ಸಿಎಎ, ಅಲ್ಪಸಂಖ್ಯಾತರ ಹಕ್ಕುಗಳು, ದ್ವೇಷ ಭಾಷಣದ ಬಗ್ಗೆ ಭಾರತವನ್ನು ಪ್ರಶ್ನಿಸಲು ಅಮೆರಿಕ, ಬೆಲ್ಜಿಯಂ ನಿರ್ಧಾರ

ಜಿನೆವಾ, ನ.9: ಪತ್ರಕರ್ತರು ಮತ್ತು ಮಾನವ ಹಕ್ಕುಗಳ ರಕ್ಷಕರು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್ಸಿಆರ್ಎ) ಮತ್ತು ಕಸ್ಟಡಿಯಲ್ಲಿ ಚಿತ್ರಹಿಂಸೆ ವಿಷಯಗಳು ಗುರುವಾರ ಜಿನೆವಾದಲ್ಲಿ ಮಾನವ ಹಕ್ಕುಗಳ ಸಮಿತಿಯಲ್ಲಿ ನಡೆಯಲಿರುವ ಭಾರತದ ಸಾರ್ವತ್ರಿಕ ವಿಮರ್ಶೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಭಾರತ ಒದಗಿಸಿದ ರಾಷ್ಟ್ರೀಯ ವರದಿಯ ಆಧಾರದ ಮೇಲೆ ಸಾರ್ವತ್ರಿಕ ವಿಮರ್ಶೆ ನಡೆಯುತ್ತದೆ. ಗುರುವಾರ ಭಾರತವನ್ನು ಕೇಂದ್ರೀಕರಿಸಿದ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಅಮೆರಿಕ, ಬೆಲ್ಜಿಯಂ, ಸ್ಪೇನ್, ಪನಾಮ, ಕೆನಡ ಮತ್ತು ಸ್ಲೊವೇನಿಯಾ ತಮ್ಮ ಪ್ರಶ್ನಾವಳಿಯನ್ನು ಸಲ್ಲಿಸಿವೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಅಲ್ಪಸಂಖ್ಯಾತ ವಿರೋಧಿಯಾಗಿದೆ ಎಂದು ಸಮಿತಿಗೆ ಮುಂಚಿತವಾಗಿ ಸಲ್ಲಿಸಿದ ಪ್ರಶ್ನಾವಳಿಯಲ್ಲಿ ಉಲ್ಲೇಖಿಸಿರುವ ಬೆಲ್ಜಿಯಂ, ಈ ಕಾನೂನನ್ನು ರದ್ದುಗೊಳಿಸಲಾಗುತ್ತದೆಯೇ ಎಂದು ಭಾರತವನ್ನು ಕೇಳಿದೆ. ಇದೇ ರೀತಿಯ ಆತಂಕವನ್ನು ವ್ಯಕ್ತಪಡಿಸಿರುವ ಅಮೆರಿಕ, ದ್ವೇಷ ಭಾಷಣ, ಇಂಟರ್ನೆಟ್ ಸ್ಥಗಿತ ಮತ್ತು ಕರ್ನಾಟಕದಲ್ಲಿನ ಹಿಜಾಬ್ ವಿವಾದವನ್ನು ಎತ್ತಿತೋರಿಸಿದೆ.
ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪೌರತ್ವ ತಿದ್ದುಪಡಿ ಕಾಯ್ದೆ, ಮತಾಂತರ ವಿರೋಧಿ ಕಾನೂನುಗಳಂತಹ ಅಲ್ಪಸಂಖ್ಯಾತ ವಿರೋಧಿ ಕಾನೂನನ್ನು ಪರಿಶೀಲಿಸಿ ರದ್ದುಗೊಳಿಸಲಿದೆಯೇ ಮತ್ತು ಕೋಮು ಮತ್ತು ಉದ್ದೇಶಿತ ಧಾರ್ಮಿಕ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಪ್ರತಿಕ್ರಿಯಿಸಲು ಕ್ರಮಗಳು ಮತ್ತು ಕಾನೂನನ್ನು ಪರಿಚಯಿಸುತ್ತದೆಯೇ? ಎಂದು ಬೆಲ್ಜಿಯಂ ಪ್ರಶ್ನಿಸಿದೆ
ಮಾನವ ಹಕ್ಕುಗಳ ರಕ್ಷಕರು, ಪತ್ರಕರ್ತರು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಚಲಾಯಿಸಲು, ಕಿರುಕುಳ, ಬೆದರಿಕೆ ಮತ್ತು ದಾಳಿಗಳಿಂದ ಮುಕ್ತವಾಗುವುದನ್ನು ಖಾತರಿಪಡಿಸುವ ಕ್ರಮಗಳನ್ನು ಭಾರತ ಸರಕಾರ ತೆಗೆದುಕೊಳ್ಳಲಿದೆಯೇ ಎಂದು ಬೆಲ್ಜಿಯಂ ಪ್ರಶ್ನಿಸಿದೆ. ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕ, ಭಾರತದಲ್ಲಿ ಅಲ್ಪಸಂಖ್ಯಾತರು, ಧಾರ್ಮಿಕ ಮುಖಂಡರು, ಹೋರಾಟಗಾರರನ್ನು ನಡೆಸಿಕೊಳ್ಳುವ ರೀತಿ ಹಾಗೂ ಗೋಹತ್ಯೆ ಕಾನೂನು ಸೇರಿದಂತೆ 8 ಪ್ರಶ್ನೆಗಳನ್ನು ಸಲ್ಲಿಸಿದೆ.
ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ(ಯುಎಪಿಎ), ರಾಷ್ಟ್ರೀಯ ಭದ್ರತಾ ಕಾಯ್ದೆ, ಸಾರ್ವಜನಿಕ ಸುರಕ್ಷಾ ಕಾಯ್ದೆ, ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 124ಎ, 499 ಮತ್ತು 500ಗಳು ಭಾರತದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬಾಧ್ಯತೆಗಳು ಮತ್ತು ಬದ್ಧತೆಗಳನ್ನು ಅನುಸರಿಸುತ್ತಿವೆಯೇ ಎಂದು ಪ್ರಶ್ನಿಸಿರುವ ಅಮೆರಿಕ, ಅಲ್ಪಸಂಖ್ಯಾತ ವಿರೋಧಿ ಕ್ರಮಗಳ ಆರೋಪ ಹೊತ್ತಿರುವ ಸರಕಾರಿ ಅಧಿಕಾರಿಗಳನ್ನು ಹೇಗೆ ಹೊಣೆಗಾರರನ್ನಾಗಿಸಿದೆ ಎಂಬುದನ್ನು ವಿವರಿಸುವಂತೆ ಭಾರತ ಸರಕಾರವನ್ನು ಒತ್ತಾಯಿಸಿದೆ.
ದೇಶರಹಿತರಾಗುವ ಅಪಾಯದಲ್ಲಿರುವ ಜನರಿಗೆ ಸಹಾಯ ಮಾಡಲು ಯಾವ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪನಾಮಾ ಪ್ರಶ್ನಿಸಿದೆ.
ಭಾರತ ಒದಗಿಸಿದ ರಾಷ್ಟ್ರೀಯ ವರದಿ, ಸ್ವತಂತ್ರ ಮಾನವ ಹಕ್ಕುಗಳ ತಜ್ಞರು ಮತ್ತು ಗುಂಪುಗಳು, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಗುಂಪುಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಸಾರ್ವತ್ರಿಕ ಆವರ್ತಕ ವಿಮರ್ಶೆಯನ್ನು ನಡೆಸಲಾಗುತ್ತದೆ.
ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳನ್ನು ಸಂಪೂರ್ಣವಾಗಿ ಮತ್ತು ಸ್ಥಿರವಾಗಿ ಜಾರಿಗೊಳಿಸಲಾಗಿದೆ ಎಂದು ಆಗಸ್ಟ್ನಲ್ಲಿ ಸಲ್ಲಿಸಿದ್ದ ರಾಷ್ಟ್ರೀಯ ವರದಿಯಲ್ಲಿ ಭಾರತವು ಸಮಿತಿಗೆ ಮಾಹಿತಿ ನೀಡಿತ್ತು.ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2018ರಿಂದ ಕೋಮು ಗಲಭೆಗಳಲ್ಲಿ ಇಳಿಮುಖವನ್ನು ದಾಖಲಿಸಿದೆ. ಭದ್ರತಾ ಪಡೆಗಳಿಗೆ ಯಾವುದೇ ವಿನಾಯಿತಿ ನೀಡಿಲ್ಲ ಮತ್ತು ಅದರ ವಿರುದ್ಧ ಆರೋಪ ಕೇಳಿಬಂದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಕಸ್ಟಡಿ ಸಾವು ಸಂಭವಿಸಿದ 24 ಗಂಟೆಯೊಳಗೆ ಆಯೋಗಕ್ಕೆ ತಿಳಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸರಕಾರಗಳಿಗೆ ಮಾರ್ಗಸೂಚಿಯನ್ನು ನೀಡಿದೆ ಎಂದು ಭಾರತ ಮಾಹಿತಿ ನೀಡಿತ್ತು. ಬಾಕ್ಸ್: ಕರ್ನಾಟಕದ ಹಿಜಾಬ್ ವಿವಾದ
ಪ್ರಶ್ನಿಸಿದ ಅಮೆರಿಕ ಭಾರತದ ಒಂದು ರಾಜ್ಯದಲ್ಲಿನ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಪನ್ನು ಧರಿಸುವುದನ್ನು ಉಲ್ಲಂಘಿಸುತ್ತದೆ. ಜೊತೆಗೆ, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವಂತಹ ದ್ವೇಷ ಭಾಷಣ, ಅವರ ಮನೆಗಳು ಮತ್ತು ವ್ಯವಹಾರಗಳನ್ನು ಗುರಿಯಾಗಿಸುವಂತಹ ಕೃತ್ಯಗಳ ಬಗ್ಗೆ ನಮಗೆ ಆತಂಕವಿದೆ. ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರನ್ನು ತಾರತಮ್ಯದಿಂದ ರಕ್ಷಿಸಲು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಅಮೆರಿಕ ಪ್ರಶ್ನಿಸಿದೆ.







