡ್ಯೂಲಿನಲ್ಲಿ ಸೇರಿಸಲ್ಪಟ್ಟ ಕಾಯ್ದೆಗಳನ್ನು ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ ಎಂಬ ಕಾನೂನನ್ನು ಸೇರಿಸಲಾಯಿತು. ಆನಂತರದಲ್ಲಿ ಬಹುಪಾಲು ಎಲ್ಲಾ ರಾಜ್ಯಗಳ ಭೂ ಸುಧಾರಣ ಕಾಯ್ದೆಗಳನ್ನು ಒಂಭತ್ತನೇ ಶೆಡ್ಯೂಲಿನಲ್ಲಿ ಸೇರಿಸಿ ಕೋರ್ಟಿನ ಪರಿಶೀಲನಾ ಪರಿಧಿಯಿಂದ ರಕ್ಷಿಸಲಾಯಿತು. ಆದರೆ 1951ರಲ್ಲಿ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕಾಗಿದ್ದ ಆಸ್ತಿಯ ಹಕ್ಕನ್ನು ಉಲ್ಲಂಘಿಸಲು ಸಂಸತ್ತು ಜಾರಿ ಮಾಡಿದ ಮೊದಲನೇ ತಿದ್ದುಪಡಿ ಸಂವಿಧಾನ ಬಾಹಿರ ಎಂದು ಶಂಕರಿ ಪ್ರಸಾದ್ ಎನ್ನುವವರು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದರು. ಈ ದಾವೆಯು ಪ್ರಧಾನವಾಗಿ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಸಂಸತ್ತು ಕಸಿಯಬಹುದೇ ಎಂಬ ಸಾಂವಿಧಾನಿಕ ಪ್ರಶ್ನೆಯನ್ನು ಎತ್ತಿತ್ತು. ಇದರ ಬಗ್ಗೆ 1951ರಲ್ಲೇ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠ ತೀರ್ಪು ನೀಡಿ ಸಂವಿಧಾನ ತಿದ್ದುಪಡಿಯ ಮೂಲಕ ಮೂಲಭೂತ ಹಕ್ಕುಗಳನ್ನು ಕೂಡಾ ಸಂಸತ್ತು ಕಸಿಯಬಹುದು ಎಂದು ತೀರ್ಪನ್ನಿತ್ತಿತು. ಆ ಮೂಲಕ ಒಂಭತ್ತನೇ ಶೆಡ್ಯೂಲ್ ರಚನೆ ಹಾಗೂ ಭೂ ಸುಧಾರಣೆ ಕಾಯ್ದೆಗಳೆಲ್ಲವೂ ಊರ್ಜಿತಗೊಂಡಿತು.
ದುರ್ಬಲ ಸಂಸತ್ತು ಮತ್ತು ಗೋಲಕ್ನಾಥ್ ಪ್ರಕರಣ
ಆದರೆ 1964ರಲ್ಲಿ ನೆಹರೂ ನಿಧನರಾಗಿ ಕಾಂಗ್ರೆಸ್ ಪಕ್ಷ ದುರ್ಬಲಗೊಂಡಿತು. ಕಾಂಗ್ರೆಸ್ನೊಳಗಾಗಲೀ ಹೊರಗಾಗಲೀ ನೆಹರೂ ಸ್ಥಾಯಿಯ ಪರ್ಯಾಯ ನಾಯಕರು ಇಲ್ಲದಿದ್ದರಿಂದ, ಸ್ವಾತಂತ್ರ್ಯಾನಂತರ ಇಪ್ಪತ್ತು ವರ್ಷ ಕಳೆದರೂ ಸಂವಿಧಾನ ಮತ್ತು ಕಾಂಗ್ರೆಸ್ ನೀಡಿದ ಯಾವ ಭರವಸೆಗಳೂ ಜನರ ಕೈಗೆ ಎಟುಕದಿದ್ದರಿಂದ ಹಾಗೂ ಕಾಂಗ್ರೆಸಿನೊಳಗೇ ಇದ್ದ ಊಳಿಗಮಾನ್ಯ, ಸರ್ವಾಧಿಕಾರಿ ಧೋರಣೆಯ ಬಗ್ಗೆ ಜನರಿಗೆ ಅಸಹನೆಯೂ ಹೆಚ್ಚುತ್ತಿದ್ದರಿಂದ 1967ರಲ್ಲಿ ನಡೆದ ಚುನಾವಣೆಗಳಲ್ಲಿ ಒಂಭತ್ತು ರಾಜ್ಯಗಳಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬಂತು ಮತ್ತು ಕೇಂದ್ರದಲ್ಲೂ ಕಾಂಗ್ರೆಸೇ ಅಧಿಕಾರಕ್ಕೆ ಬಂದರೂ ಮೊದಲಿಗಿಂತ ದುರ್ಬಲ ಸಂಖ್ಯಾ ಬಲವನ್ನು ಹೊಂದಿತ್ತು. ಕಾಂಗ್ರೆಸ್ ಪಕ್ಷವೇ ದೇಶದ ಪ್ರಧಾನ ಅಧಿಕಾರ ರೂಢ ಪಕ್ಷವಾಗಿದ್ದರೂ ಅದು ನೆಹರೂ ನಿಧನದ ನಂತರ ಒಡೆದ ಮನೆಯಾಗಿತ್ತು.
ಇಂತಹ ರಾಜಕೀಯ ಸಂದರ್ಭದಲ್ಲಿ ಪಂಜಾಬ್ ಸರಕಾರ ತಂದ ಭೂ ಸುಧಾರಣಾ ಕಾಯ್ದೆಯ ವಿರುದ್ಧ ಮತ್ತು ಮೂಲಭೂತ ಹಕ್ಕುಗಳನ್ನು ಕಸಿಯಬಲ್ಲ ಸಂಸತ್ತಿನ ಅಧಿಕಾರದ ವಿರುದ್ಧ ಗೋಲಕ್ನಾಥ್ ಎಂಬವರು ಸುಪ್ರೀಂ ಕೋರ್ಟಿನಲ್ಲಿ ಮತ್ತೆ ದಾವೆ ಹೂಡಿದರು. ಈ ಬಾರಿ ಈ ದಾವೆಯನ್ನು ಸುಪ್ರೀಂ ಕೋರ್ಟಿನ 11 ನ್ಯಾಯಾಧೀಶರ ಪೀಠವು ವಿಚಾರಣೆ ಮಾಡಿತು. ಸುದೀರ್ಘ ವಿಚಾರಣೆಯ ನಂತರ 6:5 ಬಹುಮತದಲ್ಲಿ 1951ರಲ್ಲಿ ಶಂಕರಿ ಪ್ರಸಾದ್ ಪ್ರಕರಣದಲ್ಲಿ ಕೊಟ್ಟ ತೀರ್ಪನ್ನು ಬದಲಾಯಿಸಿತು ಮತ್ತು ಸಂಸತ್ತು ಆಸ್ತಿಯ ಹಕ್ಕನ್ನೂ ಒಳಗೊಂಡಂತೆ ಸಂವಿಧಾನ ಕೊಟ್ಟ ಯಾವ ಮೂಲಭೂತ ಹಕ್ಕುಗಳನ್ನೂ ಕಸಿದುಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿತು. ಹೀಗಾಗಿ ಮತ್ತೊಮ್ಮೆ ಸರಕಾರಗಳು ಅರೆಮನಸ್ಸಿನಿಂದ ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯ್ದೆಗಳು ಬಡವರಿಂದ ದೂರ ಉಳಿದವು. ಈ ನಡುವೆ ಕಾಂಗ್ರೆಸಿನೊಳಗೆ ಇಂದಿರಾ ಗಾಂಧಿ ಬಣ ಹಿರಿಯ ಕಾಂಗ್ರೆಸಿಗರಿಂದ ಬೇರ್ಪಟ್ಟು ಸ್ವತಂತ್ರವಾದ ಪಕ್ಷ ರಚಿಸಿಕೊಂಡಿತು.
ಗೋಲಕ್ ನಾಥ್ ಪ್ರಕರಣದಲ್ಲಿ ಆಸ್ತಿಯ ಹಕ್ಕನ್ನು ಉಲ್ಲಂಘಿಸುವಂತಿಲ್ಲ ಎಂದು ತೀರ್ಪು ಬಂದಿದ್ದರೂ 1969ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣದ ನೀತಿಯನ್ನು, ಈ ಹಿಂದಿನ ರಾಜರು ತಮ್ಮ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನ ಮಾಡಿದ ನಂತರ ಭಾರತ ಸರಕಾರದಿಂದ ಪಡೆಯುತ್ತಿದ್ದ ರಾಜಧನವನ್ನು ರದ್ದತಿ ಮಾಡುವ ನೀತಿಗಳನ್ನು ಘೋಷಿಸಿದರು. ಈ ನೀತಿಗಳು ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತದೆಂದು ರಾಜಮನೆತನಗಳು ಮತ್ತು ಸಾಹುಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದರು. ಮತ್ತೊಮ್ಮೆ ಸುಪ್ರೀಂ ಕೋರ್ಟ್ ಇಂತಹ ದಾವೆಗಳಲ್ಲಿ ಸಂವಿಧಾನದ ಆಶಯಗಳನ್ನು ಪರಿಗಣಿಸದೆ ಸಾಹುಕಾರಿಗಳ ಮತ್ತು ರಾಜಮನೆತನಗಳ ಊಳಿಗಮಾನ್ಯ ಅಧಿಕಾರವನ್ನು ಆಸ್ತಿ ಹಕ್ಕಿನ ಅಡಿಯಲ್ಲಿ ಎತ್ತಿ ಹಿಡಿಯಿತು. ಈ ಮಧ್ಯೆ ಜನರಲ್ಲಿ ತನ್ನ ಬಗ್ಗೆ ಅಪಾರ ಅನುಕಂಪ ಇದೆಯೆಂದು ಅರಿತುಕೊಂಡ ಇಂದಿರಾಗಾಂಧಿಯವರು 1971ರಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಸಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು.
ಜನಹಿತದ ಮುಸುಕಿನಲ್ಲಿ ಇಣುಕಿದ ಇಂದಿರಾ ಸರ್ವಾಧಿಕಾರ
ಸಂಸತ್ತಿನಲ್ಲಿ ಅಪಾರ ಬಹುಮತವನ್ನು ಪಡೆದಿದ್ದ ಇಂದಿರಾ ಗಾಂಧಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ 1971ರ ನವೆಂಬರ್ನಲ್ಲಿ ಸಂವಿಧಾನಕ್ಕೆ 24, 25 ಮತ್ತು 26ನೇ ತಿದ್ದುಪಡಿಯನ್ನು ತಂದಿತು. ಸಂವಿಧಾನದ 24ನೇ ತಿದ್ದುಪಡಿಯು ಕಾನೂನಿನ ಮುಖೇನ ಸಂವಿಧಾನದ ಯಾವುದೇ ಅಂಶವನ್ನು ಮತ್ತು ಭಾಗವನ್ನು ತಿದ್ದುಪಡಿ ಮಾಡುವ ಪರಮಾಧಿಕಾರವನ್ನು ಸಂಸತ್ತಿಗೆ ಮರಳಿಸಿತು ಮತ್ತು ಈ ಪರಮಾಧಿಕಾರಕ್ಕೆ ಗೋಲಕ್ ನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಡ್ಡಿದ ಅಡ್ಡಿಯನ್ನು ಇಂದಿರಾ ಸರಕಾರ ನಿವಾರಿಸಿಕೊಂಡಿತು. 25ನೇ ತಿದ್ದುಪಡಿಯ ಮೂಲಕ ಆಸ್ತಿಯ ಹಕ್ಕನ್ನು ಮೊಟಕುಗೊಳಿಸುವ ಮತ್ತು ಸಂವಿಧಾನದ ನಿರ್ದೇಶನಾ ತತ್ವಗಳನ್ನು ಜಾರಿಗೆ ತರುವ ಉದ್ದೇಶದಿಂದ ಸರಕಾರವು ಮಾಡುವ ಯಾವುದೇ ಕಾನೂನನ್ನು ಕೋರ್ಟ್ಗಳಲ್ಲಿ ಪ್ರಶ್ನಿಸುವಂತಿಲ್ಲ ಎಂಬ ಅಧಿಕಾರವನ್ನು ಪಡೆದುಕೊಂಡಿತ್ತು. ಆ ಮೂಲಕ ಸಂಸತ್ತು ಮಾಡುವ ಯಾವುದೇ ಕಾನೂನಿಗೂ ಪರೋಕ್ಷವಾಗಿ ನಿರ್ದೇಶನಾ ತತ್ವಗಳೊಂದಿಗೆ ಸಂಬಂಧ ಕಲ್ಪಿಸಿದರೂ ಕೋರ್ಟ್ ಮಧ್ಯಪ್ರವೇಶ ಮಾಡದಂತೆ ಮಾಡಿ ಹೆಚ್ಚು ಕಡಿಮೆ ಸಂಸತ್ತಿನ ಎಲ್ಲಾ ಕಾನೂನುಗಳನ್ನು ಕೋರ್ಟಿನ ಪರಿಶೀಲನೆಯಿಂದ ಮುಕ್ತವಾಗಿಸಿತು. 26ನೇ ತಿದ್ದುಪಡಿಯು ರಾಜಧನ ರದ್ದತಿಯ ಕಾನೂನನ್ನು ಕೂಡ ಕೋರ್ಟಿನ ಪರಿಶೀಲನೆಯ ಆಚೆಗಿರಿಸಿತು.
ಮೇಲ್ನೋಟಕ್ಕೆ ಇವು ಜನಹಿತದ ಕಾನೂನುಗಳನ್ನು ರಕ್ಷಿಸಲು ತೆಗೆದುಕೊಂಡ ನಿಲುವುಗಳು ಎಂದು ಕಂಡುಬಂದರೂ ಸಾರದಲ್ಲಿ ಅದು ಯಾವುದೇ ಉತ್ತರದಾಯಿತ್ವವಿಲ್ಲದ ಸರ್ವಾಧಿಕಾರಿ ಸರಕಾರದ ಹುಟ್ಟಿಗೆ ಕಾರಣವಾಗಬಲ್ಲ ಸಾಧ್ಯತೆಗಳನ್ನು ಹೊಂದಿತ್ತು ಎಂಬುದು ಅ ನಂತರದ ವರ್ಷಗಳಲ್ಲಿ ಸ್ಪಷ್ಟವಾಗುತ್ತಾ ಹೋಯಿತು. ಆದರೆ ಅದೇ ಸಮಯದಲ್ಲಿ ಸಂವಿಧಾನದ ಸಮಾನತಾ ಆಶಯಗಳಿಗೆ ಪೂರಕವಾಗಿದ್ದ ರಾಜಧನ ರದ್ದತಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆಯಂತಹ ಶಾಸನಗಳನ್ನು ಸುಪ್ರೀಂ ಕೋರ್ಟ್ ಸಂವಿಧಾನದ ಆಶಯಗಳ ಮುನ್ನಡೆಯ ದೃಷ್ಟಿಯಿಂದ ವ್ಯಾಖ್ಯಾನಿಸದೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿಗಾಮಿ ವ್ಯಾಖ್ಯಾನ ಮಾಡಿದ್ದರಿಂದಲೂ ಇಂತಹ ಸಂದಿಗ್ಧತೆ ಸೃಷ್ಟಿಯಾಯಿತು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಸಂಸತ್ತು ಅಥವಾ ಸುಪ್ರೀಂ ಕೋರ್ಟ್ಗಳ ನಡುವೆ ಯಾವುದಕ್ಕೆ ಹೆಚ್ಚು ಪಾರಮ್ಯವಿದ್ದರೆ ಜನಹಿತ ಸಾಧನೆಯಾಗಬಹುದು ಎಂಬ ಬೈನರಿ ಪ್ರಶ್ನೆಗೆ ಸರಳ ಉತ್ತರವಿಲ್ಲ. ಎರಡು ಕೂಡ ಸಂವಿಧಾನದ ಆಶಯಗಳನ್ನು ಗತಿಶೀಲವಾಗಿ ಅರ್ಥಮಾಡಿಕೊಳ್ಳದಾಗ ಜನವಿರೋಧಿಯಾಗಿಯೇ ವರ್ತಿಸಬಲ್ಲವು. ಇದು ಆ ನಂತರದ ಬೆಳವಣಿಗೆಗಳನ್ನು ಗಮನಿಸಿದಾಗ ಇನ್ನಷ್ಟು ಸ್ಪಷ್ಟವಾಗುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.