ಯುದ್ಧಸ್ಥಿತಿ ಉಲ್ಬಣ: ತಕ್ಷಣ ಉಕ್ರೇನ್ ತೊರೆಯಲು ಭಾರತೀಯರಿಗೆ ಸೂಚನೆ
ಹೊಸದಿಲ್ಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಭದ್ರತಾ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ಗೆ ಪ್ರಯಾಣ ಬೆಳೆಸದಂತೆ ಭಾರತ ಎಲ್ಲ ನಾಗರಿಕರಿಗೆ ಸೂಚನೆ ನೀಡಿದೆ. ಜತೆಗೆ ಉಕ್ರೇನ್ನಲ್ಲಿರುವ ಎಲ್ಲ ಭಾರತೀಯರು ತಕ್ಷಣ ಸ್ವದೇಶಕ್ಕೆ ವಾಪಸ್ಸಾಗುವಂತೆ ಸೂಚಿಸಿದೆ.
"ಉಕ್ರೇನ್ ದೇಶದಾದ್ಯಂತ ಭದ್ರತಾ ಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಂಘರ್ಷ ಉಲ್ಬಣಿಸಿದ ಹಿನ್ನೆಲೆಯಲ್ಲಿ ಭಾರತೀಯರು ಉಕ್ರೇನ್ಗೆ ಪ್ರವಾಸ ಕೈಗೊಳ್ಳದಂತೆ ಸಲಹೆ ಮಾಡಲಾಗಿದೆ.
ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್ನಲ್ಲಿರುವ ಎಲ್ಲ ಭಾರತೀಯರು ತಕ್ಷಣವೇ ಲಭ್ಯವಾಗುವ ಮಾರ್ಗಗಳ ಮೂಲಕ ದೇಶ ತೊರೆಯಬೇಕು ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮೂಲಕ ಸಲಹೆ ಮಾಡಿದೆ.
ಉಕ್ರೇನ್ನ ನಾಲ್ಕು ಪ್ರದೇಶಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಿಲಿಟರಿ ಕಾನೂನು ಜಾರಿಗೊಳಿಸಿದ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಈ ಸಲಹೆ ಮಾಡಿದೆ. ಅಂತೆಯೇ ಖೆರ್ಸಾನ್ ಅಕ್ರಮಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಕೆಲ ನಾಗರಿಕರು ಹಲ್ಲೆ ಭೀತಿಯ ಹಿನ್ನೆಲೆಯಲ್ಲಿ ಪಟ್ಟಣವನ್ನು ತೊರೆದು ದೋಣಿಗಳಲ್ಲಿ ಸಾಗುತ್ತಿದ್ದಾರೆ.
ಖೆರ್ಸಾನ್ನಿಂದ ನಾಗರಿಕರು ಪಲಾಯನ ಮಾಡುತ್ತಿರುವ ವೀಡಿಯೊ ತುಣುಕುಗಳನ್ನು ರಷ್ಯಾದ ಸರ್ಕಾರಿ ಟಿವಿ ಪ್ರಸಾರ ಮಾಡಿದೆ. ಈ ಬಗ್ಗೆ ndtv.com ವರದಿ ಮಾಡಿದೆ.