ಪಾಕಿಸ್ತಾನದಲ್ಲಿ ‘ಜಿಹಾದ್’ ಗೆ ನಿಧಿ ಸಂಗ್ರಹಿಸಲು ಅವಕಾಶವಿಲ್ಲ: ಲಾಹೋರ್ ಹೈಕೋರ್ಟ್
ಸಾಂದರ್ಭಿಕ ಚಿತ್ರ:PTI
ಲಾಹೋರ್, ಜ.27: ಜಿಹಾದ್(ಪವಿತ್ರ ಯುದ್ಧ)ಗಾಗಿ ಹಣ ಸಂಗ್ರಹಿಸಲು ಜನತೆಯನ್ನು ಪ್ರೇರೇಪಿಸಲು ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಅವಕಾಶವಿಲ್ಲ . ಹೀಗೆ ಮಾಡುವುದನ್ನು ದೇಶದ್ರೋಹವೆಂದು ಪರಿಗಣಿಸಲಾಗುತ್ತದೆ ಎಂದು ಲಾಹೋರ್ ಹೈಕೋರ್ಟ್ ತೀರ್ಪು ನೀಡಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸಿದ್ದ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟ ಇಬ್ಬರು ಉಗ್ರರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಭಯೋತ್ಪಾದಕ ಸಂಘಟನೆಗೆ ಹಣ ಸಂಗ್ರಹಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟು ತಲಾ 5 ವರ್ಷದ ಜೈಲುಶಿಕ್ಷೆಗೆ ಗುರಿಯಾಗಿದ್ದ ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸಂಘಟನೆಯ ಉಗ್ರರಾದ ಮುಹಮ್ಮದ್ ಇಬ್ರಾಹಿಂ ಮತ್ತು ಉಬೈದುರ್ ರೆಹ್ಮಾನ್ ಶಿಕ್ಷೆ ರದ್ದತಿಗೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಲಾಹೋರ್ ಹೈಕೋರ್ಟ್ ಬುಧವಾರ ತಳ್ಳಿಹಾಕಿದೆ.
ಇಸ್ಲಾಮಿಕ್ ದೇಶ(ಪಾಕಿಸ್ತಾನದಲ್ಲಿ) ಜಿಹಾದ್ಗೆ ನಿಧಿ ಸಂಗ್ರಹಿಸುವುದು ದೇಶದ್ರೋಹ ಎಂದು ಪರಿಗಣಿಸಿರುವುದರಿಂದ ಹೀಗೆ ಮಾಡಲು ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಅವಕಾಶವಿಲ್ಲ . ಯುದ್ಧ ಘೋಷಣೆಯಾದಾಗ ಅಗತ್ಯಬಿದ್ದರೆ ರಾಷ್ಟ್ರೀಯ ನಿಧಿಗೆ ಹಣ ಸಂಗ್ರಹಿಸುವುದು ಸರಕಾರದ ಕೆಲಸವಾಗಿದೆ. ಈ ಕೆಲಸವನ್ನು ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮಾಡುವಂತಿಲ್ಲ ಎಂದು ನ್ಯಾಯಾಧೀಶ ಅಲಿ ಬಾಬರ್ ನಜಾಫಿ ನೇತೃತ್ವದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಟಿಟಿಪಿಯು ನಿಷ್ಕ್ರಿಯ ಮತ್ತು ನಿಷೇಧಿತ ಸಂಸ್ಥೆಯಾಗಿದ್ದು ಇದು ಸರಕಾರಿ ಸಂಸ್ಥೆಗಳಿಗೆ ಹಾನಿ ಎಸಗಿರುವ ಜತೆಗೆ, ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಹಿಂದೆ ದೇಶದಲ್ಲಿ ಭಯೋತ್ಪಾದನೆ ಕೃತ್ಯವನ್ನು ತೀವ್ರಗೊಳಿಸಿದ್ದು ಇದು ಆರ್ಥಿಕ ನೆರವಿಲ್ಲದೆ ಸಾಧ್ಯವಾಗದ ಕೃತ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಮುಂಬೈ ಮೇಲಿನ ಉಗ್ರರ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಕೂಡಾ ಉಗ್ರಸಂಘಟನೆಗೆ ನಿಧಿ ಸಂಗ್ರಹಿಸಿದ ಅಪರಾಧದಲ್ಲಿ ಲಾಹೋರ್ ನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಪಾಕಿಸ್ತಾನದಲ್ಲಿ ಈ ಹಿಂದೆ ಮುಕ್ತವಾಗಿ ಸಂಚರಿಸುತ್ತಿದ್ದ ಉಗ್ರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರಕಾರದ ಮೇಲೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್) ಸಂಸ್ಥೆ (ಜಾಗತಿಕ ಮಟ್ಟದಲ್ಲಿ ಉಗ್ರ ಸಂಘಟನೆಗೆ ಆರ್ಥಿಕ ನೆರವು ಪೂರೈಕೆಯ ಮೇಲೆ ನಿಗಾ ವಹಿಸುವ ಘಟಕ) ಒತ್ತಡ ಹೇರುತ್ತಿದೆ. ಈ ಮಧ್ಯೆ, ಭಯೋತ್ಪಾದಕ ಸಂಘಟನೆಗೆ ಹಣಕಾಸು ಸಂಗ್ರಹಿಸಿದ ಆರೋಪದಲ್ಲಿ ದೇಶದ ವಿವಿಧೆಡೆಯಿಂದ ಟಿಟಿಪಿ ಮತ್ತು ಅಲ್ಖೈದಾ ಸಂಘಟನೆಯ ಹಲವು ಉಗ್ರರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ವರದಿಯಾಗಿದೆ.