ಕೇಶವಾನಂದ ಭಾರತಿ ಪ್ರಕರಣ-ಸಂವಿಧಾನದ ಮೂಲ ರಚನೆಯ ಸಮತೋಲನ
-

ಭಾಗ-2
ಈ ಹಿನ್ನೆಲೆಯಲ್ಲೇ ಕೇಶವಾನಂದ ಭಾರತಿ ಪ್ರಕರಣ ಮಹತ್ವವನ್ನು ಪಡೆದುಕೊಳ್ಳುತ್ತದೆ. 1969ರಲ್ಲಿ ಕೇರಳದ ಕಮ್ಯುನಿಸ್ಟ್ ಸರಕಾರವು ಜಾರಿಗೆ ತಂದ ಭೂ ಸುಧಾರಣ ಕಾಯ್ದೆಯು ಕಾಸರಗೋಡಿನಲ್ಲಿರುವ ತನ್ನ ಮಠದ ಆಸ್ತಿಪಾಸ್ತಿಗಳನ್ನು ಮಠದ ಧಾರ್ಮಿಕ ಹಿತಾಸಕ್ತಿಗನುಗುಣವಾಗಿ ನಿರ್ವಹಿಸಲು ಅಡ್ಡಿಯುಂಟು ಮಾಡುತ್ತದೆ ಮತ್ತು ಆ ಮೂಲಕ ತನ್ನ ಮೂಲಭೂತ ಹಕ್ಕಾದ ಧಾರ್ಮಿಕ ಹಕ್ಕಿಗೆ ಚ್ಯುತಿ ತರುತ್ತಿದೆ ಎಂದು ಆ ಮಠದ ಮಠಾಧೀಶರಾದ ಕೇಶವಾನಂದ ಭಾರತಿಯವರು ಸುಪ್ರೀಂ ಕೋರ್ಟಿನಲ್ಲಿ 1970ರಲ್ಲಿ ದಾವೆ ಹೂಡಿದರು. ಅದು ಸಾರದಲ್ಲಿ ಇಂದಿರಾ ಸರಕಾರ ಜಾರಿಗೆ ತಂದ 24,25, 26 ಮತ್ತು 29 ನೇ ತಿದ್ದುಪಡಿಗಳೆಲ್ಲವನ್ನು ಪ್ರಶ್ನಿಸುತ್ತಿತ್ತು. ಏಕೆಂದರೆ ಸಂಸತ್ತಿಗೆ ಸಂವಿಧಾನವು ಜನರಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಹಕ್ಕಿದೆಯೇ ಎಂಬ ಪ್ರಶ್ನೆಯನ್ನೇ ಮತ್ತೆ ಎತ್ತಿತ್ತು. ಆದರೆ ಇದೇ ಪ್ರಶ್ನೆಯನ್ನು 1967ರಲ್ಲಿ ಗೋಲಕ್ನಾಥ್ ಪ್ರಕರಣದಲ್ಲಿ 11 ನ್ಯಾಯಾಧೀಶರ ಪೀಠವು ತೀರ್ಮಾನಿಸಿದ್ದರಿಂದ ಈ ಬಾರಿ ಭಾರತದ ಈವರೆಗಿನ ಇತಿಹಾಸದಲ್ಲೇ ಮೊತ್ತ ಮೊದಲಬಾರಿಗೆ 13 ನ್ಯಾಯಾಧೀಶರ ಪೀಠ 66 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತು. ಆಗ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಸಂಖ್ಯೆಯೇ ಕೇವಲ 15. ಹೀಗಾಗಿ ಹೆಚ್ಚೂಕಡಿಮೆ ಪೂರ್ಣ ಪೀಠವೇ ಇದರ ಬಗ್ಗೆ ವಿಚಾರಣೆ ನಡೆಸಿತು ಎಂದರೂ ತಪ್ಪಿಲ್ಲ. ಅದರ ಮುಂದಿದ್ದ ಪ್ರಧಾನ ಹಾಗೂ ಸಾರಭೂತ ವಿಷಯ: ಸಂವಿಧಾನವು ಸಂಸತ್ತಿಗೆ ಸಂವಿಧಾನದ ಯಾವ ಭಾಗಗಳನ್ನು ಬೇಕಾದರೂ ತಿದ್ದುಪಡಿ ಮಾಡುವ ಬೇಷರತ್ತು ಅಧಿಕಾರ ನೀಡಿದೆಯೇ? ಸಂಸತ್ತು ಮಾಡಿದ ಕಾನೂನುಗಳನ್ನು ಸ್ವತಂತ್ರವಾಗಿ ಪರಿಶೀಲಿಸುವ ಪರಮಾಧಿಕಾರ ನ್ಯಾಯಾಂಗಕ್ಕೆ ಇಲ್ಲವೇ? 1973ರ ಎಪ್ರಿಲ್ 24ರಂದು ಸುಪ್ರೀಂ ಕೋರ್ಟಿನ 13 ನ್ಯಾಯಾಧೀಶರ ಪೀಠ 7:6ರ ಬಹುಮತದಲ್ಲಿ ತನ್ನ ತೀರ್ಮಾನ ನೀಡಿತು. 13 ನ್ಯಾಯಾಧೀಶರು 11 ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದರು. ಅವೆಲ್ಲವನ್ನು ಸಂಗ್ರಹಿಸಿ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಸಿಖ್ರಿಯವರು ಬಹುಮತದ ತೀರ್ಪು ಏನು ಎಂಬುದರ ಬಗ್ಗೆ ಸೂತ್ರಪ್ರಾಯದ ಟಿಪ್ಪಣಿ ಮಾಡಿ 13 ನ್ಯಾಯಾಧೀಶರಿಗೆ ಕಳಿಸಿದಾಗ ಅಲ್ಪಮತ ಬಣದಲ್ಲಿದ್ದ ಇನ್ನೂ ಇಬ್ಬರು ನ್ಯಾಯಾಧೀಶರು (ವೈ.ವಿ. ಚಂದ್ರಚೂಡ್ ಮತ್ತು ಎ.ಕೆ. ಮುಖರ್ಜಿ) ಬಹುಮತ ತೀರ್ಪಿನ ಟಿಪ್ಪಣಿಗೆ ತಮ್ಮ ಸಮ್ಮತಿ ಸೂಚಿಸಿದರು. ಹೀಗೆ ಸಾರಂಶದಲ್ಲಿ 13 ನ್ಯಾಯಾಧೀಶರ ಪೀಠದಲ್ಲಿ 9 ನ್ಯಾಯಾಧೀಶರ ಸಮ್ಮತಿ ಇದ್ದ ತೀರ್ಪು ಹೀಗಿತ್ತು:
- ಸಂಸತ್ತಿಗೆ ಸಂವಿಧಾನದ ಯಾವುದೇ ಭಾಗಗಳನ್ನು ತಿದ್ದುಪಡಿ ಮಾಡುವ ಅಧಿಕಾರವಿದ್ದರೂ, ಸಂವಿಧಾನದ ಸ್ವರೂಪವನ್ನೇ ಬದಲಿಸುವಂತಹ ತಿದ್ದುಪಡಿಗಳನ್ನು ಮಾಡುವ ಅಧಿಕಾರವಿಲ್ಲ. ಹೀಗೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಯನ್ನು ಯಾವುದೇ ಕಾನೂನುಗಳ ಮೂಲಕ ಬದಲಿಸುವಂತಿಲ್ಲ ಎಂದು ಮುಂದಿಟ್ಟ ಈ ಸಾಂವಿಧಾನಿಕ ನೀತಿಯನ್ನೇ ‘ಸಂವಿಧಾನದ ಮೂಲ ರಚನೆಯ ಸಿದ್ಧಾಂತ’-Basic Structure Doctrine ಎಂದು ಕರೆಯುತ್ತಾರೆ ಮತ್ತು ಸಂವಿಧಾನದ ಈ ವ್ಯಾಖ್ಯಾನವೇ ಮುಂದಿನ ಎಲ್ಲಾ ನಡೆಗಳಲ್ಲಿ ಹಾಗೂ ಸಂಸತ್ತು ಮತ್ತು ಸುಪ್ರೀಂ ಕೋರ್ಟಿನ ನಡುವಿನ ಸಂಘರ್ಷಗಳಲ್ಲಿ ಮಾರ್ಗದರ್ಶನ ನೀಡುತ್ತಾ ಬಂದಿದೆ. ಮುಖ್ಯ ನ್ಯಾಯಮೂರ್ತಿ ಸಿಖ್ರಿಯವರು ಮಾಡಿದ ಟಿಪ್ಪಣಿಯಂತೆ ಮತ್ತು ಬಹುಮತದ ತೀರ್ಪು ನೀಡಿದ ನ್ಯಾಯಾಧೀಶರುಗಳು ಪ್ರತ್ಯೇಕವಾಗಿ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ಸಂವಿಧಾನದ ಮೂಲ ಸ್ವರೂಪಗಳೆಂದರೆ: ಸಂವಿಧಾನದ ಪಾರಮ್ಯ, ಭಾರತದ ಐಕ್ಯತೆ ಮತ್ತು ಸಮಗ್ರತೆ, ಭಾರತ ಪ್ರಭುತ್ವದ ಪ್ರಜಾತಾಂತ್ರಿಕ ಮತ್ತು ಗಣರಾಜ್ಯ ಸ್ವರೂಪ, ಭಾರತದ ಸಂವಿಧಾನದ ಫೆೆಡರಲ್ ಸ್ವರೂಪ, ಭಾರತದ ಸಂವಿಧಾನದ ಸೆಕ್ಯುಲರ್ ಸ್ವರೂಪ, ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಅಧಿಕಾರ ವಿಭಜನೆ, ವ್ಯಕ್ತಿ ಸ್ವಾತಂತ್ರ್ಯ.
ಇದಲ್ಲದೆ ನಂತರದ ತೀರ್ಪುಗಳಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ, ಸಂಸದೀಯ ಪ್ರಜಾತಂತ್ರ, ಕಾನೂನಿನ ಆಳ್ವಿಕೆ, ಸಂವಿಧಾನ ತಿದ್ದುಪಡಿಯಲ್ಲಿ ಸಂಸತ್ತಿಗಿರುವ ಸೀಮಿತ ಅಧಿಕಾರ, ನ್ಯಾಯಾಂಗ ಪರಿಶೀಲನೆ..ಇತ್ಯಾದಿಗಳು ಸಹ ಸಂವಿಧಾನದ ಮೂಲ ರಚನೆಯ ಭಾಗವೆಂದು ತೀರ್ಮಾನವಾಗಿದೆ. ಸಹಜವಾಗಿಯೇ ಈ ತೀರ್ಪು ಸಂಸತ್ತು ಮತ್ತು ಸುಪ್ರೀಂ ಕೋಟಿನ ಸಂಘರ್ಷದ ನಡುವೆ ಸಂವಿಧಾನದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಸಮತೋಲನ ಸಾಧಿಸುವ ಪ್ರಯತ್ನವನ್ನು ಮಾಡಿತ್ತು. ಆದರೆ ಈ ತೀರ್ಪು ಸಹಜವಾಗಿಯೇ ಅಪಾರ ಅಧಿಕಾರ ಹಾಗೂ ಜನಬೆಂಬಲ ಹೊಂದಿದ್ದ ಇಂದಿರಾ ಸರಕಾರವನ್ನು ಕೆರಳಿಸಿತು. 1973ರಲ್ಲಿ ಈ ತೀರ್ಪನ್ನಿತ್ತು ಮುಖ್ಯನ್ಯಾಯಧೀಶರಾದ ಸಿಖ್ರಿಯವರು ಎಪ್ರಿಲ್ 25ರಂದು ನಿವೃತ್ತರಾದರು. ಕೂಡಲೇ ಇಂದಿರಾಗಾಂಧಿಯವರು ವ್ಯತಿರಿಕ್ತ ತೀರ್ಪನ್ನಿತ್ತಿದ್ದ ಹಲವು ನ್ಯಾಯಾಧೀಶರ ಹಿರಿತನವನ್ನು ಕಡೆಗಣಿಸಿ ಸರಕಾರದ ಪರ ಅಲ್ಪಮತದ ತೀರ್ಪನ್ನು ನೀಡಿದ್ದ ಎ.ಎನ್. ರೇ ಅವರನ್ನು ಮುಖ್ಯನ್ಯಾಯಾಧೀಶರನ್ನಾಗಿ ನೇಮಿಸಿದರು.
ನ್ಯಾ. ಎ.ಎನ್. ರೇ ಅವರು 1975ರಲ್ಲಿ ಕೇಶವಾನಂದ ಭಾರತಿ ತೀರ್ಪನ್ನು ಮರುಪರಿಶೀಲಿಸಲು 13 ನ್ಯಾಯಾಧೀಶರ ಮತ್ತೊಂದು ಪೀಠವನ್ನು ನಿಯೋಜಿಸಿದರು. ಆದರೆ ಸರಕಾರವಾಗಲೀ, ಸಾರ್ವಜನಿಕರಾಗಲೀ ಯಾರೂ ಕೇಶವನಾಂದ ಭಾರತಿ ಪ್ರಕರಣದ ಮರುಪರಿಶೀಲನೆಗೆ ದಾವೆಯನ್ನೇ ಹಾಕಿರಲಿಲ್ಲ. ಹೀಗಾಗಿ ಇದರ ಉದ್ದೇಶ ಸ್ಪಷ್ಟವಾಗಿ ಜಗಜ್ಜಾಹೀರಾಗಿತ್ತು. ಆದ್ದರಿಂದ ಎರಡು ದಿನಗಳಲ್ಲೇ ಆ ಪೀಠವನ್ನು ರೇಯವರು ಬರ್ಖಾಸ್ತು ಮಾಡಿದರು!
ನಂತರದ ಬೆಳವಣಿಗೆಯಲ್ಲಿ ಅಲಹಬಾದ್ ಹೈಕೋರ್ಟ್ ಇಂದಿರಾಗಾಂಧಿ ಯವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಎತ್ತಿಹಿಡಿದು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಭಾಗವಹಿಸದಂತೆ ನಿಷೇಧಿಸಿತು. ಕೂಡಲೇ ತುರ್ತುಸ್ಥಿತಿಯನ್ನು ಘೋಷಿಸಿದ ಇಂದಿರಾಗಾಂಧಿಯವರು ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದರು. ಅದರ ಪ್ರಕಾರ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಸ್ಪೀಕರ್ಗಳ ಚುನಾವಣೆಗಳನ್ನು ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ. ಇದರ ಇತರ ಕಲಮುಗಳ ಪ್ರಕಾರ ಮೂಲಭೂತ ಹಕ್ಕುಗಳಿಗಿಂತ ಪ್ರಭುತ್ವ ನಿರ್ದೇಶನ ತತ್ವಗಳು ಹೆಚ್ಚು ಪ್ರಧಾನ ಮತ್ತು ಆ ನಿಟ್ಟಿನಲ್ಲಿ ಪ್ರಭುತ್ವ ನಿರ್ದೇಶನಾ ತತ್ವಗಳನ್ನು ಜಾರಿಗೆ ತರುವಾಗ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೂ ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ, ಸಂಸತ್ತು ಮಾಡುವ ಯಾವುದೇ ಸಂವಿಧಾನ ತಿದ್ದುಪಡಿಗಳನ್ನು ಪ್ರಶ್ನಿಸುವಂತಿಲ್ಲ ಎಂಬೆಲ್ಲಾ ಅಂಶಗಳನ್ನು ಸೇರಿಸಿ ಸಾರದಲ್ಲಿ ಕೇಶವಾನಂದ ಭಾರತಿ ತೀರ್ಪನ್ನು ಇಂದಿರಾ ಸರಕಾರ ಅಸಿಂಧುಗೊಳಿಸಿತು ಹಾಗೂ ಈಗಾಗಲೇ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಯ ಭಾಗ ಎಂದು ಘೋಷಿಸಲಾಗಿದ್ದ ಸೆಕ್ಯುಲರಿಸಂ ಅನ್ನು ಮತ್ತು ಸಮಾಜವಾದವನ್ನು 42ನೇ ತಿದ್ದುಪಡಿಯು ಸಂವಿಧಾನದ ಮುನ್ನುಡಿಗೆ ಸೇರಿಸಿತು. 1977ರಲ್ಲಿ ತುರ್ತುಸ್ಥಿತಿಯನ್ನು ಹೇರಿದ ಇಂದಿರಾಗಾಂಧಿಯವರು ನಡೆಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಬಿಜೆಪಿಯ ಆಗಿನ ಅವತಾರವಾಗಿದ್ದ ಭಾರತೀಯ ಜನ ಸಂಘವೂ ಭಾಗವಾಗಿದ್ದ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಿತು. ಅದು ಸಂವಿಧಾನಕ್ಕೆ 44ನೇ ತಿದ್ದುಪಡಿಯನ್ನು ತಂದು ಪ್ರಧಾನಿ, ರಾಷ್ಟ್ರಪತಿ ಚುನಾವಣೆಗೆ ಸಂಬಂಧಪಟ್ಟ ತಿದ್ದುಪಡಿಯನ್ನು ರದ್ದು ಮಾಡಿತು. ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಕಾನೂನಾತ್ಮಕ ಅಧಿಕಾರವಾಗಿಸಿತು. ಹಾಗೆಯೇ ತುರ್ತುಸ್ಥಿತಿಯ ಘೋಷಣೆ ಮಾಡಲು ನಿರ್ಬಂಧಗಳನ್ನು ಹೇರಿತು ಹಾಗೂ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟಿನ ಮತ್ತು ಹೈಕೋರ್ಟ್ಗಳ ಅಧಿಕಾರವನ್ನು ಮರಳಿಸಿತು.
ಹೀಗೆ ಬಿಜೆಪಿಯ ಹಿಂದಿನ ಅವತಾರವಾಗಿದ್ದ ಬಿಜೆಎಸ್ ಕೂಡ ಭಾಗವಾಗಿದ್ದ ಜನತಾ ಸರಕಾರ 44ನೇ ತಿದ್ದುಪಡಿಯನ್ನು ತಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಜಾರಿಯಾಗಿದ್ದ ‘‘ಸಂಸತ್ತು ಸಂವಿಧಾನದ ಮೂಲರಚನೆಯನ್ನು ತಿದ್ದುಪಡಿ ಮಾಡುವಂತಿಲ್ಲ’’ ಎಂಬ ವ್ಯಾಖ್ಯಾನಕ್ಕೆ ಮರುಜೀವ ಕೊಟ್ಟಿತು! ಅಷ್ಟು ಮಾತ್ರವಲ್ಲ. ಸಂವಿಧಾನದ ಮೂಲ ರಚನೆಯನ್ನೂ ತಿದ್ದುಪಡಿ ಮಾಡಬೇಕೆಂದರೆ ಜನಾಭಿಪ್ರಾಯ ಸಂಗ್ರಹಣೆ ನಡೆಯಬೇಕು ಮತ್ತು ಅದರಲ್ಲಿ ಕಡ್ಡಾಯವಾಗಿ ಈ ದೇಶದ ಶೇ. 51 ಜನರು ಭಾಗವಹಿಸಿದ್ದರೆ ಮಾತ್ರ ಅದು ಸಿಂಧುವಾಗಬೇಕು ಹಾಗೂ ಆ ಜನಮತ ಸಂಗ್ರಹಣೆಯಲ್ಲಿ ಬಹುಮತ ಪಡೆದರೆ ಮಾತ್ರ ಸಂವಿಧಾನದ ಮೂಲ ರಚನೆಗೆ ತಿದ್ದುಪಡಿ ಮಾಡಬಹುದೆಂದು ಈಗಿನ ಬಿಜೆಪಿಯ ಅಂದಿನ ಅವತಾರವಾದ ಭಾರತೀಯ ಜನ ಸಂಘ ಇದ್ದ ಸರಕಾರ 44ನೇ ತಿದ್ದುಪಡಿಯನ್ನು ತಂದಿತ್ತು. ಈಗ ಅದೇ ಪಕ್ಷವೇ ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ವಿರೋಧಿಸುತ್ತಿದೆ.!
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.