-

ಇಂದು ವಿಶ್ವ ಫಾರ್ಮಸಿಸ್ಟರ ದಿನ

-

ಪ್ರತೀ ವರ್ಷ ಸೆಪ್ಟಂಬರ್ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್ ಗಳು ವಿಶ್ವ ಫಾರ್ಮಸಿಸ್ಟ್‌ರ ದಿನ ಎಂದು ಆಚರಿಸಿರುತ್ತಾರೆ. 2009ರಲ್ಲಿ ಎಪ್‌ಐಪಿ ಅಂದರೆ ಇಂಟರ್‌ನ್ಯಾಶನಲ್ ಫಾರ್ಮಸುಟಿಕಲ್ ಪೆಡರೇಶನ್‌ನ ಆದೇಶದಂತೆ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ಫಾರ್ಮಸಿ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನು ವಿಮರ್ಶಿಸಿ, ಕುಂದು ಕೊರತೆಗಳನ್ನು ಪರಾಮರ್ಶಿಸಿ, ಮಗದೊಮ್ಮೆ ತಮ್ಮನ್ನು ತಮ್ಮ ವೃತ್ತಿಗೆ ಸಮರ್ಪಿಸಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸುದಿನ. ಪ್ರತೀ ವರ್ಷ ಏನಾದರೊಂದು ತಿರುಳನ್ನು ಇಟ್ಟುಕೊಂಡು ಈ ಆಚರಣೆಯನು ಮಾಡಿ, ಜನರಲ್ಲಿ ಮತ್ತು ವೃತ್ತಿ ಬಂಧುಗಳಲ್ಲಿ ಔಷಧಿಗಳ ಬಗ್ಗೆ ಹೆಚ್ಚಿನ ಅರಿವು, ಜಾಗೃತಿ ಮತ್ತು ಕಾಳಜಿ ಮೂಡಿಸುವ ಏಕಮೇವ ಆದ್ಯತೆಯನ್ನು ಈ ಆಚರಣೆ ಹೊಂದಿದೆ. 2015ರ ಆಚರಣೆಯ ತಿರುಳು ಏನೆಂದರೆ ಫಾರ್ಮಸಿಸ್ಟರು ನಿಮ್ಮ ಆರೋಗ್ಯದ ಒಡನಾಡಿ ಎಂಬುದಾಗಿದೆ. 2022 ರಲ್ಲಿ ಆರೋಗ್ಯಪೂರ್ಣ ವಿಶ್ವಕ್ಕಾಗಿ ಔಷಧಿ ತಜ್ಞರ ಒಗ್ಗೂಡುವಿಕೆ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಆರೋಗ್ಯ ಕ್ಷೇತ್ರ ಮತ್ತು ಫಾರ್ಮಸಿ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬ ಯಶಸ್ವಿ ವೈದ್ಯನ ಹಿಂದೆ ಖಂಡಿತವಾಗಿಯೂ ಒಂದು ಪರಿಣಾಮಕಾರಿ ಔಷಧಿ ಹಾಗೂ ನಿಷ್ಠಾವಂತ ಫಾರ್ಮಸಿಸ್ಟ್ ಇದ್ದೇ ಇರುತ್ತಾನೆ. ಒಳ್ಳೆಯ ಗುಣಮಟ್ಟದ, ಪರಿಣಾಮಕಾರಿ ಔಷಧಿ ತಯಾರಿಕೆ, ಸಂಸ್ಕರಣೆ, ಶೇಖರಣೆ ಮತ್ತು ಸಂಶೋಧನೆ ಎಲ್ಲವೂ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಅನಿವಾರ್ಯವೆನಿಸಿದೆ. ಫಾರ್ಮಕೋನ್ ಎಂಬ ಗ್ರೀಕ್ ಪದದಿಂದ ಹುಟ್ಟಿದ ಫಾರ್ಮಸಿ ಎಂಬ ಶಬ್ದಕ್ಕೆ ಹಲವಾರು ಅರ್ಥ ಮತ್ತು ಆಯಾಮಗಳು ಇವೆ. ಒಂದೇ ಮಾತಲ್ಲಿ ಹೇಳುವುದಾದರೆ ಔಷಧಿಗಳು ಉತ್ಪಾದನೆ, ಶೇಖರಣೆ, ವಿತರಣೆ, ಅಧ್ಯಯನ ಮತ್ತು ಆವಿಷ್ಕಾರ ಎಲ್ಲವೂ ಈ ಫಾರ್ಮಸಿ ಕಾರ್ಯಕ್ಷೇತ್ರದಲ್ಲಿಯೇ ಬರುತ್ತದೆ. ಫಾರ್ಮಸಿ ಕ್ಷೇತ್ರ ಅಂದರೆ, ಔಷಧಿ ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಹತೆ ಪಡೆದು ವೃತ್ತಿಪರವಾಗಿ ಈ ಔಷಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಎಲ್ಲರನ್ನೂ ಫಾರ್ಮಸಿಸ್ಟ್ ಎಂದು ಕರೆಯಲಾಗುತ್ತದೆ.

ಔಷಧಿಯ ದುರ್ಬಳಕೆ ತಡೆಯುವುದು ಹೇಗೆ?

ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಔಷಧಿ ಕ್ಷೇತ್ರವೂ ಈ ಸಮೀಕರಣಕ್ಕೆ ಹೊರತಾಗಿಲ್ಲ. ದಿನಕ್ಕೊಂದರಂತೆ ಹೊಸ ಹೊಸ ಅಣುಜೀವಿಗಳು, ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತಿವೆ. ಅದೇ ರೀತಿ ಹೊಸತಾದ ಔಷಧಿಗಳೂ ಹುಟ್ಟಿಕೊಳ್ಳುತ್ತಿವೆ. ವಾತಾವರಣದ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ವಿಕಿರಣ, ವಾತಾವರಣದ ಕಲ್ಮಶ ಗಳಿಂದಲೂ ಅಣುಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ದಿನೇ ದಿನೇ ವಂಶವಾಹಿನಿಗಳಲ್ಲಿ ಪರಿವರ್ತನೆ ಮಾಡಿಸಿಕೊಂಡು ಮನುಕುಲದ ವಿರುದ್ಧ ತೊಡೆತಟ್ಟಿಕೊಂಡು ಸಮರ ಸಾರುತ್ತಲೇ ಇದೆ. ಈಗ ಪ್ರತಿಯೊಂದು ರೋಗಕ್ಕೂ ಒಂದು ಔಷಧಿ ಇದೆ. ಈಗಿನ ಕಾಲಘಟ್ಟ ದಲ್ಲಿ ಹೊಟ್ಟೆಗೆ ಊಟವಿಲ್ಲದಿದ್ದರೂ ಬದುಕ ಬಹುದು ಆದರೆ ಔಷಧಿ ಇಲ್ಲದೆ ಬದುಕಲಾರ ಎಂಬ ಅನಿವಾರ್ಯತೆಗೆ ಬಂದು ತಲುಪಿದ್ದೇವೆ.

ಹಲವಾರು ರೋಗಗಳನ್ನು ಔಷಧಿಗಳ ಬಳಕೆಯಿಲ್ಲದೆ ಆಹಾರ ನಿಯಂತ್ರಣ, ನಿಯಮಿತ ವ್ಯಾಯಾಮ, ದೈಹಿಕ ಕಸರತ್ತು, ಶುದ್ಧ ನೀರು, ಗಾಳಿ ಆಹಾರಗಳಿಂದ ತಡೆಗಟ್ಟಬಹುದೆಂದು ತಿಳಿದಿದ್ದರೂ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ ದಾಸರಾಗುತ್ತಿದ್ದೇವೆ ಎಂಬುದೇ ವಿಪರ್ಯಾಸ. ಹೆಚ್ಚು ದಡೂತಿಯಿದ್ದರೆ ತೆಳ್ಳಗಾಗಲು ಮಾತ್ರೆ, ತೀರ ಸೊಣಕಲಾಗಿದ್ದರೆ ದೇಹತೂಕ ಹೆಚ್ಚಿಸಲು ಚೂರ್ಣ, ಬುದ್ಧಿಶಕ್ತಿ ಹೆಚ್ಚಿಸಲು ಕಷಾಯ, ಮಾತ್ರೆ ಹೀಗೆ ಪ್ರತಿಯೊಂದಕ್ಕೂ ಮನುಷ್ಯ ಒಂದಲ್ಲ ಒಂದು ಔಷಧಿ ತಯಾರಿ ಮಾಡಿಕೊಂಡು ಅನಗತ್ಯವಾಗಿ ಔಷಧಿಗಳ ಮೇಲೆ ಅವಲಂಬಿತನಾಗಿದ್ದಾನೆ. ಔಷಧಿಗಳ ಸದ್ಬಳಕೆಗಿಂತ ದುರ್ಬಳಕೆಯಾಗುತ್ತಿರುವುದೇ ಬಹುದೊಡ್ಡ ದುರಂತ. ಒಂದು ಔಷಧಿ ಮಾರುಕಟ್ಟೆಗೆ ಬರುವ ಮೊದಲು ಸಾಕಷ್ಟು ಸಂಶೋಧನೆ ನಡೆದು ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣ ವಾಗಿ ಪ್ರಾಣಿಗಳಲ್ಲಿ ಮತ್ತು ಮನುಷ್ಯರ ಮೇಲೆ ಪ್ರಯೋಗ ನಡೆಸಿ ಸುರಕ್ಷಿತವಾಗಿದೆ ಎಂದು ಸಾಬೀತಾದಲ್ಲಿ ಮಾತ್ರ ಮನುಕುಲದ ಮೇಲೆ ಉಪಯೋಗಿಸಲು ಅನುಮತಿ ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಒಂದು ಔಷಧಿ ಕಾರ್ಖಾನೆಯಲ್ಲಿ ತಯಾರಾಗಿ ಮೆಡಿಕಲ್ ಸ್ಟೋರ್‌ಗಳ ಮುಖಾಂತರ ಗ್ರಾಹಕರ ಕೈ ಸೇರುವ ವರೆಗೆ ವಿಜ್ಞಾನಿಗಳು, ವೈದ್ಯರು, ಸಂಶೋಧಕರು ಮತ್ತು ಫಾರ್ಮಸಿಸ್ಟ್‌ಗಳ ಪಾತ್ರ ಬಹಳ ಗಣನೀಯವಾದದ್ದು ಮತ್ತು ಪವಿತ್ರವಾದದ್ದು. ಔಷಧಿ ನಿಯಂತ್ರಣ ಇಲಾಖೆ ಯಲ್ಲಿ ದೃಢೀಕೃತಗೊಂಡ ಬಳಿಕವೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಈ ರೀತಿ ದೊರಕುವ ಔಷಧಿಗಳ ಸದ್ಬಳಕೆಯಲ್ಲಿ ವೈದ್ಯರ ಮತ್ತು ಫಾರ್ಮಸಿಸ್ಟ್‌ಗಳ ಪಾತ್ರ ಅತ್ಯಂತ ಹಿರಿದಾದುದು. ವೈದ್ಯರು ಅನಗತ್ಯವಾಗಿ ಔಷಧಿಗಳನ್ನು ನೀಡಬಾರದು ಮತ್ತು ಅತೀ ಅವಶ್ಯವಿದ್ದಲ್ಲಿ ಮಾತ್ರ ಹಿತಮಿತವಾಗಿ ಬಳಸತಕ್ಕದ್ದು. ಅದೇ ರೀತಿ ವೈದ್ಯ ಬರೆದ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಅದೇ ಔಷಧಿಗಳನ್ನು ನೀಡುವ ಗುರುತರ ಹೊಣೆಗಾರಿಕೆ ಫಾರ್ಮಸಿಸ್ಟ್‌ಗಳ ಕೈಯಲ್ಲಿದೆ.

ಹೀಗೆ ಎಲ್ಲರೂ ತಂತಮ್ಮ ಜವಾಬ್ದಾರಿ ಅರಿತು ನಿಭಾಯಿಸಿದಲ್ಲಿ ಮಾತ್ರ ಔಷಧಿಗಳ ದುರ್ಬಳಕೆಯನ್ನು ತಡೆಗಟ್ಟಬಹುದು. ಇಲ್ಲವಾದಲ್ಲಿ ಮುಂದೊಂದು ದಿನ ಅಣುಜೀವಿಗಳು, ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ಮನುಕುಲವನ್ನು ನುಂಗಿ ನೀರು ಕುಡಿಯಲೂ ಬಹುದು. ಅತಿಯಾದಲ್ಲಿ ಅಮೃತವೂ ವಿಷವಾಗಬಲ್ಲದು ಎಂಬುದು ನಮ್ಮ ಹಿರಿಯರು ಹೇಳಿದ ಮಾತು. ಯಾವುದೇ ವಸ್ತುವನ್ನು ಹಿತಮಿತವಾಗಿ ಬಳಸಬೇಕು ಎಂಬುದೇ ಇದರ ಆಶಯ. ಹಾಗೆಯೇ ಔಷಧಿಗಳ ವಿಷಯದಲ್ಲಿಯೂ ನಾವು ಜಾಗೃತರಾಗಬೇಕಾದ ಅನಿವಾರ್ಯ ಸನ್ನಿವೇಶ ಬಂದೊದಗಿದೆ. ಯಾಕೆಂದರೆ ಹಲವಾರು ಔಷಧಿಗಳು ರೋಗ ಗುಣವಾಗಿಸುವುದರ ಜೊತೆಗೆ ಇನ್ನಿತರ ರೋಗಗಳಿಗೆ ರಹದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಲೇ ಅತೀ ಅಗತ್ಯವಿದ್ದಲ್ಲಿ, ಅನಿವಾರ್ಯವಿದ್ದಲ್ಲಿ ಮಾತ್ರ ಔಷಧಿಗಳಿಗೆ ಮೊರೆ ಹೋಗಬೇಕು. ಒಮ್ಮೆ ಔಷಧಿಗಳ ದಾಸರಾದಲ್ಲಿ ಜೀವನ ಪರ್ಯಾಂತ ಔಷಧಿ ಇಲ್ಲದೆ ಮನುಷ್ಯ ಬದುಕಲಾರದಂತಹ ಸನ್ನಿವೇಶಕ್ಕೆ ತಲುಪಿ ಬಿಡುತ್ತಾರೆ.

ಈ ನಿಟ್ಟಿನಲ್ಲಿ ವೈದ್ಯರಿಗೆ ಮತ್ತು ಫಾರ್ಮಸಿಸ್ಟರಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದೆ. ತನ್ನ ವೃತ್ತಿ ಧರ್ಮವನ್ನು ಬಲಿಕೊಡದೇ ವೃತ್ತಿಯ ಘನತೆ, ಗೌರವ, ಗಾಂಭೀರ್ಯಗಳನ್ನು ಎತ್ತಿ ಹಿಡಿದು ಮೌಲ್ಯಾಧಾರಿತವಾದ ಧ್ಯೇಯದಿಂದ ಫಾರ್ಮಸಿಸ್ಟ್ ಗಳು ಕಾರ್ಯ ನಿರ್ವಹಿಸಿದಲ್ಲಿ ಸಮಾಜದ ಸ್ವಾಸ್ಥವೃದ್ಧಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾದಲ್ಲಿ ಮಾತ್ರ ಈ ಆಚರಣೆಗೆ ಹೆಚ್ಚಿನ ಮೌಲ್ಯ ಬಂದೀತು. ಅದರಲ್ಲಿಯೇ ಮನುಕುಲದ ಉನ್ನತಿ ಮತ್ತು ಹಿತ ಅಡಗಿದೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ವೃತ್ತಿ ಬಾಂಧವರಿಗೆ ಮತ್ತು ಫಾರ್ಮಸಿಸ್ಟ್‌ಗಳಿಗೆ ಶುಭವಾಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top