ಭಾರತದ ಸೂಚನೆಯಂತೆ ನೇಪಾಳ ಸಂಸತ್ತು ವಿಸರ್ಜನೆ, ಪಕ್ಷ ವಿಭಜನೆ: ಮಾಜಿ ಪ್ರಧಾನಿ ಪ್ರಚಂಡ ಆರೋಪ
ಕಠ್ಮಂಡು (ನೇಪಾಳ), ಜ. 14: ಪ್ರಧಾನಿ ಕೆ.ಪಿ. ಶರ್ಮ ಒಲಿ ಭಾರತದ ನಿರ್ದೇಶನದಂತೆ ಆಡಳಿತಾರೂಢ ನೇಪಾಳ್ ಕಮ್ಯುನಿಸ್ಟ್ ಪಕ್ಷವನ್ನು ವಿಭಜಿಸಿದ್ದಾರೆ ಹಾಗೂ ಸಂಸತ್ತನ್ನು ವಿಸರ್ಜಿಸಿದ್ದಾರೆ ಎಂದು ಪಕ್ಷದ ಒಂದು ಬಣದ ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಬುಧವಾರ ಆರೋಪಿಸಿದ್ದಾರೆ.
ರಾಜಧಾನಿ ಕಠ್ಮಂಡುವಿನಲ್ಲಿ ತನ್ನ ಬಣದ ನಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಚಂಡ, ಭಾರತದ ಆಣತಿಯಂತೆ ತನ್ನ ಸರಕಾರವನ್ನು ಉರುಳಿಸಲು ಪಕ್ಷದ ಕೆಲವು ನಾಯಕರು ಪಿತೂರಿಯೊಂದನ್ನು ರೂಪಿಸುತ್ತಿದ್ದಾರೆ ಎಂಬುದಾಗಿ ಇತ್ತೀಚೆಗೆ ಪ್ರಧಾನಿ ಒಲಿ ಆರೋಪಿಸಿದ್ದರು ಎಂದು ಹೇಳಿದರು.
ಒಲಿಯ ಆ ಹೇಳಿಕೆ ನಿಜವಾಗಿದೆ ಎಂಬ ಭಾವನೆ ಬರಬಾರದು ಎನ್ನುವ ಒಂದೇ ಕಾರಣಕ್ಕಾಗಿ ರಾಜೀನಾಮೆ ನೀಡುವಂತೆ ಅವರ ಮೇಲೆ ನನ್ನ ಬಣ ಒತ್ತಡ ಹೇರಲಿಲ್ಲ ಎಂದು ಪ್ರಚಂಡ ಹೇಳಿದರು.
‘‘ಹಾಗಾದರೆ, ಈಗ ಒಲಿ ಭಾರತದ ಸೂಚನೆಯಂತೆ ತನ್ನ ಪಕ್ಷವನ್ನು ವಿಭಜಿಸಿ ಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿತೇ?’’ ಎಂದು ಮಾಜಿ ಪ್ರಧಾನಿ ಪ್ರಚಂಡ ಪ್ರಶ್ನಿಸಿದರು.
Next Story