ಮ್ಯಾನ್ಮಾರ್: ಬಂಡುಕೋರರು ನಿಯಂತ್ರಣದ ನಗರದ ಮೇಲೆ ಸರಕಾರಿ ಪಡೆಗಳ ದಾಳಿ
ಭಯಭೀತ ಸಾವಿರಾರು ನಾಗರಿಕರು ಥೈಲ್ಯಾಂಡ್ ಗೆ ಪಲಾಯನ
ಸಾಂದರ್ಭಿಕ ಚಿತ್ರ:PTI
ಬ್ಯಾಂಕಾಕ್,ಡಿ.24: ಮೂಲನಿವಾಸಿ ಬಂಡುಕೋರರ ನಿಯಂತ್ರಣದಲ್ಲಿರುವ ಪುಟ್ಟ ಪಟ್ಟಣವೊಂದರ ಮೇಲೆ ಮ್ಯಾನ್ಮಾರ್ನ ಸೇನಾಪಡೆಗಳು ಗುರುವಾರ ವಾಯುದಾಳಿ ಹಾಗೂ ಫಿರಂಗಿ ದಾಳಿಗಳನ್ನು ನಡೆಸಿದ್ದು, ಸಾವಿರಾರು ಭಯಭೀತ ನಾಗರಿಕರು ನದಿ ದಾಟಿ ಥೈಲ್ಯಾಂಡ್ಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾರೆಂದು ಸ್ಥಳೀಯ ಅಧಿಕಾರಿಗಳು ಹಾಗೂ ನಿವಾಸಿಗಳು ಶುಕ್ರವಾರ ತಿಳಿಸಿದ್ದಾರೆ.
ಥೈಲ್ಯಾಂಡ್ ಗಡಿಯಲ್ಲಿರುವ ಮ್ಯಾನ್ಮಾರ್ನ ಪಟ್ಟಣವಾದ ಲೇ ಕೇ ಕಾವ್ ಕರೇನ್ ಜನಾಂಗೀಯ ಬಂಡುಕೋರರ ನಿಯಂತ್ರಣದಲ್ಲಿದೆ. ಈ ನಗರವನ್ನು ಗುರಿಯಿರಿಸಿ ಮ್ಯಾನ್ಮಾರ್ನ ಸರಕಾರಿ ಪಡೆಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಈ ಪ್ರಾಂತಕ್ಕೆ ಸ್ವಾಯತ್ತೆಯನ್ನು ನೀಡಬೇಕಂದು ಆಗ್ರಹಿಸಿ ಕರೇನ್ ಗೆರಿಲ್ಲಾಗಳು ಮ್ಯಾನ್ಮಾರ್ ಸರಕಾರದ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದಾರೆ. ಮ್ಯಾನ್ಮಾರ್ನ ಸೇನೆಯು ಕಳೆದ ಫೆಬ್ರವರಿಯಲ್ಲಿ ಆಂಗ್ಸಾನ್ ಸೂಕಿ ನೇತೃತ್ವದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ ಘರ್ಷಣೆ ಇನ್ನಷ್ಟು ತೀವ್ರಗೊಂಡಿತ್ತು. ಸೇನಾಡಳಿತದ ವಿರುದ್ಧ ಹೋರಾಡುವವರಿಗೆ ತಾವು ಆಶ್ರಯ ನೀಡುವುದಾಗಿಯೂ ಕರೇನ್ ಗೆರಿಲ್ಲಾಗಳು ಘೋಷಿಸಿದ್ದರು.
ಕಳೆದ ಲೇ ಕೇ ಕಾವ್ ನಲ್ಲಿ ಸರಕಾರಿ ಸೇನಾಪಡೆಗಳು , ಪ್ರತಿಪಕ್ಷ ಹೋರಾಟಗಾರರನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ ಬಳಿಕ ಘರ್ಷಣೆ ತೀವ್ರಗೊಡಿತ್ತು. ಲೇ ಕೇ ಕಾವ್ ನಲ್ಲಿ ಸೇನಾಡಳಿತ ವಿರುದ್ಧ ಹೋರಾಡುತ್ತಿರುವ ಸಂಘಟಿತ ಪ್ರತಿಪಕ್ಷಗಳ ಜೊತೆ ನಂಟು ಹೊಂದಿರುವ 30-60 ಮಂದಿಯನ್ನು ಸರಕಾರಿ ಪಡೆಗಳು ಬಂಧಿಸಿರುವುದಾಗಿ ಮ್ಯಾನ್ಮಾರ್ನ ಮಾಧ್ಯಮಗಳು ವರದಿ ಮಾಡಿವೆ. ಬಂಧಿತರಲ್ಲಿ ಸು ಕಿ ಅವ ಎನ್ಎಲ್ಡಿ ಪಕ್ಷದ ಓರ್ವ ಚುನಾಯಿತ ಸಂಸದರ ಕೂಡಾ ಇದ್ದಾರೆಂದು ಅವು ತಿಳಿಸಿವೆ.