ಸುರಂಗ ನಿರ್ಮಾಣವಿಲ್ಲ: ಚೀನಾ
ಬ್ರಹ್ಮಪುತ್ರ ಉಪನದಿಯಲ್ಲಿ ಹರಿಯುತ್ತಿರುವ ಕಲುಷಿತ ನೀರು
ಬೀಜಿಂಗ್, ಡಿ. 13: ಬ್ರಹ್ಮಪುತ್ರ ನದಿಯ ಉಪನದಿ ಸಿಯಾಂಗ್ನಿಂದ ಅತ್ಯಂತ ಕುಲುಷಿತ ನೀರು ಭಾರತಕ್ಕೆ ಹರಿಯುತ್ತಿದೆ ಎಂಬ ವರದಿಗಳ ನಡುವೆಯೇ, ಬ್ರಹ್ಮಪುತ್ರ ನದಿಯ ನೀರನ್ನು ತಿರುಗಿಸಲು ತಾನು ಸುರಂಗವೊಂದನ್ನು ನಿರ್ಮಿಸುತ್ತಿದ್ದೇನೆ ಎಂಬ ಆರೋಪಗಳನ್ನು ಚೀನಾ ಬುಧವಾರ ತಳ್ಳಿಹಾಕಿದೆ.
‘‘ಚೀನಾ-ಭಾರತ ಗಡಿಯ ಪೂರ್ವದ ಭಾಗಕ್ಕೆ ಸಂಬಂಧಿಸಿ ಚೀನಾದ ನಿಲುವು ಸ್ಥಿರ ಹಾಗೂ ಸ್ಪಷ್ಟವಾಗಿದೆ ಎಂದು ನಾನು ಹೇಳಬಯಸುತ್ತೇನೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದರು.
ಅರುಣಾಚಲಪ್ರದೇಶದಲ್ಲಿ ಹರಿಯುತ್ತಿರುವ ಸಿಯಾಂಗ್ ನದಿಯಲ್ಲಿ ಕಪ್ಪಗಿನ, ಸಿಮೆಂಟ್ ಮತ್ತು ಕೆಸರು ಮಿಶ್ರಿತ ನೀರು ಹರಿಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
ನದಿಯ ಚೀನಾದ ಭಾಗದಲ್ಲಿ ಸುರಂಗ ನಿರ್ಮಿಸುತ್ತಿರುವುದರಿಂದ ಹೀಗಾಗಿರಬಹುದು ಎಂಬ ವರದಿಗಳನ್ನು ಅವರು ತಳ್ಳಿಹಾಕಿದರು.
‘‘ಭಾರತ ಹೇಳುತ್ತಿರುವ ಯೋಜನೆಯ ಬಗ್ಗೆ ನಾನೆಂದೂ ಕೇಳಿಲ್ಲ. ಆಧಾರರಹಿತ ಊಹಾಪೋಹಗಳು ಮತ್ತು ವರದಿಗಳ ಆಧಾರದಲ್ಲಿ ಭಾರತ ವರ್ತಿಸುವುದಿಲ್ಲ ಎಂದು ಆಶಿಸಲಾಗಿದೆ’’ ಎಂದು ಈ ಕುರಿತ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಹೇಳಿದರು.