ಯೆಮನ್ : ನೆರವು ಒದಗಿಸಲು ಆರ್ಥಿಕ ಕೊರತೆ ವಿಶ್ವಸಂಸ್ಥೆ ವರದಿ
ವಿಶ್ವಸಂಸ್ಥೆ, ಮಾ.19: ಯುದ್ಧದಿಂದ ಜರ್ಝರಿತಗೊಂಡಿರುವ ಯೆಮನ್ನಲ್ಲಿ ಮಾನವೀಯ ದುರಂತದ ಪರಿಸ್ಥಿತಿಯನ್ನು ತಪ್ಪಿಸಲು ಅಗತ್ಯವಿರುವ ದೇಣಿಗೆ ಸಂಗ್ರಹಿಸಲು ವಿಫಲವಾಗಿರುವುದರಿಂದ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ವಿಶ್ವಸಂಸ್ಥೆಯ ನೆರವು ಸಂಘಟನೆ ಎಚ್ಚರಿಕೆ ನೀಡಿದೆ.
ಉಕ್ರೇನ್ನಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದಾಗಿ, ವಿಶ್ವದಲ್ಲಿ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಸಾಕ್ಷಿಯಾದ ಯೆಮನ್ನ ಸಮಸ್ಯೆ ತೆರೆಮರೆಗೆ ಸಂದಿರುವುದು ವಿಷಾದನೀಯ. ಈಗ ಯೆಮನ್ ಬಿಕ್ಕಟ್ಟು ಮಾನವೀಯ ದುರಂತದ ಅಂಚಿನಲ್ಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ದೇಣಿಗೆ ಸಂಗ್ರಹದಲ್ಲಿ ಕೊರತೆಯಾಗಿರುವುದು ಜನತೆಗೆ ಅಗತ್ಯ ನೆರವು ದೊರಕುವುದಿಲ್ಲ ಎಂಬ ಸೂಚನೆಯಾಗಿದೆ. ಯೆಮನ್ ಪಾಲಿಗೆ ಮುಂದಿನ ವರ್ಷದ ಮುನ್ನೋಟ ಅತ್ಯಂತ ಮಸುಕಾಗಿ ಕಾಣಿಸುತ್ತಿದೆ. ಯೆಮನ್ಗೆ ಸಂಬಂಧಿಸಿ ಇಂತಹ ಪರಿಸ್ಥಿತಿ ಇದುವರೆಗೆ ಬಂದಿಲ್ಲ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆಯ ಯೆಮನ್ ಸ್ಥಾನಿಕ ಪ್ರತಿನಿಧಿ ಅವೂಕ್ ಲೂಟ್ಸ್ಮ ಹೇಳಿದ್ದಾರೆ.
ಯೆಮನ್ನಲ್ಲಿ ನೆರವಿನ ತುರ್ತು ಅಗತ್ಯ ಇರುವವರಿಗೆ ನೆರವಾಗಿ ಆಹಾರ ಒದಗಿಸಲು ಈ ವರ್ಷ 4.3 ಬಿಲಿಯನ್ ಡಾಲರ್ ಮೊತ್ತದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿತ್ತು. ಆದರೆ ಅಂತರಾಷ್ಟ್ರೀಯ ದೇಣಿಗೆ ಸಂಗ್ರಹದಲ್ಲಿ ಕೇವಲ 1.3 ಬಿಲಿಯನ್ ಡಾಲರ್ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಇದು ಅತ್ಯಂತ ನಿರಾಶಾಜನಕ ಪ್ರತಿಕ್ರಿಯೆಯಾಗಿದೆ ಎಂದು ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಆಹಾರ ನೆರವಿನ ಯೋಜನೆಯ ವಕ್ತಾರ ಅಬೀರ್ ಎತೆಫಾ ಹೇಳಿದ್ದಾರೆ. ಈ ಮಧ್ಯೆ, ಯೆಮನ್ಗೆ ಪೂರೈಕೆಯಾಗುವ ಗೋಧಿಯಲ್ಲಿ ಮೂರನೇ ಒಂದು ಪ್ರಮಾಣದಷ್ಟು ಗೋಧಿ ಉಕ್ರೇನ್ನಿಂದ ರಫ್ತಾಗುತ್ತಿದೆ. ಈಗ ಉಕ್ರೇನ್ನಲ್ಲಿ ಸಂಘರ್ಷ ತೀವ್ರಗೊಂಡಿರುವುದರಿಂದ ಗೋಧಿ ಪೂರೈಕೆಯೂ ಮೊಟಕುಗೊಂಡು ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಆತಂಕ ಸೂಚಿಸಿದೆ. ಯೆಮನ್ನ ಸುಮಾರು 30 ಮಿಲಿಯನ್ ಜನರಲ್ಲಿ 80%ದಷ್ಟು ಮಂದಿ ಅಂತರಾಷ್ಟ್ರೀಯ ನೆರವನ್ನು ಅವಲಂಬಿಸಿದವರು. ಈಗ ನೆರವಿನ ನಿಧಿಯಲ್ಲಿ ಕೊರತೆಯಾಗಿರುವುದು ಆಹಾರದ ನೆರವು ಒದಗಿಸಲು ತೀವ್ರ ಸಮಸ್ಯೆ ಒಡ್ಡಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.