ಅದಾನಿ ಶೇರು ಹಗರಣ - ಆತಂಕಗಳು, ಉತ್ಪ್ರೇಕ್ಷೆಗಳು ಮತ್ತು ಅಸಲಿ ಪ್ರಶ್ನೆಗಳು
-

ಮೋದಿ ಸರಕಾರ, ಬಿಜೆಪಿ ಮಹಾಮೌನಕ್ಕೆ ಜಾರಿವೆ. ಕನಿಷ್ಠ ಒಂದು ತನಿಖೆಗೆ ಕೂಡ ಆದೇಶಿಸಿಲ್ಲ. ಸಂಘಪರಿವಾರದ ಅಂಗ ಸಂಘಟನೆಯಾಗಿರುವ ‘ಸ್ವದೇಶಿ ಜಾಗರಣ್ ಮಂಚ್’ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದಾನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ! ಬಿಜೆಪಿ ವಕ್ತಾರರು ಸಾರಾಂಶದಲ್ಲಿ ಅದನ್ನೇ ಮಾಡುತ್ತಿದ್ದಾರೆ. ದೇಶವೆಂದರೆ ಮೋದಿ ಎನ್ನುತ್ತಿದ್ದವರು ಈಗ ದೇಶವೆಂದರೆ ಅದಾನಿ ಎನ್ನುತ್ತಿದ್ದಾರೆ. ಈ ಹಗರಣದಿಂದ ಕಷ್ಟಪಟ್ಟು ಗಳಿಸಿದ ಉಳಿತಾಯದ ಹಣವನ್ನು ಕಳೆದುಕೊಳ್ಳುತ್ತಿರುವ ವಂಚಿತ ಹೂಡಿಕೆದಾರರ, ವಿಮಾದಾರರ, ಡಿಪಾಸಿಟುದಾರರನ್ನು ಭಾರತೀಯರೆಂದು ಭಾವಿಸದೆ ಅದಾನಿಯನ್ನು ರಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ ಈ ತಥಾಕಥಿತ ‘ದೇಶ ರಕ್ಷಕರು’!
ಹಿಂಡನ್ಬರ್ಗ್ ಎಂಬ ಅಮೆರಿಕದ ಶೇರು ವ್ಯಾಪಾರ ಮತ್ತು ಸಂಶೋಧಕ ಸಂಸ್ಥೆಯು ಭಾರತದ ಅತ್ಯಂತ ಪ್ರಭಾವಿ ಹಾಗೂ ಅತ್ಯಂತ ದೊಡ್ಡ ಶ್ರೀಮಂತ ಹಾಗೂ ಪ್ರಧಾನಿ ಮೋದಿಯವರ ಪರಮಾಪ್ತ ಮಿತ್ರ ಅದಾನಿಯವರ ಕಾರ್ಪೊರೇಟ್ ಸಂಸ್ಥೆಗಳು ಭಾರತದ ಶೇರು ಮಾರುಕಟ್ಟೆಯಲ್ಲಿ ಕೃತಕವಾಗಿ ಶೇರುಗಳ ಬೆಲೆ ಏರಿಕೆ ಮತ್ತು ಇಳಿಕೆಗಳನ್ನು ಮಾಡಿ ಲಕ್ಷಾಂತರ ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿವೆಯೆಂದು ಆರೋಪಿಸಿ ಬಿಡುಗಡೆ ಮಾಡಿರುವ ವರದಿಯು ಇಂದು ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ದೊಡ್ಡ ಕೋಲಾಹಲವನ್ನುಂಟು ಮಾಡಿದೆ.
ಇದೇ ಜನವರಿ 24ರಂದು ಅವರು ಬಿಡುಗಡೆ ಮಾಡಿದ 'Adani Group: How The World's 3rd Richest Man Is Pulling The Largest Con In Corporate History', ಎಂಬ ವರದಿಯಲ್ಲಿ ಅವರು ಅದಾನಿ ಕಂಪೆನಿಯು ಶೇರುಗಳ ಬೆಲೆಯಲ್ಲಿ ಕೃತಕ ಏರಿಳಿಕೆ ಮಾಡುವ ಮೂಲಕ, ಸಾಗರೋತ್ತರ ದೇಶಗಳಲ್ಲಿ ತಾವು ಹಾಗೂ ತಮ್ಮ ಸಂಬಂಧಿಗಳು ನಡೆಸುತ್ತಿರುವ ಸುಳ್ಳು ಕಂಪೆನಿಗಳ ಮೂಲಕ ಹೂಡಿಕೆ ಮಾಡಿಸಿಕೊಂಡು ಕೃತಕವಾಗಿ ತಮ್ಮ ಶೇರುಗಳ ಬೆಲೆಯನ್ನು ಏರಿಸಿಕೊಳ್ಳುವ ಮೂಲಕ, ಅದರ ಬಗ್ಗೆ ತಪ್ಪುಲೆಕ್ಕಾಚಾರವನ್ನು ಒದಗಿಸುವ ಮೂಲಕ ಜಗತ್ತಿನ ಈ ಮೂರನೇ ಅತಿ ದೊಡ್ಡ ಶ್ರೀಮಂತ, ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿ, ತಮ್ಮ ಆರೋಪಗಳನ್ನು ಸಾಬೀತು ಮಾಡುವ ಪುರಾವೆಗಳನ್ನೂ ಒದಗಿಸಿದ್ದಾರೆ ಹಾಗೂ ಅದಾನಿ ಕಂಪೆನಿಯು ಸಾಚಾ ಆಗಿದ್ದಲ್ಲಿ ಉತ್ತರಿಸಬೇಕೆಂದು 88 ಪ್ರಶ್ನೆಗಳ ಸವಾಲೆಸೆದಿದ್ದಾರೆ.
ಅದಕ್ಕೆ ಉತ್ತರ ರೂಪದಲ್ಲಿ ಜನವರಿ 29ರಂದು ಅದಾನಿ ಕಂಪೆನಿಯು 415 ಪುಟಗಳ ಉತ್ತರವೊಂದನ್ನು ಬಿಡುಗಡೆ ಮಾಡಿ ಇದು ಕೇವಲ ತನ್ನ ಕಂಪೆನಿಯ ಮೇಲೆ ಮಾತ್ರವಲ್ಲದೆ ಭಾರತದ ಸ್ವಾತಂತ್ರ್ಯದ ಮೇಲೆಯೇ ನಡೆದಿರುವ ದಾಳಿಯೆಂದೂ, ಈ ವರದಿ ಬಿಡುಗಡೆಯಿಂದ ಆಗುತ್ತಿರುವ ತಮ್ಮ ಶೇರುಗಳ ಕುಸಿತವೂ 1919ರಲ್ಲಿ ಬ್ರಿಟಿಷ್ ವಸಹಾತುಶಾಹಿಗಳು ಜಲಿಯನ್ವಾಲಾ ಬಾಗ್ನಲ್ಲಿ ನಡೆಸಿದ ಭಾರತೀಯರ ಕಗ್ಗೊಲೆಗೆ ಸಮವೆಂದು ಹೇಳುತ್ತಾ ಭಾರತದ ಬಾವುಟದಡಿಯಲ್ಲಿ ಬಚ್ಚಿಟುಕೊಳ್ಳುವ ಪ್ರಯತ್ನ ನಡೆಸಿದೆ. ಆ ಸುದೀರ್ಘ ಉತ್ತರದಲ್ಲಿ ಮೊದಲ 30 ಪುಟಗಳನ್ನು ಬಿಟ್ಟರೆ ಮಿಕ್ಕಿದ್ದೆಲ್ಲಾ ಹಲವಾರು ಪ್ರಕರಣಗಳಲ್ಲಿ ಅದಾನಿ ಪರವಾಗಿ ಕೆಲವು ಟ್ರಿಬ್ಯುನಲ್ಗಳು ಮತ್ತು ಕೋರ್ಟುಗಳು ಕೊಟ್ಟಿರುವ ತೀರ್ಪುಗಳನ್ನು ಇಡಿಯಾಗಿ ಕೊಡಲಾಗಿದೆ. ಆಷ್ಟು ಮಾತ್ರವಲ್ಲ ಕೊನೆಯ ಹತ್ತುಪುಟಗಳಂತೂ ಇತೀಚೆಗೆ ಭಾರತ ಸರಕಾರ ಬ್ಯಾನ್ ಮಾಡಿದ ಹಲವಾರು ಯೂಟ್ಯೂಬ್ ಚಾನೆಲ್ಗಳ ಪಟ್ಟಿಯನ್ನು ಒದಗಿಸಿದೆೆ. ಮೊದಲ ಮೂವತ್ತು ಪುಟಗಳಲ್ಲೂ ಹಿಂಡನ್ಬರ್ಗ್ ಕೇಳಿದ ಯಾವ ಪ್ರಶ್ನೆಗಳಿಗೂ ನೇರವಾಗಿ ಉತ್ತರಿಸಿಲ್ಲ. ಬದಲಿಗೆ ಪ್ರಶ್ನೆ ಕೇಳಿದ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದೆ.
ಇದು ಅದಾನಿ ಕಂಪೆನಿಯ ಮೇಲೆ ಮಾಡಲಾಗಿರುವ ಆರೋಪಗಳು ಸತ್ಯವೇ ಇರಬಹುದೆಂಬ ಅಭಿಪ್ರಾಯವನ್ನು ಜಾಗತಿಕವಾಗಿ ಗಟ್ಟಿಗೊಳಿಸುತ್ತಿದೆ. ಇದರಿಂದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮಲ್ಲಿದ್ದ ಅದಾನಿ ಶೇರುಗಳನ್ನು ಸಿಕ್ಕ ಬೆಲೆಗೆ ಮಾರಿಬಿಡುತ್ತಿರುವುದರಿಂದ ಅದಾನಿ ಸಮೂಹದ ಕಂಪೆನಿಗಳ ಶೇರುಬೆಲೆ ಸತತವಾಗಿ ಕುಸಿಯುತ್ತಾ ನಿನ್ನೆ ಚೇತರಿಸಿಕೊಂಡಿದೆ. ಇದರಿಂದಾಗಿ ಅದಾನಿಯ ಶೇರು ಸಂಪತ್ತಿನ ಮಾರುಕಟ್ಟೆ ಮೌಲ್ಯ 4-5 ಲಕ್ಷ ಕೋಟಿಗಳಷ್ಟು ಕುಸಿದಿದೆ. ಅದಾನಿ ಸಮೂಹದ ಶೇರುಗಳನ್ನು ಅಪಾರ ಪ್ರಮಾಣದಲ್ಲಿ ಖರೀದಿಸಿದ್ದ ಸಾರ್ವಜನಿಕ ಸಂಸ್ಥೆಗಳಾದ ಎಲ್ಐಸಿ, ಎಸ್ಬಿಐನ ಶೇರುಗಳ ಮಾರುಕಟ್ಟೆ ಮೌಲ್ಯವೂ ಹತ್ತಾರು ಸಾವಿರ ಕೋಟಿಗಳಷ್ಟು ಕುಸಿದಿದೆ. ಹೀಗಾಗಿ ಈಗ ಇದು ಕೇವಲ ಅದಾನಿ ಮತ್ತು ಅವರ ಶೇರುದಾರರ ಸಮಸ್ಯೆಯಾಗಿ ಮಾತ್ರ ಉಳಿಯದೆ ಇಡೀ ಈ ದೇಶದ ಸಮಸ್ಯೆ ಆಗಿ ಪರಿಣಮಿಸಿದೆ.
ಆದರೆ ಮೋದಿ ಸರಕಾರ, ಬಿಜೆಪಿ ಮಹಾಮೌನಕ್ಕೆ ಜಾರಿವೆ. ಕನಿಷ್ಠ ಒಂದು ತನಿಖೆಗೆ ಕೂಡ ಆದೇಶಿಸಿಲ್ಲ. ಸಂಘಪರಿವಾರದ ಅಂಗ ಸಂಘಟನೆಯಾಗಿರುವ ‘ಸ್ವದೇಶಿ ಜಾಗರಣ್ ಮಂಚ್’ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದಾನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ! ಬಿಜೆಪಿ ವಕ್ತಾರರು ಸಾರಾಂಶದಲ್ಲಿ ಅದನ್ನೇ ಮಾಡುತ್ತಿದ್ದಾರೆ. ದೇಶವೆಂದರೆ ಮೋದಿ ಎನ್ನುತ್ತಿದ್ದವರು ಈಗ ದೇಶವೆಂದರೆ ಅದಾನಿ ಎನ್ನುತ್ತಿದ್ದಾರೆ. ಈ ಹಗರಣದಿಂದ ಕಷ್ಟಪಟ್ಟು ಗಳಿಸಿದ ಉಳಿತಾಯದ ಹಣವನ್ನು ಕಳೆದುಕೊಳ್ಳುತ್ತಿರುವ ವಂಚಿತ ಹೂಡಿಕೆದಾರರ, ವಿಮಾದಾರರ, ಡಿಪಾಸಿಟುದಾರರನ್ನು ಭಾರತೀಯರೆಂದು ಭಾವಿಸದೆ ಅದಾನಿಯನ್ನು ರಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ ಈ ತಥಾಕಥಿತ ‘ದೇಶ ರಕ್ಷಕರು’!
ಇನ್ನು ಮಾಧ್ಯಮಗಳು! ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾಲದಲ್ಲಿ ಇಂತಹ ಹಗರಣಗಳು ನಡೆದಿದ್ದರೆ ಪುಟಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ಉತ್ಪ್ರೇಕ್ಷಿತ ಚರ್ಚೆಗಳನ್ನು ನಡೆಸುತ್ತಿದ್ದ ಮಾಧ್ಯಮಗಳು ಈಗ ದೇಶದಲ್ಲಿ ಏನೂ ನಡೆದೇ ಇಲ್ಲವೇನೊ ಎಂಬಂತೆ ಮೌನವಹಿಸಿವೆ. ಕೆಲವು ಮಾಧ್ಯಮಗಳು ಅದಾನಿಯಂತೆ ಇದು ಭಾರತೀಯರ ಮೇಲೆ ಅಮೆರಿಕ ನಡೆಸಿರುವ ದಾಳಿ ಎನ್ನುವಂತೆ ಬರೆಯುತ್ತಿವೆ.
ವಾಸ್ತವದಲ್ಲಿ ಈ ಹಗರಣವು ಮಂಜುಗಡ್ಡೆಯ ತುದಿಯನ್ನು ಮಾತ್ರ ತೋರಿಸುತ್ತಿದೆ. ಸಾಮಾನ್ಯ ವ್ಯಾಪಾರಿಯಾಗಿದ್ದ ಅದಾನಿ ಜಗತ್ತಿನ ಮೂರನೇ ಅತಿದೊಡ್ದ ಶ್ರೀಮಂತನಾದ ಹಾಗೂ ಆರೆಸ್ಸೆಸ್ನ ದ್ವೇಷ ರಾಜಕೀಯದ ಸಾಮಾನ್ಯ ಕಾರ್ಯಕರ್ತರಾಗಿದ್ದ ಮೋದಿ ದೇಶದ ಪ್ರಧಾನಿಯಾದ ‘ಬೆಳವಣಿಗೆ’ಯ ಕಥನವು ಭಾರತದ ರಾಜಕೀಯ ಮತ್ತು ಆರ್ಥಿಕತೆಯ ಅಧಃಪತನದ ಕಥನವೂ ಆಗಿದೆ. ಭಾರತದ ಈ ಅಧಃಪತನಕ್ಕೆ ಇವರಿಬ್ಬರೂ ರಾಜಕೀಯ ಮತ್ತು ಆರ್ಥಿಕ ರೂಪಕಗಳೂ ಆಗಿದ್ದಾರೆ. ಹೀಗಾಗಿ ಇಂದು ಅದಾನಿಯ ಶೇರು ಹಗರಣವನ್ನು ಕೇವಲ ಒಂದು ಕಾರ್ಪೊರೇಟ್ ಸಂಸ್ಥೆ ಮಾಡಿರಬಹುದಾದ ಮೋಸದಾಟ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಹೀಗಾಗಿ ಇಂದು ಬಯಲಿಗೆ ಬಂದಿರುವ ಅದಾನಿ ಸಂಸ್ಥೆಯ ಬೃಹತ್ ಶೇರು ಹಗರಣವು ಕಳೆದೆರಡು ದಶಕಗಳಿಂದ ಅದರಲ್ಲೂ ಕಳೆದ ಎಂಟು ವರ್ಷಗಳಿಂದ ಭಾರತವು ಅನುಸರಿಸುತ್ತಾ ಬಂದಿರುವ ರಾಜಕೀಯ-ಆರ್ಥಿಕತೆಯ ಪರಿಣಾಮವೇ ಆಗಿದೆ. ಅದರ ಮೂಲಗಳನ್ನು ಅರ್ಥಮಾಡಿಕೊಂಡು ಸರಿಯಾದ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರವನ್ನು ಕಂಡುಕೊಳ್ಳಲು ಯತ್ನಿಸದಿದ್ದರೆ, ಆತಂಕದಿಂದ ಉತ್ಪ್ರೇಕ್ಷಿತ ಆತಂಕಗಳಿಗೋ, ಸಮಾಧಾನಗಳಿಗೋ ಗುರಿಯಾಗಬೇಕಾಗುತ್ತದೆ. ಆದ್ದರಿಂದ ನಡೆದಿರುವ ಹಗರಣದ ರೀತಿಯನ್ನು ‘ಹೇಗಿದೆಯೋ ಹಾಗೆ’ ಅರ್ಥಮಾಡಿಕೊಂಡು ಅದನ್ನು ಆಗಗೊಳಿಸಿದ ಮೂಲ ಕಾರಣವನ್ನು ಹುಡುಕೋಣ...
ಸ್ಟಾಕ್ ಮಾರ್ಕೆಟ್- ಬಂಡವಾಳಶಾಹಿಗೆ ಸಾಮಾಜಿಕ ನೆಲೆ ಒದಗಿಸುವ ಜಾತಿವ್ಯವಸ್ಥೆ
ಆಧುನಿಕ ಬಂಡವಾಳಶಾಹಿ ಕಂಡುಕೊಂಡಿರುವ ಸ್ಟಾಕ್ ಮಾರ್ಕೆಟ್ ಕ್ಯಾಪಿಟಲಿಸಂ ಒಂದು ಬಗೆಯ ಜಾತಿ ವ್ಯವಸ್ಥೆಯಿದ್ದಂತೆ. ಜಾತಿ ವ್ಯವಸ್ಥೆಯು ತನ್ನ ಶ್ರೇಣೀಕರಣದ ವ್ಯವಸ್ಥೆಯಿಂದಾಗಿ ಪ್ರತಿಯೊಂದು ಜಾತಿಗೂ ಜಾತಿಯನ್ನು ಉಳಿಸಿಕೊಳ್ಳುವ ಪ್ರಜ್ಞೆಯನ್ನು ಕೊಟ್ಟಿದೆಯೇ ವಿನಾ ಜಾತಿ ವಿನಾಶದ ಪ್ರಜ್ಞೆಯನ್ನಲ್ಲ. ಏಕೆಂದರೆ ಈ ಜಾತಿ ಏಣಿಯು ಪ್ರತಿಯೊಂದು ಜಾತಿಗೂ ತನ್ನ ಕೆಳಗಿನ ಜಾತಿಗಿಂತ ತಾನು ಮೇಲಿನವ-ಸಾಪೇಕ್ಷ ಬ್ರಾಹ್ಮಣ-ಉತ್ತಮ ಎಂಬ ವಂಚಕ ಪ್ರಜ್ಞೆಯನ್ನು ನೀಡುತ್ತದೆ. ಹಾಗೆಯೇ ಬಂಡವಾಳಶಾಹಿ ಸ್ಟಾಕ್ ಮಾರ್ಕೆಟ್ ವ್ಯವಸ್ಥೆಯು ಪ್ರತಿಯೊಬ್ಬ ಶೇರುದಾರನನ್ನು ಚಿಲ್ಲರೆ ಬಂಡವಾಳಿಗನನ್ನಾಗಿ ಮಾಡುವ ಮೂಲಕ ಬಂಡವಾಳಶಾಹಿ ವ್ಯವಸ್ಥೆಯ ಭಾಗವನ್ನಾಗಿ ಮಾಡಿಕೊಳ್ಳುತ್ತದೆ. ಈ ರೂಪದಲ್ಲಿ ಬಂಡವಾಳಶಾಹಿ ಭದ್ರ ಸಾಮಾಜಿಕ ನೆಲೆಯನ್ನು ಕಂಡುಕೊಂಡಿದೆ. ಆದರೆ ಈ ವ್ಯವಸ್ಥೆಯಲ್ಲಿ ದೊಡ್ಡ ಕಾರ್ಪೊರೇಟ್ ತಿಮಿಂಗಿಲ ಬಂಡವಾಳಶಾಹಿಗಳಿಂದ ಅತ್ಯಂತ ವಂಚನೆಗೊಳಗಾಗುವರು ಈ ಸಣ್ಣ ಚಿಲ್ಲರೆ ಹುಸಿ ಬಂಡವಾಳಶಾಹಿಗಳೇ. ಅದಕ್ಕೆ ಶಾರ್ಟಿಂಗ್ ಮತ್ತು ಲಾಂಗ್ ಪೊಸಿಷನಿಂಗ್ ಎಂಬ ಎರಡು ವ್ಯವಸ್ಥೆಯನ್ನು ಅದು ಹುಡುಕಿಕೊಂಡಿದೆ.
ಶಾರ್ಟ್ ಸೇಲ್-ಲಾಂಗ್ ಸೇಲ್- ಸ್ಟಾಕ್ ಮಾರ್ಕೆಟ್ನ ಎರಡು ಕಾನೂನುಬದ್ಧ ವಂಚನೆಗಳು:
ಶೇರು ಮಾರುಕಟ್ಟೆಯೆಂಬುದು ಈಗ ಒಂದು ಕಾನೂನು ಬದ್ಧ ಆದರೆ ಬಲವಿದ್ದವನು ಮಾತ್ರ ಲಾಭ ಮಾಡಿಕೊಂಡು, ಬಲಹೀನರು ತತ್ತರಿಸುವ ಒಂದು ಸ್ಟಾಕ್ ಜೂಜುಕಟ್ಟೆ. ಆದರೆ ಮೂಲದಲ್ಲಿ ಅದು ಬಂಡವಾಳಶಾಹಿಗಳು ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಲು ಅಥವಾ ಬೆಳೆಸಲು ಜನರಿಂದ ಬಂಡವಾಳ ಸಂಗ್ರಹಿಸುವ ಪದ್ಧತಿಯು ಈ ಸ್ಟಾಕ್ ಮಾರ್ಕೆಟ್ನ ಪುರಾತನ ಸ್ವರೂಪ. ಜನರು ಹಾಕಿದ ಬಂಡವಾಳಕ್ಕೆ ವರ್ಷಾಂತ್ಯಕ್ಕೆ ಉದ್ಯಮ ಪಡೆದ ಲಾಭವನ್ನು ಅವರು ಹಾಕಿದ ಬಂಡವಾಳದ ಅನುಪಾತಕ್ಕೆ ಹಂಚುವುದನ್ನು ಡಿವಿಡೆಂಡ್ ಎನ್ನುತ್ತಾರೆ.
ಇಷ್ಟೇ ಆಗಿದ್ದರೆ ಇದರಲ್ಲಿ ಅಂತಹ ದೊಡ್ಡ ಸಮಸ್ಯೆಯೇನೂ ಇರಲಿಲ್ಲ.
ಆದರೆ ಬಂಡವಾಳಶಾಹಿಯ ಲಾಭದ ಬಿಕ್ಕಟ್ಟು ಹೆಚ್ಚುತ್ತಾ ಹೋದಂತೆ ಜನರಿಂದ ಶೇರು ಸಂಗ್ರಹಿಸಿ, ಉತ್ಪಾದನೆ ಮಾಡಿ, ಮಾರುಕಟ್ಟೆ ಮಾಡಿ, ಅದರಿಂದ ಲಾಭವನ್ನು ಪಡೆಯುವ ಪ್ರಕ್ರಿಯೆಗಿಂತ ಬೇರೆಬೇರೆ ಕಂಪೆನಿಗಳ ಶೇರುಗಳನ್ನು ಕೊಂಡು ಅದರ ಬೆಲೆಯನ್ನು ಕೃತಕವಾಗಿ ಹಿಗ್ಗಿಸಿಯೋ, ಕುಗ್ಗಿಸಿಯೋ ದಿನಾಂತ್ಯಕ್ಕೆ ಹೂಡಿಕೆಗಿಂತ ಹಲವಾರು ಪಟ್ಟು ಹಣ ಮಾಡಿಕೊಳ್ಳುವ ಜೂಜು ಹೆಚ್ಚಿನ ಲಾಭಕರ ಎಂದು ಬಂಡವಾಳಶಾಹಿಗಳು ಮತ್ತು ಅವರ ಹಿತಕಾಯುವ ಪ್ರಭುತ್ವಗಳು ಅರ್ಥಮಾಡಿಕೊಂಡವು. ಇದರ ಭಾಗವಾಗಿಯೇ ಎರಡನೇ ಮಹಾಯುದ್ಧದ ನಂತರ ಜಗತ್ತಿನಾದ್ಯಂತ ಶೇರು ಕೊಂಡು ಶೇರು ಮಾರುವ ಜೂಜು ಮಾರುಕಟ್ಟೆಯಾದ ಸ್ಟಾಕ್ ಮಾರುಕಟ್ಟೆಯನ್ನು ತೆರೆಯಲು ಐಎಂಎಫ್ ತಾಕೀತು ಮಾಡಿತು. 1991ರ ನಂತರ ಭಾರತದಂಥ ದೇಶಗಳಲ್ಲಿ ಇಂತಹ ವ್ಯವಹಾರಗಳು ದೇಶದ ಆರ್ಥಿಕತೆ ಮತ್ತು ಜನರ ಬದುಕನ್ನು ಹಾಳು ಮಾಡದಂತೆ ಮಾಡಿಕೊಂಡಿದ್ದ ಬಹುಪಾಲು ನಿಬಂಧನೆಗಳನ್ನು ತೆಗೆದು ಹಾಕಿದರು. ಒಂದು ಅರ್ಥದಲ್ಲಿ ಇದು ಜಾಗತಿಕ ವ್ಯವಸ್ಥೆಯಾಗಿ ಬಂಡವಾಳಶಾಹಿಯ ಅಧಃಪತನದ ಸೂಚಕವೂ ಆಗಿತ್ತು. ಅಲ್ಲಿಂದಾಚೆಗೆ ಶೇರು ಮಾರುಕಟ್ಟೆಯೇ ವಾಸ್ತವಿಕ ಉತ್ಪಾದಕ ವ್ಯವಸ್ಥೆ ಮತ್ತು ಹೂಡಿಕೆಗಿಂತ ಪ್ರತ್ಯೇಕವಾದ ಜೂಜುಕೋರ ಉದ್ಯಮವಾಗಿಬಿಟ್ಟಿತು. ಅಷ್ಟು ಮಾತ್ರವಲ್ಲ. ವಾಸ್ತವಿಕ ಸೇವೆ-ಸರಕುಗಳ ಉತ್ಪಾದನೆ ಕ್ಷೇತ್ರದ ಆರ್ಥಿಕತೆಗಿಂತ ಹತ್ತಾರುಪಟ್ಟು ಹೆಚ್ಚಿನ ಮೌಲ್ಯದ ವ್ಯವಹಾರ ಮಾಡುತ್ತಾ ಅತ್ಯಂತ ಬೃಹತ್ ಹಾಗೂ ಅತಿ ಚಂಚಲ ಅತಿ ಅಪಾಯಕಾರಿ ಕ್ಷೇತ್ರವಾಗಿ ಜಗತ್ತನ್ನು ಆವರಿಸಿಕೊಳ್ಳುತ್ತಾ ಬಂದಿದೆ.
ಸಾಮಾನ್ಯವಾಗಿ ಈ ಇಡೀ ಪ್ರಕ್ರಿಯೆ ‘ಕಡಿಮೆ ಬೆಲೆಗೆ ಶೇರುಗಳನ್ನು ಕೊಂಡು, ಅವುಗಳನ್ನು ಹೆಚ್ಚಿನ ಬೆಲೆಗೆ ಮಾರುವ’ ಪದ್ಧತಿಯನ್ನು ಅನುಸರಿಸುತ್ತವೆ. ಅದರಲ್ಲಿ ಎರಡು ಬಗೆ. ಒಂದು ಶೇರನ್ನು ಖರೀದಿಸಿ, ಅದಕ್ಕೆ ಹೆಚ್ಚಿಗೆ ಬೆಲೆ ಬಂದಾಗ ಮಾರುವುದನ್ನು ಲಾಂಗ್ ಪೊಸಿಷನಿಂಗ್ ಎನ್ನುತ್ತಾರೆ. ಒಂದು ಶೇರಿನ ಬೆಲೆ ಕುಸಿಯುತ್ತದೆ ಎಂದು ಅಂದಾಜಿಸಿ ತನ್ನ ಬಳಿಯಿರುವ ಅಥವಾ ಇತರರ ಬಳಿ ಇರುವ ಆ ಶೇರನ್ನು ಹಾಲಿ ಬೆಲೆಗೆ ಮಾರಾಟ ಮಾಡಿ, ಅದರ ಬೆಲೆ ಕುಸಿದಾಗ ಮತ್ತೆ ಅದನ್ನು ಖರೀದಿಸುವುದನ್ನು ಶಾರ್ಟ್ ಪೊಸಿಷನಿಂಗ್ ಎನ್ನುತ್ತಾರೆ. ಶಾರ್ಟ್ ಪೊಸಿಶನಿಂಗ್ ವ್ಯವಸ್ಥೆಯಲ್ಲಿ ರಿಸ್ಕು ಹೆಚ್ಚು. ಅಂದುಕೊಂಡಂತೆ ಶೇರಿನ ಬೆಲೆ ಕುಸಿಯದಿದ್ದಲ್ಲಿ ನಷ್ಟವಾಗುತ್ತದೆ.
ಅದೇರೀತಿ ಅಂದುಕೊಂಡಂತೆ ಶೇರುಗಳ ಬೆಲೆಯಲ್ಲಿ ಹೆಚ್ಚಳವಾಗದಿದ್ದರೂ ಲಾಭವಿಲ್ಲ. ಒಂದು ವ್ಯಾವಹಾರಿಕ ಸನ್ನಿವೇಶದಲ್ಲಿ ಒಂದು ಶೇರಿನ ಬೆಲೆ ಇಳಿಯಲು ಅಥವಾ ಏರಲು ಮಾರುಕಟ್ಟೆಯಲ್ಲಿ ಆ ಕಂಪೆನಿಯ ಲಾಭದಾಯಕತೆ, ಆ ಕಂಪೆನಿಯ ಉತ್ಪನ್ನದ ಮೇಲೆ ಪ್ರಭಾವ ಬೀರುವ ಸರಕಾರದ ನೀತಿಗಳು ಇತ್ಯಾದಿಗಳು ಮತ್ತು ಇವೆಲ್ಲವನ್ನು ಆಧರಿಸಿ ಆ ಕಂಪೆನಿಯ ಬಗ್ಗೆ ಹೂಡಿಕೆದಾರರಲ್ಲಿರುವ ಭಾವನೆ-ಸೆಂಟಿಮೆಂಟ್- ಇವುಗಳು ತೀರ್ಮಾನ ಮಾಡಬೇಕು. ಆದರೆ ಅದನ್ನು ಕಾಯುತ್ತಾ ಕೂತರೆ ಲಾಭವಾಗುವುದು ನಿಧಾನ, ಲಾಭದ ಪ್ರಮಾಣವು ಕಡಿಮೆ.
ಹೀಗಾಗಿ ಕೃತಕವಾಗಿ ಶೇರುಗಳ ಬೆಲೆಯನ್ನು ಏರಿಸಿ ಅಥವಾ ಇಳಿಸಿ ಆ ಮೂಲಕ ಮಾರುಕಟ್ಟೆಯಲ್ಲಿ ತಮಗೆ ಬೇಕಾದಂತಹ ಖರೀದಿ ಮನೋಭಾವ ಸೃಷ್ಟಿಸಿ ಕೋಟ್ಯಂತರ ಲಾಭ ಮಾಡಿಕೊಳ್ಳುವ ದಲ್ಲಾಳಿಗಳು ಹುಟ್ಟಿಕೊಂಡರು. ಹರ್ಷದ್ ಮೆಹ್ತಾನಂಥ ಶೇರು ದಲ್ಲಾಳಿಗಳು 1991ರಲ್ಲಿ ತಾವೇ ಕೃತಕವಾಗಿ ಹೆಚ್ಚಿನ ಬೆಲೆಗೆ ಶೇರುಗಳನ್ನು ಖರೀದಿಸಿ ಮಾರುಕಟ್ಟೆಯಲ್ಲಿ ತಮ್ಮ ಶೇರುಗಳ ಬೆಲೆ ಹತ್ತಾರುಪಟ್ಟು ಹೆಚ್ಚುವಂತೆ ಮಾಡಿಕೊಂಡು ಲಾಭ ಮಾಡಿಕೊಂಡರು. ಕೆಲವು ತಿಂಗಳ ನಂತರ ಅದರ ಬೆಲೆಗಳು ದಿಢೀರ್ ಕುಸಿದಿದ್ದರಿಂದ ಲಕ್ಷಾಂತರ ಸಣ್ಣ ಉಳಿತಾಯದಾರರು ಬೀದಿಪಾಲಾದರು. ಇದು ದೊಡ್ದ ವಂಚನೆ. ಆ ನಂತರ ಆ ಅಪರಾಧಕ್ಕೆ ಆತನಿಗೆ ಶಿಕ್ಷೆಯಾಯಿತು.
ಅದಾನಿ-ಆಧುನಿಕ ಹರ್ಷದ್ ಮೆಹ್ತಾ?
ಆದರೆ ಇಂದಿನ ಅದಾನಿ ಆಗಿನ ಶೇರುಗಳನ್ನು ಶಾರ್ಟ್ ಮಾಡುತ್ತಾ ಲಾಂಗ್ ಮಾಡುತ್ತಾ ಹರ್ಷದ್ ಮೆಹ್ತಾನಿಗಿಂತಲೂ ಹತ್ತುಪಟ್ಟು ಹೆಚ್ಚಿನ ವಂಚನೆ ಮಾಡುತ್ತಿದ್ದಾರೆ ಎನ್ನುವುದೇ ಹಿಂಡನ್ಬರ್ಗ್ ಸಂಸ್ಥೆಯ ಆರೋಪದ ತಿರುಳು. ಹಾಗೆ ನೋಡಿದರೆ ಅನತಿ ಕಾಲದಲ್ಲೇ ಅದಾನಿ ಕಂಪೆನಿಯು ಮುಟ್ಟಿರುವ ಎತ್ತರದ ಹಿಂದೆ ಅತ್ಯಂತ ಅಪಾಯಕಾರಿ ಸೂಚನೆಗಳಿವೆ ಎಂದು ಕಳೆದ ಕೆಲವು ವರ್ಷಗಳಿಂದ ಹಲವಾರು ಸ್ವತಂತ್ರ ಸಂಸ್ಥೆಗಳು ವರದಿ ಮಾಡುತ್ತಲೇ ಇವೆ. 2021-22ರಲ್ಲಿ ಬಿಡುಗಡೆಯಾದ ಕೆಲವು ತನಿಖಾ ವರದಿಗಳ ಪ್ರಕಾರ ಅದಾನಿ ಸಂಸ್ಥೆಗಳ ಶೇರನ್ನು ಅತ್ಯಂತ ಹೆಚ್ಚು ದರಗಳಿಗೆ ಮಾರಿಷಸ್, ಸಿಂಗಾಪುರ, ಕೇಮ್ಯಾನ್ ಐಲ್ಯಾಂಡ್ ಇನ್ನಿತ್ಯಾದಿಗಳಲ್ಲಿ ನೆಲೆಹೊಂದಿರುವ ಸಾಗರೋತ್ತರ ಕಂಪೆನಿಗಳಾದ Albula, Cresta Fund, APMS Investment Fund ಮತ್ತು Asia Investment Corporation ನಂಥ ಕಂಪೆನಿಗಳು ಸುಮಾರು 45,000 ಕೋಟಿ ಹಣವನ್ನು ಹೂಡಿ ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಅದಾನಿ ಶೇರನ್ನು ಖರೀದಿ ಮಾಡಿದ್ದವು. ಅದರಿಂದ ಮಾರುಕಟ್ಟೆಯಲ್ಲಿ ದಿಢೀರನೆ ಅದಾನಿ ಶೇರು ಬೆಲೆ ಹತ್ತಾರು ಪಟ್ಟು ಹೆಚ್ಚಿತು ಮತ್ತು ಅದಾನಿ ಭಾರತದ ಎರಡನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಪಡೆದದ್ದು ಹೀಗೆ. ಆದರೆ ಅದಾನಿಯ ಶೇರು ಬೆಲೆ ಹೆಚ್ಚಿಸಿದ ಈ ಕಂಪೆನಿಗಳೆಲ್ಲಾ ಅದಾನಿಯ ಶೆಲ್ ಅಂದರೆ ಸುಳ್ಳು ಕಂಪೆನಿಗಳೇ ಎಂದು ಸ್ವತಂತ್ರ ಸಂಸ್ಥೆಗಳು ವರದಿ ಮಾಡಿದ್ದವು. ಪ್ರಾರಂಭದಲ್ಲಿ ಎನ್ಎಸ್ಡಿಎಲ್ ಅದಾನಿ ಸಮೂಹದ ಮೂರು ಕಂಪೆನಿಗಳ ಶೇರುಗಳನ್ನು ಸ್ಥಗಿತಗೊಳಿಸಿದರೂ ಆ ನಂತರ ತನಿಖೆ ತಾರ್ಕಿಕ ಅಂತ್ಯ ಮುಟ್ಟಲೇ ಇಲ್ಲ. ಈ ನಡುವೆ ರಾಜಾರೋಷವಾಗಿ ಅದಾನಿ ಶಾರ್ಟಿಂಗ್ ಲಾಂಗಿಂಗ್ ಮುಂದುವರಿಸಿದ್ದರು.
ಅಷ್ಟು ಮಾತ್ರವಲ್ಲ. ಅದಾನಿ ಮತ್ತು ಅಂಬಾನಿ ಕಂಪೆನಿ ಇಂತಹ ಯಾವುದೇ ಕಷ್ಟಕ್ಕೆ ಸಿಕ್ಕಿದರೂ ಮೋದಿ ಸರಕಾರ ಅವರ ರಕ್ಷಣೆಗೆ ಮುಂದಾಗಿದೆ. ಉದಾಹರಣೆಗೆ 2021ರಲ್ಲಿ ಅಡಿ CreditSight ಎಂಬ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಯು ಅದಾನಿ ಸಮೂಹ ತನ್ನ ಉತ್ಪಾದನಾ ಸಾಮರ್ಥ್ಯಕ್ಕಿಂತಲೂ ಹಲವು ಪಟ್ಟು ಹೆಚ್ಚಿನ ಸಾಲಗಳನ್ನು ಮಾಡಿದೆ ಮತ್ತು ತನಗೆ ಅನುಭವವಿಲ್ಲದ ಕ್ಷೇತ್ರಗಳಲ್ಲಿ ವಿಸ್ತರಣೆ ಮಾಡುತ್ತಿದೆ. ಅದಾನಿ ಸಮೂಹದ ಉತ್ಪಾದಕತೆ ಮತ್ತು ಲಾಭದಾಯಕತೆ ಅತ್ಯಂತ ಅಪಾಯಕಾರಿಯಾಗಿದೆ. ಇದು ಹೀಗೆ ಮುಂದುವರಿದರೆ ಅದಾನಿ ಕಂಪೆನಿ ಕೊಟ್ಟ ಸಾಲ ವಾಪಸ್ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿತ್ತು. ಆ ನಂತರವೂ ಮೋದಿಯವರ ಆದೇಶದ ಮೇರೆಗೆ ಸಾರ್ವಜನಿಕ ಸಂಸ್ಥೆಯಾದ ಎಲ್ಐಸಿ ಮತ್ತು ಎಸ್ಬಿಐಗಳು ಸಾವಿರಾರು ಕೋಟಿ ಸಾಲ ಕೊಟ್ಟು ಅದಾನಿಯನ್ನು ಬೆಳೆಸಿದವು ಮತ್ತು ಅದಾನಿಯ ಶೇರುಗಳನ್ನು ಅತಿ ಹೆಚ್ಚು ಕೊಂಡಿರುವುದು ಎಲ್ಐಸಿ.
ಈಗ ಹಿಂಡನ್ಬರ್ಗ್ ಸಂಸ್ಥೆ ಅದಾನಿಯ ಹೇರಾಫೇರಿಯ ಬಗ್ಗೆ ಮತ್ತೊಂದು ವಿಶ್ವಾಸಾರ್ಹ ವರದಿಯನ್ನು ಬಿಡುಗಡೆ ಮಾಡಿದೆ. ಇದು ಅದಾನಿ ಕಂಪೆನಿಯ ವಂಚನೆಯನ್ನು ಮಾತ್ರವಲ್ಲದೆ, ಸರಕಾರ ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳು ಜನರಿಗೆ ಮಾಡಿರುವ ವಂಚನೆಯನ್ನು ಎತ್ತಿ ತೋರಿಸುತ್ತಿವೆ.
ಕೇಳಲೇಬೇಕಿರುವ ಅಸಲಿ ಪಶ್ನೆಗಳು:
ಆದರೆ ಅದಾನಿ ಮುಳುಗುವುದಿಲ್ಲ. ಮೋದಿ ಸರಕಾರ - ಸಂಘಪರಿವಾರ ಅದಾನಿಯನ್ನು ಬಚಾವು ಮಾಡುತ್ತಾರೆ. ಏಕೆಂದರೆ ಒಬ್ಬರ ಭವಿಷ್ಯದ ಶೆೇರು ಮತ್ತೊಬ್ಬರ ವರ್ತಮಾನದಲ್ಲಿದೆ. ಈಗಾಗಲೇ ಎಲ್ಐಸಿ ರೂ. 300 ಕೋಟಿ ಹೂಡಿದೆ. ಯುಎಇಯ ರಾಜಕುಮಾರ ರೂ. 9,000 ಕೋಟಿ ಹೂಡುತ್ತಿರುವುದು ಯಾರ ಒತ್ತಾಸೆಯ ಮೇರೆಗೆ ಎಂಬುದು ತಿಳಿಯದ ವಿಷಯವೇನಲ್ಲ. ಅಡ್ರೆಸ್ಸೇ ಸರಿ ಇಲ್ಲದ ಹಲವು ಕಂಪೆನಿಗಳು ಸಾಗರಾದಾಚೆಯಿಂದ ಸಂತ್ರಸ್ತನಾಗಿರುವ ಅದಾನಿಯಲ್ಲಿ ಹೂಡಿಕೆಯ ಆಸಕ್ತಿ ತೋರಿಸಿವೆ. ಎಲ್ಐಸಿಯಾಗಲೀ, ಎಸ್ಬಿಐ ಆಗಲೀ, ತಮ್ಮ ಹೂಡಿಕೆಯ ಬಗ್ಗೆ ಮರುಚಿಂತನೆ ಮಾಡುವ ಉದ್ದೇಶವನ್ನು ತೋರಿಲ್ಲ. ಸೆಬಿ ಅಂತಹ ಒಂದು ಇದೆ ಎಂಬುದೇ ಗೊತ್ತಾಗದಂತೆ ಮೌನ ಸಹಕಾರ ಕೊಡುತ್ತಿದೆ. ಸ್ವದೇಶಿ ಜಾಗರಣ ಮಂಚ್ ಅದಾನಿ ಪರವಾಗಿ ಯುದ್ಧ ಸಾರಿದೆ.
ಹೀಗಾಗಿ ಅದಾನಿ ತೇಲುತ್ತಾರೆ. ಆದರೆ ಭಾರತ ಮುಳುಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ನಿಜವಾದ ದೇಶಭಕ್ತರೆಲ್ಲರೂ ಈ ಪ್ರಶ್ನೆಗಳನ್ನು ಕೇಳಲೇಬೇಕಿದೆ:
1. ಶಾರ್ಟಿಂಗ್ ವ್ಯವಹಾರವನ್ನು ಜಗತ್ತಿನ ಹಲವಾರು ದೇಶಗಳು ನಿಷೇಧಿಸಿವೆ. ಭಾರತದಲ್ಲೂ 2001ರಿಂದ 2008ರ ವರೆಗೆ ಶಾರ್ಟಿಂಗ್ ಪದ್ಧತಿಯನ್ನು ರದ್ದುಗೊಳಿಸಲಾಗಿತ್ತು. 2020ರಲ್ಲಿಯೂ ಕೆಲವು ತಿಂಗಳು ಕಾಲ ನಿಷೇಧಿಸಲಾಗಿತ್ತು. ಆದರೂ ಆ ನಿಷೇಧವನ್ನು 2008ರಲ್ಲಿ ಕಾಂಗ್ರೆಸ್ ಮತ್ತು ಆನಂತರ ಬಿಜೆಪಿ ಸರಕಾರ ತೆಗೆದುಹಾಕಿ ಶಾರ್ಟಿಂಗ್ ವಂಚನೆಯನ್ನು ಕಾನೂನು ಬದ್ಧಗೊಳಿಸಿದ್ದೇಕೆ?
2. ಲಾಂಗ್ ಪೊಸಿಷನ್ ಮೂಲಕ ನಡೆಯುವ ವ್ಯವಹಾರದಲ್ಲಿ ಶೇರುಬೆಲೆಗಳು ಹೆಚ್ಚೆಂದರೆ ಎರಡುಪಟ್ಟಿಗಿಂತ ಜಾಸ್ತಿಯಾಗಬಾರದು ಎಂಬ ನಿಯಮವಿದೆ. ಆದರೆ ಕೆಲವು ಶೇರುಗಳ ಬೆಲೆ (ಅದಾನಿ ಇನ್ನಿತರ ಹಲವು) ಆ ಕಂಪೆನಿಗಳ ಲಾಭದಾಯಕತೆ ಅರೋಗ್ಯಕರವಾಗಿಲ್ಲದಿದ್ದರೂ ಜಾಸ್ತಿಯಾಗುತ್ತಿದ್ದರೂ, ಸರಕಾರ, ರೆಗ್ಯುಲೆಟರ್ ಆಗಿರುವ ‘ಸೆಬಿ’ ಮೌನ ಸಮ್ಮತಿ ನೀಡುತ್ತಾ ಬಂದಿರುವುದೇಕೆ?
3. 2019ರ ನಂತರ ಅದಾನಿಯ ಶೇರುಗಳ ಬೆಲೆ ಅಸಾಧಾರಣವಾಗಿ ಹೆಚ್ಚತೊಡಗಿತು. 2020ರಲ್ಲೇ ಸಾಗರೋತ್ತರ ಶೆಲ್ ಕಂಪೆನಿಗಳು ಅದಾನಿಯ ಕಂಪೆನಿಯಲ್ಲಿ ಹೂಡಿಕೆ ಮಾಡಿ ಶೇರು ಬೆಲೆ ಹೆಚ್ಚಿಸಿದವು. ಆ ಎಲ್ಲಾ ಕಂಪೆನಿಗಳ ಹೆಸರು ಸಹ ಪ್ಯಾರಡೈಸ್ ಪೇಪರ್ಸ್ನಲ್ಲಿ ಮಹಾ ವಂಚಕ ಕಂಪೆನಿಗಳ ಪಟ್ಟಿಯಲಿದ್ದವು. ಆದರೂ ಸೆಬಿ ಅದರ ಬಗ್ಗೆ ತನಿಖೆ ಪೂರೈಸುವ ಮುನ್ನವೇ ಹೊಸ ಶೇರುಗಳ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ?
4. ಅದಾನಿ ಸಮೂಹದ ಕಂಪೆನಿಗಳಲ್ಲಿ ಹೂಡಿಕೆ ರಿಸ್ಕು ಎಂದು ಎಚ್ಚರಿಕೆ ನೀಡಿದ್ದರೂ ಸಾರ್ವಜನಿಕ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳು ಈವರೆಗೆ 2.5 ಲಕ್ಷ ಕೋಟಿ ರೂ. ಸಾಲ ಕೊಟ್ಟಿರುವುದೇಕೆ? ಅದರ ವಸೂಲಾತಿಗೆ ಕ್ರಮ ತೆಗೆದುಕೊಳ್ಳದಿರುವುದೇಕೆ?
5. ಎಲ್ಐಸಿಯು ಮೊನ್ನೆ ಕೊಟ್ಟಿರುವ ಹೇಳಿಕೆಯ ಪ್ರಕಾರ ಅದು ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಸಮೂಹದ ರೂ. 30,000 ಸಾವಿರ ಕೋಟಿ ಮೌಲ್ಯದ ಶೇರುಗಳನ್ನು ಖರೀದಿ ಮಾಡಿದೆ. ಅದರ ಮಾರುಕಟ್ಟೆ ಮೌಲ್ಯ ರೂ. 73,000 ಕೋಟಿಯಾಗಿತ್ತು. ಹಿಂಡನ್ಬರ್ಗ್ ವರದಿಯ ನಂತರ ಅದಾನಿ ಸಮೂಹದ ಶೇರು ಬೆಲೆ ಕುಸಿದಿದ್ದರಿಂದ ಎಲ್ಐಸಿಯ ಹೂಡಿಕೆಯ ಮಾರುಕಟ್ಟೆ ಮೌಲ್ಯ ರೂ. 53,000 ಕೋಟಿಗಿಳಿದಿದೆ. ಅಂದರೆ ಎಲ್ಐಸಿಯು ಜೂಜು ಲಾಭದಲ್ಲಿ 20 ಸಾವಿರ ಕೋಟಿ ರೂ. ಕಡಿತವಾಗಿದ್ದರೂ ಅದರ ಹೂಡಿಕೆಗೆ ಹೋಲಿಸಿದರೆ ಈಗಲೂ ಅದು 23,000 ಕೋಟಿ ರೂ. ಲಾಭದಲ್ಲಿರುವುದು ನಿಜವಾದರೂ, ಇದು ಮಹಾ ರಿಸ್ಕಿನ ಹೂಡಿಕೆಯಲ್ಲವೇ? ಅಷ್ಟು ಮಾತ್ರವಲ್ಲದೆ ಮೊನ್ನೆ ಮತ್ತೆ 300 ಕೋಟಿ ರೂ. ಹೂಡಿಕೆ ಮಾಡಿದೆ. ಸಾರ್ವಜನಿಕರ ಹಣವನ್ನು ಹೀಗೆ ದೇಶವಂಚಕ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಸರಿಯೇ?
6. ಎಲ್ಐಸಿಯು ಹೂಡಿರುವುದು ಕೇವಲ ಅದಾನಿಯಲ್ಲಿ ಮಾತ್ರವಲ್ಲ. ಅಂಬಾನಿ ಹಾಗೂ ಟಾಟಾಗಳಲ್ಲಿಯೂ ಹೂಡಿದೆ. ಹೀಗಾಗಿ ಈಗ ಜನರ ಹಣವನ್ನು ಜನರ ಕಲ್ಯಾಣ ಯೋಜನೆಗಳನ್ನು ಮಾಡಲು ಸರಕಾರದಲ್ಲಿ ಹೂಡುವುದರ ಬದಲು ಸರಕಾರಕ್ಕೆ ಆಪ್ತರಾದ ಉದ್ಯಮಿಗಳ ಹಿತಾಸಕ್ತಿಯನ್ನು ರಕ್ಷಿಸಲು ಹೂಡುತ್ತಿರುವುದು 1991ರಿಂದಲೂ ನಡೆಯುತ್ತಾ ಬಂದಿದೆ. ಜನರ ದುಡ್ಡಿಂದ ಉದ್ಯಮಿಗಳನ್ನು ರಕ್ಷಿಸುವ ಈ ನವ ಉದಾರವಾದಿ ಹಣಕಾಸು ನೀತಿ ಜನದ್ರೋಹಿಯಲ್ಲವೇ?
7. ಸ್ಟಾಕ್ ಮಾರ್ಕೆಟ್ ಎಂಬುದೇ ಈಗ ಒಂದು ದೊಡ್ದ ಜೂಜು ತಾಣ. ಶಾರ್ಟಿಂಗ್ ಮತ್ತು ಲಾಂಗ್ ಪೊಸಿಷನ್ಗಳು ಬಲವಿದ್ದವರು, ಸರಕಾರದ ಬೆಂಬಲವಿರುವವರು ಇತರ ಶೇರುದಾರರನ್ನು ಸುಲಿದು ಕೊಬ್ಬಲು ಮಾಡಿಕೊಂಡಿರುವ ಏಕಪಕ್ಷೀಯ ರಣರಂಗ. ಇದರಿಂದ ವಾಸ್ತವಿಕ ಉತ್ಪಾದನಾ ರಂಗಕ್ಕೆ ಯಾವ ಅನುಕೂಲವೂ ಇಲ್ಲ. ಲಾಭಕೋರ ಬಂಡವಾಳಶಾಹಿಯು ಸಂಪತ್ತನ್ನು ತನ್ನಲ್ಲಿ ಕೇಂದ್ರೀಕರಿಸಿಕೊಳ್ಳಲು ಹುಡುಕಿಕೊಂಡಿರುವ ಈ ವಂಚಕ ಮಾರ್ಗ ಒಂದು ಸಮಬಾಳಿನ ಕನಸಿನ ಸಮಾಜಕ್ಕೆ ವಿರುದ್ಧವಲ್ಲವೇ? ಅರ್ಥಾತ್ ಬಂಡವಾಳಶಾಹಿ ವ್ಯವಸ್ಥೆಯ ಉತ್ಪನ್ನವೇ ಆಗಿರುವ ಈ ವಂಚಕ ಮಾರ್ಗಗಳನ್ನು ಬಂಡವಾಳಶಾಹಿ ಮಾರ್ಗಗಳಿಂದ ಸೋಲಿಸಬಹುದೇ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.