ಮಾದಕವಸ್ತು ಕಳ್ಳಸಾಗಣೆ: ಭಾರತೀಯ ಮೂಲದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ
ಸಿಂಗಾಪುರ, ಫೆ.5: ಮಾದಕವಸ್ತು ಹೆರಾಯ್ನ್ ಅನ್ನು ಪೂರೈಸಿದ ಮತ್ತು ಮಾದಕ ವಸ್ತು ಕಳ್ಳಸಾಗಣೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ ಅಪರಾಧ ಸಾಬೀತಾಗಿರುವುದರಿಂದ ಭಾರತೀಯ ಮೂಲದ ಮಲೇಶ್ಯನ್ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದಾಗಿ ಸಿಂಗಾಪುರದ ನ್ಯಾಯಾಲಯ ಘೋಷಿಸಿದೆ.
2016ರಲ್ಲಿ ಕಿಶೋರ್ ಕುಮಾರ್ ರಾಗ್ವನ್ ಎಂಬಾತ ತನ್ನ ಮೋಟಾರ್ ಬೈಕ್ನಲ್ಲಿ 900 ಗ್ರಾಂಗಳಷ್ಟು ಹೆರಾಯ್ನಾ ಅನ್ನು ಬ್ಯಾಗ್ ನೊಳಗೆ ಇರಿಸಿ ಸಿಂಗಾಪುರಕ್ಕೆ ರವಾನಿಸುತ್ತಿದ್ದಾಗ ಭದ್ರತಾ ಪಡೆಗಳಿಗೆ ಸಿಕ್ಕಿಬಿದ್ದಿದ್ದ. ಸಿಂಗಾಪುರದ ಕಾನೂನಿನ ಪ್ರಕಾರ, ಕಳ್ಳಸಾಗಾಟ ಮಾಡಿದ ಮಾದಕಸ್ತು 15 ಗ್ರಾಮ್ ಗಿಂತ ಅಧಿಕವಿದ್ದರೆ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ. ಈ ಬ್ಯಾಗ್ ಅನ್ನು ಪಡೆದಿದ್ದ ಸಿಂಗಾಪುರದ ಪ್ರಜೆ, ಚೀನಾ ಮೂಲದ ಪುಂಗ್ ಆಹ್ ಕಿಯಾಂಗ್ಹೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬ್ಯಾಗ್ನಲ್ಲಿ ಕಲ್ಲುಗಳಿವೆ ಎಂದು ತನ್ನ ಕಕ್ಷೀದಾರ ಭಾವಿಸಿದ್ದ. ಮಾದಕ ವಸ್ತು ಇರುವುದು ಆತನಿಗೆ ತಿಳಿದಿರದ ಕಾರಣ ಆತ ನಿರ್ದೋಷಿ ಎಂದು ಕಿಶೋರ್ ಕುಮಾರ್ ನ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶರು, ಈ ವಾದವನ್ನು ಸಮರ್ಥಿಸುವ ಪುರಾವೆ ಒದಗಿಸಲು ವಿಫಲವಾಗಿರುವುದರಿಂದ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು. ಇನ್ನೊಬ್ಬ ಅಪರಾಧಿ ಪಂಗ್ ಮಾದಕ ವಸ್ತು ನಿಯಂತ್ರಣ ಇಲಾಖೆಯೊಂದಿಗೆ ತನಿಖೆಯಲ್ಲಿ ಸಹಕರಿಸಿದ್ದರಿಂದ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿದೆ ಎಂದು ಘೋಷಿಸಿದರು.