ಹವಾಮಾನ ಒಗ್ಗಟ್ಟು ಅಥವಾ ಸಾಮೂಹಿಕ ಆತ್ಮಹತ್ಯೆ, ಆಯ್ಕೆ ನಿಮ್ಮದು: ಗುಟೆರಸ್
ಶರ್ಮ್ಎಲ್-ಶೇಕ್, ನ.7: ಹವಾಮಾನ ಬದಲಾವಣೆಯ ವೇಗವರ್ಧಿತ ಪರಿಣಾಮಗಳನ್ನು ಎದುರಿಸುವಲ್ಲಿ ಮಾನವ ಕುಲವು ಒಗ್ಗಟ್ಟನ್ನು ಪ್ರದರ್ಶಿಸಿ ಸಹಕರಿಸಬೇಕು ಅಥವಾ ನಾಶವಾಗಬೇಕು. ಬೇರೆ ಆಯ್ಕೆಯೇ ಇಲ್ಲ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್ (Antonio Guterres)ಹೇಳಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ನಾವು ಹವಾಮಾನ ನರಕಕ್ಕೆ ಹೋಗುವ ಹೆದ್ದಾರಿಯಲ್ಲಿ ಆಕ್ಸಿಲೇಟರ್ ಮೇಲೆ ನಮ್ಮ ಪಾದವನ್ನು ಒತ್ತಿಹಿಡಿದು ಮುಂದಕ್ಕೆ ಧಾವಿಸುತ್ತಿದ್ದೇವೆ ಎಂದವರು ಎಚ್ಚರಿಸಿದ್ದಾರೆ.
ಜಾಗತಿಕ ತಾಪಮಾನ ತಡೆಗಟ್ಟುವ ನಿಟ್ಟಿನಲ್ಲಿ ಈಜಿಪ್ಟ್ನಲ್ಲಿ ನಡೆಯುತ್ತಿರುವ ಜಾಗತಿಕ ಮುಖಂಡರ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು. ಕೋವಿಡ್ ಸಾಂಕ್ರಾಮಿಕದಿಂದ ಉಕ್ರೇನ್ ಮೇಲಿನ ರಶ್ಯದ ಆಕ್ರಮಣದವರೆಗೆ, ಹವಾಮಾನ ವೈಪರೀತ್ಯದವರೆಗಿನ ಅಂತರಾಷ್ಟ್ರೀಯ ಬಿಕ್ಕಟ್ಟಿನ ಸರಮಾಲೆಯು ಅರ್ಥವ್ಯವಸ್ಥೆಯನ್ನು ಜರ್ಜರಿತಗೊಳಿಸಿದೆ ಮತ್ತು ಅಂತರಾಷ್ಟ್ರೀಯ ಸಂಬಂಧವನ್ನು ಅಲುಗಾಡಿಸಿದೆ.
ಮನುಕುಲಕ್ಕೆ ಈಗ ‘ಸಹಕರಿಸು ಅಥವಾ ನಾಶವಾಗು’ ಎಂಬ ಎರಡು ಆಯ್ಕೆಗಳಿವೆ. ಇದು ಹವಾಮಾನ ಒಗ್ಗಟ್ಟಿನ ಒಪ್ಪಂದ ಅಥವಾ ಸಾಮೂಹಿಕ ಆತ್ಮಹತ್ಯೆ ಒಪ್ಪಂದ. ಜಗತ್ತು ‘ನಮ್ಮ ಬದುಕಿನ ಹೋರಾಟದಲ್ಲಿದೆ’ ಎಂದವರು ಹೇಳಿದ್ದಾರೆ.
ಶ್ರೀಮಂತ ದೇಶಗಳು ಹಾಗೂ ಅಭಿವೃದ್ಧಿಶೀಲ ದೇಶಗಳ ಮಧ್ಯೆ ‘ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಮತ್ತು ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಶಿಯಸ್ಗೆ ನಿಯಂತ್ರಿಸುವ ಪ್ಯಾರಿಸ್ ಒಪ್ಪಂದದ ಗುರಿಯನ್ನು ಹೊಂದಿರುವ ಚಾರಿತ್ರಿಕ ಒಪ್ಪಂದಕ್ಕೆ’ ಗುಟೆರಸ್ ಕರೆ ನೀಡಿದ್ದಾರೆ.