ಉಕ್ರೇನ್ ಮೇಲೆ ಕ್ಷಿಪಣಿ ಮಳೆಗರೆದ ರಶ್ಯ: 14 ಕಟ್ಟಡಗಳಿಗೆ ಹಾನಿ; ಒಬ್ಬ ವ್ಯಕ್ತಿ ಮೃತ್ಯು
ಕೀವ್, ನ.1: ಉಕ್ರೇನ್ ವಿರುದ್ಧದ ವಾಯುದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ರಶ್ಯ, ದಕ್ಷಿಣದ ನಗರ ಮಿಕೊಲಿವ್ ಮೇಲೆ ಸೋಮವಾರ ಮಧ್ಯರಾತ್ರಿ 4 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಒಬ್ಬ ನಾಗರಿಕ ಮೃತಪಟ್ಟಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ನಗರದ ಗವರ್ನರ್ ವಿಟಾಲಿ ಕಿಮ್ ಹೇಳಿದ್ದಾರೆ.
ಈಶಾನ್ಯ ಉಕ್ರೇನ್ನ ಪೊಲ್ಟಾವಾ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿದೆ. ರಶ್ಯದ 4 ಡ್ರೋನ್ಗಳು ನಗರದ ಮೂಲಸೌಕರ್ಯಗಳಿಗೆ ಅಪ್ಪಳಿಸಿದ್ದು ಬೆಂಕಿ ಕಾಣಿಸಿಕೊಂಡಿದೆ. ರಶ್ಯದ ಮೂರು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ . ನಿಪರ್ ನದಿ ದಡದಲ್ಲಿರುವ ನಿಕೊಪೊಲ್ ನಗರವನ್ನು ಗುರಿಯಾಗಿಸಿ ಸುಮಾರು 40 ಬಾಂಬ್ಗಳನ್ನು ಎಸೆಯಲಾಗಿದ್ದು 14 ವಸತಿ ಕಟ್ಟಡಗಳು, ಶಿಶುವಿಹಾರ, ಔಷಧ ಅಂಗಡಿ, ಬ್ಯಾಂಕ್ ಹಾಗೂ ಹಲವು ಅಂಗಡಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹನೆಟ್ಸ್ ಪ್ರದೇಶದಲ್ಲಿ ರಶ್ಯದ ದಾಳಿಯಿಂದ ವಿದ್ಯುತ್ ಮತ್ತು ನೀರಿನ ಪೂರೈಕೆ ವ್ಯವಸ್ಥೆ ಹಾನಿಗೊಂಡಿದ್ದು ಸುಮಾರು 40,000 ಕುಟುಂಬಗಳಿಗೆ ತೊಂದರೆಯಾಗಿದೆ. ಮಂಗಳವಾರ ಕೆಲವೆಡೆ ವಿದ್ಯುತ್ ವ್ಯವಸ್ಥೆ ಸರಿಪಡಿಸಿದರೂ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಖಾರ್ಕಿವ್ನಲ್ಲಿ ರೈಲು ಸಂಚಾರ ಮತ್ತೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ಉಕ್ರೇನ್ನಿಂದ ವಶಕ್ಕೆ ಪಡೆದಿರುವ ಖೆರ್ಸಾನ್ ವಲಯದಲ್ಲಿ ರಶ್ಯ ನೇಮಿಸಿರುವ ಅಧಿಕಾರಿಗಳು ಮತ್ತೆ ಸುಮಾರು 70,000 ನಿವಾಸಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಜಿ20 ಗುಂಪಿನಿಂದ ರಶ್ಯ ಉಚ್ಛಾಟನೆಗೆ ಉಕ್ರೇನ್ ಆಗ್ರಹ
ಪ್ರಮುಖ ಆರ್ಥಿಕ ಶಕ್ತಿಗಳ ಜಿ20 ಗುಂಪಿನಿಂದ ರಶ್ಯವನ್ನು ಉಚ್ಛಾಟಿಸಬೇಕು ಮತ್ತು ಮುಂದಿನ ತಿಂಗಳು ಬಾಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ರಶ್ಯ ಅಧ್ಯಕ್ಷ ಪುಟಿನ್ಗೆ ನೀಡಿರುವ ಆಹ್ವಾನವನ್ನು ರದ್ದುಗೊಳಿಸಬೇಕು ಎಂದು ಉಕ್ರೇನ್ ಆಗ್ರಹಿಸಿದೆ.
ಉಕ್ರೇನ್ ನ ನಾಗರಿಕರು ಮತ್ತು ಇಂಧನ ಮೂಲಸೌಕರ್ಯಗಳಿಗೆ ಕ್ಷಿಪಣಿ ದಾಳಿ ನಡೆಸಲು ಆದೇಶಿಸಿರುವುದಾಗಿ ಪುಟಿನ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಅವರ ಕೈ ರಕ್ತಸಿಕ್ತವಾಗಿರುವುದರಿಂದ ಜಾಗತಿಕ ಮುಖಂಡರ ಜತೆ ವೇದಿಕೆಯಲ್ಲಿ ಅವರಿಗೆ ಅವಕಾಶ ನೀಡಬಾರದು. ಬಾಲಿ ಶೃಂಗಸಭೆಗೆ ಪುಟಿನ್ಗೆ ನೀಡಿರುವ ಆಹ್ವಾನವನ್ನು ರದ್ದುಗೊಳಿಸಬೇಕು ಮತ್ತು ರಶ್ಯವನ್ನು ಜಿ20 ಗುಂಪಿನಿಂದ ಉಚ್ಛಾಟಿಸಬೇಕು ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯದ ವಕ್ತಾರ ಒಲೆಗ್ ನಿಕೊಲೆಂಕೊ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ರಶ್ಯ: ವಿಕಿಮೀಡಿಯಾಕ್ಕೆ ದಂಡ
ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸಿದ ಕಾರಣಕ್ಕೆ ವಿಕಿಮೀಡಿಯಾ ಪ್ರತಿಷ್ಟಾನಕ್ಕೆ ರಶ್ಯದ ನ್ಯಾಯಾಲಯ 2 ದಶಲಕ್ಷ ರೂಬಲ್(32,600 ಡಾಲರ್) ದಂಡ ವಿಧಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
‘ರಶ್ಯದ ಆಕ್ರಮಣದ ಸಂದರ್ಭ ಉಕ್ರೇನ್ ನಾಗರಿಕರ ಅಹಿಂಸಾತ್ಮಕ ಪ್ರತಿರೋಧ’ ಮತ್ತು ‘ರಶ್ಯದ 2022ರ ಉಕ್ರೇನ್ ಆಕ್ರಮಣದ ಸಮೀಕ್ಷೆ’ ಎಂಬ 2 ಲೇಖನಗಳನ್ನು ಡಿಲೀಟ್ ಮಾಡುವಂತೆ ರಶ್ಯ ಸೂಚಿಸಿತ್ತು. ಆದರೆ ಅದನ್ನು ನಿರಾಕರಿಸಿದ್ದರಿಂದ ಈ ದಂಡ ವಿಧಿಸಲಾಗಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಿಕಿಮೀಡಿಯಾದ ರಶ್ಯ ವಿಭಾಗದ ಮುಖ್ಯಸ್ಥ ಸ್ಟಾನಿಸ್ಲಾವ್ ಕೊಝ್ಲಾವ್ಸ್ಕಿ ಹೇಳಿದ್ದಾರೆ. ಉಕ್ರೇನ್ನಲ್ಲಿನ ಯುದ್ಧವನ್ನು ‘ವಿಶೇಷ ಸೇನಾ ಕಾರ್ಯಾಚರಣೆ’ ಎಂದು ರಶ್ಯ ಹೇಳುತ್ತಿದೆ.
ರಶ್ಯ ಪೌರತ್ವ ತ್ಯಜಿಸಿದ ಖ್ಯಾತ ಉದ್ಯಮಿ
ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಖಂಡಿಸಿ ಮತ್ತು ವಿರೋಧಿಸಿ ರಶ್ಯದ ಪೌರತ್ವವನ್ನು ತ್ಯಜಿಸಲು ನಿರ್ಧರಿಸಿರುವುದಾಗಿ ರಶ್ಯದ ಖ್ಯಾತ ಉದ್ಯಮಿ ಒಲೆಗ್ ಟಿಂಕೋವ್ ಹೇಳಿದ್ದಾರೆ.ಶಾಂತಿಯುತ ನೆರೆಹೊರೆಯವರೊಂದಿಗೆ ಕಾಲು ಕೆದರಿಕೊಂಡು ಯುದ್ಧಕ್ಕೆ ಹೋಗುವ, ಪ್ರತೀ ನಿತ್ಯ ಅಮಾಯಕ ಜನರನ್ನು ಹತ್ಯೆ ಮಾಡುವ ಫ್ಯಾಸಿಸ್ಟ್ ದೇಶದ ಪ್ರಜೆಯಾಗಿ ಮುಂದುವರಿಯಲು ನನಗೆ ಇಷ್ಟವಿಲ್ಲ. ರಶ್ಯದ ಇನ್ನಷ್ಟು ಗಣ್ಯ, ಪ್ರಮುಖ ಉದ್ಯಮಿಗಳೂ ನನ್ನ ಮಾದರಿಯನ್ನು ಅನುಸರಿಸುವರೆಂದು ಆಶಿಸುತ್ತೇನೆ. ಆಗ ಪುಟಿನ್ ಆಡಳಿತ ಮತ್ತು ಅವರ ಅರ್ಥವ್ಯವಸ್ಥೆ ದುರ್ಬಲಗೊಳ್ಳುತ್ತದೆ ಮತ್ತು ಅವರು ವಿಫಲವಾಗುತ್ತಾರೆ. ನಾನು ಪುಟಿನ್ರನ್ನು ದ್ವೇಷಿಸುತ್ತೇನೆ, ಆದರೆ ಈ ಯುದ್ಧವನ್ನು ವಿರೋಧಿಸುವ ರಶ್ಯನ್ನರನ್ನು ಪ್ರೀತಿಸುತ್ತೇನೆ ’ ಎಂದು ಟಿಂಕೋವ್ ಹೇಳಿದ್ದಾರೆ. ಆನ್ಲೈನ್ ಹಣಕಾಸಿನ ಸಂಸ್ಥೆ ಟಿಂಕಾಫ್ ಬ್ಯಾಂಕ್ನ ಸ್ಥಾಪಕರಾದ ಟಿಂಕೋವ್ರನ್ನು ತೆರಿಗೆ ತಪ್ಪಿಸಿದ ಆರೋಪದಡಿ 2020ರಲ್ಲಿ ಲಂಡನ್ನಲ್ಲಿ ಬಂಧಿಸಲಾಗಿತ್ತು. ಜಾಮೀನಿನಡಿ ಬಿಡುಗಡೆಗೊಂಡಿರುವ ಅವರು ಈಗ ಲ್ಯುಕೇಮಿಯಾ ಕಾಯಿಲೆಗೆ ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.