ಪಡ್ಡಾಯಿ ಧ್ಯಾನದಲಿ ಸದಾಶಿವ ನೀನಾಸಂ
ಚಿತ್ರ ಭಾರತಿ
ಅಭಯ ಸಿಂಹ ನಿರ್ದೇಶನದ ತುಳು ಚಿತ್ರ ‘ಪಡ್ಡಾಯಿ’ 65ನೇ ರಾಷ್ಟ್ರೀಯ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ತುಳು ಸಿನೆಮಾ ಪ್ರಶಸ್ತಿಗೆ ಭಾಜನವಾಗಿದೆ. ಇನ್ನೂ ಬಿಡುಗಡೆಯಾಗದ ‘ಪಡ್ಡಾಯಿ’ ಚಿತ್ರ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡಿತ್ತು. ಎಪ್ರಿಲ್ ತಿಂಗಳು ಬೆಂಗಳೂರಿನಲ್ಲಿ ನಡೆದ ಅಂತರ್ರಾಷ್ಟ್ರೀಯ ಸಿನೆಮೋತ್ಸವದಲ್ಲೂ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ತುಳು ಪ್ರಾದೇಶಿಕ ಸಿನೆಮಾ ‘ಪಡ್ಡಾಯಿ’ ವಿಶ್ವದ ಶ್ರೇಷ್ಠ ನಾಟಕ ರಚನೆಕಾರ ವಿಲಿಯಂ ಶೇಕ್ಸ್ಪಿಯರ್ ರಚಿಸಿದ ‘ಮ್ಯಾಕಬೆತ್’ ನಾಟಕದ ಸ್ಫೂರ್ತಿ ಪಡೆದಿದ್ದು, ಕರಾವಳಿ ನೆಲದ ಮೊಗವೀರರ ಬದುಕನ್ನಾಧರಿಸಿದೆ. ಗಂಭೀರ ವಸ್ತುವುಳ್ಳ, ಮನುಷ್ಯನ ಏಳುಬೀಳು, ಆಸೆ, ಸ್ವಾರ್ಥ, ಪಾಪಪ್ರಜ್ಞೆ ಇವುಗಳನ್ನು ಇಟ್ಟುಕೊಂಡು ಈ ಚಿತ್ರವನ್ನು ಅಭಯಸಿಂಹ ನಿರ್ದೇಶಿಸಿದ್ದಾರೆ. ‘ಪಡ್ಡಾಯಿ’ ಇದೇ ಜು.13ಕ್ಕೆ ಬಿಡುಗಡೆಗೊಳ್ಳಲಿದೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ‘ಪಡ್ಡಾಯಿ’ ಸಿನೆಮಾದ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮಸ್ಥಳದ ಸದಾಶಿವ ನೀನಾಸಂ ಅವರೊಂದಿಗೆ ನಡೆಸಿದ ಆಪ್ತ ಮಾತುಕತೆಯ ಅಕ್ಷರ ರೂಪ ಇಲ್ಲಿದೆ.
ನೀವು ನಟಿಸಿದ ಮೊದಲ ಸಿನೆಮಾ ‘ಪಡ್ಡಾಯಿ’ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ನಿಮಗೆ ಈ ಬಗ್ಗೆ ಏನನಿಸುತ್ತಿದೆ?
- ನಾನು ರಂಗಭೂಮಿಯಿಂದ ಬಂದವನು. ಹಾಗಾಗಿ ಸಿನೆಮಾ ಅನುಭವ ನನಗೆ ಹೊಸತು. ‘ಪಡ್ಡಾಯಿ’ ಸಿನೆಮಾದ ಸ್ಕ್ರಿಪ್ಟ್ ನೋಡಿದ ಮೇಲೆನೇ ನನಗೆ ಸಿನೆಮಾದಲ್ಲೂ ಅಭಿನಯಿಸಬೇಕು ಅನಿಸಿದ್ದು. ಮೊದಲ ಸಿನೆಮಾಗೆ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ತುಂಬಾ ಖುಷಿ ತಂದಿದೆ. ಈಗ ಜನ ನನ್ನ ‘ಪಡ್ಡಾಯಿ ಶೆಟ್ರು’ ಎಂದು ಗುರುತಿಸುತ್ತಿದ್ದಾರೆ. ಅಲ್ಲದೆ, ಸಿನೆಮಾದಲ್ಲಿ ನಾನೂ ನಟಿಸಬಲ್ಲೆ ಎನ್ನುವಂತಹ ನಂಬಿಕೆ ಮತ್ತು ಒಂದು ಸಣ್ಣ ಆಶಾಭಾವ ನನ್ನೊಳಗೆ ಹುಟ್ಟಿದೆ. ನಾನು ರಂಗಭೂಮಿ ಕಲಾವಿದನಾಗಿದ್ದರಿಂದ ಕೊಟ್ಟ ಪಾತ್ರವನ್ನು ನಿರ್ವಹಿಸಬಲ್ಲೆ ಎನ್ನುವ ನಂಬಿಕೆ ಮೇಲೆ ನಿರ್ದೇಶಕರು ನನಗೆ ನೀಡಿದ ಮುಖ್ಯ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಸಂತೃಪ್ತಿ ನನಗೆ ಇದೆ. ಅದರಲ್ಲೂ ನಾನು ಅಭಿನಯಿಸಿದ ಮೊದಲ ಸಿನೆಮಾ ನನ್ನ ಮಾತೃಭಾಷೆಯಾಗಿರುವುದು ಆ ಖುಷಿಯನ್ನು ನೂರ್ಮಡಿಗೊಳಿಸಿದೆ.
‘ಪಡ್ಡಾಯಿ’ ಸಿನೆಮಾದಲ್ಲಿ ಎಂತಹ ಪಾತ್ರ ನಿಮ್ಮದು? ಆ ಪಾತ್ರ ನಿಮಗೆ ದೊರಕಿದ್ದು ಹೇಗೆ?
-‘ಪಡ್ಡಾಯಿ’ ಸಿನೆಮಾದಲ್ಲಿ ಸುಮಾರು 22-23 ವಯಸ್ಸಿನ ಸಂಜೀವ್ಎನ್ನುವ ಪಾತ್ರ. ಮೊಗವೀರರ ಕುಟುಂಬದ ತುಂಬಾ ಬಿಂದಾಸಾಗಿ ಹಾಗೂ ಜವಾಬ್ದಾರಿ ಇರುವಂತಹ ಯುವಕ. ನನ್ನ ಪಾತ್ರ ಹೇಗೆಂದರೆ, ಕೊನೆಯವರೆಗೂ ಏನನ್ನೋ ಹೇಳ್ತಾಯಿದೆ ಎನ್ನುವ ಕುತೂಹಲದೊಂದಿಗೆ ಇಡೀ ಸಿನೆಮಾವನ್ನು ಆವರಿಸಿಕೊಂಡಿದೆ. ಅಲ್ಲದೆ, ಎಲ್ಲ ಪಾತ್ರಗಳು ನನ್ನ ಹೆಸರು ಹಿಡಿದು ಮಾತನಾಡುತ್ತವೆ. ಮೊದಲು ನನಗೆ ಮಂಜೇಶ್ ಎನ್ನುವ ಪಾತ್ರ ಇತ್ತು. ಆದರೆ, ನನಗೆ ಸೂಕ್ತವೆನಿಸಲಿಲ್ಲವೇನೋ ಆಮೇಲೆ ನಿರ್ದೇಶಕರು ಸಂಜೀವ್ ಪಾತ್ರ ನೀಡಿದರು. ಸಂಜೀವ ಪಾತ್ರ ನನ್ನ ವ್ಯಕ್ತಿತ್ವಕ್ಕೆ ಹತ್ತಿರವಾಗಿತ್ತು. ಹಾಗಾಗಿ ಇದು ನನಗೆ ಸಿಕ್ಕಿತು ಎನ್ನುವುದು ನನ್ನ ಅನಿಸಿಕೆ. ಪಾತ್ರ ಆಯ್ಕೆಗೆ 2 ನಿಮಿಷದ ಒಂದು ಕಿರು ಚಿತ್ರ ನಿರ್ಮಿಸಲಾಗಿತ್ತು. ಅದರಲ್ಲಿ ನಾನು ಮಂಜೇಶ್ ಎನ್ನುವ ಪಾತ್ರವನ್ನೇ ನಿಭಾಯಿಸಿದ್ದೆ. ಆ ಕಿರು ಚಿತ್ರವನ್ನು ನೋಡಿದ ನಿರ್ದೇಶಕರು, ಸಿನೆಮಾದಲ್ಲಿ ನಟಿಸಬಲ್ಲ ಎನ್ನುವ ನಂಬಿಕೆಯಿಂದ ನನಗೆ ಸಿನೆಮಾದ ಮುಖ್ಯ ಪಾತ್ರಗಳಲ್ಲಿ ಒಂದಾದ ಸಂಜೀವ್ ಪಾತ್ರ ನೀಡಿದರು.
ನಿಮ್ಮ ಪಾತ್ರಕ್ಕೆ ನಡೆಸಿದ ತಯಾರಿ ಬಗ್ಗೆ ಹೇಳಿ. ನಿಮಗೆ ಆ ಪಾತ್ರ ಸವಾಲು ಅನಿಸಿತ್ತೆ?
- ಪಾತ್ರದ ತಯಾರಿ ಬಗ್ಗೆ ಹೇಳುವುದಾದರೆ, ತುಂಬಾ ಇದೆ. ಪಾತ್ರ ಸಿಕ್ಕ ಕೂಡಲೇ ನಾವು, ಅಂದ್ರೆ ಸಿನೆಮಾದಲ್ಲಿ ಬರುವ ಎಲ್ಲ ಮುಖ್ಯ ಪಾತ್ರದವರು ಸೇರಿ ನಿರ್ದೇಶಕರ ಜೊತೆಗೆ ಸಿನೆಮಾ ಮತ್ತು ಪಾತ್ರಗಳ ಬಗೆಗೆ ಚರ್ಚೆ ನಡೆಸಿದೆವು. ‘ಪಡ್ಡಾಯಿ’ ಸಿನೆಮಾ ಶೇಕ್ಸ್ಪಿಯರ್ ನಾಟಕದ ಬೇಸ್ ಆಗಿದ್ದರು ಕೂಡಾ ನಿರ್ದೇಶಕರಿಗೆ ತಮ್ಮದೇ ಆದ ಕಲ್ಪನೆ ಇರುತ್ತದೆ. ಇಂತಹ ಪಾತ್ರಗಳು ಹೀಗೇ ಬರಬೇಕು, ಈ ಪಾತ್ರದ ವ್ಯಾಪ್ತಿ ಇಷ್ಟೇ ಇರಬೇಕು ಹೀಗೆ ಎಲ್ಲ ಅಂದರೆ, ಎಲ್ಲದರ ಬಗೆಗೂ ಅವರಿಗೆ ಸ್ಪಷ್ಟತೆ ಇತ್ತು. ಹಾಗಾಗಿ ನಾವು ನಮ್ಮ ಪಾತ್ರಗಳ ಬಗ್ಗೆ ಹಾಗೂ ಪಾತ್ರ ಕಟ್ಟುವಾಗ ಏನು ಯೋಚನೆ ಮಾಡಿದಿರಿ, ಈ ಪಾತ್ರವನ್ನು ಹೇಗೆ ಕಾಣಿಸಬೇಕು ಎಂದುಕೊಂಡಿದ್ದಿರಿ ಎನ್ನುವ ಬಗ್ಗೆ ನಿರ್ದೇಶಕರ ಜೊತೆ 2-3 ದಿನ ಸತತವಾಗಿ ಚರ್ಚೆ ನಡೆಸಿದ ಬಳಿಕ ಸಿನೆಮಾದಲ್ಲಿನ ನಮ್ಮ ಪಾತ್ರದ ಬಗ್ಗೆ ಪೂರ್ಣ ಪರಿಕಲ್ಪನೆ ಮೂಡಿತು.
ಬಳಿಕ ಒಂದು ವಾರ ಕಾಲ ಬೆಳ್ಳಂ ಬೆಳಗ್ಗೆ ಉಡುಪಿಯ ದಕ್ಕೆಗೆ ತೆರಳಿ, ಅಲ್ಲಿರುವ ಮೊಗವೀರರ ಜೊತೆ ಬೆರೆತು, ನಾವು ಕೂಡಾ ಅವರ ಹಾಗೆ ದಿರಿಸು ಹಾಕಿಕೊಂಡು, ಅವರ ಚಟುವಟಿಕೆ, ಲವಲವಿಕೆ, ಹಾವ-ಭಾವ, ನಗು, ನಗೆಚಾಟಿಕೆ, ಮಾತಿನ ಶೈಲಿ ಹೀಗೆ ಎಲ್ಲವನ್ನು ಗಮನಿಸಿದೆವು. ಅಲ್ಲಿ ನನ್ನ ಪಾತ್ರಕ್ಕೆ ಸೂಕ್ತವಾಗುವ ಯಂಗ್ ಮ್ಯಾನ್ ಯಾರು ಎಂದು ಹುಡುಕುತ್ತಿದ್ದೆ. ಸೂಕ್ತ ಎನ್ನುವ ವ್ಯಕ್ತಿ ಕಾಣಿಸಿದ ಕೂಡಲೇ ಅವನನ್ನು ಫಾಲೊ ಮಾಡುತ್ತಿದ್ದೆ. ಅವರು ಮಹಿಳೆಯರೊಂದಿಗೆ ಹೇಗೆ ಮಾತಿಗಿಳಿಯುತ್ತಾರೆ, ಸಿಗರೇಟ್ ಹೊಡೆಯುವುದು, ಜೋಕ್ ಮಾಡುವುದು, ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು ಇಂತಹ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಮೊಬೈಲ್ನಲ್ಲಿ ವೀಡಿಯೊ ಮಾಡಿಕೊಂಡು ಬರುತ್ತಿದ್ದೆ. ಮನೆಗೆ ಬಂದ ಕೂಡಲೇ ವೀಡಿಯೊವನ್ನು ಪದೇ ಪದೆ ನೋಡಿ, ಆ ಮೊಗವೀರರನ್ನು ನನ್ನೊಳಗೆ ತಂದುಕೊಳ್ಳಲು ಅಭ್ಯಾಸ ಮಾಡುತ್ತಿದ್ದೆ. ಅಲ್ಲದೆ, ನನ್ನ ಪಾತ್ರದ ಬಗ್ಗೆ ಇವತ್ತು ನಾನು ಏನು ಕಲಿತೆ? ಮತ್ತು ಇನ್ನೂ ಕಲಿಯಬೇಕಾದ್ದು, ಏನಿದೆ ಎಂದು ದಿನವೂ ಅವಲೋಕನ ಮಾಡಿಕೊಳ್ಳುತ್ತಿದ್ದೆ.
ನಾನು ನಿರ್ವಹಿಸಿದ ಸಂಜೀವ್ ಪಾತ್ರಕ್ಕೆ ಸಣಕಲಾಗಿ ಮತ್ತು ಲವಲವಿಕೆಯಾಗಿ, ತೀರಾ ಯಂಗ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಹೀಗಾಗಿ ಮಾನಸಿಕ ತಯಾರಿ ಅಲ್ಲದೆ, ದೈಹಿಕವಾಗಿಯೂ ಕೂಡಾ ಒಂದೂವರೆ ತಿಂಗಳು ಕಸರತ್ತು ನಡೆಸಿದೆ. ಕೊನೆಗೆ ಆ ಪಾತ್ರಕ್ಕೆ ಒಪ್ಪುವ ಹಾಗೆ ತಯಾರಾದೆ. ಅಲ್ಲದೆ, ಸಮುದ್ರದ ಜೊತೆಗೆ ಬೆಳೆಯುವ ಮೊಗವೀರರು ಆ ಸಮುದ್ರವನ್ನೇ ಎದುರಿಸಿ ಬದುಕುವಂತಹವರು. ನನಗೋ ಸಮುದ್ರ ನೋಡಿದ ಕೂಡಲೇ ಭಯ ಆಗುತ್ತದೆ. ಹೀಗಾಗಿ ಮೊಗವೀರರೊಳಗಿನ ಆ ಒಂದು ಗಟ್ಟಿತನವನ್ನು ನನ್ನಲ್ಲಿ ತಂದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದೆ.
ಸಂಜೀವ್ ನನಗೆ ನಿಜಕ್ಕೂ ಸವಾಲಿನ ಪಾತ್ರವಾಗಿತ್ತು. ಯಾಕೆಂದರೆ, ನಾನು ರಂಗಭೂಮಿಯಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದವನು. ಬೇಸ್ ಧ್ವನಿಯಲ್ಲಿ ಮಾತಾಡುವವನು. ಆದರೆ, ಸಂಜೀವ್ ಪಾತ್ರಕ್ಕೆ ಪೀಕಲಾಟ, ತಮಾಷೆ ಬೇಕಿತ್ತು. ಹೀಗಾಗಿ ನನ್ನ ನಿರ್ದೇಶನದ ಗತ್ತು, ಮಾತುಗಾರಿಕೆ, ಗಂಭೀರತೆಯಿಂದ ಹೊರಗೆ ಬರಲೇಬೇಕಿತ್ತು. ಅಲ್ಲದೆ, ನಾನು ರಂಗಭೂಮಿಯ ಶೈಲಿಗೆ ಒಗ್ಗಿಕೊಂಡಿದ್ದೆ. ಮೊದ ಮೊದಲು ಸಿನೆಮಾ ಡೈಲಾಗ್ ಹೇಳುವಾಗ ನನ್ನ ಮಾತಿನ ಶೈಲಿ ರಂಗಭೂಮಿಯ ಕಡೆಗೆ ಎಳೆಯುತ್ತಿತ್ತು. ಇದೆಲ್ಲ ಕಾರಣಗಳಿಂದ ನನಗೆ ಸಂಜೀವ್ ಸವಾಲಿನ ಪಾತ್ರವಾಗಿ ಕಾಣಿಸಿತ್ತು.
ನಿಮಗೆ ನಟನೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?
-ನನ್ನ ತಾಯಿ ಮನೆ ಕಾಸರಗೋಡು. ನಾನು ಹುಟ್ಟಿ ಬೆಳೆದದ್ದೆಲ್ಲ ಅಲ್ಲಿಯೇ. ನಮ್ಮ ತಂದೆಯದು ಡ್ರೈವರ್ ವೃತ್ತಿ. ತಾಯಿಯದು ಬೀಡಿ ಕಟ್ಟುವ ಕಸುಬು. ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಓದಿಗೆ ಪ್ರೋತ್ಸಾಹವಿತ್ತು. ಅಲ್ಲಿ ನನ್ನ ಮಾವ ರಾಮಣ್ಣ ಅಂತ ಇದ್ದರು. ಅವರು ಒಳ್ಳೆಯ ರಂಗಭೂಮಿ ನಟ. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಕೂಡಾ. ವರ್ಷಕ್ಕೆ ಒಂದಾದರೂ ಹಳೆ ವಿದ್ಯಾರ್ಥಿಗಳಿಂದ ತುಳು ನಾಟಕ ಇರುತ್ತಿತ್ತು. ಆಗಿನ ನಾಟಕಗಳು ಇಡೀ ರಾತ್ರಿ ಇರುತ್ತಿದ್ದರಿಂದ ನಾವು ಚಾಪೆ ಸುತ್ತಿಕೊಂಡು ಹೋಗಿ ಜಾಗ ಹಿಡಿದು ನಾಟಕ ನೋಡುತ್ತಿದ್ದೆವು. ನನಗೆ ನನ್ನ ಮಾವನ ನಟನೆ ನೋಡುವ ಸಹಜ ಕುತೂಹಲ, ಆಸೆ. ಆದರೆ, ನಡುನಡುವೆ ನಿದ್ದೆ ಕಾಡುತ್ತಿತ್ತು. ಮಾವನ ಪಾತ್ರ ಬಂದಾಗಲೆಲ್ಲ ಎದ್ದು ನೋಡಿ ಮತ್ತೆ ಮಲಗಿ ಬಿಡುತ್ತಿದ್ದೆ. ನನಗೂ ಮಾವನ ಹಾಗೆ ನಟಿಸಬೇಕು, ಅವರ ಹಾಗೆ ಬಗೆ ಬಗೆಯ ದಿರಿಸು ಹಾಕಿಕೊಳ್ಳಬೇಕು ಎನ್ನುವಂತಹ ವಯೋ ಸಹಜ ಆಸೆಗಳು ಮನಸ್ಸಿನ ತುದಿಗೆ ಬಂದು ನಿಲ್ಲತೊಡಗಿದವು. ಆದರೆ, ನಾನು ಶಾಲೆಯಲ್ಲಿ ದಡ್ಡ ವಿದ್ಯಾರ್ಥಿಯಾಗಿದ್ದೆ. ಚೆನ್ನಾಗಿ ಓದುವ ವಿದ್ಯಾರ್ಥಿಗಳು ಡೈಲಾಗ್ಗಳನ್ನು ನೆನಪಿಟ್ಟುಕೊಳ್ಳುತ್ತಾರೆ ಎನ್ನುವ ಮನೋಭಾವ ಹೊಂದಿದ್ದ ಶಿಕ್ಷಕರು ಶಾಲಾ ನಾಟಕಗಳಲ್ಲಿ ನನಗೆ ಪಾತ್ರಗಳನ್ನು ನೀಡುತ್ತಿರಲಿಲ್ಲ. ಹೀಗಾಗಿ ನಾನು ದಡ್ಡ ವಿದ್ಯಾರ್ಥಿ ಎನ್ನುವ ಅಳುಕು ನನ್ನೊಳಗೆ ಹಾಗೇ ಉಳಿದು ಬಿಟ್ಟಿತ್ತು. ಮುಂದೆ ನಾನು ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಶಾಲೆಯಲ್ಲಿ ಪಡೆದೆ. ಇಲ್ಲಿ ನನಗೆ ಸ್ವಲ್ಪ ಮಟ್ಟಿಗೆ ಅವಕಾಶಗಳು ಸಿಕ್ಕವು. ಅಂದ್ರೆ, ಇಲ್ಲಿ ನಾನು ಆಟಕ್ಕೆ ಹೋಗುತ್ತಿದ್ದೆ. ಕಾಪಿಕಾಡು ಅವರ ತುಳು ನಾಟಕ ಬಂದರೆ ತಪ್ಪದೆ ನೋಡುತ್ತಿದ್ದೆ. ಯಕ್ಷಗಾನ ಇದ್ದರೆ, ಅದರಲ್ಲಿ ಭಾಗವಹಿಸಲು ನಾನು ಮುಂದೆ ಹೋಗುತ್ತಿದ್ದೆ. ಅಷ್ಟೊತ್ತಿಗೆ ನನಗೆ ನಾಟಕಕ್ಕೆ ಬೇಕಾದಷ್ಟು ಯಕ್ಷಗಾನ ಕೂಡಾ ಗೊತ್ತಿತ್ತು. ಹೀಗಾಗಿ ಶಿಕ್ಷಕರು ನನ್ನನ್ನು ಗಮನಕ್ಕೆ ತಂದುಕೊಂಡರು. ಮೊದಲ ಬಾರಿಗೆ ‘ಕುರುಡು ಕಾಂಚಾಣ’ಎನ್ನುವ ನಾಟಕದಲ್ಲಿ ಒಂದು ಪಾತ್ರ ನಿರ್ವಹಿಸಿದೆ.
ನಾನು ಪದವಿಯ ಮೊದಲ ವರ್ಷದಲ್ಲಿ ಓದುತ್ತಿರುವಾಗ ಎಸ್ಡಿಎಮ್ ಕಾಲೇಜಿನಲ್ಲಿ ನವೀನ್ ಎಡಮಂಗಲ ಅವರು ಆರಂಭಿಸಿದ ‘ರಂಗತರಬೇತಿ’ಸೇರಿಕೊಂಡು 2 ವರ್ಷಗಳ ಕಾಲ ತರಬೇತಿ ಪಡೆದೆ. ಅವಾಗಲೇ ಗೊತ್ತಾಗಿದ್ದು, ನಾಟಕ ಅಂದ್ರೆ ಏನು? ಈಗ ನಾಟಕದ ಬಗೆಗೆ ನಾವು ಅಂದುಕೊಂಡಿರುವುದರ ಆಚೆಗೆ ಇನ್ನೊಂದು ಪ್ರಪಂಚ ಇದೆ. ಜಗತ್ತು ನಂಬಿರುವ ದೊಡ್ಡ ಕಲೆ ನಾಟಕ ಎನ್ನುವುದು ಅರ್ಥವಾಗತೊಡಗಿತು. ಮದುವೆ ಹೆಣ್ಣು, ಊರು-ಕೇರಿ, ಎ ಮಿಡ್ ನೈಟ್ ಡ್ರೀಮ್ಸ್ ಮತ್ತಿತರ ನಾಟಕಗಳಲ್ಲಿ ಅಭಿನಯಿಸಿದೆ. ಈ ಎಲ್ಲ ನಾಟಕಗಳ ಅನುಭವ ಹೇಗಿತ್ತೆಂದರೆ ನನ್ನನ್ನು ಅಹರ್ನಿಶಿ ನಟನೆಯ ಬಗ್ಗೆ ಧ್ಯಾನಿಸುವಂತೆ ಮಾಡಿದ್ದವು. 2012ರಲ್ಲಿ ಹೆಗ್ಗೋಡಿನ ನೀನಾಸಂ ಸೇರಿದೆ. 2013ರಲ್ಲಿ ನೀನಾಸಂ ತಿರುಗಾಟ. 20ಕ್ಕೂ ಹೆಚ್ಚು ನಾಟಕಗಳ ಬಹುತೇಕ ಮುಖ್ಯ ಪಾತ್ರದಲ್ಲಿ ನಟಿಸಿದೆ. 2016 ನೀನಾಸಂ ಫೆಲೊಶಿಪ್ ಮೇಲೆ ಟೀಚರ್ ಆಗಿದ್ದೆ. ಗಾಂಧಿ ವಸರ್ಸ್ ಗಾಂಧಿ, ಮದುವೆ ಹೆಣ್ಣು, ರಹಸ್ಯ ವಿಶ್ವ, ಮಾಡಿದ್ದುಣ್ಣೊ ಮಾಮಣ್ಣ, ನಾಣಿ ಭಟ್ಟನ ಸ್ವರ್ಗದ ಕನಸು ಮತ್ತಿತರ 15ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದೆ. ಅಲ್ಲದೆ, ರಾಜ್ಯದ ವಿವಿಧೆಡೆ ರಂಗತರಬೇತಿ ನಡೆಸಿದ್ದೇನೆ.
ತುಳು ಒಂದು ಸಣ್ಣ ಸಿನೆಮಾ ಇಂಡಸ್ಟ್ರಿ. ‘ಪಡ್ಡಾಯಿ’ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ ಬಳಿಕ ಇದೇ ಕತೆಯನ್ನಾಧರಿಸಿ ಕನ್ನಡದಲ್ಲಿ ಸಿನೆಮಾ ಮಾಡಿದ್ದರೆ ಇನ್ನೂ ಹೆಚ್ಚು ಜನಪ್ರಿಯತೆ ಸಿಗಬಹುದಿತ್ತು ಎಂದು ನಿಮಗೆ ಅನಿಸಿದ್ದಿದೆಯೇ?
- ಇದು ನಿರ್ದೇಶಕರನ್ನು ಕೇಳುವ ಪ್ರಶ್ನೆ. ನಾವು ಕೂಡಾ ಕೇಳಿದ್ದೆವು. ನಾನೊಬ್ಬ ನಟನಾಗಿ ಹೇಳುವುದಾದರೆ, ಕನ್ನಡದಲ್ಲಿ ಮಾಡಿದ್ದರೆ ಸಿನೆಮಾದಲ್ಲಿನ ಈಗಿನ ಸತ್ವ ಸಿಗುತ್ತಿರಲಿಲ್ಲವೇನೊ. ಯಾಕೆಂದರೆ, ‘ಪಡ್ಡಾಯಿ’ ನಮ್ಮ ನೆಲದ ಮೊಗವೀರರ ಕತೆಯನ್ನು ಆಧರಸಿ ಶೇಕ್ಸಪಿಯರ್ನ ನಾಟಕ ‘ಮ್ಯಾಕಬೆತ್’ ಶೈಲಿಯಲ್ಲಿ ಸಿನೆಮಾ ಮಾಡಿದ್ದರಿಂದ ಮೊಗವೀರರ ಭಾಷೆ ಕೂಡಾ ಮುಖ್ಯವಾಗಿತ್ತು ಅನಿಸುತ್ತದೆ. ಪಾಶ್ಚಿಮಾತ್ಯವನ್ನು ಪ್ರಾದೇಶಿಕತೆಗೆ ಒಗ್ಗಿಸಿಕೊಂಡು, ಪ್ರಾದೇಶಿಕ ಭಾಷೆ ತುಳುವಲ್ಲಿ ‘ಪಡ್ಡಾಯಿ’ ಸಿನೆಮಾ ಮಾಡಿದ್ದರಿಂದಲೇ ಇವತ್ತಿನ ಫಲಿತಾಂಶ ಬರಲು ಸಾಧ್ಯವಾಗಿದೆ ಎನ್ನುವುದು ನನ್ನ ಗ್ರಹಿಕೆ.
‘ಪಡ್ಡಾಯಿ’ಸಿನೆಮಾದ ಬಳಿಕ ಯಾವ ಸಿನೆಮಾದಲ್ಲಿ ಅಭಿನಯಿಸುತ್ತಿದ್ದೀರಿ?
- ಸಂತು ಸೊಕನಾದಗಿ ಅವರು ನಿರ್ದೇಶಿಸುತ್ತಿರುವ ಕನ್ನಡ ಚಿತ್ರ ‘ಕೈ ರೊಟ್ಟಿ’ಎನ್ನುವ ಮಕ್ಕಳ ಸಿನೆಮಾ, ಇದರಲ್ಲೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರೀಕರಣ ಮುಗಿದಿದೆ. ಇನ್ನೂ ಎರಡು ಸಿನೆಮಾ ಕೈಯಲ್ಲಿವೆ. ಅವಕ್ಕೆ ಈಗ ತಯಾರಿ ನಡೆಸುತ್ತಿದ್ದೇನೆ.
ನಾನೊಬ್ಬ ನಟನಾಗಿ ಹೇಳುವುದಾದರೆ, ಕನ್ನಡದಲ್ಲಿ ಮಾಡಿದ್ದರೆ ಸಿನೆಮಾದಲ್ಲಿನ ಈಗಿನ ಸತ್ವ ಸಿಗುತ್ತಿರಲಿಲ್ಲವೇನೊ. ಯಾಕೆಂದರೆ, ‘ಪಡ್ಡಾಯಿ’ ನಮ್ಮ ನೆಲದ ಮೊಗವೀರರ ಕತೆಯನ್ನು ಆಧರಸಿ ಶೇಕ್ಸ್ಪಿಯರ್ನ ನಾಟಕ ‘ಮ್ಯಾಕಬೆತ್’ ಶೈಲಿಯಲ್ಲಿ ಸಿನೆಮಾ ಮಾಡಿದ್ದರಿಂದ ಮೊಗವೀರರ ಭಾಷೆ ಕೂಡಾ ಮುಖ್ಯವಾಗಿತ್ತು ಅನಿಸುತ್ತದೆ. ಪಾಶ್ಚಿಮಾತ್ಯವನ್ನು ಪ್ರಾದೇಶಿಕತೆಗೆ ಒಗ್ಗಿಸಿಕೊಂಡು, ಪ್ರಾದೇಶಿಕ ಭಾಷೆ ತುಳುವಲ್ಲಿ ‘ಪಡ್ಡಾಯಿ’ ಸಿನೆಮಾ ಮಾಡಿದ್ದರಿಂದಲೇ ಇವತ್ತಿನ ಫಲಿತಾಂಶ ಬರಲು ಸಾಧ್ಯವಾಗಿದೆ ಎನ್ನುವುದು ನನ್ನ ಗ್ರಹಿಕೆ.